ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆವರಣದಲ್ಲಿ ಬೀದಿಬದಿ ವ್ಯಾಪಾರಿಗಳು ಜಮಾಯಿಸಿದ್ದು, ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ, ನಗರದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವು ಕಾರ್ಯ ನಡೆಯುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಬೀದಿ ಬದಿ ವ್ಯಾಪಾರಿಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ಬಿಬಿಎಂಪಿ ಚಲೋ ನಡೆಸಿದ್ದು, ಗುರುತಿನ ಚೀಟಿ ಇಲ್ಲದವರು, ಗುರುತಿನ ಚೀಟಿಗೆ ಅರ್ಜಿ ಹಾಕೋಣ, ಗುರುತಿನ ಚೀಟಿ ಇರುವವರು, ನಾವು ನವೀಕರಣಕ್ಕೆ ಫೆಬ್ರುವರಿ 2023ರಲ್ಲಿ ಹಾಕಿದ ಅರ್ಜಿ ಏನಾಯಿತು ಎಂದು ಕೇಳೋಣ ಎಂದು ಮುಂದಾಗಿದ್ದಾರೆ.
“ಬೆಂಗಳೂರು ನಗರದಲ್ಲಿ ಎಲ್ಲರಿಗೂ ಬದುಕಲು ಹಕ್ಕು ಇದೆ. ಬೆಂಗಳೂರು ನಗರವನ್ನು ನಿರ್ಮಾಣ ಮಾಡುವುದೇ ಶ್ರಮಿಕ ವರ್ಗದವರು. ಬೀದಿಗಳಲ್ಲಿ ವ್ಯಾಪಾರ ಮಾಡುತ್ತಾ ನಮ್ಮ ಕುಟುಂಬಗಳನ್ನು ಸಾಕುವ ನಾವು, ಬೀದಿ-ರಸ್ತೆಗಳಲ್ಲಿ ಮಾರಾಟ ಮಾಡದಿದ್ದರೆ, ನಗರದ ಮಧ್ಯಮವರ್ಗದವರು ಮತ್ತು ಬಡವರು ಎಲ್ಲಿ ಹೋಗುವರು? ಎಲ್ಲರಿಗೂ ಆಪ್ಗಳಲ್ಲಿ, ಮಾಲ್ಗಳಲ್ಲಿ, ಮಾರ್ಟ್ಗಳಲ್ಲಿ ಕೊಳ್ಳಲು ಸಾಧ್ಯವೇ? ಇದನ್ನು ಸರ್ಕಾರಗಳು, ಶ್ರೀಮಂತರು ಅರ್ಥ ಮಾಡಿಕೊಳ್ಳಲು ಏಕೆ ಕಷ್ಟ ಪಡುತ್ತಿದ್ದಾರೆ?” ಎಂದು ಬೀದಿ ಬದಿ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
“ಬೀದಿ ವ್ಯಾಪಾರ ಮಾಡುವ ಹಕ್ಕು ಸಂವಿಧಾನದಲ್ಲಿ ನಮಗೆ ನೀಡಲಾಗಿದೆ. ಸಂವಿಧಾನವನ್ನು ಅನುಸರಿಸುತ್ತ ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014 ಜಾರಿಗೊಳಿಸಲಾಯಿತು. ಬೀದಿಯಲ್ಲಿ ವ್ಯಾಪಾರ ಮಾಡುವುದು ನಮ್ಮ ಹಕ್ಕು ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳನ್ನು ರಕ್ಷಿಸಬೇಕೆಂದು ಹಲವಾರು ನ್ಯಾಯಾಲಯದ ತೀರ್ಪುಗಳು ಸಹ ಹೇಳಿವೆ” ಎಂದು ಹೇಳಿದ್ದಾರೆ.
“ಆದರೆ, ಬಿಬಿಎಂಪಿ ಇದನ್ನು ಬಹಿರಂಗವಾಗಿ ಉಲ್ಲಂಘಿಸಿ ನಮ್ಮನ್ನು ಎತ್ತಂಗಡಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ 2017 ರಲ್ಲಿ ಬಿಬಿಎಂಪಿ ವತಿಯಿಂದ 20,000 ಬೀದಿ ವ್ಯಾಪಾರಿಗಳನ್ನು ಗುರುತಿಸಿ, ಗುರುತಿನ ಚೀಟಿ ಮತ್ತು ವ್ಯಾಪಾರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಬೆಂಗಳೂರಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನ ಬೀದಿ ವ್ಯಾಪಾರದ ಮೇಲೆ ಅವಲಂಬಿತರಾಗಿದ್ದು, ಈ ಬೀದಿ ವ್ಯಾಪಾರಿಗಳನ್ನು ಬಿಬಿಎಂಪಿಯ ಸಮೀಕ್ಷೆಯಲ್ಲಿ ಒಳಗೊಳ್ಳಲಿಲ್ಲ. ಕಾನೂನಿನ ಪ್ರಕಾರ ಪ್ರತಿ 5 ವರ್ಷಕ್ಕೆ ಬಿಬಿಎಂಪಿಯು ಬೀದಿ ವ್ಯಾಪಾರಿಗಳ ಸಮೀಕ್ಷೆಯನ್ನು ಒಳಗೊಳ್ಳಬೇಕಾಗಿದೆ. ಈಗ 5 ವರ್ಷಗಳು ಕಳೆದಿದ್ದು, ಬಿಬಿಎಂಪಿಯು ಸಮೀಕ್ಷೆ ಶುರು ಮಾಡಲು ಮುಂದಾಗುತ್ತಿಲ್ಲ. ಮುಂಚೆ ನೀಡಿದ ಗುರುತಿನ ಚೀಟಿ/ವ್ಯಾಪಾರದ ಪ್ರಮಾಣ ಪತ್ರದ ಸಿಂಧುತ್ವವೂ ಮುಗಿದಿದೆ. ಅದರ ನವೀಕರಣದ ಕುರಿತು ಬಿಬಿಎಂಪಿಯು ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ” ಎಂದು ದೂರಿದ್ದಾರೆ.
“ಬೆಂಗಳೂರು ನಗರ ಅತಿವೇಗದಲ್ಲಿ ಬೆಳೆಯುತ್ತಿದೆ. ಮೆಟ್ರೋ, ಮಾಲ್ಗಳು, ಸ್ಮಾರ್ಟ್ ಫುಟ್ಪಾತ್ ಗಳು, ಕ್ಲೀನ್ ಸಿಟಿಯಾಗಿ ಹೆಸರು ಗಳಿಸುತ್ತಿದೆ. ಈ ‘ಬ್ರ್ಯಾಂಡ್ ಬೆಂಗಳೂರು’ನಲ್ಲಿ ಬೀದಿ ವ್ಯಾಪಾರಿಗಳಿಗೆ ಜಾಗವಿಲ್ಲವೇ? ಕಡಲೆಕಾಯಿ ಪರಿಷೆ, ಚಿತ್ರಸಂತೆಯು ಸೇರಿದಂತೆ ಬೆಂಗಳೂರಿನಲ್ಲಿ ಹೆಸರಾಂತ ಮೇಳಗಳು ನಡೆಯುತ್ತವೆ. ಇಲ್ಲಿ ಮಧ್ಯಮ ವರ್ಗದವರು ಮತ್ತು ಶ್ರೀಮಂತರು ಹೋಗುತ್ತಾರೆ. ಆದರೆ, ದಿನನಿತ್ಯ ತಮ್ಮ ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರ ಮಾಡುವವರನ್ನು ಏಕೆ ಭಿನ್ನವಾಗಿ ಪರಿಗಣಿಸಲಾಗುತ್ತದೆ? ಬೀದಿ ವ್ಯಾಪಾರಿಗಳನ್ನು ಒಳಗೊಳ್ಳದಿದ್ದರೆ, ಇದು ಎಂತಹ ನಗರವಾಗಿ ಬೆಳೆಯಬೇಕು” ಎಂದು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹70 ಸಾವಿರ ಸ್ಕೂಟಿ ಮೇಲೆ ಬರೋಬ್ಬರಿ ₹3.22 ಲಕ್ಷ ದಂಡ
ಹಕ್ಕೊತ್ತಾಯಗಳು
- ಜಯನಗರ, ಮಹದೇವಪುರ, ಮಲ್ಲೇಶ್ವರಂ, ಬನಶಂಕರಿ, ಮೂಡಲಪಾಳ್ಯ ಹಾಗು ಇತರೆ ಪ್ರದೇಶಗಳಲ್ಲಿ ಎತ್ತಂಗಡಿ ಮಾಡಿದ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಮರು ವ್ಯಾಪಾರ ಮಾಡುವಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಷ್ಟು ದಿವಸ ಅವರಿಗೆ ಆದ ನಷ್ಟಕ್ಕೆ ಪರಿಹಾರ ಕೊಡಬೇಕು.
- ಪ್ರತಿ ಪಟ್ಟಣ ವ್ಯಾಪಾರ ಸಮಿತಿ ಅಡಿಯಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಯಬೇಕು.
- ಸಮೀಕ್ಷೆಯು ಬಿಬಿಎಂಪಿಯ ನೇತೃತ್ವದಲ್ಲಿ ನಡೆಯಬೇಕು. ಹೊರಗುತ್ತಿಗೆಗೆ ನೀಡಬಾರದು.
- ಸಮೀಕ್ಷೆ ನಡೆಯುವ ತನಕ ಯಾವುದೇ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು.
- ಈಗಾಗಲೇ ನೀಡಿರುವ ಗುರುತಿನ ಚೀಟಿ /ವ್ಯಾಪಾರದ ಪ್ರಮಾಣ ಪತ್ರಗಳನ್ನು ಶೀಘ್ರದಲ್ಲೇ ನವೀಕರಿಸಬೇಕು.
- ಸಮೀಕ್ಷೆ ಕುರಿತು ಬೀದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಬೇಕು ಮತ್ತು ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು.