ಮೀಡಿಯಾ ಪ್ರಬಲವಾದ ಅಸ್ತ್ರ. ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡುವ ಮಾಧ್ಯಮ. ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ, ಡಿಜಿಟಲ್ ಮಾಧ್ಯಮ ಹೆಚ್ಚಾಗಿ ಜನರಿಗೆ ಸತ್ಯವನ್ನ ತಿಳಿಸುವ ಕೆಲಸ ಮಾಡುತ್ತಿದೆ. ಧ್ವನಿ ಇಲ್ಲದವರ ಧ್ವನಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಈದಿನ.ಕಾಮ್ ಆಯೋಜಿಸಿದ್ದ ಓದುಗರ ಸಮಾವೇಶದಲ್ಲಿ ಈದಿನ.ಕಾಮ್ನ ‘ವಿಶೇಷ ಸಂಚಿಕೆ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
50 ವರ್ಷದ ಕರ್ನಾಟಕವನ್ನು ನೋಡಿರುವ ಹಿರಿಯರಾದ ಜಿ ಬಿ ಪಾಟೀಲ್, ಅಕ್ಬರ್ ಅಲಿ ಉಡುಪಿ, ಬಡಗಲಪುರ ನಾಗೇಂದ್ರ ಅವರು ‘ನಮ್ಮ ಕರ್ನಾಟಕ 50: ನಡೆದ ಹೆಜ್ಜೆಗಳು; ಮುಂದಿನ ದಿಕ್ಕು’ ಎಂಬ ವಿಶೇಷ ಸಂಚಿಕೆಗಳನ್ನು ಸಿಎಂ ಸಿದ್ದರಾಮಯ್ಯನವರಿಗೆ ಕೊಟ್ಟರೆ, ಅವರು ಅದನ್ನು ಮುಂದಿನ ಭವಿಷ್ಯವಾದ ಮಕ್ಕಳ ಕೈಗೆ ನೀಡುವ ಮೂಲಕ ಬಿಡುಗಡೆ ಮಾಡಿದರು. ಸಿಎಂ ನಗುತ್ತಾ ಕೊಟ್ಟರೆ, ಮಕ್ಕಳು ಖುಷಿಯಿಂದ ಬಿಗಿದಪ್ಪಿಕೊಂಡರು.
ಮುಖ್ಯಮಂತ್ರಿ @siddaramaiah ಅವರು ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ 'ಈ ದಿನ ಓದುಗರ ಸಮಾವೇಶ'ದಲ್ಲಿ ಪಾಲ್ಗೊಂಡು, ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. pic.twitter.com/DY8FgvaHpq
— CM of Karnataka (@CMofKarnataka) November 30, 2024
“ಅಂಬೇಡ್ಕರ್ ಅವರು ಸಂವಿಧಾನ ಜಾರಿಯ ವೇಳೆ ‘ನಾವು ವೈವಿಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ’ ಎಂದಿದ್ದರು. ಈ ಅಸಮಾನತೆಗೆ ಜಾತಿವ್ಯವಸ್ಥೆಯೇ ಮೂಲ ಕಾರಣ. ಅನೇಕ ಶತಮಾನಗಳ ಕಾಲ ಶೂದ್ರರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಅವಕಾಶ ವಂಚಿತರಾಗಿದ್ದರು. ಎಲ್ಲರನ್ನೂ ಸಮಾಜದಲ್ಲಿ ಜಾತಿಯಿಂದ ಅಳೆಯಲಾಗುತ್ತಿತ್ತೇ ಹೊರತು, ಅವರ ವ್ಯಕ್ತಿತ್ವದ ಮೇಲೆ ಯಾರೊಬ್ಬರ ಸಾಮರ್ಥ್ಯವನ್ನ ಅಳೆಯಲಾಗಿಲ್ಲ. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ. ಶಿಕ್ಷಣ ಕಲಿಯುವ, ಆಸ್ತಿ ಗಳಿಸುವ ಅವಕಾಶ ಸಿಕ್ಕ ಮೇಲೆ ಕೆಲವರು ಮುಂದೆ ಬಂದರು” ಎಂದು ವಿವರಿಸಿದರು.
“ಅಂಬೇಡ್ಕರ್ ಅವರು ಯಾರಿಗೆ ಇತಿಹಾಸ ಗೊತ್ತಿಲ್ಲವೋ, ಅವರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲ. ಪ್ರಜಾಪ್ರಭುತ್ವ ಯಶಸ್ಸು ಕಾಣಲಿಕ್ಕೆ ಸಾಮಾಜಿಕ, ಆರ್ಥಿಕ ಸಮಾನತೆ ಸಿಕ್ಕಾಗ ಮಾತ್ರ ಸಾಧ್ಯ ಎಂದಿದ್ದರು. ಅದರಂತೆ ನಾವು ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ಹೋರಾಟ ಮಾಡಬೇಕು. ಆ ದಿಕ್ಕಿನಲ್ಲಿ ನಡೆಯಬೇಕು” ಎಂದರು.
“ಬುದ್ಧನ ಕಾಲದಿಂದಲೂ ಸಮಾನತೆ ಬಗ್ಗೆ ಮಾತನಾಡುತ್ತಿದ್ದೇವೆ. ಬಸವಣ್ಣನ ಕಾಲದಲ್ಲಿ ಅನೇಕ ಚಳವಳಿಗಳು ನಡೆದವು. ಆದರೂ, ಸಮಾನತೆ ಇನ್ನೂ ದೊರೆತಿಲ್ಲ. ಅನೇಕ ವಿದ್ಯಾವಂತರು ಇನ್ನೂ ಮೌಢ್ಯವನ್ನ ಬಿಟ್ಟಿಲ್ಲ. ತಮ್ಮ ಇಂದಿನ ಪರಿಸ್ಥಿತಿಗೆ ಹಿಂದಿನ ಜನ್ಮದ ಪಾಪ ಕಾಣವೆಂದು ನಂಬುವವರಿದ್ದಾರೆ. ಇಂತಹ ಮೌಢ್ಯ ಮೀರಿ, ಬದಲಾವಣೆ ತರಬೇಕು. ನಾವೆಲ್ಲ ವೈಚಾರಿಕೆತೆಯನ್ನ ರೂಢಿಸಿಕೊಂಡಾಗ ಹಲವು ಕೆಡಕುಗಳನ್ನ ತೊಡೆಯಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
“ನನ್ನ ಬಗ್ಗೆ ಹಲವರು ಕೆಟ್ಟದಾಗಿ ಬರೀತಾರೆ, ಟೀಕೆ ಮಾಡ್ತಾರೆ. ಆದರೆ, ನಾನು ಯಾರಿಗೂ ಯಾಕೆ ಹೀಗೆ ಬರೀತಿದ್ದೀರಿ ಅಂತ ಪ್ರಶ್ನೆ ಮಾಡಿಲ್ಲ. ಮಾಧ್ಯಮಗಳು ಸತ್ಯವನ್ನು ಹೇಳಬೇಕು. ಸತ್ಯವನ್ನು ಬರೆಯಬೇಕು. ಒಂದು ವೇಳೆ, ಮಾಧ್ಯಮಗಳು ಸುಳ್ಳು ಹೇಳಿದರೆ, ತಪ್ಪು ಬರೆದರೆ, ಅದನ್ನ ಓದುಗರು ಖಂಡಿಸಬೇಕು. ಸತ್ಯ ಬರೆಯುವಂತೆ ಹೇಳಬೇಕು. ಈಗ ಫೇಕ್ ನ್ಯೂಸ್ಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನ ತಡೆಯಬೇಕು. ಇತ್ತೀಚಿನ ದಿನಗಳಲ್ಲಿ ತನಿಖಾ ಪತ್ರಿಕೋದ್ಯಮ ಕಾಣೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ನಮ್ಮ ಗುರಿ ಸಂವಿಧಾನದ ಆಶಯಗಳನ್ನ ಜಾರಿಗೆ ತರುವುದು. ಅದರಂತೆ ನಡೆಯುವುದು. ಆದರೆ, ಇಲ್ಲಿ ಸಂವಿಧಾನವನ್ನ ವಿರೋಧ ಮಾಡುವವರು ಇದ್ದಾರೆ. ದೇಶದಲ್ಲಿ ಹಕ್ಕುಗಳನ್ನ ಮಾತ್ರ ಕೇಳುವವರಿದ್ದಾರೆ, ಕರ್ತವ್ಯಗಳನ್ನ ಪಾಲಿಸುವವರು ಇಲ್ಲ. ನಾವು ಮೂಲಭೂತ ಕರ್ತವ್ಯಗಳನ್ನೂ ಪಾಲಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮೋದಾನಿ ಫೈಲ್ಸ್ | ಜಾರ್ಖಂಡ್ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!
“ಎಲ್ಲ ಮಾಧ್ಯಮಗಳು 2023ರ ಚುನಾವಣೆಯಲ್ಲಿ ಯಾರಿಗೂ ಬಹಮತ ಬರಲ್ಲ. ಅತಂತ್ರ ವಿಧಾನಸಭೆ ಬರುತ್ತದೆ ಎಂದಿದ್ದವು. ಆದರೆ, ಈದಿನ.ಕಾಮ್ ಮಾತ್ರ ಕಾಂಗ್ರೆಸ್ 130ಕ್ಕೂ ಹೆಚ್ಚು ಕ್ಷೇತ್ರಗಳನ್ನ ಗೆಲ್ಲುತ್ತದೆ ಎಂದು ನಿಖರವಾಗಿ ಸಮೀಕ್ಷೆ ನಡೆಸಿ, ವರದಿ ಮುಂದಿಟ್ಟಿತ್ತು. ಈಗಲೂ ಜನರ ಧ್ವನಿಯಾಗಿ ಮುನ್ನಡೆಯುತ್ತಿದೆ. ಈದಿನ.ಕಾಮ್ ವಿಸ್ತಾರವಾಗಿ ಬೆಳೆಯಲಿ” ಎಂದು ಆಶಿಸಿದರು.
ಮಾದ್ಯಮಗಳು, ಪತ್ರಿಕೆಗಳು ಜನರ ಮತ್ತು ಆಡಳಿತ ವ್ಯವಸ್ಥೆಯ ಕೊಂಡಿಯಾಗಿರಬೇಕು ಆದರೆ ಆಡಳಿತ ವ್ಯವಸ್ಥೆ ಯ ಕೊಕ್ಕೆ ಆಗಬಾರದು.
ಇದು ಈ ದಿನ ಮಾಧ್ಯಮಕ್ಕೂ ಅನ್ವಯಿಸುತ್ತದೆ.
ಬಡವರ, ಶೋಷಿತರ ಬದುಕನ್ನ ತೆರೆಯ ಮೇಲೆ ತರುವ ಪ್ರಯತ್ನ ನಮ್ಮದು ಎಂದು ಹೇಳುವ ಮಾದ್ಯಮ ತೆರೆಯ ಮೇಲೆ ತಂದಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸೋತಿದೆ ಎಂದೇ ಹೇಳಬಹುದು.
ಬೇರೆ ಮಾಧ್ಯಮಗಳಿಗೂ ಈ ದಿನ.ಕಾಮ್ ಮಾದ್ಯಮಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ?
ಓದುಗರ ಸಮಾವೇಶದಲ್ಲಿ ಓದುಗರಿಗೆ ಇಲ್ಲ ಅವಕಾಶ!
2 ವರ್ಷಗಳ ದಿಟ್ಟ ಹೆಜ್ಜೆ ಸವೆಸಿದ ಹಾದಿಗಳು ಮಾಸಿ ಹೋಗಿದೆ ಎನ್ನಬಹುದು? ಇದನ್ನೇ ತಮ್ಮ ಸಾಧನೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ?ರಾಜಕಾರಣಿಗೆ ನೀಡುವ ಸಮಯ ಓದುಗರಿಗೆ ಯಾಕಿಲ್ಲ? ಪ್ರಶ್ನಿಸುವ ಮಾಧ್ಯಮಗಳೇ ಪ್ರಶಂಸಿವುದು , ರಾಜಾತಿತ್ಯ ನೀಡುವುದು ನೋಡಿದರೆ ಈ ದಿನದ ಆಶಯ ಬೇರೇನೋ ಇದೆ! ಎಂದು ಸಂಶಯ ಬರುತ್ತಿದೆ. ಈ ದಿನ. ಕಾಮ್ ಈ ಹಿಂದೆ ತಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೈರಾಪುರ ತಾಂಡ್ಯದ ಹೊನ್ನಪ್ಪ ಮತ್ತು ಮನುಜ ಎಂಬ ಬಡ ದಂಪತಿಗಳ ಮಗಳಾದ ಸಾನ್ವಿ (3ವರ್ಷ) ಅನ್ನನಾಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಗುವು ಬಡತನದಲ್ಲಿ ಜನಿಸಿದ್ದು ತಪ್ಪೋ? ಇಲ್ಲ ಬಡತನದ ಕಾರಣದಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಹಿಂದೆ ಉಳಿದ ತಂದೆ ತಾಯಿ ಯ ತಪ್ಪೋ? ಇಲ್ಲ ಈ ಸಮಾಜದಲ್ಲಿ ನಾವು ಬದುಕಿರುವುದು ತಪ್ಪೋ? ಅನ್ನುವ ನೋವಿನ ಮಾತುಗಳು ಕಾಡುತ್ತವೆ. ತಂದೆಯ ದುಡಿಮೆ ಸನ್ವಿಯ ದಿನನಿತ್ಯದ ಖರ್ಚಿಗೆ ಸಾಲುವುದಿಲ್ಲ, ಯಾಕೆಂದರೆ ಸಾನ್ವಿ ಏನೇ ತಿಂದರೂ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಯಾಕೆಂದರೆ ತಿಂದ ಆಹಾರ ಕುತ್ತಿಗೆಯ ಸಮೀಪವೇ ಆಚೆ ಬರುತ್ತದೆ.ಆಹಾರ ಹೊಟ್ಟೆ ಸೇರದ ಕಾರಣ ಹಸಿವಿನ ಕರುಳು ಮಗುವನ್ನು ಅಳಿಸುತ್ತದೆ, ನಮ್ಮ ಬಡತನವೇ ಕಾರಣ ಎಂದು ಹೆತ್ತಕರುಳು ಅದೆಷ್ಟು ನೋವು ಪಡುತ್ತಿರಬಹುದು? ಇಂದು ಈ ದಿನ. ಕಾಮ್ ಮುಖ್ಯ ಮಂತ್ರಿಗಳಿಗೆ ಆಹ್ವಾನ ನೀಡಿತ್ತು ಮುಖ್ಯಮಂತ್ರಿಗಳು ಆಗಮಿಸಿದ್ದರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ಸಾನ್ವಿ ಗೆ ಪರಿಹಾರ ಮತ್ತು ಚಿಕಿತ್ಸೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಈ ದಿನ. ಕಾಮ್ ಮಾಡಲಿಲ್ಲ ಎನ್ನುವುದೇ ಬೇಸರದ ಸಂಗತಿ. ಮತ್ಯಾಗೆ ನೊಂದವರ ಪರವಾಗಿ ನಿಲ್ಲುತ್ತದೆ?
ಸಭೆಗೆ ಬಂದವರನ್ನು ಹೇಗೆ ಸಹಾಯ ಕೇಳುವುದು ಎಂಬ ಪ್ರಶ್ನೆ ನೀವು ಕೇಳಬಹುದು? ಆಗದರೆ ಮುಖ್ಯಮಂತ್ರಿಗಳು ಸಭೆಯಲ್ಲಿದ್ದಾಗ ಜನರ ಸಮಸ್ಯೆ ಬಗೆಹರಿಸುವುದಿಲ್ಲವೇ? ಈ ದಿನ ದಿಟ್ಟ ಹೆಜ್ಜೆ ಇಡುವುದರಲ್ಲಿ ಎಡವಿದೆ ಯಾಕೆಂದರೆ ಉದ್ದೇಶವನ್ನು ಮರೆತರೆ ಹೇಗೆ?