ಹೆಣ್ಣಿನ ಉಡುಗೆ-ತೊಡುಗೆ ಬಗ್ಗೆ ಡಿಬೇಟ್ ಮಾಡದೇ, ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಿ ಎಂದು ಪ್ರಧಾನ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಸಲಹೆ ನೀಡಿದರು.
ದಾವಣಗೆರೆಯ ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನವು ಲಿಂಗಸಮಾನತೆ ಮತ್ತು ಮಹಿಳಾ ಹಕ್ಕುಗಳ ಕುರಿತ ಅಪಾರ ಮಹತ್ವವನ್ನು ಹೊಂದಿದೆ. ವಿಶ್ವಾದ್ಯಂತ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಲಿಂಗ ಆಧಾರಿತ ತಾರತಮ್ಯ, ಹಿಂಸೆ ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಅಸಮಾನ ಪ್ರವೇಶ ಸೇರಿದಂತೆ ಮಹಿಳೆಯರು ಎದುರಿಸುತ್ತಿರುವ ನಿರಂತರ ಸವಾಲುಗಳು ಮತ್ತು ಅಡೆತಡೆಗಳ ಕುರಿತು ಚರ್ಚಿಸುವ ಒಂದು ಅವಕಾಶವನ್ನು ಒದಗಿಸುತ್ತದೆ ಎಂದರು.
ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಇದ್ದರೂ, ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲಿವೆ ಮತ್ತು ಸಮಾಜದಲ್ಲಿ ಬಾಲ್ಯ ವಿವಾಹದ ಪ್ರಕರಣ ತಗ್ಗಿಲ್ಲ. ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ಅನೇಕ ಸಮಾಜ ಸುಧಾರಕರ ಪ್ರತಿಫಲದಿಂದಾಗಿ ಇಂದು ಸಮಾಜದ ಪ್ರತಿ ಕ್ಷೇತ್ರದಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದರೆ, ಸ್ತ್ರೀ ಶಕ್ತಿ ಸಂಘಗಳು ಇನ್ನೂ ಹೆಚ್ಚಾಗಿ ಮಹಿಳಾ ಸಬಲೀಕರಣ ಕುರಿತು ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ವಾಸಂತಿ ಉಪ್ಪಾರ ಮಾತನಾಡಿ, ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತನ್ನು ಮೀರಿ, ಮಹಿಳೆ ಅಗಾಧವಾಗಿ ಬೆಳೆದು ಅನ್ನೋನ್ಯತೆಯಿಂದ ಬದುಕಿದ್ದಾರೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಮಹಿಳೆಯರ ಸಾಧನೆಗಳನ್ನು ಗೌರವಿಸಲು ಸಮಾಜಕ್ಕೆ ಅವರ ಕೊಡುಗೆಗಳನ್ನು ಗುರುತಿಸಲು ಮತ್ತು ಲಿಂಗ ಸಮಾನತೆಗಾಗಿ ಪ್ರತಿಪಾದಿಸಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜಾಗತಿಕ ಸಂದರ್ಭವಾಗಿದೆ. ಜಗತ್ತಿನಲ್ಲಿ ಮೊದಲ ಬಾರಿಗೆ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡಿ ವಚನಚಳವಳಿ ಕಟ್ಟಿದರು. ಮಹಿಳೆಯರ ಹಕ್ಕುಗಳಿಗಾಗಿ ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ಜ್ಯೋತಿಬಾಪುಲೆ, ರಾಜಾರಾಮ್ ಮೋಹನ್ರಾಯ್ ಮುಂತಾದವರು ಮಾಡಿದ ಹೋರಾಟ ಮತ್ತು ತ್ಯಾಗಗಳನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದು ಸ್ಮರಿಸಿದರು.
ಒಂದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ವಿಜಯಾನಂದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ರೇಷ್ಮಾ, ವಕೀಲರಾದ ಟಿ.ಆರ್. ಗುರುಬಸವರಾಜ್, ಬಿ.ಎಂ. ಹನುಮಂತಪ್ಪ, ನಾಗಮಣಿ ಹಂಪಾಳಿ, ಅನಿತಾ ಸಿ.ಪಿ. ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ರೇಖಾ ಖಮಿತ್ಕರ್, ನೇತ್ರಾವತಿ, ಮಹಾದೇವಿ ಹಿರೇಮಠ, ಭಾಗ್ಯಲಕ್ಷ್ಮಿ ಆರ್. ನ್ಯಾಯಾಧೀಶರಾದ ನಿವೇದಿತಾ, ರೇಷ್ಮಾಗಾಯಿತ್ರಿ, ನಾಜಿಯಾ ಕೌಸರ್, ಅಧಿಕಾರಿಗಳಾದ ವಾಸಂತಿ ಉಪ್ಪಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಟಿ.ಎಚ್.ಮಧುಸೂದನ್, ನಾಗರಾಜ್, ಅನ್ನಪೂರ್ಣೇಶ್ವರಿ, ಸುಜಿದಾಬಾನು, ಎಲ್.ನೀಲಕಂಠಯ್ಯ ಕೆ.ಎಂ. ರಾಘವೇಂದ್ರ ಎಂ, ಸಂತೋಷ್ ಕುಮಾರ್ ಜಿ.ಜೆ, ಇತರೆ ವಕೀಲರು ಹಾಜರಿದ್ದರು.