ʼನಾವೆದ್ದು ನಿಲ್ಲದಿದ್ದರೆ- ಕರ್ನಾಟಕʼ ಸಂಘಟನೆಯಿಂದ ಹಾಸನ ಚಲೋಗೆ ಬೆಂಬಲ

Date:

Advertisements

‘ನಾವೆದ್ದು ನಿಲ್ಲದಿದ್ದರೆ’ ಎಂಬುದು ಮಹಿಳೆಯರಿಗೆ ಮತ್ತು ಮಾನವಹಕ್ಕುಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆ ಕಾಳಜಿಯುಳ್ಳ ಎಲ್ಲ ಸಂಘಟನೆಗಳ ಮತ್ತು ವ್ಯಕ್ತಿಗಳ ಜಂಟಿ ವೇದಿಕೆಯಾಗಿದ್ದು, ಮೇ 30ರಂದು ‘ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ವು ಹಮ್ಮಿಕೊಂಡಿರುವ ‘ಹಾಸನದೆಡೆಗೆ ನಮ್ಮ ನಡಿಗೆ’ ಹಾಸನ ಚಲೋ ಕಾರ್ಯಕ್ರಮವನ್ನು ಬೆಂಬಲಿಸುವುದಾಗಿ ತಿಳಿಸಿದೆ.

ಈ ಬೃಹತ್ ಸಾರ್ವಜನಿಕ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಮಹಿಳಾ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿಗಳ ಮತ್ತು ಇನ್ನಿತರ ಹಲವು ಸಂಘಟನೆಗಳ ಪ್ರತಿನಿಧಿಗಳು, ಹಾಗೆಯೇ ರಾಜ್ಯದ ಮತ್ತು ದೇಶದ ಕೆಲವೆಡೆಗಳಿಂದ ಚಿಂತಕರು, ಬರಹಗಾರರು, ಬುದ್ಧಿಜೀವಿಗಳು, ಕಲಾವಿದರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಮುಂತಾದ ಸುಮಾರು 10,000ದಷ್ಟು ಮಂದಿ ಭಾಗವಹಿಸಲಿದ್ದಾರೆ.

ಈ ಪ್ರತಿಭಟನೆಯ ಉದ್ದೇಶವು, ಪ್ರಜ್ವಲ್ ರೇವಣ್ಣನ ಕ್ರಿಮಿನಲ್ ಲೈಂಗಿಕ ಹಿಂಸಾಚಾರದ ಬಲಿಪಶುಗಳಾದ ಸಾವಿರಾರು ಮಹಿಳೆಯರಿಗೆ ಸ್ಥೈರ್ಯ ತುಂಬಿ ಬಹಿರಂಗವಾಗಿ ಮತ್ತು ಒಗ್ಗಟ್ಟಾಗಿ ಅವರ ಘನತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಈ ಕೆಳಗಿನ ವಿಷಯಗಳಿಗಾಗಿ ಒತ್ತಾಯಿಸುವುದೂ ಕೂಡಾ ಆಗಿದೆ.

ಹಕ್ಕೊತ್ತಾಯಗಳು:

1. ಪ್ರಜ್ವಲ್ ರೇವಣ್ಣ ತನ್ನ ಬಲಾಢ್ಯ ಕುಟುಂಬದ ಕಾರಣಕ್ಕಾಗಿ ದೊರೆತಿರುವ ಜಾತಿಬಲ ಮತ್ತು ಹಣಬಲವನ್ನು ಬಳಸಿಕೊಂಡು ತನ್ನ ಸಾಂವಿಧಾನಿಕ ಕರ್ತವ್ಯವನ್ನು ಮತ್ತು ಸಂಸದನಾಗಿ ತನ್ನ ಅಧಿಕಾರವನ್ನು ಅತ್ಯಂತ ದರ್ಪದಿಂದ ದುರ್ಬಳಕೆ ಮಾಡಿಕೊಂಡು ನೂರಾರು ಮಹಿಳೆಯರನ್ನು ನಾಚಿಕೆಯಿಲ್ಲದೆ ಕ್ರಿಮಿನಲ್ ಸ್ವರೂಪದ ಲೈಂಗಿಕ ಹಿಂಸಾಚಾರಕ್ಕೆ ಗುರಿಪಡಿಸಿದ್ದನ್ನು ಮತ್ತು ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡದ್ದನ್ನು ತೀವ್ರವಾಗಿ ಖಂಡಿಸುತ್ತೇವೆ.

Advertisements

2. ದೇಶವನ್ನು ತೊರೆದು ಓಡಿಹೋಗಿರುವ ಆರೋಪಿಯ ಬಗ್ಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಹಾಗೂ ಆತನ ಬ್ಯಾಂಕ್ ಖಾತೆಯನ್ನು ಫ್ರೀಝ್ ಮಾಡುವ ಮೂಲಕ ವಾಪಾಸ್ ಕರೆಸಿ ಬಂಧನ ಮತ್ತು ವಿಚಾರಣೆಗೆ ಒಳಪಡಿಸುವಂತೆ; ಈ ವಿಷಯದಲ್ಲಿ ಕೇಂದ್ರವು ಕೂಡಲೇ ಆತನ ರಾಜತಾಂತ್ರಿಕ ಪಾಸ್‍ಪೋರ್ಟ್ ಮತ್ತು ವೀಸಾವನ್ನು ರದ್ದುಪಡಿಸುವಂತೆ ಮತ್ತು ರಾಜ್ಯಸರ್ಕಾರಕ್ಕೆ-ಎಸ್‍ಐಟಿಗೆ ಇಂಟರ್‌ಪೋಲ್ ನೆರವು ದೊರೆಯುವಂತೆ ಮತ್ತು ಆರೋಪಿಯನ್ನು ಬಂಧಿಸಲು ಸಾಧ್ಯವಾಗುವಂತೆ ಸಹಕರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ.

3. ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಹೆಚ್.ಡಿ.ರೇವಣ್ಣ ಅವರಿಂದ ಎಲ್ಲಾ ರೀತಿಯ ಲೈಂಗಿಕ ಶೋಷಣೆಗೆ ಒಳಗಾದ ಮತ್ತು ದೂರು ಸಲ್ಲಿಸಲು ಮುಂದೆ ಬಂದಿರುವ ಮಹಿಳೆಯರಿಗೆ ಅವರ ಗೌಪ್ಯತೆಯನ್ನು ಕಾಪಾಡಲು ನೆರವಾಗಬೇಕು, ಅವರಿಗೆ ತಕ್ಷಣವೇ ರಕ್ಷಣೆ ನೀಡಬೇಕು, ಅವರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕೆಂದು ಆಗ್ರಹಿಸುತ್ತೇವೆ.

4. ಮಹಿಳೆಯರ ವೀಡಿಯೋಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿದ, ಅವರ ಗುರುತುಗಳನ್ನು ಮಸುಕುಗೊಳಿಸದೆ ಅವುಗಳನ್ನು ಪೆನ್-ಡ್ರೈವ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಗಾಧ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡ ಪ್ರತಿಯೊಬ್ಬ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ, ವಿಚಾರಣೆ ಮತ್ತು ಶಿಕ್ಷೆಗೆ ಗುರಿಪಡಿಸಬೇಕು. ಇವರ ಈ ಕೃತ್ಯದಿಂದಾಗಿ ಆ ಎಲ್ಲ ಮಹಿಳೆಯರ ಮತ್ತು ಅವರ ಕುಟುಂಬದ ಗೌಪ್ಯತೆ, ಘನತೆ ಮತ್ತು ಭದ್ರತೆಗೆ ಅಪಾರವಾದ ಹಾನಿಯಾಗಿದೆ.

5. ಇಂಟರ್ನೆಟ್‍ನಿಂದ ಈ ವೀಡಿಯೊಗಳು ಮತ್ತು ಫೋಟೋಗಳನ್ನು ತೆಗೆದುಹಾಕಲು ಸೈಬರ್ ಪೊಲೀಸ್ ಇಲಾಖೆಯಿಂದ ವಿಶೇಷ ತಾಂತ್ರಿಕ ಅಧಿಕಾರಿಗಳನ್ನು ನೇಮಿಸಲು ಒತ್ತಾಯಿಸುತ್ತೇವೆ.

6. ತಮ್ಮ ಸ್ವಾರ್ಥ ಹಿತಾಸಕ್ತಿಯ ರಾಜಕೀಯದ ಆಟಗಳಿಗಾಗಿ ಸಂತ್ರಸ್ತ ಮಹಿಳೆಯರನ್ನು ಆಟದ ದಾಳಗಳನ್ನಾಗಿ ಬಳಸಿದ ಎಲ್ಲಾ ಜನಪ್ರತಿನಿಧಿಗಳ ಅನೈತಿಕ ಮತ್ತು ಅಮಾನವೀಯ ನಡವಳಿಕೆಯನ್ನು ಖಂಡಿಸುತ್ತೇವೆ.

7. ನಿಜವಾದ ಅಪರಾಧಿಗಳನ್ನು ಗುರುತಿಸುವ ಮತ್ತು ಕಾನೂನು ಕ್ರಮಕ್ಕೆ ಒಳಪಡಿಸುವ ಬದಲು ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸಾಮಾಜಿಕ ಚಿಂತನಾಕ್ರಮಗಳನ್ನು ವಿರೋಧಿಸಬೇಕು ಮತ್ತು ಅವುಗಳನ್ನು ಪರಿವರ್ತಿಸುವಂತಹ ಮಾರ್ಗೋಪಾಯಗಳನ್ನು ಚಿಂತಿಸಬೇಕೆಂದು ಒತ್ತಾಯಿಸುತ್ತೇವೆ.

ಪ್ರತಿಭಟನಾಕಾರರು ಈ ‘ಲೈಂಗಿಕ ಹಿಂಸಾಕಾಂಡ’ದ ಆರೋಪಿ ಪ್ರಜ್ವಲ್ ರೇವಣ್ಣ ಮತ್ತು ಎಲ್ಲ ಆರೋಪಿಗಳನ್ನೂ ತಮ್ಮ ಕೃತ್ಯಕ್ಕರ ಜವಾಬ್ದಾರರನ್ನಾಗಿಸಿ ವಿಚಾರಣೆಗೆ ಒಳಪಡಿಸಬೇಕೆಂದೂ, ಸಂತ್ರಸ್ತ ಮಹಿಳೆಯರ ಘನತೆ ಕಾಪಾಡುವ ಮತ್ತು ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಮಗ್ರವಾದ ಆಗ್ರಹಪತ್ರವನ್ನು ಅಂದು ಸಲ್ಲಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಹಾಸನದಲ್ಲಿ ನಡೆಯುತ್ತಿರುವ ಈ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ವ್ಯಕ್ತಪಡಿಸುವ ಜೊತೆಗೆ, ನಾವೆದ್ದು ನಿಲ್ಲದಿದ್ದರೆ’ ವೇದಿಕೆಯ ಪ್ರತಿನಿಧಿಗಳು ಹಾಸನದ ಮಹಿಳೆಯರು ಮತ್ತು ಸಹ ನಾಗರಿಕರಿಗೆ ವೈಯಕ್ತಿಕವಾದ ಮನವಿ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ನೊಂದ ಮಹಿಳೆಯರು ತಮಗಾದ ಅನ್ಯಾಯದ ವಿರುದ್ಧ ಮಾತನಾಡಲು ಮುಂದಾಗಬೇಕೆಂದು, ಈ ಪ್ರಯತ್ನದಲ್ಲಿ ಅವರ ಸ್ನೇಹಿತರು, ಕುಟುಂಬಗಳು, ನೆರೆಹೊರೆಯವರು ಮತ್ತು ನಾಡಿನ ಪ್ರಜ್ಞಾವಂತರು ಅವರ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತಾರೆಂದೂ ಈ ಮನವಿ ಪತ್ರದಲ್ಲಿ ಭರವಸೆ ನೀಡಲಾಗಿದೆ.

ಮಹಿಳೆಯರು ತಮ್ಮ ಭಯ, ಆತಂಕ ಮತ್ತು ಒತ್ತಡಗಳಿಂದ ಹೊರಬಂದು, ತಮ್ಮ ಮೇಲೆ ಹಲ್ಲೆ ಮತ್ತು ಶೋಷಣೆ ಮಾಡಿದ ಪ್ರಬಲ ಪುರುಷರನ್ನು ಎದುರಿಸಲು ಸುಲಭವಲ್ಲ ಎಂದು ಅರ್ಥಮಾಡಿಕೊಂಡಿರುವ ವೇದಿಕೆಯು ಪತ್ರದಲ್ಲಿ ಸ್ಪಷ್ಟವಾಗಿ ಹೇಳುತ್ತದೆ- ‘ಈಗ ಧೈರ್ಯವಾಗಿ ಮಾತನಾಡುವ ಮತ್ತು ದೂರು ದಾಖಲಿಸುವ ಮಹಿಳೆಯರಿಗೆ ನ್ಯಾಯ ಸಿಗಬೇಕಾದರೆ, ನ್ಯಾಯಾಂಗ, ಆಡಳಿತ ಮತ್ತು ಮಾಧ್ಯಮಗಳನ್ನು ಲಿಂಗ ಸಂವೇದನೆಯುಳ್ಳವರನ್ನಾಗಿ ಪರಿವರ್ತಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ’.

“ಆತ್ಮೀಯ ಸಹೋದರಿಯರೇ ಬನ್ನಿ, ನೀವು ದೊಡ್ಡ ತಪ್ಪು ಮಾಡಿದವರು ಎಂದು ದೂಷಿಸುವ ಮಾತುಗಳನ್ನು ಕಳಚಿಬಿಸಾಡಿ ಹೊರಬನ್ನಿ; ನಿಮ್ಮ ಮೇಲೆ ನಡೆದಿರುವ ದೌರ್ಜನ್ಯದ ತಪ್ಪಿನ ಹೊರೆಯನ್ನು ನೀವು ಹೊತ್ತುಕೊಳ್ಳಬೇಡಿ. ಹೊರಗೆ ಬನ್ನಿ, ಧೈರ್ಯವಾಗಿ ಮಾತನಾಡಿ ಮತ್ತು ನಿಮ್ಮ ದೂರುಗಳನ್ನು ದಾಖಲಿಸಿ. ಹಾಗೆಯೇ, ಸಹ ನಾಗರಿಕ ಬಾಂಧವರೇ, ಈ ಕ್ಷಣಕ್ಕೆ ಮಾತ್ರವಲ್ಲದೆ ಈ ಅಪರಾಧ ಸಂಭವಿಸಲು ಅವಕಾಶ ನೀಡಿದ ವ್ಯವಸ್ಥೆಯಲ್ಲಿ ಸಂತ್ರಸ್ತರಾದ ಈ ಎಲ್ಲ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ನಾವು ಅವರೊಂದಿಗೆ ದೃಢವಾಗಿ ನಿಲ್ಲೋಣ.

ನಮ್ಮ ಮುಂದಿನ ಪೀಳಿಗೆ ಇಂತಹ ಭೀಕರತೆಗೆ ಬಲಿಯಾಗಿ ನಲುಗುವುದನ್ನು ತಡೆಗಟ್ಟುವ ನಮ್ಮ ಸಾಮೂಹಿಕ ಕರ್ತವ್ಯವನ್ನು ನಾವು ಒಟ್ಟಾಗಿ ಮಾಡೋಣ, ನಿಜವಾದ ಅಪರಾಧಿಗಳು ತಾವು ಮಾಡಿದ ಅಪರಾಧಗಳಿಗೆ ನಾಚಿಕೆಪಡಬೇಕು ಮತ್ತು ಶಿಕ್ಷೆಗೆ ಒಳಗಾಗಬೇಕು, ಅಲ್ಲಿಯವರೆಗೂ ಈ ಹೋರಾಟವನ್ನು ಕೈಬಿಡದೆ ಮುಂದಕ್ಕೊಯ್ಯೋಣ” ಎಂದು ಸಂಘಟನೆ ತಿಳಿಸಿದೆ.

ಮನವಿ ಪತ್ರವನ್ನು ಹಾಸನ ಮತ್ತು ಹೊಳೆನರಸೀಪುರ ಹಳ್ಳಿಗಳು ಮತ್ತು ಸಮುದಾಯಗಳ ನಡುವೆ ವಿಸ್ತೃತವಾಗಿ ಹಂಚುವ ಯೋಜನೆಯಿದ್ದು, ಹಾಸನ ಜಿಲ್ಲೆಯ ಸ್ಥಳೀಯ ಸಂಘಟನೆಗಳು ಮತ್ತು ವೇದಿಕೆಗಳ ನೆರವಿನೊಂದಿಗೆ ಈ ಪತ್ರವನ್ನು ವಿತರಿಸಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ, ‘ನಾವೆದ್ದು ನಿಲ್ಲದಿದ್ದರೆ’ ಜಂಟಿವೇದಿಕೆಯ ಪರವಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲ, ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರು ಮತ್ತು ರಾಜಕೀಯ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ, ‘ಒಂದೆಡೆ’ ಸಂಸ್ಥೆ, ಮೈತ್ರೇಯಿ ಕೃಷ್ಣನ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಮತ್ತು ಎಐಎಲ್‌ಎಜೆ, ಮಮತಾ ಯಜಮಾನ್, ಗಮನ ಮಹಿಳಾ ಸಮೂಹ ಮತ್ತು ಅಖಿಲಾ ವಿದ್ಯಾಸಂದ್ರ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ  ಮಾತನಾಡಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ಪ್ರಕರಣ; ಮರ್ಯಾದೆ ಹತ್ಯೆ, ಸಾಮೂಹಿಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ದಲಿತ ಸಂಘಟನೆಗಳು

ಕಾಲೇಜು ವಿದ್ಯಾರ್ಥಿನಿಯೊಬ್ಬರು ಕೊಲೆಯಾಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿತ್ರದುರ್ಗ ನಗರದ ಹೊರವಲಯದ...

ದಾವಣಗೆರೆ | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬಳು ಗೃಹಿಣಿ ಬಲಿ

ಸಾಲದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಸಾಲು ವಸೂಲಾತಿಗಾಗಿ ಮೈಕ್ರೋ...

Download Eedina App Android / iOS

X