ಮೋದಿ ಪದವಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸೆರೆಮನೆ ವಾಸದಲ್ಲಿರುವ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಬಿ ಆರ್ ಗವಾಯಿ ಹಾಗೂ ಸಂದೀಪ್ ಮೆಹತಾ ಅವರಿದ್ದ ಪೀಠವು ಸಂಜಯ್ ಸಿಂಗ್ ಅವರು ವಿಚಾರಣೆಯನ್ನು ಗುಜರಾತ್ ಹೊರಗೆ ನಡೆಸುವಂತೆ ಕೋರಿದ್ದ ಮನವಿಯನ್ನು ಪರಿಗಣಿಸಿ ನಾಲ್ಕು ವಾರಗಳ ಕಾಲ ತಡೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಗುಜರಾತ್ ವಿವಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ವಿಚಾರಣಾ ನ್ಯಾಯಾಲಯವು ಎಎಪಿ ನಾಯಕರ ವಿರುದ್ಧದ ಸಮನ್ಸ್ಅನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಮನವಿಯನ್ನು ನಾಲ್ಕು ವಾರಗಳಲ್ಲಿ ನಿರ್ಧರಿಸುವಂತೆ ಗುಜರಾತ್ ಹೈಕೋರ್ಟ್ಗೆ ಪೀಠವು ನಿರ್ದೇಶಿಸಿ ಅರ್ಜಿಯನ್ನು ವಜಾಗೊಳಿಸಿತು.
ಸಂಸದ ಸಂಜಯ್ ಸಿಂಗ್ ಅವರು ಡಿಸೆಂಬರ್ 28ರಂದು ವಿಚಾರಣಾ ನ್ಯಾಯಾಲಯ ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಪ್ರಸ್ತುತ ಸಂಸದರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ಟೋಬರ್ 4 ರಿಂದ ಬಂಧಿತರಾಗಿ ಸೆರೆಮನೆಯಲ್ಲಿದ್ದಾರೆ.
ಅರ್ಜಿದಾರರ ಪರವಾಗಿ ಕಳೆದ ಬುದವಾರದಂದು ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ಮಾನನಷ್ಟ ಮೊಕದ್ದಮೆಯು ಸಂಸದರನ್ನು ಅಪರಾಧಿಯನ್ನು ತೀರ್ಮಾನಿಸಿ ಅನರ್ಹರೆಂದು ಘೋಷಿಸುವ ಉದ್ದೇಶ ಹೊಂದಿದೆ. ಈ ಕಾರಣದಿಂದ ಪ್ರಕರಣಕ್ಕೆ ತಡೆ ನೀಡಬೇಕೆಂದು ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8(3) ಸೆಕ್ಷನ್ ಅಡಿ ಶಾಸಕ/ಸಂಸದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಅವಧಿ ಜೈಲು ಶಿಕ್ಷೆ ಅನುಭವಿಸಿದರೆ ಶಿಕ್ಷೆಯ ಅವಧಿ ಮುಗಿದ ನಂತರದ 6 ವರ್ಷಗಳ ಕಾಲ ಅನರ್ಹರೆಂದು ಘೋಷಿಸಲಾಗುತ್ತದೆ.
ಪ್ರಕರಣದಲ್ಲಿ ದೂರುದಾರರಾಗಿರುವ ಗುಜರಾತ್ ವಿವಿ ವಿರುದ್ಧ ಸಂಜಯ್ ಸಿಂಗ್ ಏನನ್ನು ಹೇಳಿಲ್ಲವೆಂದು ಸಿಂಘ್ವಿ ಸುಪ್ರೀಂ ಕೋರ್ಟ್ಗೆ ತಿಳಿಸಿದರು.
2016ರಲ್ಲಿ ಕೇಂದ್ರ ಮಾಹಿತಿ ಆಯೋಗ ಪ್ರಧಾನಿ ನರೇಂದ್ರ ಮೋದಿಯವರ ಪದವಿ ವಿವರಗಳನ್ನು ಕೇಜ್ರಿವಾಲ್ ಅವರಿಗೆ ಒದಗಿಸುವಂತೆ ನೀಡಿದ್ದ ನಿರ್ದೇಶನವನ್ನು ಗುಜರಾತ್ ಹೈಕೋರ್ಟ್ ಮಾರ್ಚ್ 21ರಂದು ರದ್ದುಪಡಿಸಿತ್ತು. ಕೇಂದ್ರ ಮಾಹಿತಿ ಆಯೋಗವು ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಉನ್ನತ ಮೇಲ್ಮನವಿ ಸಂಸ್ಥೆಯಾಗಿದೆ.
ಈ ತೀರ್ಪಿನ ನಂತರ ಗುಜರಾತ್ ವಿವಿಯು ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಮೋದಿ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾರಣಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು 1978ರಲ್ಲಿ ದೆಹಲಿ ವಿವಿಯಿಂದ ಬಿಎ ಪದವಿ ಹಾಗೂ 1983ರಲ್ಲಿ ಎಂಎ ಪದವಿ ಪಡೆದಿರುವುದಾಗಿ ಬಿಜೆಪಿ ಹಕ್ಕು ಸಾಧಿಸುತ್ತ ಬಂದಿದೆ. ಆದರೆ ಎಎಪಿ ಪ್ರಧಾನಿ ಯಾವುದೇ ಪದವಿಗಳನ್ನು ಪಡೆದಿಲ್ಲ ಎಂದು ಆರೋಪಿಸಿದೆ.