ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಮಂಡ್ಯದ ನೆಹರೂನಗರದ ಪೂರ್ವ ಬಡಾವಣೆಯಲ್ಲಿ ನಡೆದಿದೆ.
ಮೃತ ಮಹಿಳೆ ಪದ್ಮ(36). ಇವರಿಗೆ ಇಬ್ಬರು ಮಕ್ಕಳಿದ್ದು, ಕುಟುಂಬ ಕಲಹಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
“ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆಯಾದ ಬಳಿಕ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ, ದಿನ ಕಳೆದಂತೆ ಜಗಳ ನಡೆಯುತ್ತಿತ್ತು. ಇದೀಗ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವಳು ಮೃತಪಟ್ಟಿದ್ದಾಳೆ” ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಮೃತ ಮಹಿಳೆ ಪದ್ಮ ಪತಿ ಸಿದ್ದರಾಜು ಎಂಬಾತನ ಮೇಲೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, “ಇದು ಆತ್ಮಹತ್ಯೆಯಲ್ಲ ಕೊಲೆ” ಎಂದು ದೂರಿದ್ದಾರೆ.
ರಾಮನಗರ ತಾಲೂಕಿನ ಅಂಕನಹಳ್ಳಿ ನಿವಾಸಿಯಾಗಿದ್ದ ಪದ್ಮ ಹಾಗೂ ಮಂಡ್ಯ ಮೂಲದ ಸಿದ್ದರಾಜು ಪ್ರೀತಿಸಿ, 13 ವರ್ಷದ ಹಿಂದೆ ಮದುವೆಯಾಗಿದ್ದರು. ಪತಿ ಸಿದ್ದರಾಜು ಹಣಕ್ಕಾಗಿ ಸಾಕಷ್ಟು ಪೀಡಿಸುತ್ತಿದ್ದ. ಆಗಾಗ ಗಲಾಟೆಯೂ ನಡೆಯುತ್ತಿತ್ತು” ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಗ್ರಾಮೀಣ ಅಂಚೆ ಸೇವಕ ಹುದ್ದೆಗಾಗಿ ಅಂಕಪಟ್ಟಿ ತಿದ್ದುಪಡಿ; 25 ಮಂದಿ ವಿರುದ್ಧ ಪ್ರಕರಣ ದಾಖಲು
“ಮದುವೆಯಾದ ಬಳಿಕ ಒಂದು ಬಾರಿಗೂ ತವರು ಮನೆಗೆ ಸಿದ್ದರಾಜು ಕಳುಹಿಸಲಿಲ್ಲ. ಅಲ್ಲದೆ ಸಂಬಂಧಿಕರನ್ನೂ ಕೂಡ ಮನೆಗೆ ಬರದಂತೆ ಒತ್ತಡ ಹಾಕುತ್ತಿದ್ದ. ಆತ್ಮಹತ್ಯೆ ಮಾಡಿಕೊಂಡ ನಂತರ ವಿಷಯ ತಿಳಿಸದೇ ಅಂತ್ಯಕ್ರಿಯೆಗೆ ತಯಾರಿ ಕೂಡ ಮಾಡಿಕೊಂಡಿದ್ದ” ಎಂದು ವಿಚಾರ ತಿಳಿದು ಮಂಡ್ಯಕ್ಕೆ ಬಂದ ಮಹಿಳೆ ಪದ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಿದ್ದರಾಜು ಎಂಬಾತನನ್ನು ಪೂರ್ವಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.