ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾವೇಶಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು.
ಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ ಗಲಭೆ. ಸಾವು-ನೋವುಗಳ ಸುದ್ದಿ. ಆ ಸ್ಥಳಗಳನ್ನು ಖುದ್ದು ಭೇಟಿ ಮಾಡಲು ಗಾಂಧಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಗೆ ಎಲ್ಲ ಸಂಘಸಂಸ್ಥೆಗಳ ನಾಯಕರು ಬಂದುಹೋಗುತ್ತಿದ್ದಾರೆ. ಹಾಗೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರೊಬ್ಬರು ಕೂಡ ಬಂದರು. ಆದರೆ ಅದಕ್ಕೂ ಮುಂಚೆಯೇ ಗಾಂಧೀಜಿಯವರಿಗೆ ಗಲಭೆಗೆ ಕಾರಣರಾರೆಂಬ ಸುದ್ದಿ ಬಂದಿತ್ತು.
ಅದನ್ನು ಮರೆಮಾಚಲು ಆರ್ಎಸ್ಎಸ್ ನಾಯಕ, ‘ನಾವು ಸಾಚಾ ಜನ. ನಮ್ಮ ಸಂಘ ಯಾರನ್ನೂ ವೈರಿಗಳೆಂದು ಪರಿಗಣಿಸದು. ನಾವಿರುವುದು ಹಿಂದೂಗಳ ರಕ್ಷಣೆಗಾಗಿ. ಮುಸ್ಲಿಮರನ್ನು ಕೊಲ್ಲುವ ಉದ್ದೇಶ ನಮಗಿಲ್ಲ. ನಾವು ಶಾಂತಿಧೂತರು…’ ಎಂದರು.
ಗಾಂಧಿ ಸುಮ್ಮನೇ ಇದ್ದರು. ಅವರೇ ಮುಂದುವರೆದು, ‘ಸಂಘದ ಕಾರ್ಯಕರ್ತರು ನಿರಾಶ್ರಿತರ ಶಿಬಿರಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಪರಿಚಯ ಮಾಡಿಕೊಟ್ಟಿದ್ದಾರೆ’ ಎಂದು ಕೊಂಚ ಅಹಂಕಾರದಿಂದ ಹೇಳಿದರು.
ಆಗ ಗಾಂಧಿ, ”ಹಿಟ್ಲರನ ನಾಝಿಗಳು ಮತ್ತು ಮುಸಲೋನಿಯ ಫ್ಯಾಸಿಸ್ಟರು ಇದೇ ರೀತಿ ಮಾಡಿದ್ದರು ಎನ್ನುವುದನ್ನು ಮರೆಯಬೇಡಿ. ಸರ್ವಾಧಿಕಾರ ದೃಷ್ಟಿಕೋನವಿಟ್ಟುಕೊಂಡಿರುವ ಕೋಮುವಾದಿ ಸಂಸ್ಥೆ ನಿಮ್ಮದು” ಎಂದು ಸ್ಪಷ್ಟವಾಗಿ, ನೇರವಾಗಿ, ಹಿಂದುಮುಂದು ನೋಡದೆ ಹೇಳಿದರು.
ಆರೆಸ್ಸೆಸ್ ನಾಯಕನಿಗೆ ಇರುಸುಮುರುಸಾದರೂ, ತಮ್ಮ ಸಂಘದ ಸಮ್ಮೇಳನಕ್ಕೆ ಗಾಂಧಿಯನ್ನು ಆಹ್ವಾನಿಸಿದರು. ಗಾಂಧೀಗೇನು ಭಯ, ‘ಬರುತ್ತೇನೆ’ ಎಂದರು. ಬೃಹತ್ ಸಭೆ, ಆ ನಾಯಕ ಗಾಂಧೀಜಿಯನ್ನು ಸ್ವಾಗತಿಸುತ್ತಾ, ‘ಹಿಂದೂ ಧರ್ಮ ಸೃಷ್ಟಿಸಿರುವ ಒಬ್ಬ ಮಹಾನ್ ಪುರುಷ ಇವರು’ ಎಂದು ಸಭೆಗೆ ಪರಿಚಯಿಸಿದರು.
ಅವರಿಗೆ ಅಷ್ಟೇ ಮಾರ್ಮಿಕವಾಗಿ ಮಾರುತ್ತರಿಸಿದರು ಬಾಪೂ. ”ನಾನು ನನ್ನನ್ನು ‘ಹಿಂದೂ’ ಎಂದು ಕರೆದುಕೊಳ್ಳಲು ಗೌರವ ಎನಿಸುತ್ತದೆ. ಆದರೆ ನನ್ನ ಹಿಂದೂ ಧರ್ಮ ಅಸಹಿಷ್ಣು ಅಲ್ಲ. ಅದರಲ್ಲಿ ಎಲ್ಲ ಧರ್ಮಗಳ ಉತ್ತಮ ವಿಚಾರಗಳು ಸಮಾವೇಶಗೊಂಡಿವೆ. ಇದೇ ಅದರ ವೈಶಿಷ್ಟ್ಯ. ಭಾರತದಲ್ಲಿ ಮುಸ್ಲಿಮರಿರಬಾರದು, ಪಾಕಿಸ್ತಾನದಲ್ಲಿ ಹಿಂದೂಗಳಿರಬಾರದು ಎಂಬುದು ಬಾಲಿಶ. ಎರಡೂ ತಪ್ಪು. ಇಸ್ಲಾಂ ಧರ್ಮದ ಬಗ್ಗೆ ಯಾವುದೇ ವೈರತ್ವವಿಲ್ಲ ಎನ್ನುವ ನಿಮ್ಮ ಆಶ್ವಾಸನೆಯಿಂದ ನನಗೆ ಸಂತೋಷವಾಗಿದೆ. ಆದರೆ ಮುಸ್ಲಿಮರ ಕೊಲೆಯಲ್ಲಿ ನಿಮ್ಮ ಸಂಘಟನೆಯ ಕೈವಾಡವಿದೆ ಎನ್ನುವ ಆರೋಪ ನಿಜವಾದಲ್ಲಿ ಅದರ ಪರಿಣಾಮ ಭಯಂಕರವಾದೀತು” ಎಂದು ಕಿವಿಮಾತು ಹೇಳಿದರು.
ಅವರ ಬಿಚ್ಚುಮಾತು ನಾಯಕರಿಗೆ ಪಥ್ಯವಾಗಲಿಲ್ಲ, ಕೆಣಕಿದಂತಾಯಿತು. ಕೂಡಲೆ, ‘ದುಷ್ಟರನ್ನು ಸಂಹರಿಸಲು ಹಿಂದೂ ಧರ್ಮ ಅನುಮತಿ ನೀಡದೇನು? ಇಲ್ಲ ಎನ್ನುವುದಾದರೆ ಗೀತೆಯ ಎರಡನೆಯ ಅಧ್ಯಾಯದಲ್ಲಿ ಕೌರವರನ್ನು ನಾಶಗೊಳಿಸುವಂತೆ ಶ್ರೀಕೃಷ್ಣ ಉಪದೇಶ ಮಾಡಿದ್ದನಲ್ಲಾ, ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದರು.
”ಹೌದು ಮತ್ತು ಅಲ್ಲ. ನಿಮ್ಮ ಮೊದಲ ಪ್ರಶ್ನೆಗೆ ಈ ಎರಡೂ ಉತ್ತರ. ಸಂಹರಿಸುವುದಕ್ಕೆ ಮೊದಲು ಯಾರು ದುಷ್ಟರು ಎನ್ನುವುದನ್ನು ನಿರ್ಣಯಿಸುವ ಶಕ್ತಿ ನಮ್ಮಲ್ಲಿ ಬರಬೇಕು. ಅಂತಹ ಶಕ್ತಿ ನಮ್ಮಲ್ಲಿ ಬರಬೇಕಾದರೆ ನಾವು ಪೂರ್ಣ ನಿರ್ದೋಷಿಗಳಾಗಿರಬೇಕು. ಒಬ್ಬ ಪಾಪಿ ಇನ್ನೊಬ್ಬ ಪಾಪಿಯ ನ್ಯಾಯವನ್ನು ನಿರ್ಣಯಿಸಬಲ್ಲನೆ? ಅಥವಾ ಆತನನ್ನು ಗಲ್ಲಿಗೇರಿಸುವಂತೆ ಅಧಿಕಾರಯುತವಾಗಿ ಹೇಳಬಲ್ಲನೆ? ಇನ್ನು ಎರಡನೆ ಪ್ರಶ್ನೆ… ಪಾಪಿಗೆ ದಂಡ ಕೊಡುವ ಅಧಿಕಾರ ಗೀತೆ ಒಪ್ಪಿಕೊಂಡಿದೆ ಎಂದೇ ಇಟ್ಟುಕೊಳ್ಳೋಣ. ಆದರೂ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದ ಉಪಯೋಗ ಮಾಡಿಕೊಳ್ಳಬೇಕು. ಹಾಗೆ ಮಾಡದೆ ನೀವು ಕಾನೂನನ್ನು ಕೈಗೆತ್ತಿಕೊಳ್ಳುವುದಾದರೆ ಸರ್ಕಾರವೇಕಿರಬೇಕು? ನೀವೇ ಆಯ್ಕೆ ಮಾಡಿಕೊಂಡಿರುವ ನಾಯಕರಿರುವಾಗ, ಅವರು ಸೇವೆಗೆ ಸಿದ್ಧರಿರುವಾಗ, ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು ಅವರ ಪ್ರಯತ್ನಗಳನ್ನು ವಿಫಲಗೊಳಿಸಿದಂತೆ… ನಿಮ್ಮ ನಾಯಕರನ್ನು ನೀವೇ ಅವಮಾನಿಸಿದಂತೆ…” ಎಂದರು.

ಇದು ಅವರದೇ ಸಭೆಯಲ್ಲಿ ಗಾಂಧಿ ಅವರಿಗೇ ಹೇಳಿದ ಕಿವಿಮಾತು. ಇವತ್ತು ಹೀಗೆ ಹೇಳುವ ನೈತಿಕತೆಯನ್ನು ಎಷ್ಟು ಮಂದಿ ಉಳಿಸಿಕೊಂಡಿದ್ದಾರೆ?
(ಸಂಗ್ರಹಾನುವಾದ)

ಲೇಖಕ, ಪತ್ರಕರ್ತ