ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲಾದ ಸೆಕ್ಷನ್ 3ಬಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಆಸ್ತಿಯನ್ನು ಕಾನೂನಾತ್ಮಕವಾಗಿ ಕಸಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಜಿಲ್ಲಾಧಿಕಾರಿ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗಲು ಅವಕಾಶ ಇರುತ್ತದೆಯಾದರೂ, ಅದು ಆಸ್ತಿಯನ್ನು ವಿವಾದಗೊಳಿಸಿ, ಅತಂತ್ರವಾಗಿಸುತ್ತದೆ.
ವಕ್ಫ್ ಬೋರ್ಡ್ ಕಾಯ್ದೆ- 1995ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತರಲು ‘ವಕ್ಫ್ (ತಿದ್ದುಪಡಿ) ಮಸೂದೆ-2024’ರನ್ನು ರಚಿಸಿದ್ದು, ಸಂಸತ್ತಿನಲ್ಲಿ ಮಂಡಿಸಿದೆ. ಮಸೂದೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ಯುದ್ದ ನಡೆಯುತ್ತಿದೆ. ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿರುವ ಪ್ರಸ್ತಾವನೆಗಳು ಮುಸ್ಲಿಂ ಸಮುದಾಯದ ಭೂಮಿ, ಸ್ವತ್ತುಗಳು ಮತ್ತು ಸಂವಿಧಾನದ 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ‘ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ’ವನ್ನು ಕಸಿದುಕೊಳ್ಳುತ್ತದೆ. ಮಸೂದೆಯು ಅಸಂವಿಧಾನಿಕ, ಅಲ್ಪಸಂಖ್ಯಾತ ವಿರೋಧಿ ಮತ್ತು ವಿಭಜನಾಕಾರಿ ಎಂದು ವಿಪಕ್ಷಗಳು ಆರೋಪಿಸಿವೆ. ವಕ್ಫ್ ಮಂಡಳಿಗಳನ್ನು ನಿಯಂತ್ರಿಸಬೇಕೆಂದು ಮುಸ್ಲಿಂ ಸಮುದಾಯದಿಂದಲೇ ಬೇಡಿಕೆ ಬಂದಿತ್ತೆಂದು ಹೇಳುತ್ತಿರುವ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿಯೂ ಮಸೂದೆಯನ್ನು ಮಂಡಿಸಲಾಗಿತ್ತು. ಆ ವೇಳೆ, ಸದನದ ಒಳಗೂ-ಹೊರಗೂ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಪರಿಶೀಲಿಸಿ, ಅಗತ್ಯ ಮಾರ್ಪಾಡುಗಳನ್ನು ಮಾಡಲು ಜಂಟಿ ಸದನ ಸಮಿತಿಯನ್ನು ರಚಿಸಿ, ಅದಕ್ಕೆ ಒಪ್ಪಿಸಲಾಗಿತ್ತು.
ಇದೀಗ, ಕಳೆದ ಫೆಬ್ರವರಿ 13 ರಂದು ಸದನ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದಾಗ್ಯೂ, ಸಮಿತಿಯಲ್ಲಿನ ವಿರೋಧ ಪಕ್ಷದ ಸಂಸದರು ತಾವು ಪ್ರಸ್ತಾಪಿಸಿದ ಬದಲಾವಣೆಗಳನ್ನು ತಿರಸ್ಕರಿಸಲಾಗಿದೆ. ಆಡಳಿತ ಪಕ್ಷದ ಸದಸ್ಯರ ನಿರ್ಧಾರಗಳನ್ನು ಮಾತ್ರವೇ ವರದಿಯಲ್ಲಿ ಒಳಗೊಳ್ಳಲಾಗಿದೆ. ಎನ್ಡಿಎ ಸಂಸದರು ಸೂಚಿಸಿದ 14 ತಿದ್ದುಪಡಿಗಳನ್ನು ಒಳಗೊಂಡಿದ್ದು, ವಿಪಕ್ಷಗಳ ಸದಸ್ಯರು ಸೂಚಿಸಿದ ಎಲ್ಲ 44 ತಿದ್ದುಪಡಿಗಳನ್ನು ತಿರಸ್ಕರಿಸಲಾಗಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಆದರೂ, ವರದಿಯನ್ನು ಫೆಬ್ರವರಿ 19ರಂದು ನಡೆದ ಕೇಂದ್ರ ಸಚಿವ ಸಂಪುಟ ಅನುಮೋದಿಸಿತ್ತು. ಈಗ, ಸದನದಲ್ಲಿ ಮಂಡಿಸಲಾಗಿದೆ. ಆಡಳಿತಾರೂಢ ಎನ್ಡಿಎ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆದಿದೆ.
ಅಂದಹಾಗೆ, ಮುಸ್ಲಿಮರ ವಿರುದ್ಧ ನಿರಂತರವಾಗಿ ದ್ವೇಷ ಕಾರುತ್ತ, ಕೋಮು ವಿಷ ಹರಡುತ್ತಾ, ಕೋಮು ಪ್ರಚೋದನೆ ಮಾಡುತ್ತಿರುವ ಬಿಜೆಪಿ, ಈ ‘ವಕ್ಫ್ (ತಿದ್ದುಪಡಿ) ಮಸೂದೆ-2024’ಯನ್ನು ಯಾಕೆ ಜಾರಿಗೆ ತಂದಿದೆ, ಅದರ ಉದ್ದೇಶವೇನು, ಮಸೂದೆ ಸೃಷ್ಟಿಸಿರುವ ವಿವಾದಗಳೇನು, ಮಸೂದೆಯು ವಕ್ಫ್ ಆಸ್ತಿಯನ್ನು ಕಿತ್ತುಕೊಳ್ಳುವ ಹುನ್ನಾರದ ಭಾಗವಾಗಿದೆಯೇ? ನೋಡೋಣ…
ವಕ್ಫ್ ಆಸ್ತಿ ಎಂದರೇನು?
ಮುಸ್ಲಿಮರು ನಿರ್ದಿಷ್ಟ ಉದ್ದೇಶಕ್ಕಾಗಿ ವಕ್ಫ್ಗೆ ನೀಡಿದ ಆಸ್ತಿಯಾಗಿದೆ. ಹಿಂದು ಧರ್ಮದಲ್ಲಿ ದೇವಾಲಯ, ದೇವರ ಹೆಸರಿನಲ್ಲಿ ಅಥವಾ ದೇವರಿಗಾಗಿ ದಾನ ನೀಡಿದ ಭೂಮಿ ಅಥವಾ ಆಸ್ತಿಗಳು ಹೇಗೆ ಇರುತ್ತವೆಯೋ, ಅದೇ ರೀತಿ, ಮುಸ್ಲಿಂ ಧರ್ಮದಲ್ಲಿ ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಜನ ದಾನ ನೀಡಲಾದ ಚರಾಸ್ತಿ ಅಥವಾ ಸ್ಥಿರಾಸ್ತಿಯನ್ನು ‘ವಕ್ಫ್ ಆಸ್ತಿ’ ಎನ್ನಲಾಗುತ್ತದೆ. ಇದನ್ನು, ವಕ್ಫ್ ಮಂಡಳಿ ನಿರ್ವಹಿಸುತ್ತದೆ.
ಈ ವರದಿ ಓದಿದ್ದೀರಾ?: ವಕ್ಫ್ ತಿದ್ದುಪಡಿ ಮಸೂದೆಗೆ ನಾಯ್ಡು, ನಿತೀಶ್ ಬೆಂಬಲ; ಮುಸ್ಲಿಂ ಸಮುದಾಯ ಶಾಶ್ವತವಾಗಿ ದೂರ!
ಮುಸ್ಲಿಂ ಧಾರ್ಮಿಕ ಆಸ್ತಿಗಳ ಉತ್ತಮ ನಿರ್ವಹಣೆ ಮತ್ತು ಆಡಳಿತದ ಉದ್ದೇಶಕ್ಕಾಗಿ 1995ರಲ್ಲಿ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅಂದಿನಿಂದ, ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಆಸ್ತಿಗಳ ನಿರ್ವಹಣೆಯನ್ನು ಮಾಡುತಿತ್ತು.
ವಕ್ಫ್ ಆಸ್ತಿಯನ್ನು ಸಾರ್ವಜನಿಕ ದತ್ತಿ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ವಕ್ಫ್ ಆಸ್ತಿಗಳಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳು, ಸ್ಮಶಾನಗಳು, ಮಸೀದಿಗಳು ಮತ್ತು ಆಶ್ರಯ ಮನೆಗಳಿಗೆ ವಿನಿಯೋಗಿಸಲಾಗುತ್ತಿತ್ತು. ಹೆಚ್ಚಾಗಿ ಹಿಂದುಳಿದ ಮುಸ್ಲಿಮರಿಗೆ ಇದರಿಂದ ನೆರವು ದೊರೆಯುತಿತ್ತು.
ವಕ್ಫ್ ಬೋರ್ಡ್ ಎಂದರೇನು?
ವಕ್ಫ್ ಆಸ್ತಿಯನ್ನು ನಿರ್ವಹಿಸಲು ನಾಮನಿರ್ದೇಶಿತ ಸದಸ್ಯರನ್ನು ಹೊಂದಿರುವ ಕಾನೂನಾತ್ಮಕ ಘಟಕ – ವಕ್ಫ್ ಬೋರ್ಡ್. ಮಂಡಳಿಯು ವಕ್ಫ್ ಆಸ್ತಿಯಿಂದ ಬರುವ ಆದಾಯವನ್ನು ಉದ್ದೇಶಿತ ಉದ್ದೇಶಗಳಿಗಾಗಿ ಬಳಸಲು ಮತ್ತು ನಿರ್ವಹಿಸಲು ಪ್ರತಿ ಆಸ್ತಿಗೆ ಒಬ್ಬ ಪಾಲಕನನ್ನು ನೇಮಿಸುತ್ತದೆ.
ಈ ವರದಿ ಓದಿದ್ದೀರಾ?: ಜಾತಿ ಉಪ-ವರ್ಗೀಕರಣದ ಕುರಿತ ಸುಪ್ರೀಂ ತೀರ್ಪು – ಸಾಮಾಜಿಕ ವ್ಯವಸ್ಥೆಯಲ್ಲಿ ಹೆಗ್ಗುರುತು
1964ರಲ್ಲಿ ಸ್ಥಾಪನೆಯಾದ ಸೆಂಟ್ರಲ್ ವಕ್ಫ್ ಕೌನ್ಸಿಲ್ (CWC), ಭಾರತದಾದ್ಯಂತ ರಾಜ್ಯ ಮಟ್ಟದ ವಕ್ಫ್ ಮಂಡಳಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಲಹೆ ನೀಡುತ್ತದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವಕ್ಫ್ ಮಂಡಳಿಯನ್ನು ಕಾನೂನುಬದ್ದಗೊಳಿಸಿ 1995ರಲ್ಲಿ ಕಾಯ್ದೆಯನ್ನು ತರಲಾಗಿತ್ತು. ಬಳಿಕ, 2013ರಲ್ಲಿ ತಿದ್ದುಪಡಿಯೊಂದಿಗೆ, ವಕ್ಫ್ ಮಂಡಳಿಗೆ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಗೊತ್ತುಪಡಿಸುವ ಅಧಿಕಾರವನ್ನೂ ನೀಡಲಾಗಿತ್ತು. ಜೊತೆಗೆ, ಸೆಕ್ಷನ್ 6ರಲ್ಲಿ ವಕ್ಫ್ ಆಸ್ತಿ ವಿಚಾರಕ್ಕೆ ವಿವಾದ ಉಂಟಾದರೆ, ಅಂತಹ ವಿಷಯವನ್ನು ಪರಿಶೀಲಿಸಿ, ನಿರ್ಧರಿಸುವ ಅಧಿಕಾರವನ್ನು ನ್ಯಾಯಮಂಡಳಿಗೆ ನೀಡಲಾಯಿತು.
ಮಸೂದೆಯಲ್ಲಿನ ಪ್ರಮುಖ ಅಂಶಗಳು ಮತ್ತು ಅವುಗಳ ಹಿಂದಿನ ಹುನ್ನಾರಗಳು
ಮಸೂದೆಯ ಉದ್ದೇಶ/ಹುನ್ನಾರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಮಸೂದೆಯು ವಕ್ಫ್ ಆಸ್ತಿಯನ್ನು ನಿರ್ವಹಿಸುವಲ್ಲಿ ವಕ್ಫ್ ಮಂಡಳಿಗೆ ನೀಡಲಾಗಿರುವ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಅಥವಾ ನಿರ್ಬಂಧಿಸುತ್ತದೆ. ವಕ್ಫ್ ಮಂಡಳಿಯ ಮೇಲೆ ಸವಾರಿ ಮಾಡುವ ಮೂಲಕ ಆ ಆಸ್ತಿಗಳನ್ನು ಸರ್ಕಾರ ನಿಯಂತ್ರಿಸಲು ಅವಕಾಶ ನೀಡುತ್ತದೆ.
- ವಕ್ಫ್ ಆಸ್ತಿಗಳ ಸರ್ವೆಗಳನ್ನು ಈ ಹಿಂದೆ ರಾಜ್ಯ ಸರ್ಕಾರ ನೇಮಿಸಿದ ಸರ್ವೆ ಆಯುಕ್ತರು ನಡೆಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇರುತ್ತಿತ್ತು. ಆದರೆ, ಹೊಸ ಮಸೂದೆಯಲ್ಲಿ ಸರ್ವೇ ನಡೆಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿಗಳು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವುದರಿಂದ ಸರ್ಕಾರವು ನೇರವಾಗಿ ಹಸ್ತಕ್ಷೇಪ ಮಾಡಲು ಅವಕಾಶವಾಗುತ್ತದೆ. ಪರಿಣಾಮ, ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ.
- ವಕ್ಫ್ ಬೋರ್ಡ್ಗೆ ಯಾವುದೇ ವ್ಯಕ್ತಿ (ಮುಸ್ಲಿಮೇತರರೂ ಕೂಡ) ತಮ್ಮ ಆಸ್ತಿಯನ್ನು ಸೆಕ್ಷನ್ 104ರ ಅಡಿಯಲ್ಲಿ ವಕ್ಫ್ಗೆ ದಾನವಾಗಿ ನೀಡಬಹುದಿತ್ತು. ಆದರೆ, ಈಗ ಆ ಸೆಕ್ಷನ್ 104ನ್ನೂ ತೆಗೆದು ಹಾಕಲಾಗುತ್ತಿದೆ. ಅಲ್ಲದೆ, ಕೆಲವು ನಿರ್ಬಂಧಗಳು, ಕಟ್ಟುಪಾಡುಗಳನ್ನು ಹೇರಿದ್ದು, ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದ ವ್ಯಕ್ತಿ ಮಾತ್ರವೇ ತಮ್ಮ ಆಸ್ತಿಯನ್ನು ವಕ್ಫ್ಗೆ ನೀಡಲು ಸಾಧ್ಯವೆಂದು ಹೇಳಿದೆ. ಆ ಮೂಲಕ, ಮುಸ್ಲಿಮೇತರರು ವಕ್ಫ್ಗೆ ದಾನವಾಗಿ ನೀಡಿದ ಆಸ್ತಿ, ವಕ್ಫ್ಗೆ ಸೇರುವುದಿಲ್ಲವೆಂದೂ, ಅದನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಸಂಚನ್ನು ಕೇಂದ್ರ ಸರ್ಕಾರ ಹೆಣೆದಿದೆ.
- ನಿರ್ದಿಷ್ಟವಾಗಿ ಯಾವುದೇ ಆಸ್ತಿಯು ವಕ್ಫ್ ಆಸ್ತಿಯೇ ಅಲ್ಲವೇ ಎಂದು ನಿರ್ಧರಿಸುವಲ್ಲಿ ವಕ್ಫ್ ಮಂಡಳಿಗೆ ಅಧಿಕಾರ ನೀಡಿದ್ದ 1995ರ ಕಾಯ್ದೆ ಸೆಕ್ಷನ್ 40ರನ್ನು ರದ್ದುಗೊಳಿಸಲಾಗಿದೆ. ಆ ಮೂಲಕ, ಆಸ್ತಿ ಮೇಲಿನ ವಕ್ಫ್ ಮಂಡಳಿಯ ಸಂಪೂರ್ಣ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ.
- ಕೇಂದ್ರ ಅಥವಾ ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ನೇಮಿಸಲೇಬೇಕೆಂಬ ನಿಯಮ ಇರಲಿಲ್ಲ. ಆದರೆ, ಈಗ ಮುಸ್ಲಿಮೇತರರು ಮಂಡಳಿಯಲ್ಲಿ ಇರಬೇಕೆಂದು ನಿಯಮ ರೂಪಿಸಲಾಗಿದೆ. 1995ರ ಕಾಯ್ದೆಯ 9ನೇ ಸೆಕ್ಷನ್ಗೆ ಉಪ ಸೆಕ್ಷನ್ಗಳನ್ನು ಸೇರಿಸಲಾಗಿದೆ. ಅದರೊಂದಿಗೆ ಇಬ್ಬರು ಮುಸ್ಲಿಮೇತರರನ್ನು ಮಂಡಳಿಗೆ ತುರುಕಲು ಬಿಜೆಪಿ ಸರ್ಕಾರ ಹವಣಿಸುತ್ತಿದೆ. ಇದರಿಂದಾಗಿ, ಮುಸ್ಲಿಂ ಅಲ್ಲದವರು (ಹಿಂದು) ವಕ್ಫ್ ಮಂಡಳಿಯ ಸದಸ್ಯರಾಗುತ್ತಾರೆ. ಇದು, ವಕ್ಫ್ ಆಸ್ತಿ ಮತ್ತು ಮಂಡಳಿಯಲ್ಲಿನ ನಿರ್ಧಾರ, ನಿರ್ವಹಣೆಯ ಮೇಲೆ ಪರೋಕ್ಷವಾಗಿ ಸರ್ಕಾರ ನಿಯಂತ್ರಣ ಸಾಧಿಸುವ ಹುನ್ನಾರವನ್ನು ಹೊಂದಿದೆ.
- ಲೆಕ್ಕ ಪರಿಶೋಧನೆಯ ಅಧಿಕಾರವನ್ನೂ ವಕ್ಫ್ ಮಂಡಳಿಯಿಂದ ಕಸಿದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿಂದೆ, ವಕ್ಫ್ ಮಂಡಳಿಗಳಿಗೆ ಸಂಬಂಧಿಸಿದ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ಆದರೆ, ಅದನ್ನು ರದ್ದುಗೊಳಿಸಲಾಗಿತ್ತು. ವಕ್ಫ್ ಆಸ್ತಿಯನ್ನು ಕೇಂದ್ರ ಸರ್ಕಾರವು ತನ್ನಿಚ್ಛೆಯಂತೆ ಲೆಕ್ಕಪರಿಶೋಧನೆ ಮಾಡಬಹುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಅದರೊಂದಿಗೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ಮೂಲಕ ಲೆಕ್ಕಪರಿಶೋಧಕರನ್ನು ನೇಮಿಸಿ, ವಕ್ಫ್ ಮಂಡಳಿಯ ಆದಾಯದ ಮೇಲೆ ಹದ್ದಿನ ಕಣ್ಣಿಡಲು ಸರ್ಕಾರ ಮುಂದಾಗಿದೆ.
- ತಲೆಮಾರುಗಳ ಬಳಕೆಯಿಂದಾಗಿ ವಕ್ಫ್ ಆಸ್ತಿಯೆಂದು ಘೋಷಿಸಲ್ಪಟ್ಟಿರುವ ಆಸ್ತಿಯನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. 1995ರ ಕಾಯ್ದೆಯಲ್ಲಿ ಮುಸ್ಲಿಮರು ನಿರಂತರವಾಗಿ ಬಳಸುತ್ತಿದ್ದ ಸಾರ್ವಜನಿಕ ಭೂಮಿ ಅಥವಾ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಘೋಷಿಸಲು, ಪರಿಗಣಿಸಲು ಅವಕಾಶ ನೀಡಿತ್ತು. ಈಗ ಆ ಅವಕಾಶವನ್ನೂ ಸರ್ಕಾರ ಕಿತ್ತುಕೊಳ್ಳುತ್ತಿದೆ.
- ಯಾವುದೇ ವಕ್ಫ್ ಆಸ್ತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ, ಆಸ್ತಿ ಮೌಲ್ಯಮಾಪನ ಮಾಡಲಾಗುತ್ತದೆ.
- ವಕ್ಫ್ ಮಂಡಳಿಯಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಭತ್ಯೆಗಳ ಮೇಲೂ ಕಣ್ಣಿಟ್ಟಿರುವ ಸರ್ಕಾರ, ಸೆಕ್ಷನ್ 72ಕ್ಕೆ ತಿದ್ದುಪಡಿ ಸೂಚಿಸಿದೆ. ವಕ್ಫ್ನ ವಾರ್ಷಿಕ ಆದಾಯದಲ್ಲಿ ಶೇ.7ರಷ್ಟನ್ನು ಮಂಡಳಿಯಲ್ಲಿ ಸೇವೆ ಸಲ್ಲಿಸಿದವರಿಗೆ ಭತ್ಯೆಯಾಗಿ ನೀಡಲಾಗುತ್ತಿತ್ತು. ಇದೀಗ, ಆ ಭತ್ಯೆಯನ್ನು ಶೇ.5ಕ್ಕೆ ಇಳಿಸಿದೆ. ಮಾತ್ರವಲ್ಲದೆ, ವಕ್ಫ್ ಮಂಡಳಿಯ ಸದಸ್ಯರು ಸಭೆಗೆ ಹಾಜರಾದಾಗ ನೀಡಲಾಗುತ್ತಿದ್ದ ಪ್ರಯಾಣ, ಊಟದ ಭತ್ಯೆಯನ್ನೂ ಕಸಿದುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ.
- 1995ರ ಕಾಯ್ದೆಯ 3ನೇ ಸೆಕ್ಷನ್ಗೆ ಮೂರು ಉಪ ಸೆಕ್ಷನ್ಗಳನ್ನು ಸೇರಿಸಲಾಗಿದೆ. ಅದರಲ್ಲಿ 3ಬಿ ಸೆಕ್ಷನ್, ”1995 ವಕ್ಫ್ ಕಾಯ್ದೆಯು ಜಾರಿಗೆ ಬರುವುದಕ್ಕೂ ಮೊದಲು ಅಥವಾ ನಂತರ ವಕ್ಫ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೋಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ, ವಕ್ಫ್ ಆಸ್ತಿ ಎಂದು ಗುರುತಿಸಲಾಗಿದ್ದ ಆಸ್ತಿಯು ಸರ್ಕಾರಕ್ಕೆ ಸೇರಿದ್ದೇ ಎಂಬ ಪ್ರಶ್ನೆ ಬಂದರೆ, ಜಿಲ್ಲಾಧಿಕಾರಿ ಸರ್ವೇ ನಡೆಸಿ, ನಿರ್ಧಾರ ಕೈಗೊಳ್ಳಬಹುದು” ಎಂದು ಹೇಳಲಾಗಿದೆ. ಆ ಮೂಲಕ, ಮುಸ್ಲಿಂ ಸಮುದಾಯದ ಬಹುತೇಕ ಆಸ್ತಿಯನ್ನು ಕಸಿದುಕೊಳ್ಳುವ ಹುನ್ನಾರ ಮಸೂದೆಯದ್ದಾಗಿದೆ.
ಅಂದಹಾಗೆ, ಹಲವಾರು ದೇವಾಲಯಗಳು ಸರ್ಕಾರಿ ಜಾಗದಲ್ಲಿಯೇ ಇವೆ. ಕಾಲಾನಂತರದಲ್ಲಿ ಆ ಭೂಮಿಯನ್ನು ದೇವಾಲಯದ ಹೆಸರಿಗೆ ನೀಡಲಾಗಿದೆ. ಅದೇ ರೀತಿ, ಮಸೀದಿ ಅಥವಾ ವಕ್ಫ್ಗೆ ಸಂಬಂಧಿಸಿದ ಕೆಲ ಭೂಮಿಯೂ ಸರ್ಕಾರಿ ಜಮೀನಾಗಿದ್ದು, ನಂತರದಲ್ಲಿ ಅದು ವಕ್ಫ್ ಹೆಸರಿಗೆ ಹಸ್ತಾಂತರವಾಗಿರುತ್ತದೆ. ಇದೀಗ, ಅಂತಹ ಎಲ್ಲ ಭೂಮಿಯನ್ನೂ ಕಸಿದುಕೊಳ್ಳುವ ಕುತಂತ್ರ ಮಸೂದೆ ಹಿಂದಿದೆ.
ಈ ವರದಿ ಓದಿದ್ದೀರಾ?: ಕರ್ನಾಟಕದಲ್ಲಿ ವಕ್ಫ್ ವಿವಾದ: ಅಂತಿಮವಾಗಿ ಗೆದ್ದಿದ್ದು ಯಾರು?
ಹಾಗೆ ನೋಡಿದರೆ, ಬಾಬ್ರಿ ಮಸೀದಿಯನ್ನು ಉರುಳಿಸಿ, ಆ ಭೂಮಿ ರಾಮಮಂದಿರದ್ದು ಎಂದು ಬಲವಂತವಾಗಿ ಕಸಿದುಕೊಳ್ಳಲಾಯಿತು. ಧಾರ್ಮಿಕ ಭಾವನೆಯನ್ನು ಮುಂದಿಟ್ಟು ಆ ಜಾಗದಲ್ಲಿ ರಾಮಮಂದಿರ ಕಟ್ಟಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಇದೀಗ, ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿಗಳನ್ನೂ ವಿವಾದಕ್ಕೆ ಎಳೆದು, ಕಸಿದುಕೊಳ್ಳುವ ಯತ್ನವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ಇದೀಗ, ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲಾದ ಸೆಕ್ಷನ್ 3ಬಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಧಾರ್ಮಿಕ ಆಸ್ತಿಯನ್ನು ಕಾನೂನಾತ್ಮಕವಾಗಿ ಕಸಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಜಿಲ್ಲಾಧಿಕಾರಿ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗಲು ಅವಕಾಶ ಇರುತ್ತದೆಯಾದರೂ, ಅದು ಆಸ್ತಿಯನ್ನು ವಿವಾದಗೊಳಿಸಿ, ಅತಂತ್ರವಾಗಿಸುತ್ತದೆ.
ಒಟ್ಟಿನಲ್ಲಿ, ಮುಸ್ಲಿಂ ಸಮುದಾಯದ ಆಸ್ತಿಯನ್ನು ಅವರಿಂದ ಕಸಿದುಕೊಳ್ಳುವುದು, ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ನೆರವಿನ ಆಧಾರವಾಗಿದ್ದ ವಕ್ಫ್ ಆಸ್ತಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ವಕ್ಫ್ ಆಸ್ತಿಯ ಆದಾಯದಿಂದ ವಕ್ಫ್ ಮಂಡಳಿಗಳು ನಡೆಸುತ್ತಿದ್ದ ಸಾಮಾಜಿಕ ಕಾರ್ಯಗಳಿಗೆ ಕೊಕ್ಕೆ ಹಾಕುವುದು ಕೇಂದ್ರದ ಹುನ್ನಾರವಾಗಿದೆ. ಮೋದಿ ಸರ್ಕಾರ ಮಂಡಿಸಿರುವ ಈ ಮಸೂದೆ ಅಂಗೀಕಾರವಾದರೆ, ಮುಸ್ಲಿಮರ ಧಾರ್ಮಿಕ ಆಚರಣೆಗಳು ಮಾತ್ರವಲ್ಲದೆ, ಸಾಮಾಜಿಕ ಚಟುವಟಿಕೆಗಳೂ ಕುಂಠಿತವೂ, ಕಡಿತವೂ ಆಗಲಿವೆ. ಈ ಮಸೂದೆ ಅಂಗೀಕಾರವಾಗದಂತೆ ಹೋರಾಟ ನಡೆಸಬೇಕಿರುವ ಅನಿವಾರ್ಯತೆ ದೇಶದ ಮುಂದಿದೆ.