- ಹಳೆಯ ತೀರ್ಪುಗಳನ್ನು ಟೀಕಿಸುವುದೋ, ಅನುಮಾನಿಸುವುದು ಕೈಪಿಡಿಯ ಉದ್ದೇಶವಲ್ಲ: ಸಿಜೆಐ ಚಂದ್ರಚೂಡ್
- ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಲಭ್ಯವಿರುವ ಕೈಪಿಡಿಯ ಪ್ರತಿ
ಯಾವುದೇ ಪ್ರಕರಣವಾಗಿದ್ದರೂ ನ್ಯಾಯಾಲಯದ ಆದೇಶಗಳಲ್ಲಿ ಮಹಿಳೆಯರನ್ನು ಉಲ್ಲೇಖಿಸುವಾಗ ಈ ಹಿಂದೆ ಬಳಸಿದಂತಹ ಕೆಲವು ಪದಗಳನ್ನು ಉಲ್ಲೇಖಿಸಬೇಡಿ ಎಂದು ಸೂಚಿಸುವ ಮಹತ್ವದ ಕೈಪಿಡಿಯೊಂದನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದು ಬಿಡುಗಡೆಗೊಳಿಸಿದರು.
ಕಾನೂನು ಪ್ರಕ್ರಿಯೆಗಳಲ್ಲಿ ಲಿಂಗ ಸಂವೇದನೆಯತ್ತ ಒಂದು ದೊಡ್ಡ ಹೆಜ್ಜೆಯಾಗಿ ಸುಪ್ರೀಂಕೋರ್ಟ್, ಇಂತಹ ಲಿಂಗದವರು ಹೀಗ್ಹೀಗೆ ಎನ್ನುವ ದೃಷ್ಟಿಕೋನ (ಜೆಂಡರ್ ಸ್ಟೀರಿಯೊಟೈಪ್)ಗಳಿಂದ ತುಂಬಿದ ಪದಗಳು ಮತ್ತು ಪದಗುಚ್ಛಗಳನ್ನು ಪಟ್ಟಿ ಮಾಡಿದ್ದು, ಕೈಪಿಡಿಯನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ನ್ಯಾಯಾಲಯದ ಆದೇಶಗಳಲ್ಲಿ ಇಂಥಾ ಪದ ಬಳಸದಂತೆ ಈ ಕೈಪಿಡಿ ಎಚ್ಚರಿಕೆ ನೀಡಿದೆ. ಈ ಯೋಜನೆಯು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಕನಸಾಗಿತ್ತು ಎಂದು ವರದಿಯಾಗಿದೆ.
‘Handbook On Combating Gender Stereotypes’ ಬಿಡುಗಡೆ ಸಮಾರಂಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಹಿಂದಿನ ನ್ಯಾಯಾಲಯದ ತೀರ್ಪುಗಳಲ್ಲಿ ಮಹಿಳೆಯರ ಬಗ್ಗೆ ಬಳಸಲಾದ ಹಲವಾರು ಆಕ್ಷೇಪಾರ್ಹ ಪದಗಳನ್ನು ಉಲ್ಲೇಖಿಸಿದ್ದಾರೆ.

ಮಾಹಿತಿ ಕೈಪಿಡಿಯ ಮುಖಪುಟ
‘ಈ ಪದಗಳು ಸರಿಯಲ್ಲ. ಈ ಕೈಪಿಡಿಯ ಉದ್ದೇಶವು ಆ ತೀರ್ಪುಗಳನ್ನು ಟೀಕಿಸುವುದು ಅಥವಾ ಅವುಗಳನ್ನು ಅನುಮಾನಿಸುವುದು ಅಲ್ಲ. ಇದು ‘ಜೆಂಡರ್ ಸ್ಟೀರಿಯೊಟೈಪ್’ಗಳು ಅಜಾಗರೂಕತೆಯಿಂದ ಹೇಗೆ ನಮ್ಮ ನ್ಯಾಯಾಲಯಗಳ ಆದೇಶದ ಪ್ರತಿಗಳಲ್ಲೂ ಒಳಹೊಕ್ಕಿವೆ ಎಂಬುದನ್ನು ತಿಳಿಸಲು’ ಎಂದು ಅವರು ಹೇಳಿದರು.
‘ಈ ‘ಸ್ಟೀರಿಯೊಟೈಪ್’ ಪದಗಳನ್ನು ವ್ಯಾಖ್ಯಾನಿಸುವುದು ಮತ್ತು ಈ ಬಗ್ಗೆ ಜಾಗೃತಿ ಮೂಡಿಸುವುದು ಕೈಪಿಡಿಯ ಗುರಿ. ಮಹಿಳೆಯರ ಬಗ್ಗೆ ರೂಢಿಗತವಾಗಿರುವ ಪದಗಳನ್ನು ಗುರುತಿಸಲು ನ್ಯಾಯಾಧೀಶರಿಗೆ ಇದು ಸಹಾಯ ಮಾಡುತ್ತದೆ. ಕೈಪಿಡಿಯನ್ನು ಸುಪ್ರೀಂಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಅದನ್ನು ಗಮನಿಸಬಹುದು’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಕಳೆದ ಮಾರ್ಚ್ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ‘ಜೆಂಡರ್ ಸ್ಟೀರಿಯೊಟೈಪ್’ ಪದಗಳನ್ನು ಉಪಯೋಗಿಸದಂತೆ ಎಚ್ಚರಿಸುವ ಕೈಪಿಡಿ ತರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದರು.
ಸುಪ್ರೀಂ ಕೋರ್ಟ್ ಮಾಹಿತಿ ಕೈಪಿಡಿಯನ್ನು ಈ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ : ‘Handbook On Combating Gender Stereotypes’
“ಉದಾಹರಣೆಗೆ, ಮಹಿಳೆಯು ಇನ್ನೊಬ್ಬನ ಜತೆ ಸಂಬಂಧದಲ್ಲಿರುವಾಗ ಆಕೆಯನ್ನು ‘ಉಪಪತ್ನಿ’ ಎಂದು ಉಲ್ಲೇಖಿಸಿರುವ ತೀರ್ಪುಗಳನ್ನು ನಾನು ನೋಡಿದ್ದೇನೆ. ಕೌಟುಂಬಿಕ ಹಿಂಸಾಚಾರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ಎಫ್ಐಆರ್ಗಳನ್ನು ರದ್ದುಗೊಳಿಸಲು ಇದ್ದ ಅರ್ಜಿಗಳಲ್ಲಿ ನೀಡಿದ ತೀರ್ಪುಗಳಲ್ಲಿ ಮಹಿಳೆಯರನ್ನು ‘ಕೀಪ್ಸ್’ ಎಂದು ಕರೆಯಲಾಗಿದೆ” ಎಂದು ಕೈಪಿಡಿಯನ್ನು ಸಿದ್ಧಪಡಿಸಲು ಇದ್ದ ಕಾರಣಗಳನ್ನು ಚಂದ್ರಚೂಡ್ ತಿಳಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವರ ಅಧ್ಯಕ್ಷತೆಯ ಸಮಿತಿಯು ಈ ಕಾನೂನು ಪದಕೋಶವನ್ನು ಸಿದ್ಧಪಡಿಸಿದೆ. ಈ ಪ್ರಕ್ರಿಯೆಯಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಪ್ರತಿಭಾ ಎಂ. ಸಿಂಗ್, ಮಾಜಿ ನ್ಯಾಯಾಧೀಶರಾದ ಪ್ರಭಾ ಶ್ರೀದೇವನ್ ಮತ್ತು ಗೀತಾ ಮಿತ್ತಲ್ ಮತ್ತು ಪಶ್ಚಿಮ ಬಂಗಾಳದ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಾಯಕ ಅಧ್ಯಾಪಕರೂ ಆದ, ವಕೀಲ ಜುಮಾ ಸೇನ್ ಸಹಕರಿಸಿದ್ದರು.
ಸುಪ್ರೀಂಕೋರ್ಟ್ ಈ ಹಿಂದೆ, ತನ್ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯ ಮಾಡಿತ್ತು. ಈ ಬಗ್ಗೆ ನಿನ್ನೆ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಮವನ್ನು ಶ್ಲಾಘಿಸಿದ್ದರು.