“ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ನೀರಿನ ಸಮಸ್ಯೆ ತಲೆದೂರಿದೆ. ನಗರದಲ್ಲಿ 1.40ಕೋಟಿಗೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇದೀಗ, ನೀರು ಒದಗಿಸುವುದು ಸವಾಲಿನ ಕೆಲಸವಾಗಿದೆ. ನಗರದ ನಾಗರಿಕರಿಗೆ ಜಲಮಂಡಳಿ ಅಗತ್ಯ ನೀರು ಒದಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ, ದೊಡ್ಡಗಾತ್ರದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ನೀರನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಮಾ.15ರಿಂದ ಹಂತಹಂತವಾಗಿ ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರನ್ನು ಕಡಿತಗೊಳಿಸಲಾಗುವುದು” ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಬೆಂಗಳೂರು ಜಲಮಂಡಳಿಯ ವತಿಯಿಂದ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರುಗಳೊಂದಿಗೆ ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಂಗಳವಾರ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಒಟ್ಟು 38 ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರಿದ್ದು, ಅದರಲ್ಲಿ ನಿಮ್ಹಾನ್ಸ್, ಏರ್ ಫೋರ್ಸ್ ಕಮಾಂಡಿಂಗ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿರುವ ನೀರಿನಲ್ಲಿ ಯಾವುದೇ ರೀತಿಯಲ್ಲಿ ಕಡಿತಗೊಳಿಸದೇ, ಉಳಿದ 35 ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರಿಗೆ ಕಾವೇರಿ ನೀರು ಕಡಿತಗೊಳಿಸಲಾಗುವುದು” ಎಂದು ಅವರು ವಿವರಿಸಿದರು.
“ಬೆಂಗಳೂರಿನಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರು 1.40ಕೋಟಿ ಜನರ ಹಿತದೃಷ್ಟಿಯಿಂದ ಮಂಡಳಿ ಕೈಗೊಂಡಿರುವ ಈ ನಿರ್ಧಾರಕ್ಕೆ ಕೈಜೋಡಿಸಬೇಕು. ಮಾರ್ಚ್ 15ರಿಂದ ಏ.1ರವರೆಗೆ ಶೇ.10ರಷ್ಟು ಹಾಗೂ ಏ.1ರಿಂದ ಏ.15ರವರೆಗೆ ಶೇ.10ರಷ್ಟು ಸೇರಿದಂತೆ ಶೇ.20ರಷ್ಟು ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರು ಕಡಿತಗೊಳಿಸಲಾಗುವುದು” ಎಂದರು.
“ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರಿಗೆ ಮಂಡಳಿ ವತಿಯಿಂದ ಇದುವರೆಗೆ ಶೇ.95ರಿಂದ ಶೇ.100ರಷ್ಟು ಪೂರೈಸಲಾಗುತ್ತಿದ್ದು, ಇದರಲ್ಲಿ ಇನ್ಮುಂದೆ ಶೇ.20ರಷ್ಟು ನೀರು ಪೂರೈಕೆ ಕಡಿತಗೊಳಿಸಲಾಗುವುದು. ರೈಲ್ವೆ, ಎಚ್ಎಎಲ್, ಏರ್ ಪೋರ್ಸ್, ಡಿಫೆನ್ಸ್, ಸಿ.ಆರ್.ಪಿ.ಎಫ್, ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಅನೇಕ ಸಂಸ್ಥೆಗಳು ತಮ್ಮ ಕ್ಯಾಂಪಸ್ನಲ್ಲಿ ನೀರಿನ ಪ್ರಾಮುಖ್ಯತೆ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು. ಕ್ಯಾಂಪಸ್ನಲ್ಲಿ ಈಜುಕೋಳಗಳಿದ್ದರೇ ಕೂಡಲೇ ಸ್ಥಗಿತಗೊಳಿಸಿ” ಎಂದು ಸೂಚನೆ ನೀಡಿದರು.
ನೀರಿನ ಸಮಸ್ಯೆ ಹಿನ್ನೆಲೆ ಬೆಂಗಳೂರು ನಗರದಲ್ಲಿರುವ ಎಲ್ಲ ಈಜುಕೊಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
“ಕಾವೇರಿ-5ನೇ ಹಂತದ ಯೋಜನೆ ಮೇ 15ರೊಳಗೆ ಅನುಷ್ಠಾನಗೊಳ್ಳಲಿದ್ದು, ಅಲ್ಲಿಯವರೆಗೆ ಕೈಜೋಡಿಸಿ. ಸಂಸ್ಕರಿಸಿದ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವಂತೆ ತಿಳಿಸಿದ ಅವರು ಅಗತ್ಯವಿದ್ದಲ್ಲಿ ಒದಗಿಸಲಾಗುವುದು” ಎಂದರು.
“ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತಗೊಳಿಸಿದ ನೀರನ್ನು ಜನನಿಬಿಡ ಪ್ರದೇಶಗಳಿಗೆ, ಸ್ಲಂಗಳು ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಮತ್ತು ಅತ್ಯಂತ ಅವಶ್ಯವಿರುವ ಪ್ರದೇಶಗಳಿಗೆ ಪೂರೈಸಬೇಕು” ಎಂದು ಎಂಜನಿಯರ್ಗಳಿಗೆ ನಿರ್ದೇಶನ ನೀಡಿದರು.
“ಕೊಳವೆಬಾವಿ ಕೊರೆಯುವುದಕ್ಕೆ ಕೆಲವರು ಅನುಮತಿ ಕೋರಿದರು. ಇದನ್ನು ಆಲಿಸಿದ ಅಧ್ಯಕ್ಷರು ಅರ್ಜಿ ಸಲ್ಲಿಸಿ ನಂತರ ತಾಂತ್ರಿಕ ವರದಿಯನ್ನು ತಕ್ಷಣ ಪಡೆದು ಅನುಮತಿ ನೀಡಲು ಕ್ರಮವಹಿಸಲಾಗುವುದು” ಎಂದರು.
ಈ ಸಂದರ್ಭದಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಮಂಡಳಿಯ ಮುಖ್ಯ ಎಂಜನಿಯರ್ಗಳು ಹಾಗೂ ಎಂಜನಿಯರ್ಗಳು ಮತ್ತು ಅಧಿಕಾರಿಗಳು ಇದ್ದರು.
ಈ ಸುದ್ದಿ ಓದಿದ್ದೀರಾ? ಬಿಡದಿ ಫಾರ್ಮ್ಹೌಸ್ನಲ್ಲಿ 25 ತಲೆಬುರುಡೆ, ಮೂಳೆಗಳು ಪತ್ತೆ
ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶುದ್ಧೀಕರಿಸಿದ ಪರಿಸರ ಸ್ನೇಹಿ ನೀರು ಬಳಸಲು ಸೂಚನೆ
ಬೆಂಗಳೂರು ನಗರದಲ್ಲಿ 20 ಸಾವಿರ ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಿಸುತ್ತಿರುವ ಕಟ್ಟಡ ಮಾಲೀಕರೊಂದಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿದರು.
“ಬೆಂಗಳೂರು ನಗರದಲ್ಲಿ 20 ಸಾವಿರ ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಿಸುತ್ತಿರುವ ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣ ಕಾಮಗಾರಿಗೆ ಕಡ್ಡಾಯವಾಗಿ ಶುದ್ದೀಕರಿಸಿದ ಪರಿಸರ ಸ್ನೇಹಿ ನೀರನ್ನು ಬಳಸಬೇಕು” ಎಂದು ತಿಳಿಸಿದರು.
“ಪಾಶ್ಚಿಮಾತ್ಯ ದೇಶಗಳಲ್ಲಿ ಶುದ್ಧೀಕರಿಸಿದ ಪರಿಸರ ಸ್ನೇಹಿ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬಳಸುತ್ತಿದ್ದು, ನಮ್ಮಲ್ಲಿಯೂ ಇದನ್ನು ಬಳಸುವುದು ಒಳ್ಳೆಯದು” ಎಂದರು.