“ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಏನಾದರೂ ಬಿಜೆಪಿ ಗೆದ್ದರೆ ಸರ್ವಾಧಿಕಾರಿ ಆಡಳಿತ ಬರಲಿದೆ. ಇನ್ನು ಚುನಾವಣೆಗಳು ಅವರಿಗೆ ಬೇಕಾದ ಹಾಗೇ ನಡೆಯುತ್ತವೆ. ಜನ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ಯಾದಗಿರಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಹೇಗೆ ಉಳಿದ ಪಕ್ಷಗಳನ್ನು ಹತ್ತಿಕ್ಕುತ್ತಿದೆ ಎನ್ನುವುದಕ್ಕೆ ಚಂಡೀಗಢದಲ್ಲಿ ನಡೆದ ಘಟನೆಯೇ ಸಾಕ್ಷಿ. ಕಾರ್ಪೊರೇಷನ್ನಲ್ಲಿ 36 ಜನರಲ್ಲಿ 14 ಜನ ಬಿಜೆಪಿ ಸದಸ್ಯರಿದ್ದರೆ, 13 ಜನ ಎಎಪಿ ಸದಸ್ಯರಿದ್ದರು, 9 ಸದಸ್ಯರು ಕಾಂಗ್ರೆಸ್ನವರಿದ್ದರು, ಎಎಪಿ ಕಾಂಗ್ರೆಸ್ ಒಟ್ಟಿಗೆ ಇದ್ದು, 23 ಸದಸ್ಯರ ಬಲ ಹೊಂದಿದ್ದರೂ, ಅಲ್ಲಿ ಬಿಜೆಪಿಯವರನ್ನು ಮೇಯರ್, ಉಪಮೇಯರ್ ಮಾಡಲಾಗಿದೆ. ಚುನಾವಣಾಧಿಕಾರಿಗೆ ಹೆದರಿಸಿ 8 ಮತಗಳನ್ನು ಅಸಿಂಧುಗೊಳಿಸಿದ್ದಾರೆ” ಎಂದರು.
“ಇಂದು ಬಡವರ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಲು ಸಾಧ್ಯವಾಗುತ್ತಿಲ್ಲ. ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವ ಸರ್ಕಾರಗಳು ಉಚಿತವಾಗಿ ಶಿಕ್ಷಣ ನೀಡಬೇಕು. ದೆಹಲಿಯಲ್ಲಿ ನಾವು ಇದನ್ನು ಮಾಡಿದ್ದೇವೆ. ದೇಶದಲ್ಲಿ ಮಾಡಲು ಯಾಕೆ ಸಾಧ್ಯವಿಲ್ಲ” ಎಂದರು.
“ಮಂಡ್ಯದಲ್ಲಿ ಒಂದು ಬಾವುಟದ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡ ಹೋರಾಟ ಮಾಡಲಾಗುತ್ತಿದೆ. ಆದರೆ, ಮೇಕೆದಾಟು ಯೋಜನೆ ಆಗಿಲ್ಲ, ಸರಿಯಾದ ನೀರಾವರಿ ಸೌಲಭ್ಯ ಒದಗಿಸಿಲ್ಲ, ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ, ಕಬ್ಬು ಬೆಳೆಗಾರರಿಗೆ ಹಣ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಶ್ರೀಮಂತರ 11 ಲಕ್ಷ ಕೋಟಿ ರೂಪಾಯಿ ಸಾಲ ರೈಟ್ ಆಫ್ ಮಾಡಿದೆ. ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡದೇ ಬಾವುಟದ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತಿರುವುದು ದುರದೃಷ್ಟಕರ” ಎಂದರು.
“ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಮಾತ್ರವೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಸೋತರೂ ಅವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ” ಎಂದು ತಿಳಿಸಿದರು.
“ಮುಂದಾಲೋಚನೆ ಇಲ್ಲದೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದರು. ಅವುಗಳ ಅನುಷ್ಠಾನ ಮಾಡಿ 8 ತಿಂಗಳಿಗೆ ಹಲವು ಸಮಸ್ಯೆ ಉಂಟಾಗಿದೆ. 100 ಪ್ರತಿಶತ ಗ್ಯಾರಂಟಿಗಳ ಅನುಷ್ಠಾನ ಮಾಡಿಲ್ಲ. ಅನುದಾನಗಳನ್ನು ಕೊಡದೇ ಮೋಸ ಮಾಡಿದ್ದಾರೆ. ನಿಮ್ಮ ಗುಲಾಮರಾಗಿ ಕೆಲಸ ಮಾಡ್ತೀವಿ ಎಂದು ಮತ ಪಡೆದು ಇಂದು ಜನರನ್ನೇ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ಅವರ ತೆರಿಗೆ ಹಣದಲ್ಲೇ ಗ್ಯಾರಂಟಿ ಕೊಟ್ಟು, ಈಗ ಚುನಾವಣೆ ಗೆಲ್ಲದಿದ್ದರೆ ನಿಲ್ಲಿಸುತ್ತೇವೆ ಎನ್ನುವುದು ಮೋಸ” ಎಂದು ಹೇಳಿದರು.
“ನಾವು ಬಲಾಢ್ಯರ ವಿರುದ್ಧ ಹೋರಾಟ ಮಾಡಬೇಕು. ದೊಡ್ಡ ದೊಡ್ಡ ಬ್ಯಾನರ್ ಕಟ್ಟಿ, ಹಣ ಖರ್ಚು ಮಾಡುವುದು ಬೇಡ ಎಂದು ನಾವೇ ಹಳ್ಳಿ ಹಳ್ಳಿಗೆ ತೆರಳಿ ಪಕ್ಷ ಸಂಘಟನೆ ಮಾಡುತ್ತೇವೆ. ಅದಕ್ಕಾಗಿ ಗ್ರಾಮೀಣ ಜನತೆ ಜತೆ ಸಂವಾದ ಕಾರ್ಯಕ್ರಮ ಏರ್ಪಡಿಸುವ ಮೂಲಕ, ರಾಜಕೀಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
“ನಾಮಫಲಕಲ್ಲಿ 60% ಕನ್ನಡ ಇರಬೇಕು ಎಂದು ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಸಹಿಗಾಗಿ ರಾಜ್ಯ ಸರ್ಕಾರ ಕಳುಹಿಸಿದ್ದು ಅದನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ಇದೇ ರೀತಿ ಕಿರುಕುಳ ನೀಡುತ್ತಿದೆ. ದೆಹಲಿಯಲ್ಲಿ ಕೂಡ ಕೇಜ್ರಿವಾಲ್ ಸರ್ಕಾರಕ್ಕೆ ತೊಂದರೆ ಕೊಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಶ್ವದ ‘ಕುಖ್ಯಾತ ಮಾರುಕಟ್ಟೆ’ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಸ್ಪಿ ರೋಡ್ ಉಲ್ಲೇಖ
“ಪಾರದರ್ಶಕ, ವಿಕೇಂದ್ರಿಕರಣ ಆಡಳಿದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಆದರೆ, ಬಿಬಿಎಂಪಿ ಚುನಾವಣೆಗೆ ತಡ ಮಾಡುತ್ತಿರುವುದೇಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎಷ್ಟು ವರ್ಷಗಳಾಗಿದೆ. ಆ ಚುನಾವಣೆಗಳನ್ನು ನಡೆಸಬೇಕು ಎನ್ನುವ ಉದ್ದೇಶ ಇಲ್ಲವಾ” ಎಂದು ಪ್ರಶ್ನೆ ಮಾಡಿದರು.