ತಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ ರೋಹಿಣಿ ಆಚಾರ್ಯ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಬಿಹಾರದ ಸರೋನ್ ಕ್ಷೇತ್ರದಿಂದ ರೋಹಿಣಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.
ಒಂದು ವೇಳೆ ಲೋಕಸಭೆಗೆ 44 ವರ್ಷದ ರೋಹಿಣಿ ಆಚಾರ್ಯ ಸ್ಪರ್ಧಿಸಿದರೆ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿ ಕುಟುಂಬದ ನಾಲ್ಕನೇ ಸದಸ್ಯರು ರಾಜಕೀಯ ಪ್ರವೇಶ ಮಾಡಿದಂತಾಗುತ್ತದೆ.
ಈಗಾಗಲೇ ಲಾಲು ಕುಟುಂಬದಲ್ಲಿ ವಿಪಕ್ಷ ನಾಯಕನಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್, ಮತ್ತೋರ್ವ ಪುತ್ರ ತೇಜ್ ಪ್ರತಾಪ್ ಯಾದವ್ ಶಾಸಕರಾಗಿದ್ದರೆ, ಇನ್ನೊಬ್ಬ ಪುತ್ರ ಮಿಶಾ ಭಾರತಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
ರೋಹಿಣಿ ಆಚಾರ್ಯ ಅವರು ರಾಜಕೀಯ ಪ್ರವೇಶದ ಊಹಾಪೋಹಗಳ ಬಗ್ಗೆ ಬಿಹಾರದ ವಿಧಾನ ಪರಿಷತ್ ಸದಸ್ಯರು ಹಾಗೂ ಲಾಲು ಕುಟುಂಬದ ಆಪ್ತರಾದ ಸುನಿಲ್ ಕುಮಾರ್ ಸಿಂಗ್ ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
“ಡಾ. ರೋಹಿಣಿ ಆಚಾರ್ಯ ಅವರು ತಮ್ಮ ತಂದೆಗಾಗಿ ಪ್ರೀತಿ, ಭಕ್ತಿ ಹಾಗೂ ತ್ಯಾಗವನ್ನು ಸಮರ್ಪಿಸಿದ್ದಾರೆ. ಪಕ್ಷದ ಎಲ್ಲ ಕಾರ್ಯಕರ್ತರು ಕೂಡ ರೋಹಿಣಿ ಅವರು ಲೋಕಸಭಾ ಸದಸ್ಯರಾಗಬೇಕೆಂದು ಬಯಸಿದ್ದಾರೆ” ಎಂದು ಸುನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಸ್ತುತ ಸರನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಸಂಸದರಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗಿರುವ ರೋಹಿಣಿ ಆಚಾರ್ಯ ಅವರು 2002ರಲ್ಲಿ ನಿವೃತ್ತ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯ ಪುತ್ರ ಸಾಫ್ಟ್ವೇರ್ ಇಂಜಿನಿಯರ್ ರಾಯ್ ರಣ್ವಿಜಯ್ ಸಿಂಗ್ ಅವರನ್ನು ವಿವಾಹವಾದರು. ಕಳೆದ ಎರಡು ದಶಕಗಳಿಂದ ಆಚಾರ್ಯ ಅವರು ಪತಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಸಿಂಗಾಪುರ ಹಾಗೂ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ರೋಹಿಣಿ ಆಚಾರ್ಯ, 2022ರಲ್ಲಿ ತಮ್ಮ ತಂದೆಗೆ ಮೂತ್ರಪಿಂಡ ದಾನ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದರು. ರೋಹಿಣಿ ಅವರ ನಿಸ್ವಾರ್ಥ ಸೇವೆಯನ್ನು ಪಕ್ಷಭೇದವಿಲ್ಲದೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪ್ರಶಂಸಿಸಿದ್ದರು.