ಕರಾವಳಿಯಲ್ಲಿ ಕಾಲಕ್ರಮೇಣ ಕೃಷಿ ಚಟುವಟಿಕೆಗಳು ಕ್ಷೀಣವಾಗುತ್ತಿದ್ದು, ಹಸಿರು ತುಂಬಿಕೊಂಡಿದ್ದ ಕೃಷಿ ಭೂಮಿಗಳು ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗುತ್ತಿವೆ. ಕೃಷಿ ಭೂಮಿಗಳಲ್ಲಿ ಬೃಹತ್ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಅನ್ಯ ಉದ್ದೇಶಗಳಿಗೆ ಕೃಷಿ ಭೂಮಿ ಹೆಚ್ಚು ಬಳಕೆಯಾಗುತ್ತಿರುವ ಪರಿಣಾಮ ಮುಂದೊಂದು ದಿನ ಕೃಷಿ ಭೂಮಿಯನ್ನು ಹುಡುಕಬೇಕಾದ ಪರಿಸ್ಥಿತಿ ಬರಬಹುದು ಎಂದು ಕೃಷಿಕರು ಅವಲತ್ತುಕೊಂಡಿದ್ದಾರೆ.
ಯುವಜನಾಂಗ ಕೃಷಿಯಿಂದ ವಿಮುಖರಾಗುತ್ತಿದ್ದು, ಸಾಫ್ಟ್ವೇರ್ ಎಂಜಿನಿಯರ್ ಹಾಗೂ ವೈದ್ಯಕೀಯ ಉದ್ಯೋಗಗಳತ್ತ ಮುಖಮಾಡುತ್ತಿದ್ದಾರೆ. ಇತ್ತ ಕರಾವಳಿ ಕೃಷಿಯೂ ಹಲವು ಸಮಸ್ಯೆಗಳಿಂದ ನರಳುತ್ತಿದೆ. ದಿನಕಳೆದಂತೆ ಕೃಷಿಗೆ ಪೂರಕ ವಾತಾವರಣ ಇಲ್ಲದೆ ಕೃಷಿ ಕಷ್ಟಕರವಾಗಿ ಪರಿಣಮಿಸಿದೆ.
“ಹವಾಮಾನ ವೈಪರೀತ್ಯ ಹಾಗೂ ನಿರಂತರ ಎದುರಾಗುವ ಸಮಸ್ಯೆ ಸವಾಲುಗಳಿಗೆ ಸಿಲುಕಿ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಸರ್ಕಾರದಿಂದ ಕೃಷಿ ಕ್ಷೇತ್ರದ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ತಲೆಮಾರಿನ ಎಲ್ಲರೂ ಕೃಷಿಯಿಂದ ದೂರ ಸರಿದು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಹೋಗಲಿದ್ದಾರೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ದರ ಸಿಗದೆ ಮದ್ಯವರ್ತಿಗಳ ಕಾಟಕ್ಕೆ ಸಿಲುಕಿ ಗಂಭೀರ ಸಮಸ್ಯೆಗಳು ಎದುರಾಗಲಿದ್ದು, ಕೃಷಿ ಮತ್ತಷ್ಟು ಸಮಸ್ಯೆಗೆ ಸಿಲುಕಲಿದೆ” ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
“ಈ ಹಿಂದೆ ಭತ್ತದ ಕಟಾವು ಬಹುತೇಕ ಮಾನವ ಶ್ರಮದಿಂದ ನಡೆಯುತ್ತಿತ್ತು. ಹವಾಮಾನವು ಕೃಷಿಗೆ ಪೂರಕವಾಗಿತ್ತು. ಪ್ರಸ್ತುತ ವಾತಾವರಣ ಕಲುಷಿತಗೊಂಡಿದ್ದು, ಭತ್ತದ ನಾಟಿ ಮತ್ತು ಕಟಾವು ನಿಗದಿತ ಸಮಯಕ್ಕೆ ನಡೆಯುತ್ತಿಲ್ಲ. ಕೃಷಿಗೆ ಪರ್ಯಾಯವಾಗಿ ಮೀನು ಸಂಸ್ಕರಣಾ ಘಟಕ, ಗೇರು ಬೀಜ ಸಂಸ್ಕರಣಾ ಘಟಕಗಳತ್ತ ಕೃಷಿ ಕಾರ್ಮಿಕರು ಮುಖ ಮಾಡುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಆಸಕ್ತಿ ತೋರುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೂಲಿಯೂ ಹೆಚ್ಚಳವಾಗಿರುವುದು ಕೃಷಿಕರಿಗೆ ಆರ್ಥಿಕ ಹೊರೆಯಾಗಿದೆ” ಎಂಬುದು ಕೃಷಿಕರ ಮಾತು.
“ನಾಟಿ ಸಮಯದಲ್ಲಿ ನೆರೆ, ಕಳೆ ತೆಗೆಯುವ ಸಮಯದಲ್ಲಿ ಮಳೆ ಇಲ್ಲದೆ ಇಳುವರಿ ಕುಸಿತವಾಗುತ್ತಿದೆ. ಕಟಾವು ಸಮಯದಲ್ಲಿ ಅತಿವೃಷ್ಟಿ ಎನ್ನುವಷ್ಟು ಮಳೆ ಬಂದು ಬೆಳೆದ ಬೆಳೆ ನಾಶವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಯನ್ನೇ ಅವಲಂಬಿಸಿ ಜೀವನ ಮಾಡುವುದು ಕಷ್ಟವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೈತ ಸಂಘಟನೆಗಳು ಪ್ರಬಲವಾಗಿಲ್ಲದಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಕೋಟದಲ್ಲಿ ವಿದಾತ್ರಿ ರೈತ ಉತ್ಪಾದಕರ ಕಂಪನಿ ಕೃಷಿ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದೆ. ರೈತರು ಸಂಘಟಿತರಾದರೆ ಮಾತ್ರ ಸೌಲಭ್ಯಗಳನ್ನು ಪಡೆಯಬಹುದು. ಕೃಷಿ ವಿಷಯ ಶಾಲಾ ಹಾಗೂ ಕಾಲೇಜುಗಳ ಪಠ್ಯವಾಗಬೇಕು. ಕೃಷಿ ಭೂಮಿಯನ್ನು ಪರಿವರ್ತನೆ ಮಾಡದಂತೆ ಸುಗ್ರಿವಾಜ್ಞೆ ಹೊರಡಿಸಬೇಕು. ರೈತ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡುವುದರ ಜತೆಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಜ.26ರಿಂದ ರಾಜ್ಯಾದ್ಯಂತ ಸಂವಿಧಾನ ಜಾಥಾ: ಸಚಿವ ಮಹಾದೇವಪ್ಪ
“ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ರೈತರಿಗೆ ಅಗತ್ಯ ಸಹಕಾರ ನೀಡಬೇಕು. ಗ್ರಾಮ ಮಟ್ಟದಲ್ಲಿ ಯುವಕರಿಗೆ ಕೃಷಿಗೆ ಪ್ರೋತ್ಸಾಹ ನೀಡಬೇಕು. ಅವಿಭಕ್ತ ಕುಟುಂಬದ ಆಸ್ತಿಯ ದಾಖಲೆಗಳನ್ನು ಸರಿಪಡಿಸಲು ಪಂಚಾಯಿತಿ ಮಟ್ಟದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಊಟ ಮಾಡಲು ಅನ್ನ ಅತ್ಯವಶ್ಯಕವಾಗಿ ಬೇಕಾಗಿದ್ದರೂ ಬೇಸಾಯ ಮಾಡಲು ನಿರ್ಲಕ್ಷ್ಯ ತೋರಲಾಗುತ್ತಿದೆ. ಕುಡಿಯಲು ಹಾಲು ಬೇಕಾದರೂ ದನಗಳನ್ನು ಸಾಕುವ ಪ್ರವೃತ್ತಿ ಕ್ಷೀಣಿಸುತ್ತಿದೆ. ಇಂತಹ ವಿಷಯಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಸುವುದು ಅತ್ಯಗತ್ಯವಾಗಿದೆ” ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.