ಕೂಗುಮಾರಿಗಳ ಕಾಲದಲ್ಲಿ ನಾವಿರುವುದರಿಂದ ಎಚ್ಚರದಿಂದ ಮಾತನಾಡಬೇಕು. ಪುಸ್ತಕವೊಂದು ಬರುವ ಮೊದಲೆ ಅದರ ಬಗ್ಗೆ ವಿರ್ಮಶೆ ಶುರುವಾಗುವುದೇ ವಿಮರ್ಶೆ ರಾಜಕಾರಣ. ಕನ್ನಡ ಸಾಹಿತ್ಯದಲ್ಲಿಯೂ ಅಂತಹ ವಿಮರ್ಶೆಯ ರಾಜಕಾರಣ ಕೆಲಸ ಮಾಡಿದೆ. ಕೆಲವರನ್ನು ಮುಂದೆ ತರುವ ಕೆಲವರನ್ನು ಮರೆಮಾಚುವ ಈ ರಾಜಕಾರಣದಲ್ಲಿ ಕಥೆಗಾರ್ತಿ ಬಿ ಟಿ ಜಾಹ್ನವಿ ಬಲಿಪಶು ಆಗಿದ್ದಾರೆ ಎಂದು ನಾಡೋಜ ಪ್ರೊ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕೌದಿ ಪ್ರಕಾಶನ ಹಾಗೂ ಬೀ ಕಲ್ಚರ್ ಸಹಯೋಗದಲ್ಲಿ ಆಯೋಜಿಸಿದ್ದ ಕತೆಗಾರ್ತಿ ಬಿ ಟಿ ಜಾಹ್ನವಿ ಅವರ ‘ಒಬ್ರು ಸುದ್ಯಾಕೆ.. ಒಬ್ರು ಗದ್ಲ್ಯಾಕೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಜಾಹ್ನವಿ ಅವರ ಕತೆಗಳು ದಲಿತಲೋಕ ಮತ್ತು ಸ್ತ್ರೀ ಲೋಕವನ್ನು ಒಳಗೊಂಡಿದ್ದು, ಈವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಬಂದಿರುವ ಸ್ತ್ರೀ ಲೋಕಕ್ಕಿಂತ ಬಹಳ ಭಿನ್ನವಾಗಿವೆ. ನನ್ನ ದೃಷ್ಟಿಯಲ್ಲಿ ಸ್ತ್ರೀವಾದ ಮತ್ತು ಸ್ತ್ರೀಸಂವೇದನೆ ಎರಡೂ ಬೇರೆ-ಬೇರೆ” ಎಂದರು.
ಹಿರಿಯ ನ್ಯಾಯವಾದಿ ಡಾ. ಸಿ ಎಸ್ ದ್ವಾರಕಾನಾಥ್ ಮಾತನಾಡಿ, “ಲಂಕೇಶರ ‘ದೂಷ್ಟಕೂಟ’ದಲ್ಲಿ ನಮ್ಮೊಂದಿಗೆ ಬಿ ಟಿ ಜಾಹ್ನವಿ ಇದ್ದರು” ಎಂದು ಲಂಕೇಶ್ ಪತ್ರಿಕೆಯಲ್ಲಿನ ನೆನಪುಗಳನ್ನು ಮೆಲುಕು ಹಾಕಿದ ಅವರು, “ಜಾಹ್ನವಿಯವರು ಅವರ ತಂದೆ ತಿಪ್ಪೇಸ್ವಾಮಿಯವರ ಮುಂದುವರಿದ ಭಾಗವಾಗಿ ಕಾಣುತ್ತಾರೆ” ಎಂದರು.
ವಿಮರ್ಶಕ, ಸಂಶೋಧಕ ಡಾ.ರವಿಕುಮಾರ್ ನೀಹ ಪುಸ್ತಕದ ಕುರಿತು ಮಾತನಾಡಿ, “ಇಷ್ಟು ವರ್ಷಗಳ ಕಾಲ ಬಿ ಟಿ ಜಾಹ್ನವಿಯವರು ಬರೆಯುವುದನ್ನು ಬಿಟ್ಟಿದ್ದಕ್ಕೂ ಅವರ ಕಥಾಸಂಕಲನದ ಶೀರ್ಷಿಕೆಗೂ ಸಂಬಂಧವಿದೆ. ಸಾಹಿತ್ಯ ಲೋಕದ ಓದಿನ ರಾಜಕಾರಣ ಅವರ ಮೇಲೆ ಪರಿಣಾಮ ಬೀರಿದೆ” ಎಂದು ಹೇಳಿದರು.
ಕಥೆಗಾರ್ತಿ ದಯಾ ಗಂಗನಘಟ್ಟ ಮಾತನಾಡಿ, “ಕನ್ನಡ ಸಾಹಿತ್ಯದಲ್ಲಿ ರೊಮ್ಯಾಂಟಿಸಮ್ ಜತೆಗೆ ದಲಿತ ಸಂವೇದನೆಯನ್ನು ಕೊಡುವುದು ಅಷ್ಟು ಸುಲಭದ ಮಾತಲ್ಲ. ಓರ್ವ ದಲಿತ ಮಹಿಳೆಯಾಗಿ ಸಮಾಜದ ಮೇಲಿನ ದೊಡ್ಡ ಜವಾಬ್ದಾರಿ ಹೊತ್ತು ಸಮಾಜದ ಕಟ್ಟುಪಾಡುಗಳನ್ನು ಕತೆಯ ಮೂಲಕ ನಮ್ಮ ಮುಂದೆ ತಂದಿದ್ದಾರೆ” ಎಂದು ಶ್ಲಾಘಿಸಿದರು.
“ಒಬ್ಬ ಮಹಿಳಾ ಕತೆಗಾರ್ತಿಯಾಗಿ ಇಡೀ ಸಮುದಾಯದ ಜವಾಬ್ದಾರಿಯನ್ನು ಹೊತ್ತು ತನ್ನದೇ ಆದ ರೀತಿಯಲ್ಲಿ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಎದುರಿಸುವ ಕತೆಗಳು ಹಾಗೂ ಹಸಿವಿನ ಕತೆ, ಅನ್ನಗಳಿಕೆ ಕತೆ, ವಿದ್ಯೆಗಳಿಕೆ ಕತೆ ಬಹಳ ಪ್ರಮುಖವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಗಿತ್ತಿಯಾಗಿರುವ ಹೆಣ್ಣಿನ ಪಾತ್ರಗಳು, ಕಿಲಾಡಿ ತನದ ಹೆಣ್ಣಿನ ಪಾತ್ರಗಳು, ಯಾವುದನ್ನೂ ಪ್ರಶ್ನೆ ಮಾಡದೆ ಸುಮ್ಮನೆ ಒಪ್ಪಿಕೊಳ್ಳುವ ಹೆಣ್ಣಿನ ಪಾತ್ರಗಳು ಜಾಹ್ನವಿ ಅವರ ಕತೆಗಳಲ್ಲಿ ಪದೇ ಪದೆ ಬರುತ್ತವೆ. ಇಡೀ ಪುಸ್ತಕದಲ್ಲಿ ‘ಹೋರಾಟ’ ಮತ್ತು ‘ನೆರೆಹಾವಳಿ’ ಎಂಬ ಕತೆಗಳು ನನ್ನನ್ನು ಮೌನವಾಗಿಸಿ ಬಿಟ್ಟವು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬೆಳಧರ ಸರ್ಕಾರಿ ಶಾಲೆ ಆಟದ ಮೈದಾನ ವಶ; ತಪ್ಪಿತಸ್ಥರ ವಿರುದ್ಧ ಲೋಕಾಯುಕ್ತಕ್ಕೆ ಅರ್ಜಿ
ಕತೆಗಾರ್ತಿ ಬಿ ಟಿ ಜಾಹ್ನವಿ ಮಾತನಾಡಿ, ”ಬರೆಯುವುದೆ ಬೇಡ ಎಂದಾಗ ನನಗೆ ಸ್ಫೂರ್ತಿ ಕೊಟ್ಟಿದ್ದು, ಸಿದ್ದಲಿಂಗಯ್ಯ ಪ್ರಶಸ್ತಿ ಮತ್ತು ʼಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆʼ ಕಥಾ ಸಂಕಲನ ಪ್ರಕಟಣೆ” ಎಂದು ಹೇಳಿದರು.
“ನಿಂತ ನಿಲುವಿನಲ್ಲಿಯೇ ಕತೆ ಸೃಷ್ಟಿಸುತ್ತಿದ್ದ ನನ್ನಜ್ಜ, ಓದುವ ಗೀಳನ್ನು ಹಚ್ಚಿದ ನನ್ನಪ್ಪಾಜಿ, ಯಾವಾಗಲೂ ಪತ್ರಗಳನ್ನು ಬರೆಸುತ್ತಿದ್ದ ನನ್ನಮ್ಮರಂತಹ ನನ್ನ ಪರಿಸರ ನನಗೆ ಲೇಖನಿ ಹಿಡಿಸಿ ಬರೆಸಿದವು. ಪಿ ಲಂಕೇಶ್ ನನಗೆ ಬರೆಯುವ ಅವಕಾಶವನ್ನು ಕೊಟ್ಟು ನನ್ನಂತಹ ಅನೇಕರನ್ನು ಬರಹಗಾರರನ್ನಾಗಿ ಮಾಡಿದರು” ಎಂದು ಸ್ಮರಿಸುತ್ತಾ ತಮ್ಮ ಅನಿಸಿಕೆ ಹಂಚಿಕೊಂಡರು.
