ಪದೇಪದೆ ಡ್ರಗ್ಸ್ ಖರೀದಿ ಮಾಡುತ್ತಿದ್ದವನ ಬಳಿ ಹೆಚ್ಚು ಹಣ ಇರಬಹುದೆಂದು ಭಾವಿಸಿ ಆತನನ್ನು ಅಪಹರಿಸಿ ಹಲ್ಲೆ ಮಾಡಿ ಹಣ ಎಗರಿಸಿದ್ದ ಖದೀಮರನ್ನು ಇದೀಗ ಬೊಮ್ಮನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಲೋಕ್ ರಾಣಾ ಅಪಹರಣಕ್ಕೊಳಗಾದವರು. ಇವರು ಆಸ್ಟ್ರೇಲಿಯಾ ಪ್ರಜೆ. ಇವರು ಮೋನಿಶ್, ಲೋಕೇಶ್, ಕಿಶೋರ್, ರವಿ, ದಿಲೀಪ್ ಹಾಗೂ ಸತೀಶ್ ಬಂಧಿತರು. ಆರೋಪಿ ಮೋನಿಶ್ ಟ್ಯಾಟೋ ಹಾಕುವ ಕೆಲಸ ಮಾಡುತ್ತಿದ್ದನು. ಇತರ ಆರೋಪಿಗಳು ಬಟ್ಟೆ ವ್ಯಾಪಾರ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.
ಆಸ್ಟ್ರೇಲಿಯಾ ಪ್ರಜೆಯಾಗಿರುವ ಅಲೋಕ್ ರಾಣಾ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನೆಲೆಸಿರುವ ತನ್ನ ಅಣ್ಣ ಅಮಿತ್ ರಾಣಾನನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದನು.
ಡ್ರಗ್ಸ್ಗೆ ಅಡಿಕ್ಟ್ ಆಗಿದ್ದ ಅಲೋಕ್ ರಾಣಾ ಡಾರ್ಕ್ ವೆಬ್ ಮೂಲಕ ಮೊನೀಶ್ ಬಳಿ ಡಗ್ಸ್ ಖರೀದಿಸುತ್ತಿದ್ದನು. ಅಲ್ಲದೇ, ಆರೋಪಿ ಮೊನೀಶ್ ಜತೆಗೆ ಸಂಪರ್ಕ ಕೂಡ ಹೊಂದಿದ್ದನು.
ಬೆಂಗಳೂರಿಗೆ ಬಂದ ನಂತರ ಅಲೋಕ್ ರಾಣಾ ಮೋನಿಶ್ನಿಂದ ಐದು ಬಾರಿ ಗಾಂಜಾ ಖರೀದಿ ಮಾಡಿದ್ದನು. ಇದರಿಂದ ಈತನ ಬಳಿ ಹೆಚ್ಚು ಹಣ ಇರಬಹುದು ಎಂದು ಭಾವಿಸಿದ್ದ ಮೋನಿಶ್ ತನ್ನ ಸಹಚರರೊಂದಿಗೆ ಸೇರಿ ಅಲೋಕ್ನನ್ನು ಅಪಹರಣ ಮಾಡಿದ್ದಾರೆ.
ಅಲೋಕ್ ರಾಣಾನನ್ನು ಅಪಹರಿಸಿ ಆತನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಆತನ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹78 ಸಾವಿರ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಜತೆಗೆ, ಆತನ ಅಣ್ಣ ಅಮಿತ್ ಖಾತೆಯಿಂದ ₹40 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಳೆ ವೈಷಮ್ಯ; ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ ಕೊಲೆ
ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಅಲೋಕ್ ರಾಣಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಡ್ರಗ್ಸ್ ವಿಷಯ ಬಹಿರಂಗವಾಗುತ್ತದೆ ಎಂದು ತಿಳಿದು 15 ದಿನಗಳ ಬಳಿಕ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರು ಆಗ್ನೇಯ ಡಿಸಿಪಿ ಬಾಬಾಗೆ ಮಾಹಿತಿ ನೀಡಲಾಗಿದೆ. ಬಳಿಕ, ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.