ಇದು ಪುನೀತ್ ಕೆರೆಹಳ್ಳಿಯ ಪರ-ವಿರುದ್ದದ ಸುದ್ದಿಯಲ್ಲ. IMMORAL TRAFFIC PREVENTION ಸೆಕ್ಷನ್ 3, 4, 5, 6, 9 ಪ್ರಕರಣವನ್ನು ಪೊಲೀಸರು ಹೇಗೆ ಹಳ್ಳಹಿಡಿಸಿದರು ಮತ್ತು ಮಾನವ ಹಕ್ಕು, ಮಹಿಳಾ ಹಕ್ಕುಗಳನ್ನು ಹೇಗೆ ನಾಶಪಡಿಸಿದರು ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಹುದಾದ ಪ್ರಕರಣವಿದು. ಹಾಗಾಗಿ ಪುನೀತ್ ಕೆರೆಹಳ್ಳಿ ಚಾರ್ಜ್ ಶೀಟನ್ನು ವಿಶ್ಲೇಷಣೆ ನಡೆಸಬೇಕಿದೆ
ಕಾಂಡೋಮ್ ಎನ್ನುವುದು ಆಧುನಿಕ ಮನುಕುಲದ ರಕ್ಷಾ ಕವಚ. ಕಾಂಡೋಮ್ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಪೊಲೀಸರೇ ಪುನೀತ್ ಕೆರೆಹಳ್ಳಿ ಪ್ರಕರಣದಲ್ಲಿ ಕಾಂಡೋಮ್ ಅನ್ನು “ಕ್ರಿಮಿನಲೈಸ್” ಮಾಡಿರುವುದು ಅಘಾತಕಾರಿ. ಪೊಲೀಸರು ಪುನೀತ್ ಕೆರೆಹಳ್ಳಿ ಪ್ರಕರಣವನ್ನು ತಲೆಹಿಡುಕತನ ಕೇಸ್ ಎಂದು ಚಾರ್ಜ್ಶೀಟ್ ನಲ್ಲಿ ನಮೂದಿಸುತ್ತಾರೆ. ಆದರೆ, ಮಾನವ ಕಳ್ಳಸಾಗಾಣಿಕೆಯಂತಹ ಗಂಭೀರ ಪ್ರಕರಣವನ್ನು ಪೊಲೀಸರು ನಿಭಾಯಿಸಿದ ರೀತಿ ಮಾತ್ರ ಆತಂಕಕಾರಿ.
ಇದು ಪುನೀತ್ ಕೆರೆಹಳ್ಳಿಯವರ ಪರ-ವಿರುದ್ದದ ಸುದ್ದಿಯಲ್ಲ. IMMORAL TRAFFIC PREVENTION ಸೆಕ್ಷನ್ 3, 4, 5, 6, 9 ಪ್ರಕರಣವನ್ನು ಪೊಲೀಸರು ಹೇಗೆ ಹಳ್ಳಹಿಡಿಸಿದರು ಮತ್ತು ಮಾನವ ಹಕ್ಕು, ಮಹಿಳಾ ಹಕ್ಕುಗಳನ್ನು ಹೇಗೆ ನಾಶಪಡಿಸಿದರು ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಹುದಾದ ಪ್ರಕರಣವಿದು. ಹಾಗಾಗಿ ಪುನೀತ್ ಕೆರೆಹಳ್ಳಿ ಚಾರ್ಜ್ಶೀಟನ್ನು ವಿಶ್ಲೇಷಣೆ ನಡೆಸಬೇಕಿದೆ.
ಆರ್ ಅಶೋಕ್ ಅವರು ರಾಜ್ಯದ ಗೃಹ ಸಚಿವರಾಗಿದ್ದ ದಿನಗಳವು. ಬೆಂಗಳೂರಿನ ಡಿ ಜೆ ಹಳ್ಳಿ ಪೊಲೀಸರು ದಿನಾಂಕ 20-03-2013 ರಂದು ಆರ್ಟಿ ನಗರದಲ್ಲಿರುವ ಪ್ಲ್ಯಾಟೊಂದಕ್ಕೆ ದಾಳಿ ನಡೆಸಿ ಪುನೀತ್ ಕೆರೆಹಳ್ಳಿ ಸಹಿತ 7 ವ್ಯಕ್ತಿಗಳನ್ನು ವೇಶ್ಯಾವಾಟಿಕೆ ಆರೋಪದಲ್ಲಿ ಬಂಧಿಸುತ್ತಾರೆ. ಇದೇ ಸಂದರ್ಭದಲ್ಲಿ ವೇಶ್ಯಾವಾಟಿಕೆ ಕೇಂದ್ರದಿಂದ 4 ಯುವತಿಯರನ್ನು ಪೊಲೀಸರು ರಕ್ಷಿಸುತ್ತಾರೆ. ಈ ಪೈಕಿ ಇಬ್ಬರು ಮಹಿಳೆಯರು ವಿಧವೆಯರಾಗಿದ್ದು, ಉಳಿದಿಬ್ಬರು 19 ವರ್ಷ ವಯಸ್ಸಿನ ಬಡ ಹುಡುಗಿಯರು. ಈ ನಾಲ್ವರ ಆರ್ಥಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ವೇಶ್ಯಾವಾಟಿಕೆಯಂತಹ ಅನೈತಿಕ ಮಾನವ ಕಳ್ಳಸಾಗಾಟ ನಡೆಸಲಾಗುತ್ತಿತ್ತು ಎಂದು ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಅದಕ್ಕಾಗಿ ಸಾಕ್ಷ್ಯವಾಗಿ ಸ್ಥಳದಲ್ಲಿ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಾರೆ. ಪುನೀತ್ ಕೆರೆಹಳ್ಳಿಯಿಂದ ಒಂದು ಹೆರಿಟೇಜ್ ವೈನ್ ಬಾಟಲ್, ಕಾಮಸೂತ್ರ ಕಂಪನಿಯ ಉಪಯೋಗಿಸದೇ ಇದ್ದ ನಿರೋದ್ ಪ್ಯಾಕೆಟ್, ಉಳಿದೆಲ್ಲಾ ಆರೋಪಿಗಳಿಂದ ಸ್ಕೋರ್ ಕಂಪನಿಯ ನಿರೋದ್ ಪ್ಯಾಕೆಟ್ಗಳನ್ನು ವಶಪಡಿಸಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಹೇಳುತ್ತಾರೆ.
ಪೊಲೀಸರು ವೇಶ್ಯಾವಾಟಿಕೆ ಅಥವಾ ಅನೈತಿಕ ಮಾನವ ಕಳ್ಳ ಸಾಗಾಟಕ್ಕೆ ಸಾಕ್ಷ್ಯವಾಗಿ ಕಾಂಡೋಮ್ ಅನ್ನು ಬಳಸುವ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಹಲವಾರು ದೇಶದ ಅತ್ಯುಚ್ಛ ನ್ಯಾಯಾಲಯಗಳು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಸಲಾಗುತ್ತದೆ. ಕಾಂಡೋಮ್ ಬಳಸುವಿಕೆಯನ್ನು ಪ್ರಚಾರ ಮಾಡಲು ಸರ್ಕಾರ ಎನ್ಜಿಒಗಳ ಮೂಲಕ ಶ್ರಮಿಸುತ್ತದೆ. ಕಾಂಡೋಮ್ ಅನ್ನು ಅಪರಾಧಕ್ಕೆ ಸಾಕ್ಷಿಯಾಗಿ ಬಳಸಿದರೆ ವೇಶ್ಯಾವಾಟಿಕೆ ವೃತ್ತಿಯಲ್ಲಿ ಕಾಂಡೋಮ್ ಬಳಸಲು ಮಹಿಳೆಯರು ಮತ್ತು ಗ್ರಾಹಕರು ಹಿಂಜರಿಯುವಂತಹ ಸಾಧ್ಯತೆ ಇದೆ. ಇದು ಕೇವಲ ವೃತ್ತಿನಿರತ ಮಹಿಳೆಯರು ಮತ್ತು ಗ್ರಾಹಕರು ಆರೋಗ್ಯದ ದೃಷ್ಟಿಯಿಂದಲ್ಲದೇ, ಅವರ ಅಮಾಯಕ ಕುಟುಂಬದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು, ಏಡ್ಸ್ನಂತಹ ನೂರಾರು ಲೈಂಗಿಕ ಕಾಯಿಲೆಗಳು ಸೋಂಕಿನಂತೆ ಹರಡುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದಲೇ ಕಾಂಡೋಮ್ ಅನ್ನು ಕ್ರಿಮಿನಲೈಸ್ ಮಾಡಬಾರದು ಎಂದು ಅಂತರರಾಷ್ಟ್ರೀಯ ಮಾನವ ಹಕ್ಕು ಹೋರಾಟಗಾರರು, ಆರೋಗ್ಯ ಕಾರ್ಯಕರ್ತರು, ಎನ್ಜಿಒಗಳು ಒತ್ತಾಯಿಸುತ್ತಲೇ ಬಂದಿದೆ.
ವೇಶ್ಯಾವಾಟಿಕೆಯ ಸ್ಥಳದಿಂದ ಕಾಂಡೋಮ್ ಅನ್ನು ವಶಪಡಿಸಿಕೊಂಡರೆ ಫೊರೆನ್ಸಿಕ್ ವರದಿ ಆಧಾರದಲ್ಲಿ ಆರೋಪಿಯನ್ನು ನ್ಯಾಯಾಲಯದಲ್ಲಿ ಶಿಕ್ಷಿಸಬಹುದು ಎಂಬ ಉದ್ದೇಶ ಪೊಲೀಸರದ್ದಾಗಿರಬಹುದು. ಆದರೆ ಅದಕ್ಕೆ ಕಾಂಡೋಮ್ ಮಾತ್ರ ಪರಿಹಾರವಲ್ಲ. ವ್ಯಕ್ತಿಗಳು ಧರಿಸಿದ ಅಂಡರ್ ವೇರ್, ಸ್ಪರ್ಶ ನಡೆಸಿದ ದೇಹದ ಭಾಗಗಳ ಕೂದಲು ಸೇರಿದಂತೆ ಹತ್ತಾರು ಅವಕಾಶಗಳನ್ನು ಪೊಲೀಸರು ಬಳಸಬಹುದು. ಆದರೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಕಾಂಡೋಮ್ ಎನ್ನುವ ಶಬ್ದವೇ ಪ್ರಕರಣವನ್ನು ಗಟ್ಟಿಗೊಳಿಸುತ್ತದೆ ಎನ್ನುವ ಪೊಲೀಸರ ಮಾನಸಿಕತೆಯೇ ಕಾಂಡೋಮ್ ಅನ್ನು ಕ್ರಿಮಿನಲೈಸ್ ಮಾಡಲು ಕಾರಣವಾಗಿದೆ.
ಪುನೀತ್ ಕೆರೆಹಳ್ಳಿ ಪ್ರಕರಣದಲ್ಲಿ ಕಾಂಡೋಮ್ ಅನ್ನು ಚಾರ್ಜ್ಶೀಟ್ನಲ್ಲಿ ತೋರಿಸುವ ಆತುರತೆ, ಉತ್ಸಾಹವನ್ನು ನ್ಯಾಯಾಲಯದ ಕಲಾಪದಲ್ಲಿ ತೋರಿಸಿಲ್ಲ. 2023 ರಲ್ಲಿ ಪೊಲೀಸ್ ಇಲಾಖೆಯ ಉಸ್ತುವಾರಿ ವಹಿಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವಧಿಯಲ್ಲಿ ಪುನೀತ್ ಕೆರೆಹಳ್ಳಿ ಅ್ಯಂಡ್ ಟೀಮ್ನ ವೇಶ್ಯಾವಾಟಿಕೆ ಪ್ರಕರಣ ಕೋರ್ಟ್ ತನಿಖೆಯ ಕೊನೇ ಹಂತ ತಲುಪುತ್ತದೆ. ವೇಶ್ಯಾವಾಟಿಕೆ ಅಡ್ಡೆಯಿಂದ ರಕ್ಷಣೆಗೊಳಪಟ್ಟ ನೊಂದ ಮಹಿಳೆಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗಳನ್ನು ಗುರುತಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸರದ್ದಾಗಿತ್ತು. ಆದರೆ, ಪೊಲೀಸರು ಸಾಕ್ಷಿಗಳೆಂದು ಗುರುತಿಸಿದ ಯಾವುದೇ ಸಂತ್ರಸ್ತ ಮಹಿಳೆ ಮತ್ತು ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ. ಪುನೀತ್ ಕೆರೆಹಳ್ಳಿ ಮತ್ತು ತಂಡದಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪೈಕಿ ಇಬ್ಬರನ್ನು ನ್ಯಾಯಾಲಯವೇ ಕೈ ಬಿಟ್ಟಾಗ ಅದನ್ನು ಪೊಲೀಸರು ಪ್ರಶ್ನಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿಲ್ಲ.
ಅಂತಿಮವಾಗಿ ಪುನೀತ್ ಕೆರೆಹಳ್ಳಿ ಮತ್ತು ಇತರ ಇಬ್ಬರು ವೇಶ್ಯಾವಾಟಿಕೆಯ “ಗಿರಾಕಿಗಳು” (ಕಸ್ಟಮರ್) ಎಂದು ನ್ಯಾಯಾಲಯ ಅಧಿಕೃತವಾಗಿ ಆದೇಶ ಹೊರಡಿಸಿದಾಗಲೂ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ಮೇಲ್ಮನವಿ ಸಲ್ಲಿಸಿಲ್ಲ. ವೇಶ್ಯಾವಾಟಿಕೆಯಂತಹ ಮಾನವ ಕಳ್ಳ ಸಾಗಾಣೆಯಲ್ಲಿ “ಗಿರಾಕಿಗಳು” ಎಂದು ವ್ಯಕ್ತಿಗಳನ್ನು ಗುರುತಿಸುವುದೇ ತಪ್ಪು. ವೇಶ್ಯಾವಾಟಿಕೆ ಪ್ರಕರಣದಲ್ಲಿ ವೃತ್ತಿ ನಿರತ ಮಹಿಳೆಯರನ್ನು “ನೊಂದವರು/ ರಕ್ಷಣೆಗೊಳಪಟ್ಟವರು” ಎಂದು ಹೇಳಲಾಗುತ್ತದೆ. ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡವರನ್ನು”ಅನೈತಿಕ ಮಾನವ ಸಾಗಾಟದ ಆರೋಪಿಗಳು” ಎಂದು ಗುರುತಿಸಲಾಗುತ್ತದೆ. ಅನೈತಿಕ ಮಾನವ ಕಳ್ಳಸಾಗಾಟ ಕಾನೂನಿನಲ್ಲಿ ಗಿರಾಕಿ ಎಂಬ ಪಾತ್ರವೇ ಇರುವುದಿಲ್ಲ. ಅಲ್ಲೇನಿದ್ದರೂ ಆರೋಪಿಗಳು ಮಾತ್ರ.
ಹಾಗಾಗಿ ಪೊಲೀಸರಿಗೆ ವೇಶ್ಯಾವಾಟಿಕೆ ಪ್ರಕರಣವನ್ನು ನಿಭಾಯಿಸುವ ಬಗ್ಗೆ ತರಬೇತಿಯನ್ನು ನೀಡಬೇಕಿದೆ. ವೇಶ್ಯಾವಾಟಿಕೆ ಪ್ರಕರಣಗಳು ಯಾಕೆ ಹಳ್ಳಹಿಡಿಯುತ್ತದೆ. ಮಹಿಳೆ ಮತ್ತು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎನ್ನುವುದಕ್ಕೆ ಪುನೀತ್ ಕೆರೆಹಳ್ಳಿ ಪ್ರಕರಣ ಉತ್ತಮ ಉದಾಹರಣೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ