ರಾಜ್ಯ ರಾಜಧಾನಿ ಬೆಂಗಳೂರಿನ ದೇವಾಲಯಗಳಲ್ಲಿ ಇನ್ನುಮುಂದೆ ಅರೆಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಜನವರಿ 10 ರಿಂದ ಈ ವಸ್ತ್ರಸಂಹಿತೆ ಜಾರಿಯಾಗಲಿದೆ ಎಂದು ಕರ್ನಾಟಕ ದೇವಸ್ಥಾನ ಮಹಾಸಂಘ ಹೇಳಿದೆ.
ಈ ಕುರಿತು ಕರ್ನಾಟಕ ದೇವಸ್ಥಾನ-ಮಠ, ಧಾರ್ಮಿಕ ಸಂಸ್ಥೆಗಳ ಮಹಾಸಂಘ ಜನವರಿ 10 ರಿಂದ ಅಭಿಯಾನ ನಡೆಸಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ವಸಂತನಗರದ ಶ್ರೀ ವೆಂಕಟರಮಣ ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಇನ್ನುಮುಂದೆ ಬೆಂಗಳೂರಿನಲ್ಲಿರುವ ದೇವಸ್ಥಾನಗಳಿಗೆ ತೆರಳುವವರು ಭಾರತೀಯ ಉಡುಪು ಧರಿಸಿ ಬಂದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಅರೆಬಟ್ಟೆ ಧರಿಸಿದವರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲವೆಂದು ದೇವಾಲಯಗಳ ಮುಂದೆ ಬೋರ್ಡ್ ನೇತುಹಾಕಲಾಗುತ್ತದೆ.
ಈ ಹಿಂದೆಯೇ ಈ ನೀತಿ ಜಾರಿ ತರುವಂತೆ ಕರ್ನಾಟಕ ದೇವಸ್ಥಾನ, ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಒತ್ತಾಯಿಸಿದ್ದವು. ಈ ಹಿನ್ನೆಲೆ, ಕಳೆದ ತಿಂಗಳು ನಡೆಸಿದ ಸಭೆಯಲ್ಲಿ ರಾಜ್ಯದ ಎಲ್ಲ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಮತ್ತೆ ಜೈಲು ಸೇರಿದ ಕರವೇ ಅಧ್ಯಕ್ಷ
ಪುರುಷರು ಚಡ್ಡಿ, ಬರ್ಮುಡಾ, ಹರಿದ ಜೀನ್ಸ್, ಎದೆ ಕಾಣುವ ಟಿಶರ್ಟ್ ಧರಿಸಿಕೊಂಡು ದೇವಾಲಯಕ್ಕೆ ಬರುವಹಾಗಿಲ್ಲ. ಇನ್ನು ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ಬರುವಂತಿಲ್ಲ ಎಂದು ಹೇಳಿದೆ.