ಟಿಪ್ಪರ್ ಲಾರಿಯೊಂದು ಕುರಿಗಳ ಮೇಲೆ ಹರಿ ಪರಿಣಾಮ 18 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಹಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಂದಿರಾ ನಗರದ ಬಳಿ ಗುರುವಾರ (ಡಿ.28) ನಡೆದಿದೆ.
ತುಮಕೂರು ಜಿಲ್ಲೆಯ ಅಲೆಮಾರಿ ಕುರಿಗಾಹಿಗಳು, ಕುರಿಗಳನ್ನು ಮೇಯಿಸಲು ಹೋಗುತ್ತಿದ್ದಾಗ, ಬೇಗೂರು ಕಡೆಯಿಂದ ಬಂದ ಡಸ್ಟ್ ತುಂಬಿದ ಟಿಪ್ಪರ್ ಲಾರಿ ವೇಗವಾಗಿ ಬಂದು ಕುರಿಗಳ ಮೇಲೆ ಹರಿದಿದೆ. ಕುರಿಗಾಹಿಯು ಗಂಭೀರವಾಗಿ ಗಾಯಗೊಂಡು ನೆರಳಾಡುತ್ತಿದ್ದನ್ನು ಕಂಡ ಸ್ಥಳಿಯರು ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
18 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 40 ಕುರಿಗಳು ಗಾಯಗೊಂಡಿವೆ. ಟಿಪ್ಪರ್ ಲಾರಿಯ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ನಾವು ಕುರಿಗಳನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಊರೂರು ಸುತ್ತಿ ಕುರಿಗಳನ್ನು ಮೇಯಿಸಿಕೊಂಡು ಬರುತ್ತಿರುವಾಗ ಲಾರಿಯಿಂದ ನಡೆದ ಅಪಘಾತದಲ್ಲಿ ನಮಗೆ ಸುಮಾರು 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ನಮಗೆ ಸೂಕ್ತ ಪರಿಹಾರ ನೀಡುವ ತನಕ ರಸ್ತೆಯಲ್ಲಿಯೇ ಹೋರಾಟ ಮಾಡುತ್ತೇವೆ, ಎಂದು ಕುರಿಗಾಹಿಗಳು ಪಟ್ಟುಹಿಡಿದಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹುಲ್ಲಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.