ಸುಪ್ರೀಂ ಸಿಬ್ಬಂದಿ ನೇಮಕದಲ್ಲಿ ಮೊದಲ ಬಾರಿಗೆ ಮೀಸಲಾತಿ ನೀತಿ ಜಾರಿ: ಸಾಮಾಜಿಕ ನ್ಯಾಯಕ್ಕೆ ಸಂದ ಜಯ

Date:

Advertisements
ಮೀಸಲಾತಿಯನ್ನು ಅನುಸರಿಸದ ದೇಶದ ಪ್ರತಿಷ್ಠತ ಖಾಸಗಿ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನ ನೂತನ ನಿಯಮವನ್ನು ಅನುಸರಿಸಿ ಜಾತ್ಯತೀತ ಹಾಗೂ ಸಾಮಾಜಿಕ ತತ್ವಕ್ಕೆ ಮಾದರಿಯಾಗಬೇಕು. ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ನೀತಿಯ ಜಾರಿಯು ಒಂದು ಪ್ರಗತಿಪರ ಕ್ರಮವಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್, ದೇಶದ ನ್ಯಾಯ ವ್ಯವಸ್ಥೆಯಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಹೊಂದಿದೆ. ಸುಪ್ರೀಂ ಕೋರ್ಟ್, ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ಮತ್ತು ಸಂವಿಧಾನದ ಮೂಲಭೂತ ತತ್ವಗಳನ್ನು ರಕ್ಷಿಸುವ ಸಂವಿಧಾನದ ಪ್ರಮುಖ ಅಂಗವಾಗಿದೆ. 75 ವರ್ಷಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ನ್ಯಾಯಾಂಗ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಸಿಬ್ಬಂದಿಗಳ ನೇಮಕಾತಿ ಮತ್ತು ಬಡ್ತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಮೀಸಲಾತಿ ಜಾರಿಗೊಳಿಸಲಾಗಿರುವ ಕ್ರಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದಿಕ್ಕಿನಲ್ಲಿ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ. ನೂತನ ನಿಯಮದ ಪ್ರಕಾರ ಎಸ್‌ಸಿ ಸಮುದಾಯಕ್ಕೆ ಶೇ.15 ಹಾಗೂ ಎಸ್‌ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ.  

ಸುಪ್ರೀಂ ಕೋರ್ಟ್ ರಾಷ್ಟ್ರದ ಪ್ರಮುಖ ನ್ಯಾಯಾಲಯವಷ್ಟೇ ಅಲ್ಲ, ಇದು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇರು ಶಿಖರವಾಗಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು, ಆಡಳಿತಾತ್ಮಕ ಕೆಲಸಗಳಿಂದ ಹಿಡಿದು ತಾಂತ್ರಿಕ ಮತ್ತು ಕಾನೂನು ಸಂಬಂಧಿತ ಕಾರ್ಯಗಳವರೆಗೆ, ಕೋರ್ಟ್‌ನ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕೋರ್ಟ್‌ನ ಕಚೇರಿಯಲ್ಲಿ ಕೆಲಸ ಮಾಡುವ ಕಿರಿಯ ಗುಮಾಸ್ತನಿಂದ ಹಿಡಿದು, ದಾಖಲೆಗಳನ್ನು ನಿರ್ವಹಿಸುವ ಅಧಿಕಾರಿಗಳವರೆಗೆ, ಎಲ್ಲರ ಕೊಡುಗೆಯೂ ನ್ಯಾಯಾಲಯದ ಸುಗಮ ಕಾರ್ಯಾಚರಣೆಗೆ ಅತ್ಯಗತ್ಯ. ಈ ಸಿಬ್ಬಂದಿಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರುವುದರಿಂದ, ಶೋಷಿತ ಸಮುದಾಯದಿಂದ ಬಂದವರಿಗೆ ಈ ಉನ್ನತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಅಲ್ಲದೆ ಈಗಾಗಲೇ ಕೆಲಸ ಮಾಡುತ್ತಿರುವ ಎಸ್‌ಸಿ ಅಥವಾ ಎಸ್‌ಟಿ ಸಮುದಾಯದ ಸಿಬ್ಬಂದಿಯು ಪದೋನ್ನತಿಗೆ ಅರ್ಹರಾದಾಗ, ಮೀಸಲಾತಿ ನೀತಿಯು ಅವರಿಗೆ ಪ್ರಮುಖ ಆದ್ಯತೆ ನೀಡುತ್ತದೆ.

ಅಂತೆಯೇ, ಮೀಸಲಾತಿ ಕ್ರಮದ ಮಹತ್ವವನ್ನು ಅರ್ಥಮಾಡಿಕೊಳ್ಳಲು, ಒಂದೆರಡು ಉದಾಹರಣೆಗಳನ್ನು ನೀಡಬಹುದು. ಯಾವುದೋ ಕುಗ್ರಾಮದಿಂದ ಬಂದ ಚಿನ್ನಪ್ಪ ಎಂಬ ಯುವಕನೊಬ್ಬ ಪರಿಶಿಷ್ಟ ಸಮುದಾಯಕ್ಕೆ ಸೇರಿದವನಾಗಿರುತ್ತಾನೆ. ಕಷ್ಟಪಟ್ಟು ಶಿಕ್ಷಣ ಪಡೆದು ಆತ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾನೆ. ಆತ ಸುಪ್ರೀಂ ಕೋರ್ಟ್‌ನಲ್ಲಿ ಆಡಳಿತಾತ್ಮಕ ಸಿಬ್ಬಂದಿಯಾಗಿ ಕೆಲಸ ಮಾಡಲು ಆಕಾಂಕ್ಷಿಯಾಗಿರುತ್ತಾನೆ. ಈ ಹಿಂದೆ, ಮೀಸಲಾತಿ ನೀತಿಯಿಲ್ಲದಿದ್ದಾಗ, ಚಿನ್ನಪ್ಪನಂತಹ ವ್ಯಕ್ತಿಗೆ ಇಂತಹ ಉನ್ನತ ಸಂಸ್ಥೆಯಲ್ಲಿ ಅವಕಾಶ ಪಡೆಯುವುದು ಕಷ್ಟವಾಗಿರುತ್ತದೆ. ಏಕೆಂದರೆ ಸ್ಪರ್ಧೆಯು ತೀವ್ರವಾಗಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ ಯಾವುದೇ ಆದ್ಯತೆ ಇರುತ್ತಿರಲಿಲ್ಲ. ಚಿನ್ನಪ್ಪನಿಗೆ ಎಲ್ಲ ರೀತಿಯ ಅರ್ಹತೆಯಿದ್ದರೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಪಡೆದ ಮೇಲ್ವರ್ಗದವರೆ ಸದಾ ಕಾಲ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಆದರೆ, ಈಗ ಮೀಸಲಾತಿ ನೀತಿಯಡಿ, ಚಿನ್ನಪ್ಪನಂತಹ ಅರ್ಹ ಅಭ್ಯರ್ಥಿಗಳಿಗೆ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾದ ಸ್ಥಾನಗಳಿಗೆ ಸ್ಪರ್ಧಿಸಲು ಅವಕಾಶವಿದೆ. ಇದರಿಂದ ಅವರಿಗೆ ಸ್ಪರ್ಧೆಯಿದ್ದರೂ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

Advertisements

ಇನ್ನೊಂದು ಉದಾಹರಣೆಯನ್ನು ತೆಗೆದುಕೊಂಡರೆ, ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಪರಿಶಿಷ್ಟ ಸಮುದಾಯದ ಸಿಬ್ಬಂದಿಯಾದ ಸಣ್ಣಮ್ಮ ಎಂಬ ಮಹಿಳೆ ಕಿರಿಯ ಆಡಳಿತಾತ್ಮಕ ಸ್ಥಾನದಿಂದ ಹಿರಿಯ ಸ್ಥಾನಕ್ಕೆ ಪದೋನ್ನತಿಗಾಗಿ ಕಾಯುತ್ತಿರುತ್ತಾರೆ. ಈ ಹಿಂದೆ, ಪದೋನ್ನತಿಗಳು ಕೇವಲ ಅನುಭವ ಮತ್ತು ಇತರ ಮಾನದಂಡಗಳ ಮೇಲೆ ಆಧಾರಿತವಾಗಿದ್ದವು. ಆದರೆ ಈಗ ಮೀಸಲಾತಿ ನೀತಿಯಡಿ, ಸಣ್ಣಮ್ಮನಂತಹ ಎಸ್‌ಟಿ ಸಮುದಾಯದ ಸಿಬ್ಬಂದಿಗೆ ಪದೋನ್ನತಿಯಲ್ಲಿ ಆದ್ಯತೆ ದೊರೆಯುತ್ತದೆ. ಇದು ಅವರ ವೃತ್ತಿಜೀವನದಲ್ಲಿ ಮೇಲಕ್ಕೇರಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುತ್ತದೆ.

ಈ ನೀತಿಯ ಜಾರಿಯು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಾತ್ರವಲ್ಲ, ಸುಪ್ರೀಂ ಕೋರ್ಟ್‌ನ ವೈವಿಧ್ಯತೆಯನ್ನು ಹೆಚ್ಚಿಸುವ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸುಪ್ರೀಂ ಕೋರ್ಟ್‌ನಂತಹ ಮಹೋನ್ನತ ಸಂಸ್ಥೆಯಲ್ಲಿ ವಿವಿಧ ಸಾಮಾಜಿಕ ಹಿನ್ನೆಲೆಯಿಂದ ಬಂದವರು ಕೆಲಸ ಮಾಡಿದಾಗ, ಅದು ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಹೊಸ ದೃಷ್ಟಿಕೋನಗಳನ್ನು ತರುತ್ತದೆ. ಎಸ್‌ಸಿ ಅಥವಾ ಎಸ್‌ಸಿ ಸಮುದಾಯದಿಂದ ಬಂದ ಒಬ್ಬ ಸಿಬ್ಬಂದಿಯು, ತಮ್ಮ ಸಮುದಾಯದ ಜನರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಕಾರಣ, ಕೋರ್ಟ್‌ನ ಆಡಳಿತಾತ್ಮಕ ಕಾರ್ಯಗಳಲ್ಲಿ ಅಥವಾ ಸಾರ್ವಜನಿಕ ಸಂವಹನದಲ್ಲಿ ಹೆಚ್ಚು ಸಂವೇದನಾಶೀಲವಾಗಿ ಕೆಲಸ ಮಾಡಬಹುದು. ಇದು ನ್ಯಾಯಾಲಯದ ಒಟ್ಟಾರೆ ದಕ್ಷತೆ ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ

ಈ ಬೆಳವಣಿಗೆಯು ಅತ್ಯಂತ ಅರ್ಥಪೂರ್ಣವಾಗಿರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಇದು ಭಾರತೀಯ ಸಂವಿಧಾನದ 14ನೇ, 15ನೇ ಮತ್ತು 16ನೇ ವಿಧಿಗಳಂತೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕೆಂಬ ಸಾಮಾಜಿಕ ನ್ಯಾಯದ ತತ್ವಗಳ ನೈಜ ಅನುಭವವನ್ನು ನೆಲೆಗೊಳಿಸುತ್ತದೆ. ಹಲವು ವರ್ಷಗಳ ಕಾಲ ಸುಪ್ರೀಂಕೋರ್ಟ್ ತನ್ನ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಇರುವುದಿಲ್ಲ ಎಂಬುದನ್ನು ಹೇಳಿಕೊಂಡು, ಕಚೇರಿ ಸಿಬ್ಬಂದಿ ನೇಮಕಾತಿಗಳಲ್ಲಿ ಕೂಡ ಸೂಕ್ತ ಮೀಸಲಾತಿ ನೀಡದೆ ಬಂದಿತ್ತು. 2023-24ರಲ್ಲಿ ಸುಪ್ರೀಂಕೋರ್ಟ್‌ನಲ್ಲಿಯೇ ಕೆಲಸಮಾಡುತ್ತಿದ್ದ ಕೆಲವು ಉದ್ಯೋಗಿಗಳು, ನ್ಯಾಯಾಲಯದ ಆಡಳಿತ ವಿಭಾಗದೊಳಗಿನ ನೇಮಕಾತಿಗಳಲ್ಲಿ ಮೀಸಲಾತಿ ನೀಡದಿರುವುದನ್ನು ಪ್ರಶ್ನಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಮೂಲಕ ಉತ್ತರ ಕೇಳಿದ್ದರು. ಈ ಮಾಹಿತಿಗೆ ಉತ್ತರವಾಗಿ ಸುಪ್ರೀಂಕೋರ್ಟ್‌ನ ಆಡಳಿತ ಮಂಡಳಿ “ನಮ್ಮ ನೇಮಕಾತಿಗಳಿಗೆ ಮೀಸಲಾತಿ ನೀತಿ ಅನ್ವಯವಾಗುತ್ತಿಲ್ಲ” ಎಂದು ಸ್ಪಷ್ಟವಾಗಿ ಹೇಳಿತ್ತು. ಇದು ಹಲವು ಕಡೆ ತೀವ್ರ ಚರ್ಚೆಗೆ ಕಾರಣವಾಯಿತು. ಈಗ ಮೀಸಲಾತಿ ಕಲ್ಪಿಸಿರುವುದರಿಂದ ಸಾಮಾಜಿಕ ನ್ಯಾಯ ತತ್ವಕ್ಕೆ ಆದ್ಯತೆ ನೀಡಿದಂತಾಗಿದೆ.

ಈ ಮಹತ್ವದ ನೀತಿ ಬದಲಾವಣೆಯು ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಕಾಲದಲ್ಲಿ ಜಾರಿಗೆ ಬಂದಿರುವುದು ಮತ್ತೊಂದು ಸಂತಸದ ವಿಷಯ. ಅವರು ಪರಿಶಿಷ್ಟ ಜಾತಿ ಸಮುದಾಯದಿಂದ ಬಂದಿರುವ ಸುಪ್ರೀಂ ಕೋರ್ಟ್‌ನ ಎರಡನೇ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಈ ಹಿಂದೆ ತೀರ್ಪುಗಳಲ್ಲಿ ಸಾಮಾಜಿಕ ನ್ಯಾಯತತ್ವವನ್ನು ಬೆಂಬಲಿಸಿದ್ದ ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆ, ಈಗ ತನ್ನೊಳಗಿನ ವ್ಯವಸ್ಥೆಯಲ್ಲಿಯೂ ಅದನ್ನು ಅನುಸರಿಸುತ್ತಿರುವುದು ಗಮನಾರ್ಹ ಬೆಳವಣಿಗೆ. ಈ ಮೂಲಕ, ಸುಪ್ರೀಂ ಕೋರ್ಟ್ ತನ್ನ ಆಂತರಿಕ ನಿರ್ಧಾರಗಳಲ್ಲಿ ಸಾಮಾಜಿಕ ನ್ಯಾಯದ ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿರುವುದಾಗಿ ಸಾಬೀತು ಮಾಡುತ್ತಿದೆ.

ನೂತನ ಮೀಸಲಾತಿ ಕ್ರಮವು ಭಾರತದ ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ಸಮರ್ಪಕವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವಾಗ, ಸಾಮಾಜಿಕವಾಗಿ ಹಿಂದುಳಿದವರಿಗೆ ಸಮಾನ ಅವಕಾಶಗಳನ್ನು ಒದಗಿಸುವುದಕ್ಕೆ ಒತ್ತು ನೀಡಿದ್ದರು. ಮೀಸಲಾತಿ ನೀತಿಯು ಈ ಆಶಯವನ್ನು ಪೂರೈಸುವ ಒಂದು ಸಾಧನವಾಗಿದೆ. ಸುಪ್ರೀಂ ಕೋರ್ಟ್‌ನಂತಹ ಸಂಸ್ಥೆಯು ಈ ನೀತಿಯನ್ನು ಅಳವಡಿಸಿಕೊಂಡಿರುವುದು, ದೇಶದ ಇತರ ಸಂಸ್ಥೆಗಳಿಗೆ ಒಂದು ಮಾದರಿಯಾಗಿ ಕಾರ್ಯನಿರ್ವಹಿಸಿದಂತಾಗುತ್ತದೆ.

ಮೀಸಲಾತಿಯನ್ನು ಅನುಸರಿಸದ ದೇಶದ ಪ್ರತಿಷ್ಠತ ಖಾಸಗಿ ಸಂಸ್ಥೆಗಳು ಸುಪ್ರೀಂ ಕೋರ್ಟ್‌ನ ನೂತನ ನಿಯಮವನ್ನು ಅನುಸರಿಸಿ ಜಾತ್ಯತೀತ ಹಾಗೂ ಸಾಮಾಜಿಕ ತತ್ವಕ್ಕೆ ಮಾದರಿಯಾಗಬೇಕು. ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ನೀತಿಯ ಜಾರಿಯು ಒಂದು ಪ್ರಗತಿಪರ ಕ್ರಮವಾಗಿದೆ. ಇದು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವುದಷ್ಟೇ ಅಲ್ಲ, ದೇಶದ ಉನ್ನತ ನ್ಯಾಯಾಲಯದಲ್ಲಿ ವೈವಿಧ್ಯತೆಯನ್ನು ತರುವ ಮೂಲಕ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ. ಈ ಕ್ರಮವು ಭಾರತದ ಸಂವಿಧಾನದ ಆದರ್ಶಗಳಿಗೆ ಒಂದು ಗೌರವವಾಗಿದೆ ಮತ್ತು ಇತರ ಸಂಸ್ಥೆಗಳಿಗೆ ಒಂದು ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X