ಸಂಸ್ಕರಿಸಿದ ನೀರು ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವಂತಹ ಕ್ರಮಗಳಿಗೆ ಐಟಿ ಕಂಪನಿಗಳಿಂದ ಸಕಾರಾತ್ಮ ಪ್ರತಿಕ್ರಿಯೆ ದೊರೆಯುತ್ತಿದೆ. ಐಐಎಸ್ಸಿ ವಿಜ್ಞಾನಿಗಳ ಸಹಯೋಗದಲ್ಲಿ ಅಳವಡಿಸಿಕೊಳ್ಳಲಾಗಿರುವ ದೇಶೀಯ ತಂತ್ರಜ್ಞಾನದ ಮೂಲಕ ಜಲಮಂಡಳಿ ಉತ್ಪಾದಿಸುತ್ತಿರುವ ಝೀರೋ ಬ್ಯಾಕ್ಟೀರಿಯಾ ಸಂಸ್ಕರಿಸಿದ ನೀರನ್ನು ವಿಪ್ರೋ ಕಂಪನಿಗೆ ಮೇ 2ರಿಂದ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
“ಬೆಂಗಳೂರು ನಗರದ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರಿನ ಪಾತ್ರ ಬಹಳ ಮುಖ್ಯವಾಗಿದೆ. ಜಲಮಂಡಳಿಯ ವತಿಯಿಂದ ನಗರದಲ್ಲಿ 34ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಇವುಗಳ ಮೂಲಕ ಪ್ರತಿ ದಿನ 1200 ಎಂಎಲ್ಡಿಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ” ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
“ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಬಲ್ಕ್ ಯೂಸರ್ಸ್ಗಳು ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್ಗಳಿಂದ 6 ಎಂಎಲ್ಡಿಗೆ ತಲುಪಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಗುರಿ ನಮ್ಮದಾಗಿದೆ” ಎಂದಿದ್ದಾರೆ.
“ಭಾರತದ ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿರುವಂತಹ ಐಐಎಸ್ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿಯ ಎಂಜಿನಿಯರ್ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಮೇ 2ರಂದು ಪ್ರತಿ ದಿನ ಸುಮಾರು 1 ಕೋಟಿ ಲೀಟರ್ನಷ್ಟು ಝೀರೋ ಬ್ಯಾಕ್ಟೀರಿಯಲ್ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ. ಇದೀಗ, ನಗರದ ಅಗರ, ಕೆ.ಸಿ ವ್ಯಾಲಿ ಮತ್ತು ಬೆಳ್ಳಂದೂರು ಎಸ್ಟಿಪಿಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬಂದಿದೆ” ಎಂದು ತಿಳಿಸಿದ್ದಾರೆ.
“ವಿಪ್ರೋ ಕಂಪನಿ ಕೆಲವು ದಿನಗಳ ಹಿಂದೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಐಐಎಸ್ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಅಳವಡಿಸಿಕೊಳ್ಳಲಾಗಿರುವ ನೂತನ ತಂತ್ರಜ್ಞಾನದ ಮೂಲಕ ಶುದ್ದೀಕರಿಸಲಾಗುತ್ತಿರುವ ಝೀರೋ ಬ್ಯಾಕ್ಟೀರಿಯಲ್ ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರನ್ನ ಸರಬರಾಜು ಮಾಡಲು ಇಂದಿನಿಂದ ಪ್ರಾರಂಭಿಸಲಾಗಿದೆ. ಈಗಾಗಲೇ ಇನ್ನಿತರ ಕಂಪನಿಗಳಾದ ಹೆಚ್ಎಎಲ್, ಬ್ರೂಕ್ಫಿಲ್ಡ್ ಹಾಗೂ ಅಡೋಬ್ ಸಿಸ್ಟಮ್ಸ್ ಕಂಪನಿಗಳ ಜೊತೆಗೆ 40 ಐಟಿ ಪಾರ್ಕಗಳು ಬೇಡಿಕೆಯಿಟ್ಟಿದ್ದು, ಜಲಮಂಡಳಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ” ಎಂದು ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | 3 ವರ್ಷಗಳ ಬಳಿಕ ಎಲ್ಇಡಿ ದೀಪ ಅಳವಡಿಕೆ ಯೋಜನೆಗೆ ಮರುಜೀವ
ಪ್ರಮುಖ ಐಟಿ ಕಂಪನಿಗಳು ಸ್ವಚ್ಚತೆ ಹಾಗೂ ಏರ್ ಕಂಡಿಷನಿಂಗ್ ಸೇರಿದಂತೆ ಹಲವಾರು ಕಾರ್ಯಗಳಿಗೆ ಸಂಸ್ಕರಿಸಿದ ನೀರು ಬಳಕೆಗೆ ಮುಂದಾಗಿರುವುದು ಬಹಳ ಸಂತಸದ ವಿಷಯ. ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚು ಮಾಡುವುದರಿಂದ ಅಗತ್ಯವಿರುವ ಕಡೆಗಳಲ್ಲಿ ಕಾವೇರಿ ನೀರಿನ ಸರಬರಾಜು ಮಾಡುವುದು ಸಾಧ್ಯವಾಗಲಿದೆ. ಅಲ್ಲದೇ, ಅಂತರ್ಜಲದ ಮೇಲಿನ ಒತ್ತಡವೂ ಕಡಿಮೆ ಆಗಲಿದೆ. ಬೆಂಗಳೂರು ಜಲಮಂಡಳಿ ಐಟಿ ಕಂಪನಿಗಳ ಜೊತೆಗಿದ್ದು, ಅವಶ್ಯಕತೆ ಇರುವಷ್ಟು ನೀರನ್ನ ಸರಬರಾಜು ಮಾಡಲು ಸಿದ್ದವಿದೆ ಎಂದಿದ್ದಾರೆ.