ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಜೂನ್ 4ರಂದು ನಡೆಯಲಿದ್ದು, ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ “ಮತ ಎಣಿಕೆ” ಕಾರ್ಯದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮತ ಎಣಿಕಾ ಕೇಂದ್ರದಲ್ಲಿ ಸಕಲ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಂತಿಮ ದಿನದ ಮತ ಎಣಿಕೆ ಕಾರ್ಯದ ಅಂತಿಮ ಹಂತದ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿ ನೇಮಕ ಮಾಡಲಾಗಿದೆ. ಅದರಂತೆ ತಮಗೆ ನಿಯೋಜಿತವಾಗಿರುವ ಕಾರ್ಯಗಳನ್ನು ನಿಯಮಾವಳಿ ರೀತ್ಯ ಸೂಕ್ತವಾಗಿ ನಿರ್ವಹಿಸಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಮತ ಎಣಿಕಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು, ಸಿಬ್ಬಂದಿಗೆ ಹಾಗೂ ಮತ ಎಣಿಕೆಯಂದು ಆಗಮಿಸುವ ಚುನಾವಣಾ ಅಭ್ಯರ್ಥಿಗಳು, ಏಜೆಂಟರುಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಅಂತಿಮ ಹಂತದ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಮತ ಎಣಿಕಾ ದಿನದಂದು ಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ, ಊಟದ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಭದ್ರತೆ, ಪರಿಕರಗಳ ಪೂರೈಕೆ ಸೇರಿದಂತೆ ಇತರೆ ಕಾರ್ಯಗಳನ್ನು ಸಂಬಂಧಪಟ್ಟವರಿಗೆ ವಹಿಸಿ ಕರಾರುವಕ್ಕಾಗಿ ನಿರ್ವಹಿಸಬೇಕು” ಎಂದರು.
“ಊಟ ತಿಂಡಿ, ಕಾಫಿ ಪೂರೈಕೆಯ ಕಾರ್ಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡಬಾರದು. ಮತ ಎಣಿಕೆಯಂದು ಸಂಚಾರ ದಟ್ಟಣೆಯಾಗದಂತೆ ಕ್ರಮವಹಿಸಬೇಕು. ಜೊತೆಗೆ ಯೋಜಿತ ರೀತಿಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು” ಎಂದು ತಿಳಿಸಿದರು.
“ಮತ ಎಣಿಕಾ ಕೇಂದ್ರದಲ್ಲಿ ಅಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಜತೆಗೆ ಅಗತ್ಯ ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ತಾತ್ಕಾಲಿಕ ಹೆಲ್ತ್ ಸೆಂಟರ್ ಸ್ಥಾಪಿಸಬೇಕು. ಅಗ್ನಿಶಾಮಕ ವಾಹನವನ್ನು ಅಗತ್ಯ ಸಿಬ್ಬಂದಿಯೊಂದಿಗೆ ಮೀಸಲಿಟ್ಟಿರಬೇಕು” ಎಂದರು.
“ಅನುಮತಿಸಲ್ಪಟ್ಟವರನ್ನು ಹೊರತುಪಡಿಸಿ ಮತ ಎಣಿಕೆ ಕೇಂದ್ರಗಳಿಗೆ ಯಾವುದೇ ವ್ಯಕ್ತಿಗಳು ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಅನುಮತಿ ಪಡೆದವರು ಮಾತ್ರ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಬೇಕು. ಈ ಎಲ್ಲ ಕಾರ್ಯಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ನಿಗಾವಹಿಸಬೇಕು” ಎಂದು ತಿಳಿಸಿದರು.
“ಕಳೆದ ಏಪ್ರಿಲ್ 26 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆದಿದ್ದು, ಮತ ಚಲಾವಣೆಗೊಂಡ ವಿದ್ಯುನ್ಮಾನ ಮತಯಂತ್ರಗಳನ್ನು (ಇ.ವಿ.ಎಂ) ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಇಲ್ಲಿ 24X7 ಅವಧಿಯಲ್ಲಿಯೂ ಬಿಗಿ ಭದ್ರತೆ ಇದೆ. ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ” ಎಂದರು.
“ಜೂನ್ 4 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆ ಕೇಂದ್ರದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ 2,326 ಮತಗಟ್ಟೆಗಳಲ್ಲಿ ಚಲಾವಣೆಯಾಗಿರುವ ಹಾಗೂ ಅಂಚೆ ಮತದಾನದ ಮೂಲಕ ಚಲಾಯಿಸಲಾದ ಮತಗಳ ಎಣಿಕೆ ಕಾರ್ಯ ನಡೆಯಲಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದರು.
“ಗೌರಿಬಿದನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ ಒಟ್ಟು 26 ಸುತ್ತಿನಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ ಒಟ್ಟು 27 ಸುತ್ತಿನಲ್ಲಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ ಒಟ್ಟು 26 ಸುತ್ತಿನಲ್ಲಿ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 14 ಎಣಿಕೆ ಟೇಬಲ್ಗಳಲ್ಲಿ ಒಟ್ಟು 30 ಸುತ್ತಿನಲ್ಲಿ, ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ ನಡೆಯಲಿದ್ದು, ಒಟ್ಟು 30 ಸುತ್ತಿನಲ್ಲಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ 30 ಸುತ್ತಿನಲ್ಲಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಟೇಬಲ್ಗಳಲ್ಲಿ ಒಟ್ಟು 28 ಸುತ್ತಿನಲ್ಲಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ ನಡೆಯಲಿದ್ದು, ಒಟ್ಟು 28 ಸುತ್ತಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ” ಎಂದರು.
“ಅಂಚೆ ಮತದಾನದ ಮತ ಎಣಿಕೆಯು 10 ಟೇಬಲ್ಗಳಲ್ಲಿ ಒಂದು ಸುತ್ತಿನಲ್ಲಿ ನಡೆಯಲಿದೆ. ಯಲಹಂಕ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಅಂಚೆ ಮತದಾನ ಹಾಗೂ ಕ್ಷೇತ್ರ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ತಲಾ ಒಂದು ಕೊಠಡಿಯಲ್ಲಿ ನಡೆಯಲಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಎರಡು ಕೊಠಡಿಗಳಲ್ಲಿ ನಡೆಯಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ ಚಲೋ | ಮನವಿ ಸ್ವೀಕರಿಸದ ಜಿಲ್ಲಾಧಿಕಾರಿ; ನೂರಾರು ಹೋರಾಟಗಾರರು ಡಿಸಿ ಕಚೇರಿಗೆ ಮುತ್ತಿಗೆ
ಬೆಂಗಳೂರು ಗ್ರಾ ಮಾಂತರ ಜಿಲ್ಲಾಧಿಕಾರಿ ಡಾ ಎನ್ ಶಿವಶಂಕರ್, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರ್ವಣಾಧಿಕಾರಿ ಪ್ರಕಾಶ್ ಜಿ ಟಿ ನಿಟ್ಟಾಲಿ, ಬೆಂ.ಗ್ರಾಮಾಂತರ ಕಾರ್ಯ ನಿರ್ವಾಹಕಾಧಿಕಾರಿ ಡಾ ಕೆ ಎನ್ ಅನುರಾಧ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್, ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಡಾ ಎನ್ ತಿಪ್ಪೇಸ್ವಾಮಿ, ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ ಸಂಗಪ್ಪ, ಎರಡು ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
