‘ಅಪಾರದರ್ಶಕ’ ಚುನಾವಣಾ ಬಾಂಡ್ಗಳು ಲಂಚವನ್ನು ಬ್ಯಾಂಕ್ ಮೂಲಕ ನೀಡಬಹುದು ಎಂಬುದನ್ನು ಖಚಿತಪಡಿಸಿವೆ ಎಂದಿರುವ ಕಾಂಗ್ರೆಸ್, ಚುನಾವಣಾ ಬಾಂಡ್ಗಳ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದೆ.
ಪ್ರೀಪೇಯ್ಡ್, ಪೋಸ್ಟ್ಪೇಯ್ಡ್ ರೀತಿಯಲ್ಲಿ ಮಾತ್ರವಲ್ಲದೆ, ದಾಳಿಗಳ ನಡೆದಾಗಲೂ ಚುನಾವಣಾ ಬಾಂಡ್ಗಳನ್ನು ಬಳಸಿ ಬ್ಯಾಂಕ್ ಮೂಲಕವೇ ಲಂಚ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಗರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಕಪ್ಪುಹಣವನ್ನು ಮರಳಿ ತರುತ್ತೇವೆಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ, ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದ್ದರು. ಈಗ ಅದನ್ನು ಮರೆಮಾಚಲು ಭಾರೀ ಪ್ರಯತ್ನಿಸುತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ” ಎಂದು ಹೇಳಿದರು.
“ಚುನಾವಣಾ ಬಾಂಡ್ಗಳ ಕೋಡ್ಗಳ ಮೂಲಕ ಯಾವ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆ ಎಂಬುದನ್ನು ಕಂಡುಹಿಡಿಯಲು 15 ಸೆಂಕೆಡ್ಗಳು ಸಾಕು. ಆದರೆ, ಸುಪ್ರೀಂ ಕೋರ್ಟ್ ಮಾಹಿತಿ ಕೇಳಿದಾಗ, ನಾಲ್ಕು ತಿಂಗಳು ಸಮಯಬೇಕೆಂದು ಎಸ್ಬಿಐ ಹೇಳಿತ್ತು. ಈ ಕೋಡ್ಗಳು ಎಸ್ಬಿಐನ ಲಜ್ಜೆಗೆಟ್ಟ ಮತ್ತು ಹಾಸ್ಯಾಸ್ಪದ ಹೇಳಿಕೆಯನ್ನು ಬಹಿರಂಗಪಡಿಸಿವೆ” ಎಂದು ಕಿಡಿಕಾರಿದರು.
“ಚುನಾವಣಾ ಬಾಂಡ್ ಹಗರಣದಲ್ಲಿ ಕಾಂಗ್ರೆಸ್ ನಾಲ್ಕು ಮಾದರಿಯ ಭ್ರಷ್ಟಾಚಾರವನ್ನು ಗುರುತಿಸಿದೆ. “ಚಂದಾ ದೋ, ಧಂಡಾ ಲೋ (ದೇಣಿಗೆ ನೀಡಿ – ಗುತ್ತಿಗೆ ಪಡೆಯಿರಿ) – ಪ್ರಿಪೇಯ್ಡ್ ಲಂಚ; ತೇಕಾ ಲೋ, ರಿಶ್ವತ್ ದೋ (ಗುತ್ತಿಗೆ ಪಡೆಯಿರಿ – ಲಂಚ ಕೊಡಿ) – ಪೋಸ್ಟ್ ಪೇಯ್ಡ್ ಲಂಚ; ಹಫ್ತಾ ವಸೂಲಿ – ದಾಳಿಯ ನಂತರ ಸುಲಿಗೆ/ಲಂಚ; ಫಾರ್ಜಿ ಕಂಪನಿ – ಶೆಲ್ ಕಂಪನಿಗಳಿಂದ ಲಂಚ” ಎಂದು ಅವರು ವಿವರಿಸಿದರು.
“ಕೇಂದ್ರ ಅಥವಾ ಬಿಜೆಪಿ ಅಧಿಕಾರಿದಲ್ಲಿರುವ ರಾಜ್ಯ ಸರ್ಕಾರಗಳಿಂದ 179 ಪ್ರಮುಖ ಗುತ್ತಿಗೆಗಳು ಮತ್ತು ಯೋಜನೆಗಳ ಅನುಮೋದನೆಗಳನ್ನು 38 ಕಂಪನಿಗಳು ನಡೆದಿವೆ. ಆ ಕಂಪನಿಗಳು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ದೇಣಿಗೆ ನೀಡಿರುವುದು ಕೋಡ್ಗಳ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ. ಈ ಕಂಪನಿಗಳು ಒಟ್ಟು 3.8 ಲಕ್ಷ ಕೋಟಿ ಮೌಲ್ಯದ ಗುತ್ತಿಗೆ ಮತ್ತು ಒಪ್ಪಂದಗಳನ್ನು ಪಡೆದಿದ್ದು, ಬಿಜೆಪಿಗೆ 2,004 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ಗಳನ್ನು ನೀಡಿವೆ” ಎಂದು ರಮೇಶ್ ಆರೋಪಿಸಿದ್ದಾರೆ.
ಈ ವರದಿ ಓದಿದ್ಧೀರಾ?: ಚುನಾವಣಾ ಬಾಂಡ್ | ಲಾಭ ಮೀರಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಕಂಪನಿಗಳು: ಯಾವ ಪಕ್ಷ ಎಷ್ಟು ಪಡೆದಿದೆ?
“41 ಕಾರ್ಪೊರೇಟ್ ಕಂಪನಿಗಳು ಒಟ್ಟು 56 ಬಾರಿ ಇಡಿ/ಸಿಬಿಐ/ಐಟಿ ದಾಳಿಗಳನ್ನು ಎದುರಿಸಿವೆ. ಅಲ್ಲದೆ, ಆ ಕಂಪನಿಗಳು ಬಿಜೆಪಿಗೆ 2,592 ಕೋಟಿ ರೂ. ದೇಣಿಗೆ ನೀಡಿವೆ. ಅದರಲ್ಲಿ 1,853 ಕೋಟಿ ರೂ.ಗಳನ್ನು ದಾಳಿಯ ನಂತರ ನೀಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಬಾಂಡ್ ಹಗರಣವನ್ನು ಎಸ್ಐಟಿ ತನಿಖೆಗೆ ಒಳಪಡಿಸುತ್ತದೆ. ಅಲ್ಲದೆ, ಪಿಎಂ-ಕೇರ್ಸ್ ನಿಧಿಯ ಬಗ್ಗೆಯೂ ಎಸ್ಐಟಿ ಮೂಲಕ ತನಿಖೆ ನಡೆಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.