12ನೇ ಶತಮಾನದಲ್ಲಿ ವಚನ ಸಾಹಿತ್ಯ ಸಂರಕ್ಷಿಸಿದ ವೀರಗಣಚಾರಿ ಮಡಿವಾಳ ಮಾಚಿದೇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದರು.
ಬೀದರ್ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಲಿಂಗಾಯತ ಧರ್ಮದಲ್ಲಿ ನಿಷ್ಠಾವಂತ ಕಾಯಕ ಜೀವಿಗಳಾಗಿದ್ದ ಮಡಿವಾಳ ಮಾಚಿದೇವರು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿದರು. ಕಾಯಕದಲ್ಲಿ ದೇವರನ್ನು ಕಂಡಿದ್ದರು. ವಿಶ್ವವ್ಯಾಪಿಯಾದ ದೇವರು ಗುಡಿಯಲ್ಲಿ ಇರುವುದಿಲ್ಲ, ದೇವರು ನಿರಾಕಾರನಾಗಿದ್ದಾನೆ. ಎಲ್ಲರೂ ಉಸಿರಾಡುವ ಗಾಳಿ ಒಂದೇ, ದೇವರು ಒಬ್ಬನೇ ನಾಮ ಹಲವು ಎಂಬಂತೆ ನಾವೆಲ್ಲರೂ ಒಂದೇ ಸಮಾಜದಲ್ಲಿ ಸಹಬಾಳ್ವೆಯಿಂದ ಬಾಳಬೇಕುʼ ಎಂದರು.
ಹಿರಿಯ ಚಿಂತಕರಾದ ಶಿವಶರಣಪ್ಪಾ ಹುಗ್ಗಿ ಪಾಟೀಲ ಅವರು ಅತಿಥಿ ಉಪನ್ಯಾಸ ನೀಡಿ, ʼ12ನೇ ಶತಮಾನ ಅಚ್ಚರಿಯ ಶತಮಾನ. ಸಮಗ್ರ ಕ್ರಾಂತಿಯ ಶತಮಾನವಾಗಿದೆ. ವಿಶ್ವಗುರು ಬಸವಣ್ಣನವರ ನೇತ್ರತ್ವದಲ್ಲಿ ಸಮಾನತೆಗಾಗಿ ಎಲ್ಲ ಕಾಯಕ ಜೀವಿ ಶರಣರು ಒಗ್ಗೂಡಿದರುʼ ಎಂದರು ತಿಳಿಸಿದರು.
ʼವಚನ ಸಾಹಿತ್ಯದ ರಕ್ಷಕರಾಗಿ ಕಾರ್ಯನಿರ್ವಹಿಸಿದ ವೀರಗಣಚಾರಿ ಮಡಿವಾಳ ಮಾಚಿದೇವರು ಅತ್ಯಂತ ನಿಷ್ಠಾವಂತ ಶರಣರಾಗಿದ್ದರು. ಮಾಚಿದೇವರು ಸಕಲ ಮಾನವರಲ್ಲಿನ ಮಲಿನತೆ ತೊಳೆಯುವ ಗುರು ಸ್ವರೂಪರಾಗಿದ್ದರು. ಲಿಂಗಾಂಗ ಸಾಮರಸ್ಯದ ಅನುಭಾವ ಜಗದ ಜನತೆಗೆ ತಿಳಿಹೇಳುವ ಮಹಾಜಂಗಮ ಮೂರ್ತಿಯಾಗಿದ್ದರುʼ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ನಗರದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದಿಂದ ಮಡಿವಾಳ ಮಾಚಿದೇವರ ಕುರಿತು ವಚನ ಗಾಯನ ನಡೆಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ್ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಬಿ.ಎಂ.ಅಮರವಾಡಿ ನೇಮಕ
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಮಡಿವಾಳ ಮಾಚಿದೇವರ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ್ ಮಡಿವಾಳ, ಉಪಾಧ್ಯಕ್ಷ ಬಾಬುರಾವ್ ಮಡಿವಾಳ ಹಾಗೂ ಮುಖಂಡರಾದ ದಿಗಂಬರ ಮಡಿವಾಳ, ಮಹೇಶ್ ಮಡಿವಾಳ, ಶಿವುಕುಮಾರ ಕಂದಗೂಳ, ಅಶೋಕ್ ತೇಲಂಗ್, ದೀಪಕ ಮಡಿವಾಳ, ಚನ್ನಬಸವ ಹೇಡೆ ಸೇರಿದಂತೆ ಇತರೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.