- ಇಂದಿನಿಂದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ದಳಪತಿಗಳ ಪ್ರವಾಸ
- ಪಕ್ಷದ ಅಭ್ಯರ್ಥಿಗಳ ಪರ ಎಚ್ಡಿಡಿ, ಎಚ್ಡಿಕೆ ಚುನಾವಣಾ ಪ್ರಚಾರ
ಜೆಡಿಎಸ್ ನ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷದ ನೆಲೆ ಉಳಿಸಿಕೊಳ್ಳಲು ಜೆಡಿಎಸ್ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ.
ಪಕ್ಷಾಂತರದಿಂದಾಗಿ ಈ ಭಾಗದ ಹಲವು ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲಿ ಜೆಡಿಎಸ್ ಈಗ ಅಸ್ತಿತ್ವ ಉಳಿಸಿಕೊಳ್ಳಲು “ಮಿಷನ್ ಹಳೆ ಮೈಸೂರು” ಆರಂಭಿಸಿದೆ.
ಇದಕ್ಕಾಗಿ ಖುದ್ದು ಜೆಡಿಎಸ್ ದಳಪತಿಗಳಾದ ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಇಂದಿನಿಂದ (ಏ.25) ಮೈಸೂರು ಭಾಗದಲ್ಲಿ ಇಬ್ಬರೂ ನಾಯಕರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮೊದಲ ಬಾರಿ ಹಳೆ ಮೈಸೂರಿನ ಕ್ಷೇತ್ರಗಳ ಮೇಲೆ ಹೆಚ್ಚಿನ ಆಸ್ಥೆ ವಹಿಸಿ ಪ್ರಚಾರ ಕಾರ್ಯ ನಡೆಸುತ್ತಿವೆ.
ಬಿಜೆಪಿಯಿಂದ ಜೆ ಪಿ ನಡ್ಡಾ, ಅಮಿತ್ ಶಾ, ಮಂಡ್ಯದಲ್ಲಿ ಯುಪಿ ಸಿಎಂ ಆದಿತ್ಯನಾಥ್ ಹಾಗೂ ತಿಂಗಳಾಂತ್ಯದಲ್ಲಿ ಮೋದಿ ಪ್ರಚಾರ ನಡೆಸಿದರೆ, ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರ ಪ್ರಮುಖರೂ ಇಲ್ಲಿ ಪಕ್ಷದ ಪರ ರೋಡ್ ಶೋ ನಡೆಸಲಿದ್ದಾರೆ.
ಹೀಗೆ ಘಟಾನುಘಟಿ ನಾಯಕರ ನೇತೃತ್ವದಲ್ಲಿ ಎರಡೂ ಪಕ್ಷಗಳು ಹಳೆ ಮೈಸೂರು ಭಾಗದ ಕ್ಷೇತ್ರಗಳನ್ನು ಕಬ್ಜಾ ಮಾಡಿಕೊಳ್ಳುವ ತಂತ್ರ ಹೆಣೆಯುತ್ತಿವೆ. ಈ ಹಿನ್ನೆಲೆಯಲ್ಲಿ ತಮ್ಮ ಭದ್ರ ನೆಲೆ ಕೈಜಾರದಂತೆ ನೋಡಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಪಕ್ಷದ ಪ್ರಮುಖರಿಬ್ಬರೂ ಅನಾರೋಗ್ಯದ ನಡುವೆ ಪ್ರಚಾರಾಂಗಣಕ್ಕೆ ಇಳಿಯಲಿದ್ದಾರೆ.
ಜಾತ್ಯತೀತ ಜನತಾದಳ ಪ್ರಮುಖರ ಚುನಾವಣಾ ಪ್ರಚಾರ ಯಾತ್ರೆ ಹೀಗಿರಲಿದೆ. ಇಂದು ಕೆ.ಆರ್.ನಗರ, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ದೇವೇಗೌಡರು ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಹಾಗೆಯೇ ಕೃಷ್ಣರಾಜ, ಚಾಮರಾಜ, ವರುಣಾ, ಟಿ ನರಸೀಪುರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಮತಯಾಚನೆ ಮಾಡಲಿದ್ದಾರೆ. ಚುನಾವಣೆ ಮುಗಿಯುವವರೆಗೂ ತನ್ನ ಪ್ರಾಬಲ್ಯದ ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ಮತ್ತು ಸಭೆಗಳನ್ನು ನಡೆಸಲು ಜೆಡಿಎಸ್ ತೀರ್ಮಾನಿಸಿದೆ.
ಆ ಮೂಲಕ ಒಗ್ಗಟ್ಟಿನ ಶಕ್ತಿ ಪ್ರದರ್ಶನದ ಮಾಡಲಿರುವ ಜಾತ್ಯತೀತ ಜನತಾದಳ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಗೌಡರ ಪ್ರವಾಸ
ಏಪ್ರಿಲ್ 25ರ ಬೆಳಗ್ಗೆ ಬೆಳಗ್ಗೆ 11 ಗಂಟೆಗೆ ಪಿರಿಯಾಪಟ್ಟಣಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದ ಅವರು ಅಲ್ಲಿಂದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ ಪರ ಮತಯಾಚನೆ ಮಾಡಿ, ನಂತರ ಮಧ್ಯಾಹ್ನ 2 ಗಂಟೆಗೆ ಕೆ. ಆರ್ ನಗರದಲ್ಲಿ ಪಕ್ಷದ ಅಭ್ಯರ್ಥಿ ಸಾ.ರಾ. ಮಹೇಶ್ ಪರ ಹೊಸೂರು, ಸಾಲಿಗ್ರಾಮ, ಮಿರ್ಲೆ ಗ್ರಾಮದಲ್ಲಿ ಪ್ರಚಾರ ಮಾಡಲಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಸಿದ್ಧಾಂತ ಬದ್ಧತೆ ಕಳೆದುಕೊಂಡಿರುವ ಬಿಜೆಪಿ ಈಗ ವಿನಾಶದತ್ತ ಸಾಗುತ್ತಿದೆ;…
ಎಚ್ಡಿಕೆ ಪ್ರಚಾರ
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿ ಸೋಮವಾರ ಸಂಜೆ ಡಿಸ್ಚಾರ್ಜ್ ಆಗಿದ್ದರು. ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದರೂ ಅದನ್ನೂ ಲೆಕ್ಕಿಸದೆ ಪಕ್ಷದ ಪರ ಕೆಲಸ ಮಾಡಲು ಹೆಚ್ಡಿಕೆ ಮುಂದಾಗಿದ್ದಾರೆ.
ಹೀಗಾಗಿ ಮಂಗಳವಾರ ಬೆಳಗ್ಗೆ 11ಗಂಟೆಗೆ ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಕುಮಾರಸ್ವಾಮಿ ಭಾಗವಹಿಸಿ ಮುಂದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನಂತರ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿನ ಕಾರ್ಯಕರ್ತರ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಜೆಡಿಎಸ್ ಅಭ್ಯರ್ಥಿ ಕೆ ವಿ ಮಲ್ಲೇಶ್ ಪರ ಮತಯಾಚಿಸಲಿದ್ದಾರೆ.
ಮಧ್ಯಾಹ್ನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ ಪರ ಮತಬೇಟೆ ನಡೆಸಲಿರುವ ಎಚ್ಡಿಕೆ, ನರಸೀಪುರದ ಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ಸಭೆ ನಡೆಸಲಿದ್ದಾರೆ.