ದುಷ್ಕರ್ಮಿಗಳು ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ಹಾಡಹಗಲೇ ವಕೀಲನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ನಗರದ ಸಾಯಿ ಮಂದಿರದ ಬಳಿಯಿರುವ ಅಪಾರ್ಟ್ಮೆಂಟ್ ಬಳಿ ಘಟನೆ ನಡೆದಿದ್ದು, ಈರಣ್ಣಗೌಡನನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಈರಣ್ಣಗೌಡ ಬೈಕ್ನಲ್ಲಿ ಕೋರ್ಟ್ಗೆ ಹೋಗುವ ವೇಳೆ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಈರಣ್ಣ ಅವರು ಬೈಕ್ ಬಿಟ್ಟು ತಮ್ಮ ಅಪಾರ್ಟ್ಮೆಂಟ್ ಕಡೆ ಓಡಿದ್ದಾರೆ. ಅಲ್ಲದೇ ಇನ್ನೇನು ಜೇಬಿನಲ್ಲಿದ್ದ ಗನ್ ತೆಗೆಯುವಷ್ಟರಲ್ಲೇ ದುಷ್ಕರ್ಮಿಗಳು ವಕೀಲನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮಾಸ್ಕ್ ಧರಿಸಿದ್ದ ಇಬ್ಬರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಈರಣ್ಣನ ಅರ್ಪಾಟ್ ಮೆಂಟ್ನಲ್ಲೇ ಹತ್ಯೆ ಮಾಡಿದ್ದಾರೆ. ಇನ್ನು ಈರಣ್ಣ ಲೈಸೆನ್ಸ್ ಗನ್ ಹೊಂದಿದ್ದು, ಅದನ್ನು ತೆಗೆಯಬೇಕು ಎನ್ನುವಷ್ಟರಲ್ಲೇ ಅವರನ್ನು ಹತ್ಯೆ ಮಾಡಿದ್ದಾರೆ. ಈರಣ್ಣ ಗನ್ ತೆಗೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಜೀವ ರಕ್ಷಣೆಗಾಗಿ ಗನ್ ಪಡೆದುಕೊಂಡಿದ್ದರೂ ಉಪಯೋಗವಿಲ್ಲದಂತಾಗಿದೆ.
ಹಾಡಹಗಲೇ ವಕೀಲನ ಭೀಕರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್ ಚೇತನ್ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸೇಂದಿ ದಂಧೆ; ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಪೊಲೀಸ್ ಆಯುಕ್ತ ಆರ್ ಚೇತನ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ವಕೀಲರು ಕೋರ್ಟ್ಗೆ ಹೋಗುವಾಗ ಕಿಡಿಗೇಡಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸದ್ಯ ಕಿಡಿಗೇಡಿಗಳ ಬಂಧನಕ್ಕೆ ಎರಡು ತಂಡ ರಚನೆ ಮಾಡಿದ್ದು, ಸ್ಥಳದಲ್ಲಿ ಸಿಕ್ಕ ಕೆಲ ಮಾಹಿತಿ ಮೇರೆಗೆ ನಮ್ಮ ತಂಡ ಹತ್ಯೆ ಆರೋಪಿಗಳ ಜಾಡು ಹಿಡಿದು ಹೋಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಮೃತ ವಕೀಲರ ಮನೆಯವರು ಏನು ದೂರು ನೀಡುತ್ತಾರೋ ಅದರ ಆಧಾರದ ಮೇಲೆಯೂ ತನಿಖೆ ಮಾಡುತ್ತೇವೆ. ಎಷ್ಟು ಜನ ಇದ್ದರು ಎನ್ನುವ ಮಾಹಿತಿ ನಿಖರವಾಗಿ ಗೊತ್ತಾಗಿಲ್ಲ” ಎಂದು ತಿಳಿಸಿದ್ದಾರೆ.