ಮನೆಗೆ ನುಗ್ಗಿ ಮಹಿಳಾ ಅಧಿಕಾರಿಯೋರ್ವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಶನಿವಾರ ತಡರಾತ್ರಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೆ ಎಸ್ (37) ಕೊಲೆಯಾದವರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡಿ ಮೂಲದ ಪ್ರತಿಮಾಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ನಂತರ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಪ್ರತಿಮಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು.
2017ರಲ್ಲಿ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಪ್ರತಿಮಾ ನಂತರ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಮನೆಗೆ ಪ್ರತಿಮಾ ಅವರನ್ನು ಕಾರು ಚಾಲಕ ಡ್ರಾಪ್ ಮಾಡಿ ತೆರಳಿದ್ದನು. ಬಳಿಕ ರಾತ್ರಿ ವೇಳೆ ಹಂತಕರು ಬಂದು ಕೊಲೆ ಮಾಡಿ, ಪರಾರಿಯಾಗಿದ್ದಾರೆ. ಮನೆಯೊಳಗೆ ಬಂದು ಕೊಲೆ ಮಾಡಿ ಹೋಗಿರುವುದರಿಂದ ಪೂರ್ವನಿಯೋಜಿತ ಕೃತ್ಯವೆಂದು ಶಂಕಿಸಲಾಗಿದೆ. ಮನೆಯಲ್ಲಿ ಕಳ್ಳತನವಾದ ಬಗ್ಗೆ ಯಾವುದೇ ಕುರುಹುಗಳಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ನಾನು ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದೆ: ಪ್ರತಿಮಾ ಸಹೋದರ ಪ್ರತೀಶ್
ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರತಿಮಾ ಸಹೋದರ ಪ್ರತೀಶ್, “ನಾನು ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದೆ. ಇವತ್ತು ಒಂದು ಮದುವೆಗೆ ಹೋಗಬೇಕಿದ್ದಿದ್ದರಿಂದ ನಿನ್ನೆ ರಾತ್ರಿಯಿಂದ ಕರೆ ಮಾಡುತ್ತಿದ್ದೆ. ಆದರೆ ಕರೆ ಸ್ವೀಕರಿಸಿರಲಿಲ್ಲ. ಬೆಳಗ್ಗೆ ಕರೆ ಮಾಡಿದಾಗಲೂ ಸ್ವೀಕರಿಸಿರಲಿಲ್ಲ. ಆದ್ದರಿಂದ ಕೆಳಗಿನ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದೆವು. ಅವರು ಬಂದು ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಕೆಲಸದ ವಿಚಾರವಾಗಿ ಏನೂ ಸಮಸ್ಯೆ ಇರಲಿಲ್ಲ. ಆ ರೀತಿ ಇದ್ದಿದ್ದರೆ ನನಗೆ ಹೇಳುತ್ತಿದ್ದಳು. ಮನೆಯಲ್ಲಿಯೂ ಏನೂ ಕಳ್ಳತನವಾಗಿಲ್ಲ. ಪೊಲೀಸ್ ಇಲಾಖೆ ಮೇಲೆಯ ನಂಬಿಕೆಯಿದೆ. ವಿಚಾರಣೆಯಿಂದ ಎಲ್ಲವೂ ತಿಳಿಯುವ ವಿಶ್ವಾಸವಿದೆ’ ಎಂದು ಕಣ್ಣೀರಿಡುತ್ತಾ ತಿಳಿಸಿದ್ದಾರೆ.
ಪ್ರತಿಮಾ ಓರ್ವ ಉತ್ತಮ ಅಧಿಕಾರಿಯಾಗಿದ್ದರು: ಜಿಲ್ಲಾಧಿಕಾರಿ ಕೆ.ಎ ದಯಾನಂದ್
ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ ದಯಾನಂದ್, ”ಪ್ರತಿಮಾ ಓರ್ವ ಉತ್ತಮ ಅಧಿಕಾರಿ. ಎಲ್ಲ ಸಭೆಗಳಲ್ಲಿಯೂ ಕಡತಗಳ ಜೊತೆಗೆ ಹಾಜರಾಗುತ್ತಿದ್ದವರು. ಕಳೆದ ಒಂದು ತಿಂಗಳ ಹಿಂದೆ ಎಲ್ಲ ಅಧಿಕಾರಿಗಳನ್ನು ಕರೆದು ಸ್ವಲ್ಪ ಜೋರು ಮಾಡಿದ್ದೆ. ಅಕ್ರಮವಾಗಿ ಜಲ್ಲಿಕಲ್ಲು, ಕಲ್ಲು ಗಣಿಗಾರಿಕೆ ನಡೀತಿದೆ, ತಮಿಳುನಾಡಿನಿಂದ ತರ್ತಿದ್ದಾರೆ ನೋಡಿ ಎಂದು ತಿಳಿಸಿದ್ದೆ. ಕೆಲಸದ ಸಂಬಂಧ ಯಾವುದೇ ಸಮಸ್ಯೆ ಇರಲಿಲ್ಲ, ಆ ರೀತಿಯ ಯಾವುದೇ ದೂರು ಬಂದಿರಲಿಲ್ಲ. ತಮಿಳುನಾಡಿನ ಕಡೆಗೆ ಬರುವ ಲಾರಿಗಳನ್ನು ತಡೆಯೋಕೆ ಹೇಳಿದ್ದೆ. ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬರಲಿದೆ’ ಎಂದು ತಿಳಿಸಿದ್ದಾರೆ.
ಯಾವುದೇ ವಸ್ತು ಕಳ್ಳತನವಾಗಿಲ್ಲ: ಡಿಸಿಪಿ ರಾಹುಲ್ ಕುಮಾರ್
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ವಾಡ್, ಮೊದಲು ಉಸಿರುಗಟ್ಟಿಸಿ ನಂತರ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಐದು ವರ್ಷದಿಂದ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ ಒಬ್ಬರೇ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದದರು.
ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ: ಸಿಎಂ ಸಿದ್ದರಾಮಯ್ಯ
ಇನ್ನು ಈ ಕೊಲೆ ಘಟನೆಯ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ‘ಪ್ರತಿಮಾ ಹತ್ಯೆ ಬಗ್ಗೆ ಈಗಷ್ಟೇ ಮಾಹಿತಿ ಸಿಕ್ಕಿದೆ. ಕೊಲೆಯ ಬಗ್ಗೆ ತನಿಖೆ ಮಾಡುತ್ತೇವೆ. ಕೊಲೆ ಯಾಕೆ ಆಗಿದೆ ಎಂಬುದರ ಬಗ್ಗೆ ಸದ್ಯ ಮಾಹಿತಿ ಇಲ್ಲ. ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ. ಐದು ವರ್ಷದಿಂದ ಒಬ್ಬರೇ ಮನೆಯಲ್ಲಿ ವಾಸ ಮಾಡ್ತಾ ಇದ್ದರು. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ’ ಎಂದು ತಿಳಿಸಿದ್ದಾರೆ.