- ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
- ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೆಂದು ಶೆಟ್ಟರ್ ಭವಿಷ್ಯ
ಸಿದ್ದಾಂತ ಬದ್ದತೆ ಕಳೆದುಕೊಂಡಿರುವ ಬಿಜೆಪಿ ಈಗ ವಿನಾಶದತ್ತ ಸಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹಾನಗಲ್ ನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ರ್ಯಾಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಜೊತೆ ವೇದಿಕೆ ಹಂಚಿಕೊಂಡ ಅವರು ಮಾತೃ ಪಕ್ಷದ ವಿರುದ್ದ ವಾಕ್ಪ್ರಹಾರ ನಡೆಸಿದರು.
ಕುಟುಂಬ ರಾಜಕಾರಣದಿಂದ ದೇಶ ಹಾಳಾಗುತ್ತಿದೆ. ಹಾಗಾಗಿ ಇದಕ್ಕೆ ನಮ್ಮ ಪಕ್ಷ ಆಸ್ಪದ ಕೊಡುವುದಿಲ್ಲ ಎಂದು ಹೇಳಿಕೊಂಡೇ ತಮ್ಮ ಪಕ್ಷದ ಬಹುಪಾಲು ರಾಜಕಾರಣಿಗಳ ಕುಟುಂಬಸ್ಥರಿಗೆ ಟಿಕೆಟ್ ನೀಡಿವೆ. ಇದು ಆ ಪಕ್ಷದ ಬದ್ಧತೆ ಎಂದು ಲೇವಡಿ ಮಾಡಿದರು.
ಬಿಜೆಪಿ ಹೇಳುವುದೊಂದು ಮಾಡುವುದೊಂದು ಅದಕ್ಕೆ ಸಿದ್ಧಾಂತ ಬದ್ಧತೆ ಇಲ್ಲ.ಬೇಕಾದಾಗ ಅವಶ್ಯಕತೆಗೆ ಬದಲಾಗುವುದಾದರೆ ನಿಮಗೆ ಸಿದ್ಧಾಂತ ಏಕೆ ಬೇಕು ಎಂದು ಶೆಟ್ಟರ್ ಕಮಲ ಪಕ್ಷವನ್ನು ಪ್ರಶ್ನಿಸಿದರು.
ಎಪ್ಪತೈದು ವರ್ಷ ಮೀರಿದವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಇವರು 67 ವರ್ಷ ನನಗೇ ಟಿಕೆಟ್ ನಿರಾಕರಿಸಿದರು,ಆದರೆ ಎಪ್ಪತೈದು ಮೀರಿದ ಅವರ ಆಪ್ತರುಗಳಿಗೆ ಟಿಕೆಟ್ ನೀಡಿದರು.
ನನಗೆ ಟಿಕೆಟ್ ನಿರಾಕರಣೆ ಮಾಡಿದ್ದಕ್ಕೆ ಇವರ ಬಳಿ ಯಾವುದೇ ಉತ್ತರವಿಲ್ಲ. ನನ್ನ ಬದಲಿಗೆ ನನ್ನ ಸೊಸೆಗೆ ಟಿಕೆಟ್ ನೀಡುವುದಾಗಿ ಹೇಳಿದರು. ಇದು ಶಿಸ್ತಿನ ಪಕ್ಷದ ಕುಟುಂಬ ರಾಜಕಾರಣ ವಿರೋಧಿಸುವ ಪರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಈಗ ಮೊದಲಿನ ಪಕ್ಷವಾಗಿಲ್ಲ ಯಾರೋ ನಾಲ್ಕು ಜನರ ಕೈಯಲ್ಲಿ ಪಕ್ಷ ನಿಂತಿದೆ. ಅವರು ಆ ಪಕ್ಷವನ್ನು ಮುಗಿಸುತ್ತಾರೆ, ನಾವು ಕಟ್ಟಿದ ಪಕ್ಷವನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಆಗುವುದಿಲ್ಲ ಹಾಗಾಗಿ ನಾನು ಪಕ್ಷ ಬದಲಾಯಿಸುವ ನಿರ್ಧಾರ ಮಾಡಿದೆ ಎಂದರು.
ಈ ಸುದ್ದಿ ಓದಿದ್ದೀರಾ?:ಬಿಜೆಪಿಯಲ್ಲಿ 40% ಭ್ರಷ್ಟಾಚಾರ ಇಲ್ಲವೆಂದವರು ಯಾರು : ಲಕ್ಷ್ಮಣ ಸವದಿ ಪ್ರಶ್ನೆ
ಮೂವತ್ತು ವರ್ಷ ಪಕ್ಷಕ್ಕೆ ದುಡಿದ ನನ್ನನ್ನೂ ಕನಿಷ್ಟ ಗೌರವದಿಂದ ಅವರು ನಡೆಸಿಕೊಳ್ಳಲಿಲ್ಲ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣಕ್ಕೆ ನನಗೆ ಗೌರವ ಕೊಡುವ ಕಾಂಗ್ರೆಸ್ ಸೇರಿದೆ.
ಹೀಗಾಗಿ ಈ ಬಾರಿ ಬಿಜೆಪಿ ಬದಲು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವೆ. ನಿಮ್ಮ ಅಭಿಮಾನ, ಆಶೀರ್ವಾದ ಕಾಂಗ್ರೆಸ್ ಜೊತೆಗೆ ನನ್ನ ಮೇಲೂ ಇರಲಿ. ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾವೆಲ್ಲ ಶ್ರಮಿಸೋಣ ಎಂದು ಶೆಟ್ಟರ್ ಹೇಳಿದರು.