“ಬಿ.ಆರ್.ಪಾಟೀಲ್ ನನ್ನನ್ನು ಕರೆಯುವುದೇ, ʼಏನೋ ಗೆಳೆಯʼ ಅಂತ. ನಾವಿಬ್ಬರೂ ಸಮಾಜವಾದಿಗಳು. ಒಟ್ಟಿಗೇ ವಿಧಾನಸೌಧ ಪ್ರವೇಶಿಸಿದವರು. ಆದರೆ ನಾನು ಬಿ.ಆರ್.ಪಾಟೀಲರಷ್ಟು ಹೋರಾಟ ಮಾಡಿಲ್ಲ. ಜೈಲಿಗೆ ಹೋಗಲಿಲ್ಲ. ನಮಗಿಬ್ಬರಿಗೆ ಎಲ್ಲ ವಿಚಾರದಲ್ಲೂ ಸಾಮ್ಯತೆ ಇದೆ. ಆದರೆ, ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ. ಪಾಟೀಲರು ಮಂತ್ರಿ ಆಗಿಲ್ಲ ಎಂಬ ಬೇಸರ ನನಗೂ ಇದೆ. ಅದಕ್ಕೆ ಹಲವು ಕಾರಣಗಳಿವೆ. ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾರತ ಯಾತ್ರಾ ಕೇಂದ್ರ ಮತ್ತು ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ʼಜಯಪ್ರಕಾಶ್ ನಾರಾಯಣ್-122ʼ ಕಾರ್ಯಕ್ರಮದಲ್ಲಿ ಆಳಂದ ಶಾಸಕ ಬಿ ಆರ್ ಪಾಟೀಲರಿಗೆ ಜೆ.ಪಿ.ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
“ಪೂರ್ಣಕ್ರಾಂತಿಯ ಹರಿಕಾರ ಜಯಪ್ರಕಾಶ್ ನಾರಾಯಣ್ ಪ್ರಶಸ್ತಿಗೆ ಸಮಾಜವಾದಿ ಹೋರಾಟಗಾರ ಬಿ.ಆರ್.ಪಾಟೀಲ್ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ. ಬಿ.ಆರ್.ಪಾಟೀಲ್ ಜನಪರ ಕಾಳಜಿ ಮತ್ತು ಸಮಾಜವಾದಿ ಮೌಲ್ಯಗಳಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ನಾನು ಅವರಷ್ಟು ದೊಡ್ಡ ಹೋರಾಟಗಾರನಲ್ಲ. ಪಾಟೀಲರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೆ ಪಿ ಚಳವಳಿಯ ಜೊತೆಗಿದ್ದು ಆರು ತಿಂಗಳು ಜೈಲುವಾಸ ಅನುಭವಿಸಿದ್ದಾರೆ. ನಾನು ಚಳವಳಿಯಲ್ಲಿದ್ದರೂ ಜೈಲಿಗೆ ಹೋಗಿಲ್ಲ” ಎಂದು ಸ್ಮರಿಸಿದರು.
“ನಾನು ಈಗಲೂ ಅದೇ ಸಿದ್ದರಾಮಯ್ಯ ಆಗಿದ್ದೇನೆ. ಅದೇ ಬದ್ಥತೆ ಇದೆ. ಪ್ರತಿ ವರ್ಷ ಬಜೆಟ್ ಮಂಡಿಸುವಾಗಲೂ ಪ್ರಣಾಳಿಕೆಯನ್ನು ಇಟ್ಟುಕೊಂಡೇ ಕಾರ್ಯಕ್ರಮ ರೂಪಿಸುತ್ತೇನೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೇನೆ. ಈ ಬಾರಿಯೂ ಸರ್ಕಾರ ರಚನೆಯಾಗಿ ಐದೇ ತಿಂಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಮುಂದಿನ ಜನವರಿಯಲ್ಲಿ ಐದನೇ ಗ್ಯಾರಂಟಿ ಜಾರಿ ಮಾಡಲಿದ್ದೇವೆ. 2028ರ ಒಳಗಾಗಿ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ” ಎಂದರು.
ಮತ್ತೊಂದು ಸಂಪೂರ್ಣ ಕ್ರಾಂತಿಯ ಅಗತ್ಯವಿದೆ
ಈಗ ನಮ್ಮ ದೇಶದಲ್ಲಿ ಮತ್ತೊಂದು ಸಂಪೂರ್ಣ ಕ್ರಾಂತಿ ನಡೆಯಬೇಕಾದ ಅಗತ್ಯವಿದೆ. ದೇಶದ ಪರಿಸ್ಥಿತಿ ಅಷ್ಟು ಹದಗೆಡುತ್ತಿದೆ. ಸಮಾಜವಾದಿ ಹೋರಾಟಗಾರ ಜಯಪ್ರಕಾಶ್ ಅವರು ಸಂಪೂರ್ಣ ಕ್ರಾಂತಿ ಮಾಡಿದ್ದರು. ಈಗ ಮತ್ತೊಂದು ಸಂಪೂರ್ಣ ಕ್ರಾಂತಿಯ ಅಗತ್ಯವಿದೆ. ಮುಂದೆ ನಾವೆಲ್ಲ ಸೇರಿ ಚರ್ಚೆ ಮಾಡೋಣ ಎಂದರು.
ಕೋಮುವಾದಿ ಪಠ್ಯ ಬದಲಾವಣೆಗೆ ಬಿ ಆರ್ ಪಾಟೀಲ್ ಒತ್ತಾಯ
“ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013ರ ಅದೇ ದಿಟ್ಟ ಮುಖ್ಯಮಂತ್ರಿ ಆಗಬೇಕಿದೆ. ಕೆಲವು ವಿಚಾರಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಮುಖ್ಯವಾಗಿ ಶಿಕ್ಷಣದಲ್ಲಿ ಮೂಲಭೂತವಾದ ಬದಲಾವಣೆ ತರಬೇಕು. ಈಗಲೂ ಆ ಕೋಮುವಾದಿಗಳ ಪಠ್ಯವನ್ನು ನಾವು ಬೋಧಿಸುತ್ತಿದ್ದೇವೆ. ಮುಖ್ಯಮಂತ್ರಿಯಾದ ನೀವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಬಿ ಆರ್ ಪಾಟೀಲ್ ಮುಖ್ಯಮಂತ್ರಿಯವರಿಗೆ ವಿನಂತಿಸಿದರು.
“ನಮ್ಮ ನಡುವೆ ಏನೇ ಸಿಟ್ಟು ಸಿಡುಕು ಇದ್ದರೂ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇವೆ. ಯಾಕೆಂದರೆ ಅವರ ಹೃದಯಕ್ಕೆ ಅಯಸ್ಕಾಂತದ ಗುಣವಿದೆ. ಈ ರಾಜ್ಯದಲ್ಲಿ ಏನಾದರೂ ಬದಲಾವಣೆ ಮಾಡಲು ಸಾಧ್ಯವಿದ್ದರೆ ಅದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ” ಎಂದು ಶ್ಲಾಘಿಸಿದರು.
ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜವಾದಿ ಚಿಂತಕ ನಟರಾಜ್ ಹುಳಿಯಾರ್, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ.ಎಂ.ಪಿ.ನಾಡಗೌಡ, ಮೋಹನ ಕೊಂಡಜ್ಜಿ ಮತ್ತು ಲೇಖಕಿ ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.