- ಬೆಂಗಳೂರಿನ ನೀರಿನ ಸಮಸ್ಯೆ ನಿವಾರಣೆಗೆ ಫಿಲ್ಡ್ ಗಿಳಿದ ಮಂಡಳಿ ಅಧ್ಯಕ್ಷರು
- ಮಂಡಳಿ ತಂಡದೊಂದಿಗೆ ಭಾನುವಾರವೂ ವಿವಿಧೆಡೆ ಭೇಟಿ ಪರಿಶೀಲನೆ
ಬೆಂಗಳೂರಿನ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಫಿಲ್ಡ್ಗಿಳಿದ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಮ್ಮ ತಂಡದೊಂದಿಗೆ ಭಾನುವಾರ ಕೂಡ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವನಹಳ್ಳಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ಅಳವಡಿಸಿರುವ ಫಿಲ್ಟರ್ ಕೊಳವೆಬಾವಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಳವಡಿಸುವ ಸಂಬಂಧ ತಜ್ಞರುಗಳು ಹಾಗೂ ಅಧಿಕಾರಿಗಳ ತಂಡದೊಂದಿಗೆ ಅವರು ಅಗರಂ ಕೆರೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಗರಂ ಕೆರೆ ಬಳಿಯ ಎಸ್ಟಿಪಿಯಲ್ಲಿ ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿರುವುದನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಾರ್ಖಾನೆ ಮತ್ತು ಕೈಗಾರಿಕೆಗಳಿಗೆ ಈ ಸಂಸ್ಕರಿಸಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು. ಕಾರ್ಖಾನೆ ಮತ್ತು ಕೈಗಾರಿಕೆಗಳಿಗೆ ಸಂಪೂರ್ಣವಾಗಿ ಕುಡಿಯುವ ನೀರು ಪೂರೈಕೆಯಲ್ಲಿ ಅರ್ಧದಷ್ಟು ನೀರನ್ನು ನೀರಿಲ್ಲದ ಸಮಸ್ಯೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಪೂರೈಸಲು ಚಿಂತನೆ ನಡೆಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿನೂತನ ಚಿಂತನೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ” ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನಾರಾಯಣಪುರ ಜಿಎಲ್ಆರ್ಗೆ ಭೇಟಿ ನೀಡಿ ಪ್ರಸ್ತುತ ಬೇಸಿಗೆ ನೀರಿನ ಬಿಕ್ಕಟ್ಟನ್ನು ಎದುರಿಸಲು ಬೆಂಗಳೂರು ಪೂರ್ವ ವಲಯದ ನಾನಾ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಂಟೆಕ್ಸ್ ನೀರಿನ ಟ್ಯಾಂಕ್ಗಳಿಗೆ ನೀರು ಒದಗಿಸಲು ಖಾಸಗಿ ಟ್ಯಾಂಕರ್ಗಳಿಗೆ ಕಾವೇರಿ ನೀರು ತುಂಬಲು ರಚಿಸಲಾದ ಫಿಲ್ಲಿಂಗ್ ಪಾಯಿಂಟ್ಗಳನ್ನು ಪರಿಶೀಲಿಸಿದರು. ವಾಟರ್ ಟ್ಯಾಂಕ್ ಸರಬರಾಜು ಘಟಕಕ್ಕೂ ಭೇಟಿ ನೀಡಿ ನೀರು ಪೂರೈಕೆ ಮಾಡುವ ಟ್ಯಾಂಕ್ಗಳ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್ ಅಳವಡಿಕೆ ₹50,000 ದಂಡ
ಈ ಘಟಕದಿಂದ ಎ.ನಾರಾಯಣಪುರ ವಾರ್ಡ್, ಕೆ.ಆರ್.ಪುರಂ ವಾರ್ಡ್,ವಿಜ್ಞಾನ ನಗರ ವಾರ್ಡ್, ಎಚ್ಎಎಲ್ ವಾರ್ಡ್ಗೆ ಟ್ಯಾಂಕರ್ನಿಂದ ನೀರು ಪೂರೈಸಲಾಗುತ್ತಿರುವುದನ್ನು ಪರಿಶೀಲಿಸಿದರು. ನಂತರ ಎ.ನಾರಾಯಣಪುರದ ಕೃಷ್ಣನಗರದ ಸ್ಲಂಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು. ನಿವಾಸಿಗಳಿಗೆ ಸಮರ್ಪಕವಾಗಿ ನೀರು ಬರುತ್ತಿದೆಯೇ ಏನಾದರೂ ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದರು.
ನಿವಾಸಿಗಳು ತಮ್ಮ ಪ್ರದೇಶಕ್ಕೆ ಇನ್ನೂ ಒಂದು ಟ್ಯಾಂಕ್ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿ ಕೊಳಚೆ ಪ್ರದೇಶಕ್ಕೆ ಇನ್ನೂ ಒಂದು ಟ್ಯಾಂಕ್ ವ್ಯವಸ್ಥೆ ಮಾಡಲು ತಿಳಿಸಿದರು. ಮಿನಿ ಸಿಂಟ್ಯಾಕ್ಸ್ ನೀರಿನ ಟ್ಯಾಂಕ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿಸಿ ಕೊಳಚೆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಐಐಎಸ್ಸಿ ತಜ್ಞರಾದ ಪ್ರೊ.ವಿಶ್ವನಾಥ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜನಿಯರ್ಗಳು ಮತ್ತು ಅಧಿಕಾರಿಗಳು ಇದ್ದರು.