ಹೋಳಿ ಹಬ್ಬ ಆಚರಣೆಗೆ ‘ರೈನ್ ಡ್ಯಾನ್ಸ್’ ಆಯೋಜಿಸುವುದಾಗಿ ಹೇಳಿದ್ದ ಹೋಟೇಲ್ಗಳಿಗೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಲ್ಲದೆ, ‘ಡ್ರೈ ಹೋಳಿ’ ಆಚರಿಸುವಂತೆ ಸೂಚನೆ ನೀಡಿದ್ದಾರೆ.
ಹೋಳಿ ಆಚರಣೆಗೆ ರೈನ್ ಡ್ಯಾನ್ಸ್ ಆಯೋಜಿಸುವುದಾಗಿ ಪ್ರಕಟಿಸಿದ್ದ ಮೈಸೂರು ರಸ್ತೆಯ ಜೆ.ಕೆ ಗ್ರಾಂಡ್ ಅರೆನಾ ಹಾಗೂ ಜಯಮಹಲ್ ಪ್ಯಾಲೇಸ್ ಹೋಟೆಲ್ಗಳಿಗೆ ಮಾರ್ಚ್ 22ರಂದು ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ರೈನ್ ಡ್ಯಾನ್ಸ್ಗೆ ಕಾವೇರಿ ಹಾಗೂ ಕೊಳವೆ ಬಾವಿ ನೀರು ಬಳಸದಂತೆ ನೊಟೀಸ್ ನೀಡಿದ್ದಾರೆ.
ಸಾಂಸ್ಕೃತಿಕ ಹಬ್ಬ ಆಚರಣೆಗೆ ಯಾವುದೇ ನಿಷೇಧ ಇಲ್ಲ. ಆದರೆ, ವಾಣಿಜ್ಯ ಉದ್ದೇಶಗಳಿಗಾಗಿ ರೈನ್ ಡ್ಯಾನ್ಸ್ ಹಾಗೂ ಪೂಲ್ ಡ್ಯಾನ್ಸ್ ಆಯೋಜಿಸುವುದರಿಂದ ನೀರು ಪೊಲಾಗುತ್ತದೆ. ಇದನ್ನ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಎಂದು ಹೊಟೇಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಹೊಟೇಲ್ ಸಿಬ್ಬಂದಿ ಮಂಡಳಿಯ ನಿರ್ದೇಶನದಂತೆ ರೈನ್ ಡ್ಯಾನ್ಸ್ ಹಾಗೂ ಪೂಲ್ ಡ್ಯಾನ್ಸ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದತ್ತು ಮಗು ಪ್ರಕರಣ | ಸೋನು ಶ್ರೀನಿವಾಸ್ ಗೌಡ 4 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸಿಜೆಎಂ ಕೋರ್ಟ್ ಆದೇಶ
ನೀರು ಅನಗತ್ಯ ಪೋಲು ಮಾಡುವುದರ ವಿರುದ್ಧ ಅಗತ್ಯ ಕ್ರಮ
ಕುಡಿಯುವ ನೀರಿನ ದುರ್ಬಳಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸೂಚನೆಗಳನ್ನ ನೀಡಲಾಗಿದೆ. ಸರ್ಕಾರಿ ಕಚೇರಿಗಳು, ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ದಂಡವನ್ನ ವಿಧಿಸಲಾಗುವುದು ಎಂದು ಜಲಮಂಡಳಿ ಹೇಳಿದೆ.
“ಜನಸಾಮಾನ್ಯರು ಜಲ ಮಂಡಳಿಯ ಈ ಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಕಣ್ಣುಗಳಾಗಿ ಕಾರ್ಯನಿರ್ವಹಿಸಬೇಕು. ನಗರದ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಬೋರ್ವೇಲ್ಗಳನ್ನ ಕೊರೆಯುತ್ತಿರುವುದು ಅಥವಾ ನೀರಿನ ದುರ್ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಮಂಡಳಿಯ ದೂರವಾಣಿ ಸಂಖ್ಯೆಗೆ ದೂರು ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ” ಮಂಡಳಿ ತಿಳಿಸಿದೆ.
ನೀರಿನ ಸಮಸ್ಯೆಯ ತೀವ್ರತೆ ಇಳಿಕೆ
“ಬೆಂಗಳೂರು ನಗರದ ಹೃದಯ ಭಾಗದಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಇದ್ದಂತಹ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊದಲ ಹಂತದಲ್ಲಿ ಪ್ರತಿನಿತ್ಯ 300ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 100ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ನೀರು ಸರಬರಾಜು ಮಾಡುವ ಮೂಲಕ ದೂರುಗಳ ಮತ್ತು ಸಮಸ್ಯೆಗಳ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಲಾಗುವುದು” ಎಂದು ಜಲ ಮಂಡಳಿ ಅಧ್ಯಕ್ಷರು ಭರವಸೆ ನೀಡಿದರು.
“ಈ ಎಲ್ಲ ಸುಧಾರಣೆಯ ಕ್ರಮಗಳಲ್ಲಿ ನಗರದ ಜನರ ಸಹಕಾರ ಬಹಳಷ್ಟು ಮುಖ್ಯವಾಗಿದೆ. ನೀರನ್ನ ಮಿತವಾಗಿ ಬಳಸುವುದು ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವುದು ಬಹಳ ಮುಖ್ಯವಾಗಿದೆ. ಈ ಬಗ್ಗೆ ಜನರು ಸಹಕಾರ ನೀಡುತ್ತಿದ್ದು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಜಲ ಮಂಡಳಿ ಅಧ್ಯಕ್ಷರು ಕರೆ ನೀಡಿದರು.