ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಾಕಿ ಉಳಿಸಿಕೊಂಡಿದ್ದ ₹90,18,89,719 ಇಪಿಎಫ್ ಹಣವನ್ನು ವಾರ್ಷಿಕ 12% ಬಡ್ಡಿಯೊಂದಿಗೆ ಆದೇಶದ ದಿನಾಂಕದಿಂದ ಎಂಟು ವಾರಗಳಲ್ಲಿ ಪೌರಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮಾ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಬಿಬಿಎಂಪಿ ಪೌರಕಾರ್ಮಿಕರ ಸಂಘ (ಎಐಸಿಸಿಟಿಯುನೊಂದಿಗೆ ಸಂಯೋಜಿತವಾಗಿದೆ) ಪಾಲಿಕೆಯಲ್ಲಿ ಉದ್ಯೋಗದಲ್ಲಿರುವ ಪೌರಕಾರ್ಮಿಕರಿಗೆ ಜನವರಿ 2011 ಮತ್ತು ಜುಲೈ 2017ರ ನಡುವಿನ ಅವಧಿಗೆ ಬಾಕಿ ಉಳಿಸಿಕೊಂಡಿದ್ದ ಪಿಎಫ್ ವಂತಿಗೆಯನ್ನು ಕೋರಿ ದೂರು ಸಲ್ಲಿಸಿತ್ತು. ಅದರ ಮೇಲೆ ಇಪಿಎಫ್ ಪ್ರಾಧಿಕಾರ 2017 ಅಕ್ಟೋಬರ್ 26ರಂದು ಬಿಬಿಎಂಪಿಗೆ ₹90,18,89,719 ಪೌರಕಾರ್ಮಿಕರ ಇಪಿಎಫ್ ಖಾತೆಗಳಿಗೆ ಜಮಾ ಮಾಡುವಂತೆ ಆದೇಶ ಹೊರಡಿಸಿತ್ತು.
ಇಪಿಎಫ್ ಪ್ರಾಧಿಕಾರದ ಆದೇಶವನ್ನು ಅನುಸರಿಸಲು ವಿಫಲವಾದ ಕಾರಣ, ಆದೇಶವನ್ನು ಪಾಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಕಾರ್ಮಿಕ ಸಂಘಟನೆಯು ಹೈಕೋರ್ಟ್ ಮೊರೆ ಹೋಗಿತ್ತು. ಫೆ.7 ರಂದು ಹೈಕೋರ್ಟ್ ಅರ್ಜಿಯ ವಿಚಾರಣೆ ನಡೆಸಿ ಆದೇಶಿಸಿದೆ.
“ಪೌರಕಾರ್ಮಿಕರು ಸಮಾಜಕ್ಕೆ ಉತ್ತಮ ಸೇವೆ ಮಾಡುತ್ತಿದ್ದಾರೆ. ಎಲ್ಲ ಕಾರ್ಮಿಕರು ಸರಿಯಾದ ವೇತನವನ್ನು ಸಕಾಲಕ್ಕೆ ಪಡೆಯುವುದನ್ನು ಒಳಗೊಂಡಂತೆ ತಮ್ಮ ಬಾಕಿ ಮೊತ್ತಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಸಂಘಟನೆಯು ಹಲವಾರು ವರ್ಷಗಳಿಂದ ಕೆಲಸ ಮಾಡಿದೆ. ಪೌರಕಾರ್ಮಿಕರು ದಲಿತ ಸಮುದಾಯವರಾಗಿದ್ದು, ಅದರಲ್ಲೂ ಪ್ರಧಾನವಾಗಿ ಮಹಿಳೆಯರೇ ಇದ್ದಾರೆ. ಸಾಪ್ತಾಹಿಕ ಅಥವಾ ರಾಷ್ಟ್ರೀಯ ರಜಾದಿನಗಳು ಅಥವಾ ಯಾವುದೇ ವಿರಾಮಗಳಿಲ್ಲದೆಯೇ, ಅವರು ವೈಜ್ಞಾನಿಕ ತಂತ್ರಜ್ಞಾನವಿಲ್ಲದ ಅಮಾನವೀಯ ಮತ್ತು ಹಿಂದಿನ ಕಾಲದಲ್ಲಿದ್ದ ಮಾದರಿಯಲ್ಲಿಯೇ ಕಸ-ಸಂಗ್ರಹಣೆ ಮತ್ತು ರಸ್ತೆ ಗುಡಿಸುವಲ್ಲಿ ವರ್ಷವಿಡೀ ಕೆಲಸ ಮಾಡುತ್ತಾರೆ” ಎಂದು ಪೀಠ ಹೇಳಿದೆ.
“ಪೌರಕಾರ್ಮಿಕರು ತಮ್ಮ ಸ್ವಂತ ಆರೋಗ್ಯವನ್ನು ಲೆಕ್ಕಿಸದೇ ನಿರಂತರವಾಗಿ ಸಾರ್ವಜನಿಕರ ಆರೋಗ್ಯ ರಕ್ಷಿಸಿದ್ದಾರೆ. ಪ್ರತಿ ದಿನವೂ ಅದನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಅವರು ಗಂಭೀರ ಮತ್ತು ಜೀವಮಾನವನ್ನು ಕಡಿಮೆಗೊಳಿಸುವ ಉಸಿರಾಟದ ಕಾಯಿಲೆಗಳು, ಹೃದಯದ ತೊಂದರೆಗಳು, ಬೆನ್ನು ಮತ್ತು ಮೊಣಕಾಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿನ ಕೊರತೆ : ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಮಯ ನಿಗದಿ
”ಪ್ರತಿವಾದಿ ಬಿಬಿಎಂಪಿಯ ಕೃತ್ಯಗಳು ಅತ್ಯಂತ ಬಡ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದ ಕಾರ್ಮಿಕರಿಗೆ ಆರ್ಥಿಕ ಮತ್ತು ಮಾನಸಿಕ ನೋವನ್ನುಂಟುಮಾಡಿದೆ. 2017ರ ಅಕ್ಟೋಬರ್ 26ರಂದು ಬಂದ ಆದೇಶವನ್ನು ಪಾಲಿಸಲು ಮತ್ತು ಅನುಷ್ಠಾನಗೊಳಿಸಲು ಪಾಲಿಕೆ ವಿಫಲವಾಗಿದೆ. ಇದು ಕಾನೂನು ಬಾಹಿರವಾಗಿದೆ. ಇದು ಸಾರ್ವಜನಿಕ ನೀತಿಯ ಉಲ್ಲಂಘನೆಯಾಗಿದೆ. ಇದು ಪೌರಕಾರ್ಮಿಕರ ಮೂಲಭೂತ ಮತ್ತು ಶಾಸನಬದ್ಧ ಜೀವನಕ್ಕೆ ವಿರುದ್ಧವಾಗಿದೆ” ಎಂದು ತಿಳಿಸಿದೆ.
“ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪೌರಕಾರ್ಮಿಕರ ಹಕ್ಕು ಮತ್ತು ಘನತೆಗಾಗಿ ಅಚಲ ಹೋರಾಟ ನಡೆಸುತ್ತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಿದೆ” ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ನಿರ್ಮಲಾ ಎಂ. ಹೇಳಿದ್ದಾರೆ.