ಸಾಹಿತ್ಯವು ಸಮಾಜದ ಆಗು ಹೋಗುಗಳನ್ನು ನೋಡುವ ಕಿಟಕಿ. ಆದ್ದರಿಂದಲೇ ಸಾಹಿತಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ಹಿರಿಯ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ನಡೆಯುತ್ತಿರುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಗಿಡಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡದ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿವೆ. ಆದ್ದರಿಂದಲೇ ಕನ್ನಡ ಸಂಸ್ಕೃತಿ, ಸಾಹಿತ್ಯಿಕ ಕಾರ್ಯಕ್ರಮಗಳು ಎಲ್ಲಿ ನಡೆದರೂ ಯಶಸ್ವಿಯಾಗುತ್ತವೆ ಎಂದು ತಿಳಿಸಿದ ಯು.ಟಿ. ಖಾದರ್, ಅನಿವಾಸಿ ಕನ್ನಡಿಗರು ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಯಶಸ್ವಿಗೆ ಶುಭ ಹಾರೈಸಿ, ಸಂಘಟಕರನ್ನು ಅಭಿನಂದಿಸಿದರು.
ಭವಿಷ್ಯದ ಪೀಳಿಗೆಯಾದ ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸುವ, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಸ್ಪೀಕರ್ ಹೇಳಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಸ್ವಾಗತಿಸಿದರು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2004ರ ಸ್ಥಾಪಕ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬೆಂಗಳೂರಿನ ಗೋನಾ ಸ್ವಾಮಿ ಮತ್ತು ಬಳಗ ನಾಡಗೀತೆ ಹಾಡಿದರು. ಫಿರೋಝ್ ಕಲ್ಲಡ್ಕ ಮನವಿ ವಾಚಿಸಿದರು. ಸಾಹಿಲ್ ಝಹೀರ್, ಡಾ. ಭವಾನಿ ನಿತಿನ್ ರಾವ್ ಮತ್ತು ನಾಗರಾಜ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.
ಸಚಿವ ರಹೀಮ್ ಖಾನ್, ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಶಾಸಕ ಅಶೋಕ್ ರೈ, ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್., ಡಾ. ಯು.ಟಿ. ಇಫ್ತಿಕಾರ್, ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಝಕರಿಯಾ ಜೋಕಟ್ಟೆ ಮತ್ತು ಶೇಖ್ ಕರ್ನೀರೆ, ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿ ರಫೀಕ್ ಸೂರಿಂಜೆ, ಯೋಗೀಶ್ ಪೂಜಾರಿ ಮುಹಮ್ಮದ್ ಶರೀಫ್ ಬೋಳಾರ್, ಮುಹಮ್ಮದ್ ಅಶ್ರಫ್ ಕರ್ನೀರೆ, ಸುದೀಶ್ ಹೆಗ್ಡೆ, ರಾಜ್ ಕುಮಾರ್ ಮತ್ತು ಯೂನುಸ್ ಖಾಝಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.