ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಲಿಮಿಟೆಡ್ ಉತ್ಪಾದಿಸಿದ ವಿಷಪೂರಿತ ಕೆಮ್ಮಿನ ಸಿರಪ್ ವಿತರಕರು ಔಷಧಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಲಂಚ ನೀಡಿದ್ದಾರೆ ಎಂದು ಉಜ್ಬೇಕಿಸ್ತಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಕಡ್ಡಾಯ ಪರೀಕ್ಷೆಯನ್ನು ಕೈಗೊಳ್ಳದಿರಲು ಕೆಮ್ಮಿನ ಸಿರಪ್ ವಿತರಕರು 33,000 ಡಾಲರ್ ಲಂಚ ಪಾವತಿಸಿದ್ದಾರೆ ಎಂದು ಉಜ್ಬೇಕಿಸ್ತಾನ್ ಸ್ಟೇಟ್ ಪ್ರಾಸಿಕ್ಯೂಟರ್ಗಳು ವಿಚಾರಣೆಯ ಸಮಯದಲ್ಲಿ ಆರೋಪಿಸಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಮಧ್ಯ ಏಷ್ಯಾದ ದೇಶದಲ್ಲಿ ಭಾರತೀಯ ಮೂಲದ ಕಂಪನಿಯು ಉತ್ಪಾದಿಸಿದ ಕೆಮ್ಮು ಸಿರಪ್ (ಡಾಕ್ 1 ಮ್ಯಾಕ್ಸ್) ಸೇವಿಸಿದ ನಂತರ ಸಾವಿಗೀಡಾದ 65 ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಕೆಮ್ಮು ಸಿರಪ್ ಸೇವಿಸಿದ ನಂತರ ನಮ್ಮ ದೇಶದಲ್ಲಿ 20 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್ ಸರ್ಕಾರ ಘೋಷಿಸಿತು. ಆದಾಗ್ಯೂ, ದೇಶದ ಆರೋಗ್ಯ ಸಚಿವಾಲಯವು ಸಾವಿನ ಸಂಖ್ಯೆಯನ್ನು65ಕ್ಕೆ ಹೆಚ್ಚಿಸಿತು. ಆದರೆ, 45 ಮಕ್ಕಳ ಸಾವುಗಳು ಹೇಗೆ ವರದಿಯಾಗದೆ ಉಳಿದಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.
ಮೇರಿಯನ್-ಬಯೋಟೆಕ್ ಲಿಮಿಟೆಡ್ನಿಂದ ಉತ್ಪಾದಿಸಲ್ಪಟ್ಟ ಔಷಧದಲ್ಲಿ ಮಾರಣಾಂತಿಕ ಸಂಯುಕ್ತ ಎಥಿಲೀನ್ ಗ್ಲೈಕೋಲ್ ಎಂಬ ವಿಷಪೂರಿತ ಅಂಶ ಒಳಗೊಂಡಿದೆ ಎಂಬ ವರದಿ ಬಂದ ನಂತರ ಭಾರತವು ಉತ್ಪಾದನಾ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಿದೆ.
ಈ ಸುದ್ದಿ ಓದಿದ್ದೀರಾ? ‘ಓವರ್ ಸ್ಮಾರ್ಟ್’ ವಿಚಾರಕ್ಕೆ ಬಿಜೆಪಿ ಸಂಸದೆಯೊಂದಿಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮಾತಿನ ಚಕಮಕಿ
ಆದಾಗ್ಯೂ, ತಪಾಸಣೆಯು ಉಜ್ಬೇಕಿಸ್ತಾನ್ನಲ್ಲಿ ಪರೀಕ್ಷೆಗಳನ್ನು ಒಳಗೊಂಡಿರಬೇಕೇ ಅಥವಾ ಭಾರತದಲ್ಲಿ ತಯಾರಕರು ಪರೀಕ್ಷೆಗಳನ್ನು ನಡೆಸಬೇಕೆ ಎಂದು ಅಸ್ಪಷ್ಟವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಏಷ್ಯಾದ ದೇಶವು ಒಬ್ಬ ಭಾರತೀಯ ಸೇರಿದಂತೆ 21 ಜನರನ್ನು ವಿಚಾರಣೆಗೆ ಒಳಪಡಿಸಿದೆ.
21 ಆರೋಪಿಗಳ ಪೈಕಿ ಏಳು ಆರೋಪಿಗಳು ತಮ್ಮ ವಿರುದ್ಧದ ಕೆಲವು ಆರೋಪಗಳಿಗೆ ತಪ್ಪೊಪ್ಪಿಕೊಂಡರು. ಇದರಲ್ಲಿ ತೆರಿಗೆ ವಂಚನೆ, ಕಳಪೆ ಅಥವಾ ನಕಲಿ ಔಷಧಿಗಳ ಮಾರಾಟ, ಕಚೇರಿ ದುರುಪಯೋಗ, ನಿರ್ಲಕ್ಷ್ಯ, ನಕಲಿ ಮತ್ತು ಲಂಚ ಆರೋಪಗಳು ಒಳಗೊಂಡಿವೆ.
ಒಂದು ವರ್ಷದ ಹಿಂದೆ, ಗ್ಯಾಂಬಿಯಾ ದೇಶವು ಭಾರತದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಉತ್ಪಾದಿಸಿದ ವಿಷಪೂರಿತ ಪ್ಯಾರಸಿಟಮಾಲ್ ಸಿರಪ್ಗಳನ್ನು ಆಮದು ಮಾಡಿಕೊಂಡ ನಂತರ ಆ ಸಿರಪ್ ಸೇವಿಸಿದ ನಂತರ 66 ಮಕ್ಕಳು ತೀವ್ರ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದರು.
ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿನ ಮಕ್ಕಳು 2 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು 2022ರ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಮೃತಪಟ್ಟಿದ್ದಾರೆ.
ಈ ವರ್ಷದ ಫೆಬ್ರುವರಿಯಲ್ಲಿ, ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಭಾರತದ ಗ್ಲೋಬಲ್ ಫಾರ್ಮಾ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ಐ ಡ್ರಾಪ್ ಅನ್ನು ಬಳಸದಂತೆ ಎಚ್ಚರಿಕೆ ನೀಡಿತು. ಇದು ಏಕಾಏಕಿ ಕನಿಷ್ಠ 55 ರೋಗಿಗಳಲ್ಲಿ ಸೋಂಕುಗಳು, ಕುರುಡುತನ ಮತ್ತು ಒಂದು ಸಾವು ಸೇರಿದಂತೆ ಪ್ರತಿಕೂಲ ಘಟನೆಗಳಿಗೆ ಕಾರಣವಾದ ನಂತರ ಬಳಸದಂತೆ ಆದೇಶಿಸಲಾಯಿತು.
ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಭಾರತೀಯ ಸಂಸ್ಥೆಗಳು ತಮ್ಮ ಔಷಧಿಗಳ ಗುಣಮಟ್ಟಕ್ಕಾಗಿ ಪರಿಶೀಲನೆಗೆ ಒಳಪಟ್ಟಿವೆ. ತಜ್ಞರು ಈ ಔಷಧಿಗಳನ್ನು ತಯಾರಿಸಲು ಬಳಸುವ ಉತ್ಪಾದನಾ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.