ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ಹಾಗೂ ಶಾಸಕರಾಗಿರುವ ರೇವಣ್ಣ ಹಲವಾರು ಅಮಾಯಕ ಹೆಣ್ಣು ಮಕ್ಕಳ ವಿರುದ್ಧ ನಡೆಸಿರುವ ಲೈಂಗಿಕ ದೌರ್ಜನ್ಯವು ನಾಡಿನ ಮಾನವನ್ನು ಹರಾಜು ಹಾಕಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯದ ಪ್ರಧಾನ ಕಾರ್ಯದರ್ಶಿ ಕೆ ಬಿ ವಾಸು ಆಕೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಪತ್ರಿಕಾ ಹೇಳಿಕೆ ಉದ್ದೇಶಿಸಿ ಮಾತನಾಡಿದ ಅವರು, “ಬಸವಣ್ಣ, ಕುವೆಂಪು, ಶಿಶುನಾಳ ಶರೀಫ, ಅಕ್ಕಮಹಾದೇವಿ, ಯೋಗಿ ವೇಮಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರಂತಹ ಸಂತ ಶ್ರೇಷ್ಠರು, ರಾಜರ್ಷಿಗಳು, ತತ್ವ ಜ್ಞಾನಿಗಳು ಮತ್ತು ಆದರ್ಶವಾದಿ ಮಹನೀಯರು ಹುಟ್ಟಿದ ಭವ್ಯ ಕರ್ನಾಟಕದ ಶ್ರೇಷ್ಠ ಸಂಸ್ಕೃತಿಗೆ ಇಂದು ಮಸಿ ಬಳಿಯುವಂತಹ ಅಪಮಾನಕರ ಘಟನೆಗಳು ಬೆಳಕಿಗೆ ಬಂದಿವೆ. ಸಮಾಜಕ್ಕೆ ಸನ್ಮಾರ್ಗ ತೋರಬೇಕಾದ ಸ್ವಾಮೀಜಿಗಳು ಮತ್ತು ಸಮಾಜವನ್ನು ಮುನ್ನಡೆಸಬೇಕಾದ ರಾಜಕಾರಣಿಗಳೇ ಇಂದು ಅನೈತಿಕ ದಾರಿಯನ್ನು ತುಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ” ಎಂದರು.
“ಎರಡು ವರ್ಷಗಳ ಹಿಂದೆ, ಪ್ರಗತಿಪರ ಸ್ವಾಮೀಜಿ ಎಂಬ ಹೆಸರು ಗಳಿಸಿದ್ದ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಶರಣರು ತಮ್ಮ ಮಠದ ವಿದ್ಯಾರ್ಥಿ ನಿಲಯದ ಮುಗ್ಧ ಹೆಣ್ಣುಮಕ್ಕಳನ್ನು ತಮ್ಮ ಕಾಮಕೇಳಿಗೆ ದುರ್ಬಳಕೆ ಮಾಡಿಕೊಂಡಿದ್ದು, ಕೆಲವರನ್ನು ನಾಪತ್ತೆ ಮಾಡಿದ್ದ ಹಗರಣವು ನಾಡಿನ ಸಭ್ಯಸ್ಥರೆಲ್ಲರೂ ತಲೆತಗ್ಗಿಸುವಂತೆ ಮಾಡಿತ್ತು. ಇದೀಗ ನಾಡಿನ ಅತ್ಯಂತ ಹಿರಿಯ ರಾಜಕಾರಣಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮುದ್ದಿನ ಕುಡಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ಹಾಗೂ ಶಾಸಕ ರೇವಣ್ಣ ಹಲವಾರು ಅಮಾಯಕ ಹೆಣ್ಣು ಮಕ್ಕಳ ವಿರುದ್ಧ ನಡೆಸಿರುವ ಲೈಂಗಿಕ ದೌರ್ಜನ್ಯವು ನಾಡಿನ ಮಾನವನ್ನು ಹರಾಜು ಹಾಕಿದೆ” ಎಂದರು.
“ದುರಂತವೆಂದರೆ ಮಹಿಳೆಯರ ಮಾನ-ಪ್ರಾಣ ರಕ್ಷಣೆಯ ಬಗ್ಗೆ ಗಂಟಲು ಹರಿಯುವಂತೆ ಮಾತಾಡುವ ಪ್ರಧಾನಿ ಮೋದಿಯವರು ತಮ್ಮ ಪಾಲುದಾರ ಪಕ್ಷದ ಅಭ್ಯರ್ಥಿಯ ಲೈಂಗಿಕ ಪುರಾಣವು
ಬೀದಿಬೀದಿಗಳಲ್ಲಿ ಹರಾಜಾಗುತ್ತಿದ್ದರೂ ಅದರ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ಅದಕ್ಕಿಂತ ದೊಡ್ಡ ದುರಂತವೇನೆಂದರೆ, ದೇವೇಗೌಡರ ಕುಟುಂಬದ ಕುಡಿಯ ಅನೈತಿಕ ಕತೆಯ ಬಗ್ಗೆ ತಮಗೆ ಮೊದಲೇ ಗೊತ್ತಿದ್ದರೂ, ಕೇಂದ್ರದ ಗೃಹಮಂತ್ರಿ ಅಮಿತ್ ಶಾ, ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ನೀಡಿರುವುದು ಆತನ ಹಗರಣವು ಬಯಲಾಗುವ ಸೂಚನೆ ಸಿಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಕೇಂದ್ರದ ಬಿಜೆಪಿ ಸರ್ಕಾರದ ಸಹಕಾರ ಪಡೆದು ಜೆಡಿಎಸ್ ನಾಯಕರು ಆತನನ್ನು ವಿದೇಶಕ್ಕೆ ಕಳಿಸಿ ತಕ್ಷಣಕ್ಕೆ ಕಾನೂನಿನ ಕೈಗಳಿಂದ ತಪ್ಪಿಸಿಕೊಂಡು ಹೋಗುವಂತೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ಈ ಸಂದರ್ಭದಲ್ಲಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು “ಈ ಹಗರಣವುಳ್ಳ ಪೆನ್ಡ್ರೈವ್ಗಳನ್ನು ಬಹಿರಂಗ ಮಾಡಿರುವುದು ಯಾರು? ಹಂಚಿರುವುದು ಯಾರು?” ಎಂದು ಕೇಳುವುದರ ಮೂಲಕ, ಪ್ರಜ್ವಲ್ ರೇವಣ್ಣ ಲಂಪಟತನ ಮಾಡಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ತನಿಖೆಯ ದಿಕ್ಕನ್ನು ಬದಲಾಯಿಸಲು ಯತ್ನಿಸಿದ್ದಾರೆ” ಎಂದು ದೂರಿದರು.
“ಪಕ್ಷದ ಇಂತಹ ದೊಡ್ಡ ಲಂಪಟ ಸದಸ್ಯನನ್ನು ಅಮಾನತು ಮಾಡುವುದು ದೊಡ್ಡ ಶಿಕ್ಷೆಯೇ?. ಆತನನ್ನು ಪಕ್ಷದಿಂದ ಉಚ್ಚಾಟಿಸಿ, ಕಾನೂನಿನ ಪ್ರಕಾರ ಆತನನ್ನು ವಿದೇಶದಿಂದ ಕರೆಕಳಿಸಿ ತನಿಖೆಗೆ ಒಪ್ಪಿಸಿದ್ದರೆ ಗೌಡರ ಕುಟುಂಬದ ನ್ಯಾಯ ಪ್ರಜ್ಞೆಯನ್ನು ಮೆಚ್ಚಬಹುದಿತ್ತು. ಆದರೆ ಆತನನ್ನು ಅಮಾನತು ಮಾಡುವ ಮೂಲಕ ಇವರುಗಳು ಕಣ್ಣೊರೆಸುವ ನಾಟಕ ಆಡಿದ್ದಾರೆ” ಎಂದರು.
“ಸಿದ್ಧರಾಮಯ್ಯ ಸರ್ಕಾರವು ಈ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದ್ದು ಸರಿ. ಆದರೆ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುವಂತೆಯೂ, ಯಾವುದೇ ಕಾರಣಕ್ಕೂ ಸಾಕ್ಷ್ಯಗಳು ನಾಶವಾಗದಂತೆಯೂ ನೋಡಿಕೊಳ್ಳಬೇಕಿದೆ. ಕಾನೂನಿನ ಮುಂದೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ತಲೆ ತಗ್ಗಿಸಿ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕೆಂಬುದನ್ನು ನಿರೂಪಿಸಬೇಕಾದದ್ದು ಸರ್ಕಾರದ ಜವಾಬ್ಧಾರಿ. ಆ ಮೂಲಕ ಎಲ್ಲ ಲಫಂಗರಿಗೆ ಒಂದು ಎಚ್ಚರಿಕೆಯನ್ನು ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ | ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರೆ ಸೈಬರ್ ಕ್ರೈಂಗೆ ದೂರು: ಬಾಳುಗೋಪಾಲ್ ಕಡಕ್ ಎಚ್ಚರಿಕೆ
“ರಾಜ್ಯವು ಎಂದೂ ಕಂಡುಕೇಳರಿಯದ ಈ ಲೈಂಗಿಕ ದೌರ್ಜನ್ಯವನ್ನು ನಡೆಸಿರುವ ಆರೋಪಿ ಪ್ರಜ್ವಲ್ ರೇವಣ್ಣನನ್ನು ಕೊಡಲೇ ಬಂಧಿಸಿ ಜೈಲಿಗೆ ಕಳಿಸಬೇಕು. ಅಲ್ಲದೆ ಸಂತ್ರಸ್ತ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ನೀಡಬೇಕು” ಎಂದು ಎಂದು ಆಗ್ರಹಿಸಿದರು.
