- ಬ್ರಿಟನ್ ದೇಶಕ್ಕೆ ಈ ವರ್ಷ 675 ಭಾರತೀಯರು ಅಕ್ರಮವಾಗಿ ಪ್ರವೇಶ
- ಅಫ್ಗಾನಿಸ್ತಾನದಿಂದ ಅತಿಹೆಚ್ಚು ವಲಸಿಗರು ಇಂಗ್ಲೆಂಡ್ಗೆ ಆಗಮನ
ಬ್ರಿಟನ್ ದೇಶಕ್ಕೆ ಅಪಾಯಕಾರಿ ಸಣ್ಣ ದೋಣಿಗಳ ಮೂಲಕ ಹೆಚ್ಚು ಭಾರತೀಯರು ಪ್ರವೇಶಿಸಿದ್ದಾರೆ ಎಂದು ದೇಶದ ಗೃಹ ಕಚೇರಿ ತಿಳಿಸಿರುವುದಾಗಿ ಭಾನುವಾರ (ಮೇ 7) ವರದಿಯಾಗಿದೆ.
ದೇಶಕ್ಕೆ ಬರುವ ವಲಸಿಗರ ಪೈಕಿ ಭಾರತೀಯರು ಎರಡನೇ ಅತಿದೊಡ್ಡ ಗುಂಪಾಗಿದೆ ಎಂದು ಗೃಹ ಕಚೇರಿ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ವರದಿ ಹೇಳಿದೆ.
ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ 675 ಭಾರತೀಯರು ಬ್ರಿಟನ್ ದೇಶಕ್ಕೆ ಸಣ್ಣ ದೋಣಿಗಳು ಮೂಲಕ ಪ್ರವೇಶಿಸಿದ್ದಾರೆ. ಉದ್ಯೋಗ ವೀಸಾ ನಿಬಂಧನೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಹೀಗೆ ಅಕ್ರಮವಾಗಿ ನುಸುಳಲಾಗುತ್ತಿದೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಬ್ರಿಟನ್ ಗೃಹ ಕಚೇರಿ ವರದಿಯಂತೆ, “ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಸಣ್ಣ ದೋಣಿಯ ಮೂಲಕ ಬ್ರಿಟನ್ ಅನ್ನು ತಲುಪುವ ಅಲ್ಬೇನಿಯನ್ನರ ಸಂಖ್ಯೆಯು (ಈ ಹಿಂದೆ ಎರಡನೇ ದೊಡ್ಡ ವಲಸಿಗ ಗುಂಪು ಎನಿಸಿತ್ತು) 29 ಆಗಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ 1,100 ಆಗಿತ್ತು” ಎಂದು ಹೇಳಿದೆ.
“ಕಳೆದ ಕೆಲವು ತಿಂಗಳುಗಳಲ್ಲಿ ಸಣ್ಣ ದೋಣಿಯ ಮೂಲಕ ಇಂಗ್ಲೆಂಡ್ಗೆ ಆಗಮಿಸುವ ಭಾರತೀಯ ಪ್ರಜೆಗಳಲ್ಲಿ ಏರಿಕೆ ಕಂಡುಬಂದಿದೆ. ಅವರು ವೀಸಾ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡಲು ಕಾನೂನುಬಾಹಿರ ಮಾರ್ಗದ ಮೂಲಕ ದೇಶಕ್ಕೆ ಆಗಮಿಸುತ್ತಿದ್ದಾರೆ” ಎಂದು ಗೃಹ ಕಚೇರಿ ವರದಿ ಹೇಳಿದೆ.
ಸಣ್ಣ ದೋಣಿಗಳಲ್ಲಿ ದೇಶಕ್ಕೆ ಆಗಮಿಸುವ ಭಾರತೀಯರ ಸಂಖ್ಯೆ ಹಠಾತ್ ಏರಿರುವುದನ್ನು ಕಂಡು ಬ್ರಿಟನ್ನ ಅಧಿಕಾರಿಗಳು ದಿಭ್ರಮೆಗೊಂಡಿದ್ದಾರೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಬ್ರಿಟನ್ ಗೃಹ ಕಚೇರಿ ಪ್ರಕಾರ, ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಸುಮಾರು 250 ಭಾರತೀಯ ವಲಸಿಗರು ಇಂಗ್ಲೆಂಡ್ಗೆ ಪ್ರವೇಶಿಸಿದ್ದಾರೆ. ಕಳೆದ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸಣ್ಣ ದೋಣಿಗಳ ಮೂಲಕ 233 ಭಾರತೀಯರು ಆಗಮಿಸಿದ್ದರು.
ಕಳೆದ ವರ್ಷದವರೆಗೆ ಭಾರತೀಯರು ಸಾಮಾನ್ಯವಾಗಿ ಬ್ರಿಟನ್ಗೆ ಕಾನೂನುಬದ್ಧವಾಗಿ ಪ್ರವೇಶಿಸಿದ್ದರು. ಆದರೆ ನಂತರ ಅನೇಕರ ವೀಸಾ ಅವಧಿ ಮೀರಿತ್ತು ಎಂದು ವರದಿ ಹೇಳಿದೆ.
ಈ ವರ್ಷ ಬ್ರಿಟನ್ಗೆ ಆಗಮಿಸುವ ಹೆಚ್ಚು ವಲಸಿಗರಲ್ಲಿ ಅಫ್ಗನ್ನರ ನಂತರದ ಸ್ಥಾನವನ್ನು ಭಾರತೀಯರು ಪಡೆದಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಅಫ್ಗಾನಿಸ್ತಾನದಿಂದ 909 ಜನರು ಇಂಗ್ಲೆಂಡ್ಗೆ ಆಗಮಿಸಿದ್ದಾರೆ. ಈ ಮೂಲಕ ದೇಶಕ್ಕೆ ಬಂದ ದೊಡ್ಡ ವಲಸಿಗರ ಗುಂಪು ಎನಿಸಿಕೊಂಡಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಅಕ್ರಮವಾಗಿ ಕಾಲುವೆ ದಾಟಲು ಪ್ರಯತ್ನಿಸುತ್ತಿರುವ ಭಾರತೀಯ ಪ್ರಜೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಬ್ರಿಟನ್ ತಲುಪಲು ಸಹಾಯ ಮಾಡಲು ಕಳ್ಳಸಾಗಾಣಿಕೆದಾರರಿಗೆ ಹೆಚ್ಚಿನ ಶುಲ್ಕವನ್ನು ಪಾವತಿಸುತ್ತಿದ್ದಾರೆ ಎಂದು ಗೃಹ ಕಚೇರಿ ವರದಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಪಂಜಾಬ್ | ಅಮೃತಸರ ಸುವರ್ಣ ಮಂದಿರದ ಬಳಿ ಸ್ಫೋಟ ; ಹಲವರಿಗೆ ಗಾಯ
ಕೆಲವರು ಯಶಸ್ವಿಯಾಗಿದ್ದರೂ, ಇತರರನ್ನು ಅಧಿಕಾರಿಗಳು ತಡೆಹಿಡಿದಿದ್ದಾರೆ ಮತ್ತು ಬಂಧಿಸಿದ್ದಾರೆ ಅಥವಾ ಗಡೀಪಾರು ಮಾಡಿದ್ದಾರೆ ಎಂದು ವರದಿಯಾಗಿದೆ.
ದೇಶಕ್ಕೆ ಬರುವ ಹೆಚ್ಚಿನ ದಾಖಲೆಗಳಿಲ್ಲದ ಭಾರತೀಯ ವಲಸಿಗರು ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳ ಯುವಜನರಾಗಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.