ಪ್ರಜ್ವಲ್ ಲೈಂಗಿಕ ಹಗರಣ ಸಂಬಂಧ ಪ್ರಕಟಿಸುವ ಸುದ್ದಿಗಳು ಮತ್ತು ವರದಿಗಳಲ್ಲಿ ಮಾಧ್ಯಮಗಳು ತಮ್ಮ ಹೆಸರನ್ನು ಬಳಸಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಡೆಯಾಜ್ಞೆ ತಂದಿದ್ದಾರೆ. ಅವರ ಹೆಸರನ್ನು ಬಳಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ತಡೆಯಾಜ್ಞೆ ಹೊರಡಿಸಿದೆ.
ತಡೆಯಾಜ್ಞೆಯಲ್ಲಿ 82 ಮಾಧ್ಯಮಗಳ ಸಂಸ್ಥೆಗಳನ್ನು ಉಲ್ಲೇಖಿಸಲಾಗಿದೆ. ಈ ಮಾಧ್ಯಮಗಳು, ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪ್ರಕರಣ ಮತ್ತು ರೇವಣ್ಣ ಅವರನ್ನು ಬಂಧಿಸಲಾಗಿರುವ ಸಂತ್ರಸ್ತೆಯ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ಹೆಸರನ್ನು ಬಳಸಬಾರದು ಎಂದು ಜೆಡಿಎಸ್ನ ಈ ಇಬ್ಬರೂ ನಾಯಕರು ತಡೆಯಾಜ್ಷೆ ತಂದಿದ್ದಾರೆ. ಈ ಪ್ರಕರಣಗಳಲ್ಲಿ ತಮ್ಮ ಹೆಸರು ಬಳಸುವುದು ತಮ್ಮ ಸಾರ್ವಜನಿಕ ಇಮೇಜ್ ಮತ್ತು ಖ್ಯಾತಿಯನ್ನು ಹಾಳುಮಾಡುತ್ತದೆ ಎಂದು ಅವರು ವಾದಿಸಿದ್ದಾರೆ.
ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಾದ ಗೂಗಲ್, ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅವರಿಬ್ಬರ ವಿರುದ್ಧ ಯಾವುದೇ ಸುದ್ದಿಯನ್ನು ಪ್ರಕಟಿಸಿವುದು ಅಥವಾ ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆಯಲ್ಲಿ ಹೇಳಲಾಗಿದೆ.
ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ತನ್ನ ಕೃತ್ಯವನ್ನು ತಾನೇ ರೆಕಾರ್ಡ್ ಮಾಡಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಕೃತ್ಯ ವಿಡಿಯೋಗಳ ಹೊರಬಂದಿದ್ದು, ಓರ್ವ ಸಂತ್ರಸ್ತೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಈ ಬೆನ್ನಲ್ಲೇ, ಈ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳಲ್ಲಿ ತಮ್ಮ ಹೆಸರನ್ನು ಬಳಸದಂತೆ ದೇವೇಗೌಡ ಮತ್ತು ಕುಮಾರಸ್ವಾಮಿ ತಡೆಯಾಜ್ಞೆ ತಂದಿದ್ದಾರೆ.
ಅರ್ಜಿಯಲ್ಲಿ, ತಂದೆ-ಮಗ (ದೇವೇಗೌಡ ಮತ್ತು ಕುಮಾರಸ್ವಾಮಿ) ಇಬ್ಬರೂ ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದ್ದು, ಗೌರವಾನ್ವಿತ ಕುಟುಂಬದಿಂದ ಬಂದವರಾಗಿದ್ದೇವೆ ಎಂದು ವಾದಿಸಿದ್ದಾರೆ. ತಾವು ಅತ್ಯುತ್ತಮ ರಾಜಕೀಯ ಇತಿಹಾಸ ಹೊಂದಿದ್ದು, 70 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇವೆ. ನಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಹೇಳಿಕೊಂಡಿದ್ದಾರೆ.
ರೇವಣ್ಣ ಮತ್ತು ಅವರ ಕುಟುಂಬದಿಂದ ದೇವೇಗೌಡ ಮತ್ತು ಕುಮಾರಸ್ವಾಮಿ ದೂರ ಉಳಿದಿದ್ದಾರೆ ಎಂದು ವಾದಿಸಲಾಗಿದೆ. “ತಂದೆ-ಮಗ ಇಬ್ಬರೂ ಸಾರ್ವಜನಿಕ ಹೇಳಿಕೆಗಳನ್ನು ನೀಡುವ ಮೂಲಕ ಪ್ರಕರಣದಿಂದ ದೂರ ಸರಿದಿದ್ದರೂ, ಮಾಧ್ಯಮಗಳು ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ವಿಷಯದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸುತ್ತಿವೆ. ಇದು ಅವರ ಗೌರವವನ್ನು ಕಡಿಮೆ ಮಾಡುತ್ತಿದೆ” ಎಂದು ಅವರ ವಕೀಲರು ವಾದಿಸಿದ್ದಾರೆ.