ಬುದ್ಧ ಪೂರ್ಣಿಮೆಯಲ್ಲಿ ಜ್ಞಾನವನ್ನು ಹುಡುಕುತ್ತಾ…

Date:

Advertisements
ಬುದ್ದನ ಜ್ಞಾನ, ಕೇವಲ ಓದು, ಅಧ್ಯಯನ, ಚಿಂತನೆಗಳಿಂದ ಮಾತ್ರ ರೂಪಗೊಳ್ಳದೆ, ಅನುಭವಗಳ ಕುಲುಮೆಯಲ್ಲಿ ಮೂಡಿದ ಅರಿವು. ಅದೇ ಕಾರಣಕ್ಕಾಗಿ ಹಲವಾರು ಶತಮಾನಗಳ ನಂತರವೂ ಬುದ್ಧ ಮುಖ್ಯವಾಗುತ್ತಿರುವುದು. ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ, ಬುದ್ಧನ ಧ್ಯಾನದಲ್ಲಿ, ಬುದ್ಧನ ಸಂದೇಶಗಳನ್ನು ಮನಃಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ ನಮಗೆ ನಾವು ಹೆಚ್ಚು ಸ್ಪಷ್ಟವಾಗಬಹುದು.

ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನೆಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ. ಆದರೆ, ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಯಾರಿರಬಹುದು?

ನನ್ನ ದೃಷ್ಟಿಯಲ್ಲಿ ಅದು ಸಿದ್ದಾರ್ಥನೆಂಬ ಗೌತಮ ಬುದ್ಧ.

ಜನಸಂಖ್ಯೆಯೇ ಅತಿ ವಿರಳವಾಗಿದ್ದ, ಸಂಪರ್ಕ ಸಂವಹನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ, ಆಧುನಿಕ ತಂತ್ರಜ್ಞಾನದ ಯಾವ ಲಕ್ಷಣಗಳೂ ಗೋಚರಿಸದ, ಬದುಕಿನ ಸಂಕೀರ್ಣತೆಯಿಂದ ದೂರವಿದ್ದ, ಆ ಕಾಲದಲ್ಲಿಯೇ ಮನುಷ್ಯನ ಮನಸ್ಸುಗಳ ಜಾಡು ಹಿಡಿದು ಅಲ್ಲಿನ ತವಕ ತಲ್ಲಣಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದ ಗೌತಮ ಅಸಾಮಾನ್ಯನೇ ಹೌದು.

Advertisements

ನಿಜಕ್ಕೂ ಈಗ ನಾವೆಲ್ಲರೂ ಚಿತ್ರಪಟ, ಶಿಲ್ಪ ಕಲೆಗಳಲ್ಲಿ ನೋಡುತ್ತಿರುವ ಆ ಸೌಮ್ಯ ಮೂರ್ತಿ ಬುದ್ಧ ಅಷ್ಟೊಂದು ಸೌಮ್ಯನೇ? ಅಷ್ಟೊಂದು ಶಾಂತ ಸ್ವಭಾವದವನೆ? ಅಥವಾ ಎಲ್ಲರೂ ಭಾವಿಸಿರುವಂತೆ ಆತನ ಜ್ಞಾನೋದಯದ ನಂತರ ಮೂಡಿದ ಭಾವ ಈ ಪ್ರಶಾಂತತೆಯೇ? ಅಥವಾ ಯಾರೋ ಕಲಾವಿದರ ಕಲ್ಪನೆಯಲ್ಲಿ ಮೂಡಿದ ಚಿತ್ರವೇ?

ಏಕೆಂದರೆ, ಬದುಕಿನ ಅನುಭವದಲ್ಲಿ ಬುದ್ಧನೆಂಬ ವ್ಯಕ್ತಿ ಹೇಳಿರುವ ಸಂದೇಶಗಳು ನಿಜಕ್ಕೂ ಅತ್ಯಂತ ಪರಿಣಾಮಕಾರಿ ಅದ್ಭುತ, ಆಶ್ಚರ್ಯ ಮತ್ತು ವಾಸ್ತವಕ್ಕೆ ತೀರಾ ಹತ್ತಿರವಿದೆ.

ಒಬ್ಬ ವ್ಯಕ್ತಿಯ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುವ, ತೀಕ್ಷ್ಣ ಏರಿಳಿತಗಳಿಗೆ ಕಾರಣವಾಗುವ, ಸುಲಭವಾಗಿ ಪರಿಹಾರ ಕಾಣದೆ ಕಾಡುವ ದ್ವಂದ್ವಗಳು, ಅಸಹಾಯಕ ಮನಸ್ಥಿತಿಯ, ಒಳ್ಳೆಯ, ಕೆಟ್ಟ, ವಿಕೃತ ಭಾವನೆಗಳನ್ನು ಅನುಭವಿಸಿದರೆ ಮಾತ್ರ ಸಿಗಬಹುದಾದ ಜ್ಞಾನ ಪಡೆದಿದ್ದವನು ಗೌತಮ.

ಆತನ ಚಿಂತನೆಗಳು ಮನುಷ್ಯನ ಮೆದುಳು ಮನಸ್ಸುಗಳನ್ನು ಅತ್ಯಂತ ಹತ್ತಿರದಿಂದ ಗ್ರಹಿಸಿರುವಂತೆ ಭಾಸವಾಗುತ್ತದೆ. ಆ ಕಾರಣದಿಂದಾಗಿಯೇ ಬುದ್ಧ ಭಾರತೀಯ ಮನಸ್ಸುಗಳ ಅತ್ಯಂತ ಮಹತ್ವದ ಮನಶಾಸ್ತ್ರಜ್ಞ ಎಂದು ಹೇಳಿರುವುದು.

ಬುದ್ದನ ಜ್ಞಾನ, ಕೇವಲ ಓದು, ಅಧ್ಯಯನ, ಚಿಂತನೆಗಳಿಂದ ಮಾತ್ರ ರೂಪಗೊಳ್ಳದೆ, ಅನುಭವಗಳ ಕುಲುಮೆಯಲ್ಲಿ ಮೂಡಿದ ಅರಿವು. ಅದೇ ಕಾರಣಕ್ಕಾಗಿ ಹಲವಾರು ಶತಮಾನಗಳ ನಂತರವೂ ಬುದ್ಧ ಮುಖ್ಯವಾಗುತ್ತಿರುವುದು.

ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ, ಬುದ್ಧನ ಧ್ಯಾನದಲ್ಲಿ, ಬುದ್ಧನ ಸಂದೇಶಗಳನ್ನು ಮನಃಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ ನಮಗೆ ನಾವು ಹೆಚ್ಚು ಸ್ಪಷ್ಟವಾಗಬಹುದು. ಅದಕ್ಕಿಂತ ಮುಖ್ಯವಾಗಿ ನಮ್ಮ ಮಾನಸಿಕ ನೋವುಗಳನ್ನು ಕಡಿಮೆ ಮಾಡಿಕೊಂಡು ಸಂತೋಷ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಬಹುದು ಎಂಬ ಆಶಯದಿಂದ ಬುದ್ಧತ್ವದೆಡೆಗೆ ಹೆಜ್ಜೆ ಹಾಕೋಣ. ಬುದ್ಧ ಪೂರ್ಣಿಮೆಯ ಬೆಳದಿಂಗಳಲ್ಲಿ ಬುದ್ಧನನ್ನೇ ಹುಡುಕುತ್ತಾ, ಈ ನೆಲದ ನಿಜವಾದ ಮಣ್ಣಿನ ಮಗ ಬುದ್ಧ, ಈ ಮಣ್ಣಿನ ವಾಸ್ತವದ ಸಾಂಸ್ಕೃತಿಕ ವಕ್ತಾರ ಬುದ್ಧನ ನೆನೆಯೋಣ.

ಬುದ್ಧನಂತ ಕೆಲವು ಚಿಂತಕರು ಈ ಜಗತ್ತಿನಲ್ಲಿ ಆಗಿಹೋಗಿದ್ದಾರೆ. ಆದರೆ ಬುದ್ಧನ ಹೆಚ್ಚುಗಾರಿಕೆ ಆತನ ಪ್ರಜ್ಞೆ ಟಿಸಿಲೊಡೆಯುವುದು ಸ್ವತಃ ತನ್ನ ದೇಹ ಮತ್ತು ಮನಸ್ಸುಗಳ ದಂಡನೆಯಿಂದ. ಅಂದರೆ ಅದು ಎರವಲು ಜ್ಞಾನವಲ್ಲ ಆಂತರ್ಯದ ಸೃಷ್ಟಿ. ಬಹುಶಃ ಆ ಕಾರಣದಿಂದಲೇ ಬುದ್ದ ಈಗಲೂ ಸಾಕಷ್ಟು ಜನರ ಬೆಳಗಿನ ಶುಭೋದಯದ ಮೊದಲ ಬೆಳಕು.

ಇದನ್ನು ಓದಿದ್ದೀರಾ?: ಹೊಸಕಾಲದ ವಿಕೃತಿ | ಹೆಣ್ಣನ್ನು ಅವಮಾನಿಸುವ ವೇದಿಕೆಯಾಗುತ್ತಿದೆಯೇ ಸಾಮಾಜಿಕ ಜಾಲತಾಣ?

ಬುದ್ಧ ಬದುಕನ್ನು ಹುಡುಕಿದರೆ ನಾವು ಬುದ್ಧನನ್ನು ಹುಡುಕುತ್ತಿದ್ದೇವೆ. ಬುದ್ಧನಿಗೆ ಬದುಕಿನ ಜ್ಞಾನೋದಯವಾದರೆ ನಮಗೆ ಬುದ್ಧ ಸಿಗುತ್ತಲೇ ಇಲ್ಲ. ಕಾರಣ ಬುದ್ಧ ನಮ್ಮೊಳಗೆ ಇಳಿಯಲು ಸ್ಥಳಾವಕಾಶವೇ ಇಲ್ಲದಂತಾಗಿದೆ.

ಕ್ರಿಸ್ತ ಪೂರ್ವದ ಬುದ್ಧ- 21 ನೆಯ ಶತಮಾನದ ನಾವು ಈ ಬೆಳದಿಂಗಳಲ್ಲಿ ಮುಖಾಮುಖಿಯಾದಾಗ- ಧ್ಯಾನಸ್ಥ ಬುದ್ಧ ಟ್ರಾಫಿಕ್ ನಲ್ಲಿ ಕಳೆದುಹೋದ… ನಿಸ್ವಾರ್ಥ ಬುದ್ಧ ಭ್ರಷ್ಟಾಚಾರದಲ್ಲಿ ಮುಳುಗಿಹೋದ… ಅಹಿಂಸೆಯ ಬುದ್ಧ ಪರಮಾಣು ಬಾಂಬುಗಳಲ್ಲಿ ಅಡಗಿಹೋದ…ಜ್ಞಾನದ ಬುದ್ಧ ಅಂಕಗಳಲ್ಲಿ ಮರೆಯಾಗಿ ಹೋದ… ನಿರ್ಲಿಪ್ತ ಬುದ್ಧ ಹಣ ಆಸ್ತಿ ಜಮೀನುಗಳಲ್ಲಿ ಹುದುಗಿ ಹೋದ… ಎಲ್ಲಿಯಾದರೂ ಸಿಕ್ಕಾನೆಯೇ ಬುದ್ಧ… ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ… ಬುದ್ಧನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ… ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ.

ಆದರೆ ಬುದ್ಧನನ್ನು ಹುಡುಕುವುದೆಲ್ಲಿ? ಒಳಗೋ ಹೊರಗೋ? ಕ್ರಿಸ್ತ ಪೂರ್ವದ ಬುದ್ಧನೆಲ್ಲಿ, 2024 ರ ಬುದ್ದು(ದಡ್ಡ) ಎಲ್ಲಿ?

ಬುದ್ಧ
ಬುದ್ಧ

ಸ್ವಂತ ಮನೆಯಲ್ಲಿ ಕುಳಿತು ಆಹಾರ ಸೇವಿಸುತ್ತಾ ಟಿವಿ ನೋಡುತ್ತಾ ಬುದ್ಧನನ್ನು ಹುಡುಕಿದನೊಬ್ಬ… ಲೈಬ್ರರಿಯಲ್ಲಿ ಕುಳಿತು ಪುಸ್ತಕ ಓದುತ್ತಾ, ಬರೆಯುತ್ತಾ ಹುಡುಕಿದ ಬುದ್ಧನನ್ನು ಇನ್ನೊಬ್ಬ… ಅಧ್ಯಯನ ಮಾಡುತ್ತಾ, ಚಿಂತಿಸುತ್ತಾ ಉಪನ್ಯಾಸ ನೀಡುತ್ತಾ ಬುದ್ಧನನ್ನು ಹುಡುಕಿದ ಮಗದೊಬ್ಬ… ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ, ಪ್ರಖ್ಯಾತಿಗಾಗಿ, ಬುದ್ಧಿಯ ಪ್ರದರ್ಶನಕ್ಕಾಗಿ ಹುಡುಕುತ್ತಲೇ ಇದ್ದಾರೆ ಅನೇಕ ಸಿದ್ದಾರ್ಥರು ಬುದ್ಧನನ್ನು… ಸಿಕ್ಕಾನೆಯೇ ಬುದ್ಧ?

ಕಾಡು ಮೇಡುಗಳಲ್ಲಿ ಅಲೆದು, ದೇಹ ಮನಸ್ಸುಗಳನ್ನು ದಂಡಿಸಿ, ಚರ್ಚೆ ಸಂವಾದ ಮಂಥನಗಳನ್ನು ಮಾಡಿ, ಧ್ಯಾನದ ಉತ್ತುಂಗ ತಲುಪಿ ಬುದ್ಧನಾದವನನ್ನು ಹುಡುಕುವುದು ಸುಲಭವೇ?

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ಉಪಾಹಾರ, ರಾತ್ರಿಯ ಭೋಜನ ಮಾಡಿ, ಬೆಚ್ಚಗಿನ ಮನೆಯಲ್ಲಿ, ಕುಟುಂಬದೊಂದಿಗೆ, ನಾಳಿನ ಯೋಚನೆಗಳೊಂದಿಗೆ, ಸ್ನಾನ ಶೌಚಗಳ ಅನುಕೂಲದೊಂದಿಗೆ, ಮೈಥುನದ ಸುಖದೊಳಗೆ, ಮೊಬೈಲ್ ಮಾಯೆಯೊಳಗೆ ಸಿಕ್ಕಾನೆಯೇ ಬುದ್ಧ?

ದೇಹದಲ್ಲಿ ಅಡಗಿದ್ದಾನೆಯೇ ಬುದ್ಧ, ಮನಸ್ಸಿನಲ್ಲಿ ಅಡಗಿದ್ದಾನೆಯೇ ಬುದ್ಧ, ಹೃದಯದಲ್ಲಿ ಅಡಗಿದ್ದಾನೆಯೇ ಬುದ್ಧ, ಜ್ಞಾನದಿಂದ ಸಿಗುವನೇ ಬುದ್ಧ, ಭಕ್ತಿಯಿಂದ ಸಿಗುವನೇ ಬುದ್ಧ, ಕರ್ಮದಿಂದ ಸಿಗುವನೇ ಬುದ್ಧ, ಯೋಗ ಧ್ಯಾನಗಳಿಂದ ಸಿಗುವನೇ ಬುದ್ಧ… ಇವುಗಳಿಂದ ದೇವರನ್ನು ಹುಡುಕಬಹುದು, ಆದರೆ ಬುದ್ಧನನ್ನು ಹುಡುಕಬಹುದೇ?

ಇದನ್ನು ನೋಡಿದ್ದೀರಾ?: ತನ್ನೊಳಗಿನ ಪ್ರಜ್ಞೆಯನ್ನು ಎಚ್ಚರಿಸಿಕೊಳ್ಳುವುದರ ಮೂಲಕ ಯಾರೂ ಬೇಕಾದರೂ ಬುದ್ಧ ಆಗಬಹುದು!

ಹೌದು, ಬುದ್ಧನನ್ನು ಹುಡುಕಬಹುದು- ಮಾನವೀಯ ಮೌಲ್ಯಗಳಲ್ಲಿ, ಪ್ರೀತಿಯಲ್ಲಿ, ತ್ಯಾಗದಲ್ಲಿ, ಕರುಣೆಯಲ್ಲಿ, ವಿನಯದಲ್ಲಿ, ಸಭ್ಯತೆಯಲ್ಲಿ, ಕ್ಷಮಾಗುಣದಲ್ಲಿ, ಸ್ನೇಹದಲ್ಲಿ, ಸಂಬಂಧಗಳಲ್ಲಿ, ತಾಳ್ಮೆಯಲ್ಲಿ, ಸಂಯಮದಲ್ಲಿ, ಧೈರ್ಯದಲ್ಲಿ, ನಿರಂತರ ಪ್ರಯತ್ನದಲ್ಲಿ.

ಬುದ್ದ ಸಿಕ್ಕರೂ ಸಿಗಬಹುದು- ವೈರಸ್ಸಿನ ಭಯದಲ್ಲಿ, ಸಾವಿನ ಆತಂಕದಲ್ಲಿ, ಸೋಲುವ ಭೀತಿಯಲ್ಲಿ, ಕುಟುಂಬದ ಮೋಹದಲ್ಲಿ, ಹಣದ ದಾಹದಲ್ಲಿ, ಅಧಿಕಾರದ ಗುಂಗಿನಲ್ಲಿ, ಪ್ರಚಾರದ ಅಮಲಿನಲ್ಲಿ, ಸಾಧನೆಯ ಅಹಂಕಾರದಲ್ಲಿ.

ಬುದ್ದನನ್ನು ಹುಡುಕುವ ನಾಟಕವೇಕೆ?

ನಾನು ಸಹ ಹುಡುಕುತ್ತಲೇ ಇದ್ದೇನೆ ಬುದ್ದನನ್ನು,
ನನ್ನೊಳಗಿನ ಬೆಳಕನ್ನು ಬೆಳಗಿಸುವಾ ಬುದ್ದನನ್ನು.
ಸಿಕಿಲ್ಲ ಆತ ಇನ್ನೂ.

ವಿವೇಕಾನಂದ ಎಚ್.ಕೆ.
ವಿವೇಕಾನಂದ ಎಚ್.ಕೆ.
+ posts

ಲೇಖಕರು, ಸಾಮಾಜಿಕ ಹೋರಾಟಗಾರರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿವೇಕಾನಂದ ಎಚ್.ಕೆ.
ವಿವೇಕಾನಂದ ಎಚ್.ಕೆ.
ಲೇಖಕರು, ಸಾಮಾಜಿಕ ಹೋರಾಟಗಾರರು

1 COMMENT

  1. ತಾನು ಕಂಡುಕೊಂಡ ಮನೋವಿಜ್ಞಾನದ ಅಂಶಗಳನ್ನು ಜನರೊಂದಿಗೆ ಹಂಚಿಕೊಂಡಿದ್ದು ಆ ಕಾಲಕ್ಕೇ ಒಂದು ವಿಶೇಷವಾದ ಸಂಗತಿ. ಆದರೆ ಜನರು ತಮ್ಮ ಮನೋವೃತ್ತಿಯನ್ನು ಅಂದಿಗೂ ಇಂದಿಗೂ ತಿನ್ನುವ ಆಹಾರದೊಂದಿಗೆ ತಳುಕು ಹಾಕಿ ಮನೋಸಂಸ್ಕಾರವನ್ನು ತಿರಸ್ಕರಿಸಿ ಅಜ್ಞಾನವನ್ನು ರೂಢಿಸಿಕೊಂಡು ಹಿಂಸಾತ್ಮಕ ಪ್ರವೃತ್ತಿಗೆ ಶರಣಾಗಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X