ಛತ್ತೀಸ್ಗಡ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು, ಜಾತಿ ಗಣತಿ ನಡೆಸುವ ಭರವಸೆ ನೀಡಲಾಗಿದೆ.
ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್, “ಜಾತಿ ಆಧಾರಿತ ಜನಗಣತಿ ನಡೆಸಲಾಗುವುದು. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟು ಸಮುದಾಯಗಳು, ಅಲ್ಪಸಂಖ್ಯಾತರು, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ಜಾತಿ ಆಧಾರಿತ ಜನಗಣತಿ ನಡೆಸಲಾಗುವುದು. ಇದರಿಂದ ಈ ವರ್ಗಗಳಲ್ಲಿ ಹಿಂದುಳಿದಿರುವ ಜಾತಿಗಳಿಗೆ ರಾಜಕೀಯ ಲಾಭ ಮಾತ್ರವಲ್ಲ, ಸರ್ಕಾರವು ಅವರಿಗಾಗಿ ವಿಶೇಷ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ದೊರಕಿಸಬಹುದು. ಹೀಗಾಗಿ ಜಾತಿ ಆಧಾರಿತ ಜನಗಣತಿ ಅಗತ್ಯ… ” ಎಂದು ತಿಳಿಸಿದ್ದಾರೆ.
ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಛತ್ತೀಸ್ಗಡ ಮೊದಲೇ ಪರಿಶಿಷ್ಟರು ಮತ್ತು ಒಬಿಸಿಗಳು ಹೆಚ್ಚಿರುವ ರಾಜ್ಯ. ಇಲ್ಲಿ ಹದಿನೈದು ವರ್ಷ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮಣಿಸಿ 2018ರಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 15 ಸ್ಥಾನಗಳಿಗೆ ಕುಸಿತ ಕಂಡಿತ್ತು. ಉಪಚುನಾವಣೆಗಳಲ್ಲೂ ಗೆದ್ದ ಕಾಂಗ್ರೆಸ್ ತನ್ನ ಸ್ಥಾನಗಳನ್ನು 71ಕ್ಕೆ ಏರಿಸಿಕೊಂಡಿತ್ತು.
ಶೇ. 34.5ರಷ್ಟು ಬುಡಕಟ್ಟು ಜನರು, ಶೇ. 43.5ರಷ್ಟಿರುವ ಒಬಿಸಿಗಳಿರುವ ಛತ್ತೀಸ್ಗಢದಲ್ಲಿ ಬಘೇಲ್ ಒಬಿಸಿ ಸಮುದಾಯದವರು. ರಾಜ್ಯದಲ್ಲಿ ಸಿಎಂ ಆದ ಮೊದಲ ಒಬಿಸಿ ವ್ಯಕ್ತಿಯೂ ಹೌದು. ಎಸ್ಸಿ ಮೀಸಲಾತಿಯನ್ನು ಶೇ.12ರಿಂದ ಶೇ.13ಕ್ಕೆ ಏರಿಸುವ ನಿಟ್ಟಿನಲ್ಲಿ ಎರಡು ಮಸೂದೆಗಳನ್ನು ಬಘೇಲ್ ಸರ್ಕಾರ ಮಂಡಿಸಿದೆ. ಆದರೆ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಕಾಂಗ್ರೆಸ್ನ ಒಬಿಸಿ ರಾಜಕಾರಣವನ್ನು ಅರ್ಥಮಾಡಿಕೊಂಡ ಬಿಜೆಪಿ ಅರುಣ್ ಸಾವೋ ಅವರನ್ನು ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಿದೆ. ಅರಣ್ ಒಬಿಸಿ ಸಮುದಾಯಕ್ಕೆ ಸೇರಿದವರು. ಹೀಗಾಗಿ ರಾಜ್ಯದಲ್ಲಿ ಜಾತಿ ಕೇಂದ್ರಿತ ರಾಜಕಾರಣ ಮುನ್ನೆಲೆಗೆ ಬಂದಿದೆ.
ಬಿಹಾರ ಸರ್ಕಾರ ಜಾತಿಗಣತಿ ನಡೆಸಿದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಜಾತಿ ಗಣತಿಯು ಮಹತ್ವ ಪಡೆದಿದೆ. ಬಿಹಾರ ರಾಜ್ಯದಲ್ಲಿ ಅತಿಹೆಚ್ಚು ಹಿಂದುಳಿದ ಜಾತಿಯವರಿದ್ದಾರೆ ಎಂಬುದನ್ನು ಜಾತಿಗಣತಿ ಎತ್ತಿ ಹಿಡಿದಿದೆ. ಜಾತಿಗಳ ಸ್ಥಿತಿಗತಿಗಳನ್ನು ಅರಿತು, ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಜಾತಿಗಣತಿ ಅಗತ್ಯ. ಬ್ರಿಟಿಷರು 1871ರಲ್ಲಿ ಆರಂಭಿಸಿದ ಜನಗಣತಿಯ ಜೊತೆ ಜೊತೆಯಲ್ಲೇ ಜಾತಿ ಗಣತಿಯನ್ನೂ ಮಾಡಿದ್ದರಿಂದಲೇ ಒಂದಿಷ್ಟು ಸಾಮಾಜಿಕ ಚಲನೆ ಸಾಧ್ಯವಾಯಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆದರೆ 1931ನೇ ಇಸವಿಯೇ ಕೊನೆ, ಜಾತಿಗಣತಿ ನೇಪಥ್ಯಕ್ಕೆ ಸರಿಯಿತು. ಗಣರಾಜ್ಯ ಭಾರತದಲ್ಲಿ ಜನಗಣತಿ ನಡೆಯಿತಾದರೂ ಜಾತಿಗಣತಿ ಗೌಣವಾಯಿತು. 2010ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಜಾತಿ ಗಣತಿ ನಡೆಸಲಾಯಿತು. ಆದರೆ ವರದಿಯನ್ನು ಬಿಡುಗಡೆ ಮಾಡುವ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ಪ್ರದರ್ಶಿಸಲಿಲ್ಲ ಹಲವು ಉಪ ಜಾತಿಗಳು, ಬೆಡಗುಗಳೆಲ್ಲ ಸೇರಿ ವರದಿ ಗೊಂದಲ ಮಯವಾಗಿದೆ ಎನ್ನಲಾಗುತ್ತದೆ. ವರದಿ ನನೆಗುದಿಗೆ ಬಿದ್ದಿತು. ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜಾತಿಗಣತಿಯನ್ನು ಅಕ್ಷರಶಃ ಮೂಲೆಗೆ ತಳ್ಳಿತು. ವಾಸ್ತವದಲ್ಲಿ ಜಾತಿಗಳ ಸ್ಥಿತಿಗತಿಗಳು ಬಯಲಾಗುವುದು ಬಿಜೆಪಿಗೆ ಬೇಕಾಗಿಯೂ ಇರಲಿಲ್ಲ.
ಜಾತಿ ಗಣತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಅಲ್ಲಗಳೆದಿದ್ದರಿಂದ ಬಿಹಾರ ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿ, ಬಿಡುಗಡೆ ಮಾಡಿತ್ತು. ಬಿಹಾರ ಬಿಜೆಪಿ ಘಟಕ ವರದಿಯನ್ನು ಸ್ವಾಗತಿಸಿದೆ. ಮತ್ತೊಂದೆಡೆ ಕೇಂದ್ರದ ಕೆಲವು ಬಿಜೆಪಿ ನಾಯಕರು ಜಾತಿಗಣತಿಯನ್ನು ವಿರೋಧಿಸಿದ್ದರು. ಆದರೆ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರು, “ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.