ಹೆಸರಘಟ್ಟ ಕೆರೆ ನೀರನ್ನು ಬೆಂಗಳೂರಿಗೆ ಪೂರೈಸುವ ನಿರ್ಧಾರವನ್ನು ಜಲಮಂಡಳಿ ಹೊಂದಿತ್ತು. ಇದೀಗ ಈ ನಿರ್ಧಾರವನ್ನು ಮರುಪರಿಶೀಲಿಸಲಾಗುವುದು. ಕೆರೆಯ ಸಮಗ್ರ ಅಭಿವೃದ್ದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. “ಹೆಸರಘಟ್ಟ ಕೆರೆಯ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರ ವಿರೋಧದ ನಂತರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಬೆಂಗಳೂರಿನ ಅಗತ್ಯತೆಗಳನ್ನು ಪೂರೈಸಲು ಜಲಾನಯನ ನೀರನ್ನು ಬಳಸುವ ನಿರ್ಧಾರವನ್ನು ಮರುಪರಿಶೀಲಿಸಲಿದೆ” ಎಂದರು.
ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಬಿಡಬ್ಲ್ಯುಎಸ್ಎಸ್ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಅವರನ್ನು ಭೇಟಿ ಮಾಡಿ, “ಕೆರೆಯ ಸುತ್ತಲಿನ ಅನೇಕ ಗ್ರಾಮಗಳು ನೀರಿಗಾಗಿ ಈ ಕೆರೆಯನ್ನೇ ಅವಲಂಭಿಸಿವೆ. ಮಂಡಳಿಯು ಬೆಂಗಳೂರಿಗೆ ಈ ಕೆರೆಯ ನೀರನ್ನು ಸರಬರಾಜು ಮಾಡುವ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು. ಜತೆಗೆ, ಕೆರೆಯ ಹೂಳು ತೆಗೆಯಲು ಮತ್ತು ಅದರಲ್ಲಿರುವ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ನೆರವು ನೀಡಬೇಕು” ಎಂದು ಹೇಳಿದ್ದರು.
“ಹೆಸರುಘಟ್ಟ ಕೆರೆ ನೀರಿನಿಂದ ಕೆರೆಯ ಸುತ್ತಮುತ್ತಲಿನ ಗ್ರಾಮಗಳಿಗೆ ಬಹಳಷ್ಟು ಅನುಕೂಲವಾಗಿದೆ. ಹಲವಾರು ಪ್ರಾಣಿ ಮತ್ತು ಪಕ್ಷಿಗಳು ಈ ಕೆರೆಯ ನೀರನ್ನೇ ಅವಲಂಭಿಸಿವೆ. ಈ ಹಿನ್ನಲೆ, ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುವುದು ಬೇಡ. ಕೆರೆಗೆ ನೀರು ಬರುವಂತಹ ಪ್ರದೇಶಗಳಲ್ಲಿ ಮಾಲಿನ್ಯವಿದ್ದು, ಅದನ್ನು ಕಡಿಮೆ ಮಾಡಬೇಕು. ಕೆರೆಯಲ್ಲಿ ಹೂಳು ತುಂಬಿದ್ದು ನೀರಿನ ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಇದನ್ನ ಅಭಿವೃದ್ದಿ ಪಡಿಸಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಅರಳಾಪುರ ಮಂಜೇಗೌಡ ಮನವಿ ಮಾಡಿದರು.
ರೈತರ ಅಭಿಪ್ರಾಯಗಳನ್ನು ಆಲಿಸಿದ ಮನೋಹರ್ ಬಿಡಬ್ಲ್ಯುಎಸ್ಎಸ್ಬಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಲಿದೆ ಎಂದು ಹೇಳಿದರು.
“ಬೆಂಗಳೂರಿಗೆ ನೀರು ಸರಬರಾಜು ಮಾಡಲು ಹೆಸರಘಟ್ಟ ಕೆರೆಯನ್ನು 1894ರಲ್ಲಿ ನಿರ್ಮಿಸಲಾಯಿತು. ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ನಿಂದ ನೀರು ಪಂಪ್ ಮಾಡಲಾಗುತ್ತಿತ್ತು. ಈಗ, ನಗರದ ದಾಸರಹಳ್ಳಿ ಪ್ರದೇಶದಲ್ಲಿ ನೀರಿನ ಅಭಾವವಿದೆ. ಹೀಗಾಗಿ, ಹೆಸರುಘಟ್ಟ ಕೆರೆಯಿಂದ ಕೇವಲ ಸಣ್ಣ ಪ್ರಮಾಣದ ನೀರನ್ನು ಅಲ್ಲಿಗೆ ಸರಬರಾಜು ಮಾಡುವ ಉದ್ದೇಶವನ್ನು ಜಲಮಂಡಳಿ ಹೊಂದಿತ್ತು. ಈಗ ಅದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯ ಮೂಲಕ ಲಭ್ಯವಾಗುವ ನೀರನ್ನ ಸರಬರಾಜು ಮಾಡಲು ಸಜ್ಜುಗೊಳಿಸುವುದು ನಮ್ಮ ಗುರಿಯಾಗಿತ್ತು. ಈಗ ರೈತ ಸಂಘದ ಪದಾಧಿಕಾರಿಗಳು ನೀರು ಸರಬರಾಜು ಮಾಡುವುದು ಬೇಡ ಎನ್ನುವ ಮನವಿಯನ್ನು ಮಾಡಿದ್ದಾರೆ. ಈ ಬಗ್ಗೆ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ವಿ ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು.
“ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಿಕ್ಕಟ್ಟು ಶಮನವಾಗಬಹುದು. ಹೆಸರಘಟ್ಟ ಕೆರೆಯಿಂದ ನೀರನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಮಂಡಳಿಯು ನಿರ್ಧಾರಕ್ಕೆ ಬರುವ ಮೊದಲು ಸರ್ಕಾರ ಮತ್ತು ರೈತರೊಂದಿಗೆ ಹೆಚ್ಚಿನ ಮಾತುಕತೆ ನಡೆಸಲಿದೆ” ಎಂದು ಮನೋಹರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವರ್ಷದಿಂದ ವರ್ಷಕ್ಕೆ 23.7% ಬಾಡಿಗೆ ಏರಿಕೆ : ದೇಶದಲ್ಲಿ ಮೂರನೇ ಸ್ಥಾನ
ಹೆಸರುಘಟ್ಟ ಕೆರೆ ಅಭಿವೃದ್ದಿಗೆ ಸರಕಾರಕ್ಕೆ ಪ್ರಸ್ತಾವನೆ
“ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಲಮಂಡಳಿ ಅಧ್ಯಕ್ಷರು, ಕೆರೆಯನ್ನು ಸಮಗ್ರ ಅಭಿವೃದ್ದಿ ಮಾಡುವುದರಿಂದ ಹೆಸರುಘಟ್ಟದ ಸುತ್ತಮುತ್ತಲಿನ ಗ್ರಾಮಗಳಿಗೂ ಹಾಗೂ ನಗರದ ಭವಿಷ್ಯದ ಬಳಕೆಗೂ ಅನುಕೂಲವಾಗಲಿದೆ. ಇದನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮಂಡಳಿಯ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ಅಕ್ಕ ಪಕ್ಕದ ಗ್ರಾಮಸ್ಥರಿಗೆ ನೀರಿನ ಅವಶ್ಯಕತೆ ಇರುವ ಕಾರಣ. ನಗರದಲ್ಲಿ ಮಳೆ ಬೀಳುತ್ತಿರುವುದು, ಸದ್ಯದಲ್ಲೇ ಕಾವೇರಿ 5 ನೆ ಹಂತದ ಕಾಮಗಾರಿ ಮುಕ್ತಾಯಗೊಂಡು ಹೆಚ್ಚಿನ ನೀರಿನ ಲಭ್ಯವಾಗುವುದು. ಲಭ್ಯವಿರುವ ನೀರಿನ ಪ್ರಮಾಣ ಗಣನೆಗೆ ತಗೆದುಕೊಂಡು, ನೀರನ್ನು ಉಪಯೋಗ ಮಾಡುವ ಮುನ್ನ ರೈತರೊಂದಿಗೆ ಮತ್ತು ಸರ್ಕಾರದೊಂದಿಗೆ ಸಮಾಲೋಚನೆ ಮಾಡಿ ಕ್ರಮ ಕೈಗೊಳ್ಳಲಾಗುವುದು” ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ನಂಜುಂಡಪ್ಪ ಕಡತನಮಲೆ, ಸಂಘಟನಾ ಕಾರ್ಯದರ್ಶಿ ಆರ್ ಲೋಕೇಶ್ ಶರ್ಮಾ, ಜಲಮಂಡಳಿಯ ಪ್ರಧಾನ ಮುಖ್ಯ ಇಂಜಿನೀಯರ್ ಸುರೇಶ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.