2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ನಾನಾ ಮಾಧ್ಯಮಗಳಲ್ಲಿ ಬಿತ್ತರಿಸುವ ಜಾಹೀರಾತುಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ರಾಜಕೀಯ ಪಕ್ಷದವರಿಗೆ ಜಿಲ್ಲಾ ಎಂಸಿಎಂಸಿ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ರವರು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.
ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿ ಸಂಬಂಧ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪ್ರತಿನಿಧಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಬೆಂಗಳೂರು ಜಿಲ್ಲೆ ವ್ಯಾಪ್ತಿಗೆ ನಾನಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಮತ್ತು ಅಭ್ಯರ್ಥಿಗಳ ಪರ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಧ್ವನಿ/ದೃಶ್ಯ (ಆಡಿಯೋ / ವೀಡಿಯೋ) ಜಾಹೀರಾತುಗಳನ್ನು ಪ್ರಕಟಿಸುವ ಮೊದಲು ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿಯ ಪೂರ್ವ ಪ್ರಮಾಣೀಕರಣ ಹೊಂದಿರಬೇಕು” ಎಂದು ತಿಳಿಸಿದರು.
“ಯಾವುದೇ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷ / ಅಭ್ಯರ್ಥಿಯು ಜಾಹೀರಾತು ಪ್ರಸಾರವಾಗುವ 3 ದಿನಗಳ ಮುನ್ನ ಹಾಗೂ ನೋಂದಾಯಿತ, ಮಾನ್ಯವಲ್ಲದ ರಾಜಕೀಯ ಪಕ್ಷ ಜಾಹೀರಾತಿಗೆ ಪೂರ್ವ ಪ್ರಮಾಣೀಕರಣ ಅರ್ಜಿಯನ್ನು 7 ದಿನಗಳ ಮುಂಚಿತವಾಗಿ ಸಲ್ಲಿಸಬೇಕು” ಎಂದರು.
“ರಾಜಕೀಯ ಪಕ್ಷಗಳು ಜಾಹೀರಾತು ಪೂರ್ವ ಪ್ರಮಾಣೀಕರಣಕ್ಕಾಗಿ ಜಿಲ್ಲಾ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಅವರ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಸೇರಿದಂತೆ 3 ಲೋಕಸಭಾ ಕ್ಷೇತ್ರಗಳಲ್ಲಿ ವಿಂಗಡಿಸಿ ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಭ್ಯರ್ಥಿ ಅಥವಾ ಪಕ್ಷ ನಿಗದಿತ ಚುನಾವಣಾಧಿಕಾರಿಗೆ ಜಾಹೀರಾತು ಪೂರ್ವ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ತಿಳಿಸಿದರು.
“ಯಾವುದೇ ಧ್ವನಿ / ದೃಶ್ಯ ಮಾಧ್ಯಮದ ರಾಜಕೀಯ ಜಾಹೀರಾತು /ಪ್ರಚಾರ ವಿಷಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಅಂಶಗಳು ಇರಬಾರದು. ಉಲ್ಲಂಘನೆಯಾದ ಸಂದರ್ಭದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳು ಅಂತಹ ಅಭ್ಯರ್ಥಿಗೆ ವಿವರಣೆ ಕೇಳುವ ನೋಟಿಸ್ ಜಾರಿ ಮಾಡುತ್ತಾರೆ” ಎಂದರು.
“ಜಿಲ್ಲಾ ಮಾಧ್ಯಮ ಮೇಲುಸ್ತುವಾರಿ ತಂಡಗಳು ನಿರಂತರ ಎಲ್ಲ ರೀತಿಯ ಮಾಧ್ಯಮ ಪ್ರಸಾರದ ಮೇಲೆ ನಿಗಾ ವಹಿಸುತ್ತಿದ್ದು, ಸಂಶಯಾಸ್ಪದ ಪಾವತಿ ಸುದ್ದಿ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಏಪ್ರಿಲ್ 1ರಿಂದ ಹೋಟೇಲ್ಗಳಿಗೆ ರಿಯಾಯತಿ ದರದಲ್ಲಿ ಸಂಸ್ಕರಿಸಿದ ನೀರು ಸರಬರಾಜು : ಜಲಮಂಡಳಿ ಅಧ್ಯಕ್ಷ
“ಮಾದರಿ ನೀತಿ ಸಂಹಿತೆ ಅನ್ವಯ ಪ್ರಚಾರ ಕಾರ್ಯಗಳನ್ನು ನಡೆಸುವ ಮೂಲಕ ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು” ಎಂದು ಕೋರಿದರು.
ಈ ಸಭೆಯಲ್ಲಿ ಜಿಲ್ಲಾ ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ರೂಪಾ ಸಿ, ಎಂಸಿಎಂಸಿ ಸದಸ್ಯರಾದ ಆನಂದ್, ವಿಜಯ್ ಕುಮಾರ್ ಹರಿದಾಸ್, ಸುರೇಶ್ ಎಲ್, ರಾಜಕೀಯ ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.