ಮಣಿಪುರದಲ್ಲಿ ಮಕಾಡೆ ಮಲಗಿದ ಬಿಜೆಪಿ

Date:

Advertisements

2023ರ ಮೇ 3ರಂದು ಮಣಿಪುರ ರಾಜ್ಯದಲ್ಲಿ ಆರಂಭವಾದ ಜನಾಂಗೀಯ ದಳ್ಳುರಿಗೆ ಭೌಗೋಳಿಕವಾಗಿ ಮತ್ತು ಮಾನಸಿಕವಾಗಿ ಇಡೀ ರಾಜ್ಯವೇ ಛಿದ್ರವಾಯಿತು. ಒಂದು ಕಡೆ ಹಿಂಸಾಚಾರದಿಂದ ನೆಲೆ ಕಳೆದುಕೊಂಡ 60,000 ನಿರಾಶ್ರಿತರು, ಮತ್ತೊಂದೆಡೆ ಇತ್ತೀಚಿನ ವರುಣಾರ್ಭಟಕ್ಕೆ ತತ್ತರಿಸಿದ ನಿರಾಶ್ರಿತರು. ಇದರ ನಡುವೆ ಬಿಜೆಪಿಯ ದುರಾಡಳಿತಕ್ಕೆ ಉತ್ತರ ಕೊಟ್ಟಂತೆ ಹೊರಬಿದ್ದಿರುವ ಲೋಕಸಭಾ ಫಲಿತಾಂಶ!

ಮಣಿಪುರ ರಾಜ್ಯದಲ್ಲಿ ಇರುವುದು ಎರಡೇ ಲೋಕಸಭಾ ಕ್ಷೇತ್ರ. ಒಂದು: ಇಂಫಾಲ ಕಣಿವೆ ಜಿಲ್ಲೆಗಳನ್ನು ಒಳಗೊಂಡಿರುವ ಮೈತೇಯಿ ಪ್ರಾಬಲ್ಯದ ಒಳ ಮಣಿಪುರ. ಎರಡು: ಗುಡ್ಡುಗಾಡಿನಲ್ಲಿ ಚಾಚಿಕೊಂಡಿರುವ ಕುಕಿ, ನಾಗ ಸಮುದಾಯಗಳ ಪ್ರಾಬಲ್ಯದ ಬುಡಕಟ್ಟು ಮೀಸಲು ಹೊರ ಮಣಿಪುರ. ಎರಡೂ ಕ್ಷೇತ್ರಗಳಲ್ಲಿ ಕಳೆದ ಸಲ ಮೇಲುಗೈ ಸಾಧಿಸಿದ್ದ ಬಿಜೆಪಿ ಈಗ ಮಕಾಡೆ ಮಲಗಿದೆ. ಹೊರ ಮಣಿಪುರದಲ್ಲಿ ಈ ಬಾರಿ ಯಾವುದೇ ಕ್ಯಾಂಡಿಡೇಟ್ ಹಾಕದ ಬಿಜೆಪಿ, ತನ್ನ ಮಿತ್ರಪಕ್ಷ ನಾಗಾ ಪೀಪಲ್ಸ್ ಫ್ರಂಟ್ (NPF)ಗೆ ಬೆಂಬಲ ಘೋಷಿಸಿತ್ತು. ಈ ರೀತಿಯ ಪಲಾಯನಕ್ಕೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಒಳಮಣಿಪುರದಲ್ಲಿ ಸ್ಪರ್ಧಿಸಿತ್ತಾದರೂ ಮೈತೇಯಿಗಳು ಬಿರೇನ್ ಸಿಂಗ್ ಮತ್ತು ಮೋದಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹೊರ ಮಣಿಪುರವು ಬುಡಕಟ್ಟು ಮೀಸಲು ಕ್ಷೇತ್ರವಾದರೂ ಅಲ್ಲಿ ಕ್ಯಾಂಡಿಡೇಟ್ ಹಾಕದೆ ಇರುವುದು ಅಚ್ಚರಿಯ ವಿಷಯವೇನೂ ಆಗಿರಲಿಲ್ಲ.‌ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಒಂದು ಕ್ಷೇತ್ರಕ್ಕೆ ಕಾಲಿಡದ ಸ್ಥಿತಿಯನ್ನು ಬಿಜೆಪಿ ನಾಯಕರು ತಂದುಕೊಂಡಿದ್ದರು. ಕುತೂಹಲವಿದ್ದದ್ದು ಮೈತೇಯಿ ಪ್ರಾಬಲ್ಯದ ಒಳ ಮಣಿಪುರ ಕ್ಷೇತ್ರದ ಬಗ್ಗೆ.

ಮಣಿಪುರದಲ್ಲಿ ಬಿಜೆಪಿ ಕಳೆದೆರಡು ಚುನಾವಣೆಯಲ್ಲಿ ಮತಪ್ರಮಾಣದಲ್ಲಿ ಏರಿಕೆ ಕಂಡಿದ್ದರೂ ಈ ಬಾರಿ ಮೈತ್ರಿಗೆ ಒಂದು ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು.

Advertisements

ಹೊರ ಮಣಿಪುರ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿ ಸ್ಪರ್ಧಿಸಿ, 2,89,745 ಮತಗಳನ್ನು ಪಡೆದಿತ್ತು. ಬಿಜೆಪಿ ಅಭ್ಯರ್ಥಿ ಶೋಖೋಪಾವೋ ಅವರು ಎರಡನೇ ಅತಿಹೆಚ್ಚು ಮತ ಪಡೆದವರಾಗಿದ್ದರು. 2014ರಲ್ಲಿ 75,828 ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆದು, ಮೂರನೇ ಸ್ಥಾನದಲ್ಲಿದ್ದರು. ಅಂದರೆ ಐದು ವರ್ಷಗಳ ಅಂತರದಲ್ಲಿ ಬಿಜೆಪಿ ಮತ ಪ್ರಮಾಣ ಶೇ. 23.94ರಷ್ಟು ಹೆಚ್ಚಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ತಂಗ್ಸೋ 2014ರಲ್ಲಿ ಗೆದ್ದಿದ್ದರೂ ಕೂಡ ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ. 7.01 ಮತಗಳು ಇಳಿಕೆಯಾಗಿದ್ದವು. 2019ರ ವೇಳೆಗೆ ಕಾಂಗ್ರೆಸ್ ಮತಪ್ರಮಾಣ ಶೇ. 20.68 ರಷ್ಟು ಕುಸಿದಿತ್ತು. ಈ ಎಲ್ಲ ಮತಗಳು ಬಿಜೆಪಿಗೆ ಶಿಫ್ಟ್ ಆದಂತೆ ಕಾಣುತ್ತಿತ್ತು. ಹಿಂದಿನ ಚುನಾವಣೆಗಳಲ್ಲಿ ಭಾರೀ ಮತಗಳನ್ನು ಕಬಳಿಸಿದ್ದರೂ ಮಣಿಪುರ ಹೊರ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸದಂತಹ ಇಕ್ಕಟ್ಟಿಗೆ ಸಿಲುಕಿತ್ತು.

ಮೇ 3ರಂದು ಆರಂಭವಾದ ಜನಾಂಗೀಯ ಕಲಹದಲ್ಲಿ ಗುಡ್ಡಗಾಡು ಮತ್ತು ಕಣಿವೆಯಾಗಿ ಮಣಿಪುರ ಬೇರ್ಪಟ್ಟಿದೆ. ಬಹುಸಂಖ್ಯಾತ ಮೈತೇಯಿ ಪರ ಧೋರಣೆಯನ್ನು ಹೊಂದಿರುವ ಬಿಜೆಪಿ ಈಗ ಗುಡ್ಡಗಾಡಿನ ಜನರ ಎದುರು ಮಾತನಾಡದ ಸ್ಥಿತಿ ತಲುಪಿದೆ. ಆದರೆ ಮಣಿಪುರ ಕಲಹಕ್ಕೆ ಬಿಜೆಪಿಯ ಪಾಲು ದೊಡ್ಡದಿದೆ, ಮೋದಿ ಸುಮ್ಮನಿರುವುದರಿಂದಲೇ ಇಷ್ಟು ಕಾಲ ಕಲಹ ನಡೆಯಿತು ಎಂಬ ಬೇಸರ ಮೈತೇಯಿ ಸಮುದಾಯದ ಸಾಮಾನ್ಯ ಜನರಲ್ಲೂ ಇದೆ. ಕುಕಿ ಸಮುದಾಯದಲ್ಲೂ ಇದೆ.

Manipur violence: What is happening and why

ಚುನಾವಣೆಗೆ ಪೂರಕವಾಗಿ ಕಾಂಗ್ರೆಸ್‌ನ ಕೆಲವು ಬೆಳವಣಿಗೆಗಳನ್ನೂ ಗಮನಿಸಬೇಕಾಗುತ್ತದೆ. ಮಣಿಪುರ ದಳ್ಳುರಿಗೆ ತುತ್ತಾದ ಬಳಿಕ ಎರಡು ಬಾರಿ ರಾಹುಲ್ ಗಾಂಧಿಯವರು ಮಣಿಪುರಕ್ಕೆ ಭೇಟಿ ನೀಡಿದ್ದರು. ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಮಣಿಪುರದ ತೌಬಲ್ ಜಿಲ್ಲೆಯಿಂದ ಆರಂಭಿಸಿದ್ದರು. ಮೈತೇಯಿ- ಕುಕಿ ಸಮುದಾಯಗಳ ಜನಾಂಗೀಯ ಕಲಹಕ್ಕೆ ತುತ್ತಾದ ಬಹುಮುಖ್ಯವಾದ ಜಿಲ್ಲೆಗಳಲ್ಲಿ ತೌಬಲ್ ಕೂಡ ಒಂದು. ಇದು ಮೈತೇಯಿ ಸಮುದಾಯ ಪ್ರಾಬಲ್ಯವಿರುವ ಪ್ರದೇಶ. ತೌಬಲ್‌ನಿಂದ ಕ್ರಮಿಸಿ ಕಾಂಗ್ಪೊಪ್ಕಿ, ಸೇನಾಪತಿ ಜಿಲ್ಲೆಗಳನ್ನು ದಾಟಿ ನಾಗಾಲ್ಯಾಂಡ್‌ ರಾಜ್ಯಕ್ಕೆ ರಾಹುಲ್ ಪ್ರವೇಶಿಸಿದ್ದರು.

ರಾಹುಲ್ ಗಾಂಧಿ ಹಾದು ಹೋಗಿರುವ ಭಾಗಗಳು ಬಹಳ ಗಮನಾರ್ಹ. ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಕಾಂಗ್ಪೊಪ್ಕಿ ಹೆಸರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಕುಕಿ ಸಮುದಾಯ ಪ್ರಾಬಲ್ಯವಿರುವ ಜಿಲ್ಲೆಯಾದರೂ ಮೇ 3 ಮತ್ತು 4ರಂದು ನಡೆದ ಕಲಹದಲ್ಲಿ ಮೈತೇಯಿ ಪುರುಷರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡಿದ್ದು ಇದೇ ಪ್ರದೇಶದಲ್ಲಿ. ಇನ್ನು ಸೇನಾಪತಿ ಜಿಲ್ಲೆಯು ನಾಗ ಬುಡಕಟ್ಟು ಜನಾಂಗ ಹೆಚ್ಚಿರುವ ಪ್ರದೇಶ. ಒಟ್ಟಾರೆಯಾಗಿ ಮೈತೇಯಿ, ಕುಕಿ, ನಾಗ- ಈ ಮೂರು ಸಮುದಾಯಗಳಿರುವ ಪ್ರದೇಶಗಳನ್ನು ಭಾರತ್‌ ಜೋಡೋ ನ್ಯಾಯ ಯಾತ್ರೆ ಕ್ರಮಿಸಿತ್ತು. ಈ ಮೂರು ಸಮುದಾಯಗಳು ಕೂಡ ರಾಹುಲ್ ಪ್ರವೇಶದಿಂದ ಖುಷಿಯಾಗಿದ್ದವು, ಅದ್ದೂರಿ ಸ್ವಾಗತವನ್ನೂ ಕೋರಿದ್ದವು. ಆದರೆ ಬಿಜೆಪಿ ನಾಯಕರು ಹೀಗೆ ಮೂರು ಪ್ರದೇಶಗಳಲ್ಲಿ ಕ್ರಮಿಸುವ ಎದೆಗಾರಿಕೆಯನ್ನಾಗಲೀ, ಆತ್ಮಸಾಕ್ಷಿಯನ್ನಾಗಲೀ ಹೊಂದಿರಲಿಲ್ಲ. ಅಂತಹ ದುರಂತದ ಪಾತ್ರಧಾರಿಯಾಗಿ, ಅಪರಾಧಿಯಾಗಿ ಬಿಜೆಪಿ ನಿಂತಿತ್ತು. ಬುಡಕಟ್ಟು ಜನರ ಪ್ರದೇಶಕ್ಕೆ ಹೋಗಿ ಮತಯಾಚನೆ ಮಾಡಲಾರದಷ್ಟು ಸ್ಥಿತಿಗೆ ಬಿಜೆಪಿ ಬಂದಿತ್ತು. ಹೀಗಾಗಿ ಎನ್‌ಪಿಎಫ್‌ ಬೆಂಬಲ ನೀಡುವುದೇ ಬಿಜೆಪಿಗಿರುವ ಕಟ್ಟಕಡೆಯ ಆಯ್ಕೆಯಾಗಿತ್ತು.

ಇದನ್ನು ಓದಿದ್ದೀರಾ?: ಗೋಹತ್ಯೆ ನಿಷೇಧ ಕಾಯ್ದೆ ಎಂಬ ‘ಅನರ್ಥ’ಕಾರಿ ಪ್ರಹಸನ

ಕಾಂಗ್ರೆಸ್ ಗುಡ್ಡಗಾಡು ಮತ್ತು ಕಣಿವೆ ಎರಡು ಭಾಗದಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಿತು. ಹೊರ ಮಣಿಪುರ ಕ್ಷೇತ್ರದಲ್ಲಿ ನಾಗಾ ಸಮುದಾಯಕ್ಕೆ ಸೇರಿದ ಮಾಜಿ ಶಾಸಕ ಆಲ್ಫ್ರೆಡ್ ಕಂಗಮ್ ಆರ್ಥರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ನಾಗಾ ಪೀಪಲ್ಸ್‌ ಫ್ರಂಟ್‌ನಿಂದ ಕಚುಯಿ ತಿಮೋತಿ ಝಿಮಿಕ್ ಅವರನ್ನು ಕಣಕ್ಕಿಳಿಸಲಾಗಿತ್ತು.

ನಾಗಾ ಪ್ರಾಬಲ್ಯದ ಉಖ್ರುಲ್ ಜಿಲ್ಲೆಯಲ್ಲಿ ಚುನಾವಣಾ ತಯಾರಿಯ ಭಾಗವಾಗಿ ಆಯೋಜಿಸಲಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಸಭೆಗಳಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಾಣಾಪಾಯದಿಂದ ಪಾರಾಗಿದ್ದ ವ್ಯಕ್ತಿ ಆರ್ಥರ್‌. ಅಂಥವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗಮನ ಸೆಳೆದಿತ್ತು. ಇತ್ತ ಎನ್‌ಪಿಎಫ್‌ ತನ್ನ ಹಾಲಿ ಸಂಸದರ ಬದಲಿಗೆ ನಿವೃತ್ತ ಭಾರತೀಯ ಕಂದಾಯ ಸೇವೆ ಅಧಿಕಾರಿ ಝಿಮಿಕ್ ಅವರಿಗೆ ಟಿಕೆಟ್ ನೀಡಲಾಯಿತು. ಎನ್‌ಪಿಎಫ್‌ಗೆ ಬೆಂಬಲ ಘೋಷಿಸಿ ಸುಮ್ಮನಿರುವುದಷ್ಟೇ ಬಿಜೆಪಿ ಮುಂದಿರುವ ಆಯ್ಕೆಯಾಗಿತ್ತು. ಪ್ರತಿಸ್ಪರ್ಧಿಯಾಗಿದ್ದ ಇಬ್ಬರೂ ನಾಗಾ ಬುಡಕಟ್ಟಿಗೆ ಸೇರಿದವರು.

Manipur violence: Why has India's government been slow to respond?

ಒಳಮಣಿಪುರ ಲೋಕಸಭೆ ವಿಚಾರಕ್ಕೆ ಬರುವುದಾದರೆ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್‌ ಆಗಿದ್ದಂತಹ ಕೊಯಿಜಮ್ ಬಿಮಲ್ ಅಂಗೋಂಚ ಅವರನ್ನು ಕಾಂಗ್ರೆಸ್ ಈ ಸಲ ಒಳ ಮಣಿಪುರದಿಂದ ಕಣಕ್ಕಿಳಿಸಿತು. ಮಣಿಪುರ ಮುಖ್ಯಮಂತ್ರಿ ಬಿರೇನ್ ಅವರನ್ನೇ ಇಲ್ಲಿ ಕಣಕ್ಕಿಳಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ಬಯಸಿದ್ದರು. ಆದರೆ ಅದಕ್ಕೆ ಬಿರೇನ್ ಒಪ್ಪಿರಲಿಲ್ಲ. ಅಂತಿಮವಾಗಿ ಮಣಿಪುರದ ಶಿಕ್ಷಣ ಸಚಿವ ತೌನೊಜಂ ಬಸಂತ ಕುಮಾರ್ ಸಿಂಗ್ ಅವರನ್ನು ಒಳ ಮಣಿಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡರ ಅಭ್ಯರ್ಥಿಗಳು ಮೈತೇಯಿ ಸಮುದಾಯಕ್ಕೆ ಸೇರಿದ್ದರು.

ಇಂಫಾಲ ಕಣಿವೆಗೆ ಹೊಂದಿಕೊಂಡಂತೆ ಆರು ಜಿಲ್ಲೆಗಳು, ಗುಡ್ಡಗಾಡಿಗೆ ಹೊಂದಿಕೊಂಡಂತೆ 10 ಜಿಲ್ಲೆಗಳಿವೆ. ಇಂಫಾಲ ಕಣಿವೆಯಲ್ಲಿ 10 ಪರ್ಸೆಂಟ್ ಭೂಪ್ರದೇಶವಿದ್ದರೂ ಅದು ಫಲವತ್ತಾದ ಭೂಭಾಗ. ಶೇ. 90ರಷ್ಟು ಭೂಭಾಗ ಗುಡ್ಡಗಾಡು ಜಿಲ್ಲೆಗಳಲ್ಲಿದೆ. ಮೈತೇಯಿಗಳು ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟಿದ್ದು ಇವರು, ಪ್ರಧಾನವಾಗಿ ಪೂರ್ವ ಇಂಫಾಲ, ಪಶ್ಚಿಮ ಇಂಫಾಲ್, ತೌಬಲ್, ಕಕ್ಚಿಂಗ್‌, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಇವೆಲ್ಲವೂ ಕಣಿವೆಗೆ ಹೊಂದಿಕೊಂಡಿರುವ ಜಿಲ್ಲೆಗಳು. ಒಟ್ಟು ಜನಸಂಖ್ಯೆಯ ಶೇಕಡಾ 41 ರಷ್ಟು ಬುಡಕಟ್ಟು ಸಮುದಾಯಗಳಿವೆ. ಅದರಲ್ಲಿ ನಾಗಾ ಶೇ. 17 ಮತ್ತು ಕುಕಿಗಳು ಶೇ. 26 ರಷ್ಟು ಇದ್ದಾರೆ. ಮಣಿಪುರ ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ- ಅಂದರೆ ಸೇನಾಪತಿ, ಉಖ್ರುಲ್, ತಮೆಂಗ್ಲಾಂಗ್ ಮತ್ತು ದಕ್ಷಿಣ ಭಾಗದ ಚಂದೇಲ್ ಜಿಲ್ಲೆಗಳಲ್ಲಿ ನಾಗಾಗಳು ಪ್ರಧಾನವಾಗಿ ಕಾಣಸಿಗುತ್ತಾರೆ.

ಕುಕಿ ಸಮುದಾಯವು ಪ್ರಧಾನವಾಗಿ ದಕ್ಷಿಣದ ಚುರಾಚಾಂದ್ಪುರ, ಕಾಂಗ್‌ಪೋಕ್ಪಿ, ಚಾಂದೇಲ್‌ ಮತ್ತು ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಹೆಚ್ಚಿದ್ದಾರೆ. ನಾಗಾ ಮತ್ತು ಕುಕಿಗಳು ಮುಖ್ಯವಾಗಿ ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು.

ಮಣಿಪುರದಲ್ಲಿ ಸಂಘರ್ಷ ನಡೆಯುತ್ತಿರುವುದು ಮೈತೇಯಿ ಮತ್ತು ಕುಕಿಗಳ ನಡುವೆ. ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ನೀಡಬೇಕೆಂಬುದು ಕುಕಿಗಳ ಆಗ್ರಹ. ಆದರೆ ಮತ್ತೊಂದು ಬುಡಕಟ್ಟು ಸಮುದಾಯವಾಗಿರುವ, ಕುಕಿಗಳು ಇರುವಲ್ಲಿ ಗಣನೀಯವಾಗಿಯೂ ಇರುವ ನಾಗಾಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ವಿರುದ್ಧವಿದ್ದಾರೆ. ಹೀಗಾಗಿ ಕುಕಿಗಳಿಗೆ ಹಿನ್ನಡೆಯಾಗಿದ್ದು ಸತ್ಯ. ಒಂದು ವೇಳೆ ಕುಕಿಗಳ ಆಗ್ರಹ ದೊಡ್ಡದಾದರೆ ಗ್ರೇಟರ್ ನಾಗಲ್ಯಾಂಡ್‌ (ಅಂದರೆ ಉತ್ತರ ಮಣಿಪುರದಲ್ಲಿ ನಾಗಾಗಳು ಹೆಚ್ಚಿರುವ ಜಿಲ್ಲೆಗಳನ್ನು ನಾಗಾಲ್ಯಾಂಡ್‌ಗೆ ಸೇರಿಸಬೇಕೆಂಬ ಆಗ್ರಹ)- ಈ ಹೋರಾಟ ಮರುಜೀವ ಪಡೆಯುವ ಆತಂಕವಂತೂ ಇದೆ.

ವಿಶೇಷವೆಂದರೆ ಮೈತೇಯಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಬೇಕು ಎಂಬ ತೀರ್ಪನ್ನು ಮಣಿಪುರ ಹೈಕೋರ್ಟ್ ನೀಡಿದಾಗ ಅದನ್ನು ವಿರೋಧಿಸಿ ಕುಕಿಗಳೊಂದಿಗೆ ನಾಗಾಗಳು ಹೋರಾಡಿದ್ದರು. ತದನಂತರ ಕುಕಿಗಳನ್ನಷ್ಟೇ ಮೈತೇಯಿಗಳು ಶತ್ರುಗಳನ್ನಾಗಿ ಪರಿಗಣಿಸಿದರು ಎಂದು ವಿಶ್ಲೇಷಣೆಗಳು ಹೇಳುತ್ತವೆ. ಆದರೆ ಸಪರೇಟ್ ಅಡ್ಮಿನಿಸ್ಟ್ರೇಷನ್‌ಗಳಿಗೆ ನಾಗಾಗಳ ವಿರೋಧವಿದೆ. ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಅಂದರೆ ಹೊರ ಮಣಿಪುರದಲ್ಲಿ ಕಾಂಗ್ರೆಸ್‌- ಎನ್‌ಪಿಎಫ್‌ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಬ್ಬರೂ ನಾಗಾ ಸಮುದಾಯಕ್ಕೆ ಸೇರಿದ್ದರು. ಇಂತಹ ಹೊತ್ತಿನಲ್ಲಿ ನಾಗಾಗಳಿಗಿಂತ ಹೆಚ್ಚಿರುವ ಕುಕಿಗಳು ತಮ್ಮ ಅಭ್ಯರ್ಥಿಯನ್ನು ಹಾಕುತ್ತಾರಾ ಎಂಬ ಕುತೂಹಲವಂತೂ ಇತ್ತು. ಕುಕಿಗಳ ರಾಜಧಾನಿ ಎಂದೇ ಹೇಳಬಹುದಾದ ಚುರಾಚಾಂದ್ಪುರ (ಅದನ್ನು ಕುಕಿಗಳು ಲಾಮ್ಕಾ ಎಂದು ಕರೆದುಕೊಳ್ಳುತ್ತಾರೆ)- ಇಲ್ಲಿ ಪ್ರಧಾನವಾಗಿ ಕುಕಿ ಸಂಘಟನೆಗಳು ನೆಲೆಸಿವೆ. Indigenous Tribal Leaders’ Forum (ITLF) ಪ್ರಧಾನವಾದ ಕುಕಿ ಸಂಘಟನೆ. ಸದ್ಯದ ಸ್ಥಿತಿಯಲ್ಲಿ ನಾಗಾಗಳ ವಿರೋಧ ಹಾಕಿಕೊಳ್ಳುವುದು ಕುಕಿಗಳಿಗೂ ಕಷ್ಟವಾಗಿತ್ತು. ಹೀಗಾಗಿ ಒಂದು ನಿರ್ಧಾರಕ್ಕೆ ಬಂದಿದ್ದ ಐಟಿಎಲ್‌ಎಫ್‌, ʼʼನಾವು ಎದುರಿಸುತ್ತಿರುವ ದುಸ್ಥಿತಿಯನ್ನು ಪರಿಗಣಿಸಿ ಮುಂಬರುವ ಲೋಕಸಭೆ ಚುನಾವಣೆಗೆ ಕುಕಿ-ಜೋ ಸಮುದಾಯದ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸಬಾರದು ಎಂದು ನಿರ್ಧರಿಸಲಾಗಿದೆ” ಎಂದಿತ್ತು.

ಹೀಗಾಗಿ ಮಣಿಪುರ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ನಾಗಾ ಅಭ್ಯರ್ಥಿಗಳ ನಡುವೆ, ಮತ್ತೊಂದು ಕ್ಷೇತ್ರದಲ್ಲಿ ಮೈತೇಯಿ ಅಭ್ಯರ್ಥಿಗಳ ನಡುವೆ ಫೈಟ್ ಆಯಿತು.

ಅಂತಿಮವಾಗಿ ಒಳಮಣಿಪುರದಲ್ಲಿ ಕಾಂಗ್ರೆಸ್ಸಿ‌ನ ಬಿಮೋಲ್ ಅವರು ಬಿಜೆಪಿ ಅಭ್ಯರ್ಥಿ, ರಾಜ್ಯ ಶಿಕ್ಷಣ ಸಚಿವ ತೌನೊಜಮ್ ಬಸಂತ ಕುಮಾರ್ ಸಿಂಗ್ ಅವರನ್ನು 1,09,801 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬುಡಕಟ್ಟು ಮೀಸಲು ಹೊರ ಮಣಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆಲ್‌ಫ್ರೆಡ್ ಕಂಗಮ್ ಎಸ್. ಆರ್ಥರ್ ಅವರು ಎನ್‌ಪಿಎಫ್ ನ ಕಚುಯಿ ತಿಮೋತಿ ಜಿಮಿಕ್ ಅವರನ್ನು 85,418 ಮತಗಳ ಅಂತರದಿಂದ ಸೋಲಿಸಿದ್ದಾರೆ. ಒಳ ಮಣಿಪುರದಲ್ಲಿ ಶೇ. 46.9 ಮತಗಳನ್ನು ಕಾಂಗ್ರೆಸ್, ಶೇ. 33.2 ಮತಗಳನ್ನು ಬಿಜೆಪಿ ಗಳಿಸಿವೆ. ಹೊರ ಮಣಿಪುರದಲ್ಲಿ ಕಾಂಗ್ರೆಸ್ ಶೇ. 48.3, ಎನ್.ಪಿ.ಎಫ್ 37.6ರಷ್ಟು ಮತ ಪಡೆದಿವೆ. ಎರಡು ಕ್ಷೇತ್ರಗಳ ಫಲಿತಾಂಶವನ್ನು ಒಟ್ಟಿಗೆ ನೋಡಿದರೆ ಕಳೆದ ಚುನಾವಣೆಗಿಂತ ಈ ಬಾರಿ ಕಾಂಗ್ರೆಸ್ 22.88ರಷ್ಟು ಭಾರಿ ಪ್ರಮಾಣದ ಮತಗಳನ್ನು ಹೆಚ್ಚಿಸಿಕೊಂಡಿದ್ದರೆ, ಬಿಜೆಪಿ ಶೇ. 17.75ರಷ್ಟು ಮತಗಳನ್ನು ಕಳೆದುಕೊಂಡಿದೆ.

ಚುನಾವಣೆಯ ಅಂಕಿ- ಅಂಶಗಳಲ್ಲಿ ಈ ಪ್ರಮಾಣದ ಇಳಿಕೆ ಯಾವುದೇ ಪಕ್ಷಕ್ಕೆ ಒಳ್ಳೆಯ ಸಂದೇಶವಂತೂ ಅಲ್ಲ. ಈ ಮೂಲಕ ಮೋದಿ ಮತ್ತು ಬಿರೇನ್ ಸಿಂಗ್ ಅವರಿಗೆ ಸ್ಪಷ್ಟ ಸಂದೇಶವನ್ನು ಮಣಿಪುರ ಜನತೆ (ಕುಕಿ, ಮೈತೇಯಿ, ನಾಗಾ ಮೂವರು) ನೀಡಿದ್ದಾರೆ. ಸಂಘರ್ಷ ಆರಂಭವಾದ ಮೇಲೆ ಈವರೆಗೂ ಮಣಿಪುರಕ್ಕೆ ಕಾಲಿಡದ ಮೋದಿ ಈಗಲಾದರೂ ಮಣಿಪುರ ಜನತೆಯ ಕೂಗನ್ನು ಅರ್ಥಮಾಡಿಕೊಳ್ಳುತ್ತಾರೋ, ನೋಡೋಣ.

-ಪಿಪೀಲಿಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X