ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೀಪದ ಸೂರ್ಯನಗರ ಮತ್ತು ಭುವನೇಶ್ವರಿ ನಗರದಲ್ಲಿ ಬುಧವಾರ ಕೆಲವು ಮಹಿಳೆಯರು ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಚಿರತೆ ನೋಡಿರುವುದನ್ನು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ತಿಳಿಸಿದ ಬಳಿಕ ಚಿರತೆಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಆದರೆ ಚಿರತೆ ಜನವಸತಿ ಪ್ರದೇಶಕ್ಕೆ ನುಗ್ಗಿರುವುದನ್ನು ಅರಣ್ಯ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
“ಈಗ ಬೇಸಿಗೆ. ಹಾಗಾಗಿ ನೀರು ಅರಸಿ ಚಿರತೆ ಈ ಭಾಗಕ್ಕೆ ಬಂದಿರಬಹುದು. ಶಾಂಭವಿ ನಗರ, ಹೊಯ್ಸಳ ನಗರ ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ತಿರುಗುವರು. ಚಿರತೆ ಇರುವುದರ ಕುರಿತು ಯಾವುದೇ ಹೆಜ್ಜೆ ಗುರುತು ಕಂಡುಬಂದಿಲ್ಲ” ಎಂದು ವಲಯ ಅರಣ್ಯ ಅಧಿಕಾರಿ ಪ್ರದೀಪ್ ಪವಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ; ಸಿಬ್ಬಂದಿ ರಕ್ಷಣೆ
“ಚಿರತೆ ಇರುವ ಕುರಿತು ದೃಢೀಕರಿಸುವ ಯಾವುದೇ ಸೂಚನೆ ಕಂಡುಬಂದರೆ, ಅದನ್ನು ಹಿಡಿಯಲು ಇಲಾಖೆ ಬೋನು ಇಡುತ್ತದೆ” ಎಂದು ತಿಳಿಸಿದ್ದಾರೆ.