ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದ ಈ ಕ್ಷೇತ್ರ ಈ ಬಾರಿ ಹಾಲಿ ಸಂಸದ ಆನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡದ ಕಾರಣ, ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿ ಕಣವಾಗಿದೆ.
ಕಾಂಗ್ರೆಸ್ನಿಂದ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಣಕ್ಕಿದರೆ, ಇತ್ತ ಬಿಜೆಪಿಯಿಂದ ಶಿರಸಿ ಕ್ಷೇತ್ರದ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವರ್ಧೆಯಲ್ಲಿದ್ದಾರೆ. ಇಬ್ಬರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಲೋಕಸಭೆಯಲ್ಲಿ ಸ್ವರ್ಧಿಸುವ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಎರಡು ದಶಕಗಳ ನಂತರ ಮಹಿಳಾ ಅಭ್ಯರ್ಥಿ ಕಣಕ್ಕೆ
1999ರಲ್ಲಿ ಮಾರ್ಗರೇಟ್ ಆಳ್ವ ಕಾಂಗ್ರೆಸ್ ಸಂಸದೆಯಾಗಿ ಆಯ್ಕೆಯಾಗಿದ್ದರು. ತದನಂತರ ಈ ಕ್ಷೇತ್ರದಲ್ಲಿ ಯಾವ ಪಕ್ಷದಲ್ಲೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಈ ಬಾರಿ ಅಂಜಲಿ ನಿಂಬಾಳ್ಕರ್ ಅವರು ಸ್ವರ್ಧಿಸುವ ಮೂಲಕ ದಶಕಗಳ ನಂತರ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಸಲಾಗಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ, ಕಿತ್ತೂರು, ಹಳಿಯಾಳ, ಕಾರವಾರ ಕ್ಷೇತ್ರದಲ್ಲಿ ಕ್ಷತ್ರಿಯ ಮರಾಠಾ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದ ಮತಗಳನ್ನು ಅಂಜಲಿ ನಿಂಬಾಳ್ಕರ್ ಸೆಳೆಯಬಲ್ಲವರು. ಜೊತೆಗೆ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಒಟ್ಟುಗೂಡಿಸಬಲ್ಲವರು ಎಂಬ ಕಾಂಗ್ರೆಸ್ ಇವರನ್ನು ಕಣಕ್ಕಿಸಿದೆ.
ಬೆಳಗಾವಿ ಜಿಲ್ಲೆಯ ಭಾಗವನ್ನೂ ಈ ಕ್ಷೇತ್ರ ಒಳಗೊಂಡ ಕಾರಣ, ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ, ಈ ಕ್ಷೇತ್ರಕ್ಕೆ ಪರಿಚಿತರು. ಲೋಕಸಭೆಗೆ ಹೊಸಮುಖ ಮತ್ತು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲುವ ಸಾಧ್ಯತೆ ಎಂದು ಡಾ. ಅಂಜಲಿ ಅವರನ್ನು ಕಣಕ್ಕಿಳಿಸಿದೆ.
ಮಹಿಳಾ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕಾರಣ, ಗ್ಯಾರಂಟಿ ಯೋಜನೆಯಾದ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳಾ ಸಬಲೀಕರಣದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣದಿಂದ ಮಹಿಳಾ ಮತದಾರರರು ಕೈ ಹಿಡಿಯುತ್ತಾರೆ ಎಂಬ ಲೆಕ್ಕಚಾರವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮತಗಳು ಪಡೆದು ಐದು ಕ್ಷೇತ್ರಗಳಲ್ಲಿ ಗೆದ್ದಿರುವುದು ಕೂಡಾ ಪ್ಲಸ್ ಪಾಯಿಂಟ್.
ವಿಶ್ವೇಶ್ವರ ಹೆಗಡೆ ಕಾಗೇರಿಗೆ ಒಲಿದ ಟಿಕೆಟ್
ಕಳೆದ ನಾಲ್ಕು ಚುನಾವಣೆಗಳಲ್ಲಿ ಅನಂತಕುಮಾರ್ ಹೆಗಡೆ ಅವರೇ ಬಿಜೆಪಿ ಅಭ್ಯರ್ಥಿ. ಅವರೆ ಗೆದ್ದು ಬರುತ್ತಿದ್ದರು. ಈ ಬಾರಿ ಅನಂತಕುಮಾರ್ ಹೆಗಡೆ ವಿರುದ್ದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಕಾರಣ ಶಿರಸಿ ಕ್ಷೇತ್ರದ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 1994 ರಿಂದ 2004 ರ ವರೆಗೆ ಮೂರು ಸಲ ಅಂಕೋಲ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ನಂತರದಿಂದ ಶಿರಸಿ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯ್ಕ ಅವರ ವಿರುದ್ಧ ಸೋತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತಮ ಅಭ್ಯರ್ಥಿ. ಸತತವಾಗಿ ಗೆದ್ದು 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಇವರು ಸುಲಭವಾಗಿ ಗೆದ್ದು ಬರುತ್ತಾರೆ ಎಂಬುವ ಲೆಕ್ಕಚಾರ ಬಿಜೆಪಿಯದ್ದು.
ಆದರೆ ಬಿಜೆಪಿ ಟಿಕೆಟ್ ಘೋಷಣೆಯಾದಾಗಿನಿಂದ ಕ್ಷೇತ್ರದಲ್ಲಿ ಹಾಲಿ ಸಂಸದ ಆನಂತಕುಮಾರ್ ಹೆಗಡೆ ಯಾರ ಕೈಗೂ ಸಿಗದೆ ಮೌನವಾಗಿಯೇ ಬಂಡಾಯ ಎದ್ದಂತೆ ಕಾಣುತ್ತಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಒಟ್ಟಾರೆಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿ ಕಣವಾಗಲಿದ್ದು ಬಿಜೆಪಿಯ ಭದ್ರಕೋಟೆ ಉಳಿಸಿಕೊಳ್ಳುತ್ತಾ? ಮತದಾರರು ಕಾಂಗ್ರೆಸ್ ಕೈ ಹಿಡಿಯುತ್ತಾರಾ ಕಾದು ನೋಡಬೇಕಿದೆ.
