ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಲು ಪ್ರೊ.ಮುಜಾಫರ್ ಅಸ್ಸಾದಿ ಬಯಸಿದ್ದರು. ಅವರ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿತ್ತು. ಆದರೆ ಅವರನ್ನು ಆಯ್ಕೆ ಮಾಡದಂತೆ ರಾಜ್ಯಪಾಲರ ಮೇಲೆ ಒತ್ತಡವಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ಮಟ್ಟು ಹೇಳಿದರು.
ಬೆಂಗಳೂರಿನ ಮೋದಿ ಮಸೀದಿ ಬಳಿಯ ಸಾಲಾರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಚಿಂತಕ ಮುಜಾಫರ್ ಅಸ್ಸಾದಿಯವರ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಲ ಅವರನ್ನು ಕುಲಪತಿ ಮಾಡಲು ಸರ್ಕಾರ ಮುಂದಾಗಿದ್ದು ನಿಜ. ಇದೊಂದು ಹೆಸರು ಬಿಟ್ಟುಬಿಡಿ, ನನ್ನ ಮೇಲೆ ಒತ್ತಡ ಇದೆ ಎಂದು ಗವರ್ನರ್ ಹೇಳಿದ್ದರು. ಮಂಗಳೂರು ವಿವಿಗೆ ಅಲ್ಲವಾದರೂ ಶಿವಮೊಗ್ಗ ವಿಶ್ವವಿದ್ಯಾಲಯಕ್ಕಾದರೂ ಅವರನ್ನು ಕುಲಪತಿ ಮಾಡಲು ಪ್ರಯತ್ನಿಸಲಾಗಿತ್ತು ಎಂದು ತಿಳಿಸಿದರು.
ಕುಲಪತಿಯಾಗುವ ಆಸೆಯನ್ನು ಅವರಲ್ಲಿ ತುಂಬುತ್ತಿರುವ ಕೆಲವರು, ತಪ್ಪು ದಾರಿಗೆ ಎಳೆಯುತ್ತಾರೆ ಅನಿಸುತ್ತಿತ್ತು. ಇಂದಿನ ಸ್ಥಿತಿಯಲ್ಲಿ ಕುಲಪತಿಯಾಗಿ ಏನು ತಾನೇ ಮಾಡಲು ಸಾಧ್ಯ? ಅವರು ವಿಸಿಯಾಗಿದ್ದರೆ ಈ ಪುಸ್ತಕಗಳನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಅಸ್ಸಾದಿಯವರು ಬೀದಿಯಲ್ಲಿಯೂ ತರಗತಿಯಲ್ಲಿಯೂ ನಿಂತು ಮಾತನಾಡುತ್ತಿದ್ದರು. ನಮ್ಮಲ್ಲಿ ಬಹಳಷ್ಟು ಬುದ್ಧಿಜೀವಿಗಳಿದ್ದಾರೆ. ಆದರೆ ಸತ್ಯ ಹೇಳುವ ಧೈರ್ಯ ಅನೇಕರಿಗೆ ಇಲ್ಲ. ಅಸ್ಸಾದಿಯಂಥವರು ಮಾತ್ರ ಸಮಾಜವನ್ನು ಮುನ್ನಡೆಸಬಲ್ಲರು ಎಂದರು.
ಬಹುತೇಕ ಯುನಿವರ್ಸಿಟಿ ಪ್ರೊಫೆಸರ್ಗಳು ತರಗತಿಗಳಿಗೆ ಮಾತ್ರ ಸೀಮಿತ. ಪಾಠ ಮಾಡುತ್ತಾರೋ ಎಂಬುದೂ ಅನುಮಾನ. ಆದರೆ ಅಸ್ಸಾದಿಯವರಿಗೆ ಚಡಪಡಿಕೆ ಇತ್ತು. ಅವರು ಬೀದಿಯಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಅಂತಹ ಧೈರ್ಯ ಮತ್ತು ಮಾನಸಿಕವಾದ ಶಕ್ತಿ ಅವರಿಗೆ ಇತ್ತು. ಅಸ್ಸಾದಿಯವರು ಮುಸ್ಲಿಮರಲ್ಲಿನ ಜಾತಿ ವ್ಯವಸ್ಥೆಯ ಕುರಿತು ಪುಸ್ತಕ ಬರೆದರು. ಅವರು ಬೀಸು ಹೇಳಿಕೆಗಳನ್ನು ಕೊಡುತ್ತಿರಲಿಲ್ಲ. ವಿದ್ವಾಂಸತನದಿಂದ ಮಾತಾಡುತ್ತಿದ್ದರು ಎಂದು ಸ್ಮರಿಸಿದರು.

ಲೇಖಕಿ ಪ್ರೊ. ಶಕೀರಾ ಖಾನಮ್ ಮಾತನಾಡಿ, “ಷೇಕ್ ಅಲಿ, ಮುಜಾಫರ್ ಅಸ್ಸಾದಿ ಅಂಥವರು ಸಮುದಾಯದ ಮುಕುಟ ಮಣಿಗಳು. ಅಸ್ಸಾದಿಯವರು ಅಜಾತಶತ್ರುವಾಗಿದ್ದರು. ಅವರು ಕೋಪಗೊಂಡಾಗ ನೊಂದುಕೊಳ್ಳುತ್ತಿದ್ದರು. ಆದರೆ ಅವರು ನೊಂದುಕೊಂಡೇ ಹೊರಟು ಹೋದರು. ಅವರನ್ನು ಕುಲಪತಿ ಮಾಡದೆ ಇದ್ದದ್ದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ಆಶಾ ಕಾರ್ಯಕರ್ತೆಯರಿಗೆ ಗ್ಯಾರಂಟಿ ನೀಡಿದ ಸಿಎಂ; ಮುಷ್ಕರ ಹಿಂಪಡೆದ ಹೋರಾಟಗಾರರು!
ಕಲ್ಬುರ್ಗಿ ಕೇಂದ್ರಿಯ ವಿವಿಯ ಪ್ರಾಧ್ಯಾಪಕ ಕಿರಣ್ ಎಂ.ಗಾಜನೂರು ಮಾತನಾಡಿ, “ನಾನು ಅವರಿಗೆ ವಿದ್ಯಾರ್ಥಿ ಸ್ನೇಹಿತನಾಗಿದ್ದೆ. ಅಸ್ಸಾದಿಯವರು ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ನೋಡುತ್ತಿದ್ದರು. ಈ ದೇಶದಲ್ಲಿ ಇಬ್ಬರು ಮೇಷ್ಟ್ರುಗಳು- ಮುಸ್ಲಿಮರ ಬಗ್ಗೆ ಮಹತ್ವದ ಚಿಂತನೆಗಳನ್ನು ನಡೆಸಿದ್ದಾರೆ. ಒಬ್ಬರು- ಜೋಯಾ ಹಸನ್, ಇಬ್ಬೊಬ್ಬರು ಅಸ್ಸಾದಿ. ಅಸ್ಸಾದಿಯವರು ಮಾಡಿರುವ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ” ಎಂದು ಆಶಿಸಿದರು.
ಪತ್ರಕರ್ತ ವಿಖಾರ್ ಅಹಮ್ಮದ್ ಅವರು ಅಸ್ಸಾದಿಯವರ ಚಿಂತನೆಗಳ ಕುರಿತು ವಿಸ್ತೃತವಾಗಿ ಮಾತನಾಡಿದರು. ನ್ಯೂಸ್ 18 ಸಂಪಾದಕ ಹರಿಪ್ರಸಾದ್, ಬೆಂಗಳೂರು ವಿವಿಯ ಪ್ರೊ.ಎಸ್.ವೈ.ಸುರೇಂದ್ರಕುಮಾರ್, ಚಿಂತಕ ಶಿವಸುಂದರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.