ಕಲ್ಪತರು ನಾಡಿನ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಏಪ್ರಿಲ್ 5ರೊಳಗೆ ನಾಫೆಡ್ ಖರೀದಿ ಕೇಂದ್ರ ತೆರೆಯದಿದ್ದರೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ ಗೋವಿಂದರಾಜು ತಿಳಿಸಿದರು.
ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಕೇಂದ್ರದ ₹12,000 ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ₹1,500 ಪ್ರೋತ್ಸಾಹಧನ ಸೇರಿ ಕ್ವಿಂಟಾಲ್ಗೆ ₹13,500ರ ಬೆಲೆಯಲ್ಲಿ ಕೊಬ್ಬರಿಗೆ ರೈತರು ನೋಂದಣಿ ಮಾಡಿ, ಕೊಬ್ಬರಿ ಸುಲಿದು ಕಾಯುತ್ತಿದ್ದರೂ ಈವರೆಗೆ ಖರೀದಿ ಕೇಂದ್ರ ತೆರೆದಿಲ್ಲ. ದಿನದಿಂದ ದಿನಕ್ಕೆ ಕೊಬ್ಬರಿಯ ತೂಕ ಕಡಿಮೆಯಾಗುವುದರ ಜತೆಗೆ, ಕೌಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಕೂಡಲೇ ನಾಫೆಡ್ ಖರೀದಿ ಕೇಂದ್ರ ತೆರೆಯದಿದ್ದರೆ ರೈತರು ಬೀದಿಯಿಳಿಯುವುದು ಅನಿವಾರ್ಯ” ಎಂದರು.
“ಕೇಂದ್ರ ಸರ್ಕಾರ ನೆರೆಯ ದೇಶಗಳಿಂದ ಸುಂಕ ರಹಿತವಾಗಿ ಎಣ್ಣೆಕಾಳು ಮತ್ತು ಖಾದ್ಯ ತೈಲಗಳನ್ನು ಅಮದು ಮಾಡಿಕೊಳ್ಳುತ್ತಿರುವುದೇ ಕೊಬ್ಬರಿ ಬೆಲೆ ತೀವ್ರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಕೂಡಲೇ ಅಮದು ನಿಲ್ಲಿಸಬೇಕು. ಹಾಗೆಯೇ ಕರ್ನಾಟಕ ರಾಜ್ಯ ಕೃಷಿ ಬೆಲೆ ನಿಗದಿ ಆಯೋಗದ ವರದಿಯಂತೆ ಕ್ವಿಂಟಾಲ್ಗೆ ₹16,730 ಮತ್ತು ಶೇ.50ರಷ್ಟು ಲಾಭ ಸೇರಿ ಕ್ವಿಂಟಾಲ್ಗೆ ₹25,000 ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ” ಎಂದು ಗೋವಿಂದರಾಜು ತಿಳಿಸಿದರು.
“ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಸಂಪೂರ್ಣ ಹದಗೆಟ್ಟಿದ್ದು, ದಿನಕ್ಕೆ 7 ಗಂಟೆಗೆ ಸಮಪರ್ಕ ವಿದ್ಯುತ್ ನೀಡುವ ಭರವಸೆ ನೀಡಿದ್ದ ಸರ್ಕಾರ, ದಿನಕ್ಕೆ ಒಂದು ಗಂಟೆಯೂ ನೀಡುತ್ತಿಲ್ಲ. ಬದಲಿಗೆ ದಿನ ಬಿಟ್ಟು ದಿನ ವಿದ್ಯುತ್ ಸರಬರಾಜು ಮಾಡುತ್ತಿದೆ. ಪರೀಕ್ಷಾ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಕಡಿತ ಮಾಡಿರುವುದರಿಂದ ಮಕ್ಕಳ ಅಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ರಾಜ್ಯ ಸರ್ಕಾರ, ʼಇನ್ನುಮುಂದೆ ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕಕ್ಕೆ ಪರಿಕರಗಳನ್ನು ನೀವೇ ಕೊಳ್ಳಿʼ ಎಂದಿರುವ ಆದೇಶ ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ಬೋರ್ವೆಲ್ ಕೊರೆಯಲು ಬೋರೆವೆಲ್ ಲಾರಿ ಮಾಲೀಕರು ಏಕಾಏಕಿ ಅಡಿ ಕೊಳವೆ ಬಾವಿಗೆ ₹15ರಿಂದ ₹20ರಂತೆ ಹೆಚ್ಚಳ ಮಾಡಿರುವುದು ರೈತರನ್ನು ಸಾಕಷ್ಟು ಸಂಕಷ್ಟಕ್ಕೆ ದೂಡಿದೆ. ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ, ಬೋರ್ವೆಲ್ ಲಾರಿಗಳ ಮಾಲೀಕರು, ರೈತರ ಸಭೆ ನಡೆಸಿ, ಕೂಡಲೇ ಹೆಚ್ಚಳ ಮಾಡಿರುವ ಬೆಲೆ ಕಡಿಮೆ ಮಾಡಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯಲ್ಲಿ ತೀವ್ರ ಬರವಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ. ಈವರೆಗೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಬೆಳೆ ಪರಿಹಾರ ನೀಡಿಲ್ಲ. ಗೋಶಾಲೆ ತೆರೆದಿಲ್ಲ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲವೆಂದು ಹೇಳಿದರೂ ಪಿಡಿಒ ಮತ್ತು ತಹಶೀಲ್ದಾರ್ಗಳು ಸಮರ್ಪಕವಾಗಿ ಹಣ ಬಿಡುಗಡೆ ಮಾಡದೆ ತೊಂದರೆ ಅನುಭವಿಸುವಂತೆ ಮಾಡಿದ್ದಾರೆ. ಜಿಲ್ಲಾಡಳಿತ ಶ್ರೀಘ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ” ಎಂದರು.
“ಬೆಂಬಲ ಬೆಲೆ ಶಾಸನಾತ್ಮಕ ಕಾಯ್ದೆ ಜಾರಿ, ವಿದ್ಯುತ್ ಖಾಸಗಿ ಬಿಲ್ ಮಂಡನೆ ಸೇರಿದಂತೆ ರೈತ ವಿರೋಧಿ ನೀತಿಗಳ ವಿರುದ್ಧ ದೆಹಲಿ ಮತ್ತು ಹರಿಯಾಣ ಗಡಿಯಲ್ಲಿ ರೈತರು ಪ್ರತಿಭಟಿಸುತಿದ್ದರೆ, ಅವರು ದೆಹಲಿ ಪ್ರವೇಶಿಸದಂತೆ ಜಲಪಿರಂಗಿ, ತಡೆಗೋಡೆ, ತಂತಿ ಬೇಲಿಗಳ ಮೂಲಕ ತಡೆಯಲು ಹೊರಟಿರುವುದು ಖಂಡನೀಯ. ಸರ್ಕಾರದ ಈ ಕ್ರಮ ವಿರೋಧಿಸಿ ಮಾರ್ಚ್ 14ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರೈತರ ಮಹಾಪಂಚಾಯತ್ನಲ್ಲಿ ರೈತ, ಕಾರ್ಮಿಕ, ಬಡಜನರ ವಿರೋಧಿ ಬಿಜೆಪಿ ಸರ್ಕಾರವನ್ನು ಈ ಬಾರಿ ಸೋಲಿಸುವಂತೆ ದೇಶದ ಜನರಿಗೆ ಕರೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವ್ಯಾಪಾಕ ಪ್ರಚಾರವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ರೈತ ಸಂಘ ಕೈಗೊಳ್ಳಲಿದೆ” ಎಂದರು.
“ಬರ ಮತ್ತಿತರರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೃಷಿ ಕಾರ್ಮಿಕರ ನೆರವಿಗೆ ಬರುತಿದ್ದ ಮನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಕಳೆದ ಏಳೆಂಟು ತಿಂಗಳಿನಿಂದ ಕೂಲಿ ಹಣ ಬಿಡುಗಡೆಯಾಗಿಲ್ಲ. ಒಂದೆಡೆ ಬರದಿಂದ ತತ್ತರಿಸಿರುವ ಜನರಿಗೆ ಸರ್ಕಾರ ಈ ನಡೆ ನುಂಗಲಾರದ ತುತ್ತಾಗಿದೆ. ಕೂಡಲೇ ಬಾಕಿ ಇರುವ ಕೂಲಿ ಹಣವನ್ನು ಸಂಬಂಧಪಟ್ಟವರ ಖಾತೆಗೆ ವರ್ಗಾಯಿಸಬೇಕು” ಎಂದು ರೈತರ ಸಂಘ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಮುದ್ದಹನುಮೇಗೌಡರನ್ನು ಗೆಲ್ಲಿಸಿ: ಸಚಿವ ಪರಮೇಶ್ವರ್
ರೈತ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಸ್ ಶಂಕರಪ್ಪ, ದೊಡ್ಡಮಾಳಯ್ಯ, ವಿವಿಧ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಗೌಡ, ವೆಂಕಟೇಗೌಡ, ನರಸಿಂಹಮೂರ್ತಿ, ರಂಗಹನುಮಯ್ಯ, ಯುವಘಟಕದ ಜಿಲ್ಲಾಧ್ಯಕ್ಷ ಚಿರತೆ ಚಿಕ್ಕಣ್ಣ, ಅರೆಹಳ್ಳಿ ಮಂಜುನಾಥ್, ಜಗದೀಶ್, ಶಿವಕುಮಾರ್, ತಿಪ್ಪೇಗೌಡ, ಮಹಮದ್ ಶಬ್ಬೀರ್, ಚಿಕ್ಕಬೋರೇಗೌಡ, ಸಿ.ಜಿ.ಲೋಕೇಶ್ ಮಹಿಳಾ ಮುಖಂಡರಾದ ಭಾಗ್ಯಮ್ಮ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ ಸೇರಿದಂತೆ ಇತರರು ಇದ್ದರು.