ನನ್ನದೇ ಒಬ್ಬ ವಿದ್ಯಾರ್ಥಿನಿ ಕಲಬುರಗಿಯಿಂದ ಬಿಹಾರದ ಗಯಾಕ್ಕೆ ಹೋಗಿ ಪರೀಕ್ಷೆ ಬರೆದು ಇನ್ನೂ ವಿಶ್ವವಿದ್ಯಾಲಯ ತಲುಪಿಲ್ಲ. ಆಗಲೇ ತಾನು ಬರೆದ ಪರೀಕ್ಷೆ ರದ್ದಾಗಿದೆ ಎಂಬ ಸುದ್ದಿ ಕೇಳಿ ಅಘಾತಕ್ಕೆ ಒಳಗಾಗಿದ್ದಾಳೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅನೇಕ ಪರೀಕ್ಷಾ ವಂಚನೆಯ ಪ್ರಕರಣಗಳು ವರದಿಯಾಗುತ್ತಿವೆ. ಈ ಅಂಶ ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಪ್ರತಿ ವರ್ಷ ಉತ್ತೀರ್ಣರಾದ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಿದೆ. ಪರೀಕ್ಷಾ ಸಮಯದಲ್ಲಿ ಸಾಮೂಹಿಕ ನಕಲು, ವಿದ್ಯಾರ್ಥಿಗಳನ್ನು ವಂಚಿಸುವುದು, ಕೊಠಡಿ ಮೇಲ್ವಿಚಾರಕರಿಗೆ ಲಂಚ ನೀಡುವುದು ಮತ್ತು ಆಧುನಿಕ ಸಂವಹನ ಸಾಧನಗಳ ಮೂಲಕ ಮಾಹಿತಿ ಕಳುಹಿಸುವುದು ಇತ್ಯಾದಿ ತಂತ್ರಗಳನ್ನು ಬಳಸಿಕೊಂಡು ನಡೆಸುವ ಪರೀಕ್ಷಾ ದುಷ್ಕೃತ್ಯಗಳು ಆಗಾಗ ವರದಿಯಾಗುತ್ತಿದ್ದವು. ಈ ಅವ್ಯವಸ್ಥೆಯ ಕಾರಣಕ್ಕೆ ಹಣವುಳ್ಳ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಮತ್ತು ವೈದ್ಯಕೀಯ ಸೇರಿದಂತೆ ಬೇಡಿಕೆಯುಳ್ಳ ಕೋರ್ಸ್ಗಳನ್ನು ಸೇರಲು ಸಾಧ್ಯವಾಗಿದೆ ಎಂದು ವರದಿಗಳು ಹೇಳುತ್ತಿವೆ. ಈ ಕೃತ್ಯದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆ ಮತ್ತು ಪರೀಕ್ಷಾ ಮಂಡಳಿಗಳ ಅಧಿಕಾರಿಗಳ ನಡುವೆ ನಂಟು ಇತ್ತು ಎಂಬುದು ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ.
ಭಾರತದಂತಹ ದೇಶದಲ್ಲಿ ನಾವು ಪರೀಕ್ಷೆಗಳನ್ನು ಎಷ್ಟು ‘Centralise’ (ಕೇಂದ್ರೀಕೃತ) ಮಾಡುತ್ತೇವೆಯೋ ಅಷ್ಟು ಭ್ರಷ್ಟಾಚಾರ ಹೆಚ್ಚಾಗುತ್ತದೆ. ಇಂದು ನಿರುದ್ಯೋಗ ಯಾವ ಪ್ರಮಾಣದಲ್ಲಿ ಇದೇ ಅಂದರೆ, ಕಲಿತವರೇ ಸಣ್ಣಪುಟ್ಟ ಪರೀಕ್ಷಾ ಕೇಂದ್ರಗಳ ಅನುಮತಿಯನ್ನು ಭ್ರಷ್ಟಾಚಾರಕ್ಕಾಗಿಯೇ ಪಡೆಯುವ ದಂಧೆಯೇ ನಡೆಯುತ್ತಿದೆ ಎನ್ನುವ ಆರೋಪಗಳು ಇವೆ. ಆರಂಭದಲ್ಲಿ ದೂರಶಿಕ್ಷಣದಿಂದ ಆರಂಭವಾದ ಈ ಪ್ರವೃತ್ತಿ ನಂತರ ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತಲುಪಿತ್ತು. ಈಗ NEET/NET ಅಂತಹ ಅರ್ಹತಾ ಪರೀಕ್ಷೆಗಳಿಗೂ ಇದು ತಲುಪಿದೆ.
ಈ ಎಲ್ಲಾ ಬೆಳವಣಿಗೆಗಳ ಕಾರಣಕ್ಕೆ ಇಂದು ಭಾರತೀಯ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗಳಲ್ಲಿನ ಅವ್ಯವಹಾರಗಳನ್ನು ತಡೆಯಲು ಸರ್ಕಾರಗಳು ಕಾಲದಿಂದ ಕಾಲಕ್ಕೆ ಪ್ರಯತ್ನಿಸುತ್ತಿದ್ದರೂ, ಅದರ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲಾಗಿಲ್ಲ ಎಂಬ ವಾಸ್ತವ ನಮ್ಮ ಮುಂದಿದೆ.
ಈಗ ನೀಟ್ ಪೇಪರ್ ಲೀಕ್ ಆಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಇದರ ಬೆನ್ನಲ್ಲೆ ಸರ್ಕಾರ ನೀಟ್, ಪಿ ಜಿ ಪರೀಕ್ಷೆ ಮತ್ತು ಯುಜಿಸಿ ನೆಟ್ ಪರೀಕ್ಷೆ, ಸಿಎಸ್ಐಆರ್ ನೆಟ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಇದರಿಂದ ಲಕ್ಷಾಂತರ ಯುವಜನರು ಅತಂತ್ರರಾಗಿದ್ದಾರೆ. ನನ್ನದೇ ಒಬ್ಬ ವಿದ್ಯಾರ್ಥಿನಿ ಕಲಬುರಗಿಯಿಂದ ಬಿಹಾರದ ಗಯಾಕ್ಕೆ ಹೋಗಿ ಪರೀಕ್ಷೆ ಬರೆದು ಇನ್ನೂ ವಿಶ್ವವಿದ್ಯಾಲಯ ತಲುಪಿಲ್ಲ. ಆಗಲೇ ತಾನು ಬರೆದ ಪರೀಕ್ಷೆ ರದ್ದಾಗಿದೆ ಎಂಬ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದಾಳೆ.
ವರ್ಷಾನುಗಟ್ಟಲೆ ಶ್ರಮ, ಸಂಪನ್ಮೂಲ, ಪೋಷಕರ ಕಷ್ಟ ಎಲ್ಲವೂ ವ್ಯವಸ್ಥೆಯ ಅಸಮರ್ಥತೆಯ ಕಾರಣಕ್ಕೆ ಪರೀಕ್ಷೆ ರದ್ದು ಎಂಬ ಘೋಷಣೆಯಲ್ಲಿ ಕೊಚ್ಚಿ ಹೋಗಿವೆ. ಕಳೆದ ಏಳು ವರ್ಷಗಳಲ್ಲಿ ಸುಮಾರು 15 ರಾಜ್ಯಗಳ ಸುಮಾರು 70 ಪರೀಕ್ಷೆಗಳಲ್ಲಿ ಅಕ್ರಮ ನಡೆದಿವೆ. ಇದರಿಂದ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಕನಸನ್ನು ಹೊತ್ತ 1.7 ಕೋಟಿ ಯುವಜನರು ಭಾದಿತರಾಗಿದ್ದಾರೆ ಎನ್ನುವ ಅಂಕಿ-ಅಂಶಗಳು ಈ ಅವ್ಯವಸ್ಥೆಯ ಕರಾಳ ಮುಖವನ್ನು ತೆರೆದಿಡುತ್ತಿವೆ. ನೀಟ್ ಪೇಪರ್ ಲೀಕ್ ಹಗರಣದ ಬೆನ್ನಲ್ಲೆ ನಡೆಯುತ್ತಿರುವ ತನಿಖೆಗಳು ಭಾರತದಲ್ಲಿ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಗಳ ಪೇಪರ್ ಲೀಕ್ ಪ್ರಕರಣದಿಂದಾಗಿ ಪರೀಕ್ಷಾ ಅಕ್ರಮ ಎನ್ನುವುದು ದೊಡ್ಡ ಮಟ್ಟದ ವ್ಯವಸ್ಥಿತ ಮಾಫಿಯಾದ ರೀತಿ ಕೆಲಸ ಮಾಡುತ್ತಿದೆ ಎಂಬುದು ಬೆಳಕಿಗೆ ಬರುತ್ತಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೊಂದಿದೆ; ಈ ಪ್ರಕರಣವನ್ನು ಆಧರಿಸಿ ನಡೆಯುತ್ತಿರುವ ಚರ್ಚೆಗಳು ಒಂದು ಕಡೆ ಈ ಒಟ್ಟು ಅಕ್ರಮ ಕೆಲವು ವ್ಯಕ್ತಿಗಳು ಮತ್ತು ವ್ಯಕ್ತಿಗಳ ಗುಂಪು ನಡೆಸಿರುವುದು, ಇದೊಂದು ವ್ಯವಸ್ಥಿತ ಭ್ರಷ್ಟಾಚಾರದ ಪ್ರಕರಣ ಎಂಬ ವಾದವನ್ನು ಮುಂದಕ್ಕೆ ತರುತ್ತಿದ್ದರೆ, ಮತ್ತೊಂದು ಕಡೆ ಇಡೀ ಪ್ರಕರಣವನ್ನು ಪಕ್ಷ-ರಾಜಕೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗೆ ಮಾಡುವ ಮೂಲಕ ‘ಈ ದೇಶದ ವ್ಯವಸ್ಥೆಯೇ ಎಷ್ಟು ಕಾರಣ’ ಎಂಬ ಮುಖ್ಯ ಅಂಶವನ್ನೆ ಮರೆಮಾಚಲಾಗುತ್ತಿದೆ. ಈ ಅಂಶವನ್ನು ಪ್ರಸ್ತಾಪಿಸುವ ಮೂಲಕ ಹಲವಾರು ಚಿಂತಕರು ನಮ್ಮ ಗಮನ ಸೆಳೆಯುತ್ತಿದ್ದಾರೆ.
ನಮ್ಮ ನಡುವಿನ ಪ್ರಮುಖ ಚಿಂತಕಿ ರಿಚಾ ಗುಪ್ತಾ ಅವರು ಈ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ “ಈ ಬಾರಿ ಭಾರತದಲ್ಲಿ ಸುಮಾರು 24 ಲಕ್ಷ ಆಕಾಂಕ್ಷಿಗಳು ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆ ನೀಟ್ ತೆಗೆದುಕೊಂಡಿದ್ದರು. ಆದರೆ ಲಭ್ಯವಿದ್ದ ಸೀಟುಗಳ ಸಂಖ್ಯೆ ಕೇವಲ ಒಂದು ಲಕ್ಷ! ಅದರಲ್ಲೂ ಸರ್ಕಾರಿ ಸೀಟುಗಳ ಸಂಖ್ಯೆ ಕೇವಲ 55,000 ಮಾತ್ರ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಭಾರತವು ಐದನೇ ಅತಿದೊಡ್ಡ ಆರ್ಥಿಕತೆ ಎಂದು ನಾವು ಹೇಳಿಕೊಳ್ಳುತ್ತಿರುವ ಕಾಲದಲ್ಲಿ ನಮ್ಮ ವ್ಯವಸ್ಥೆಗೆ ನಮ್ಮದೇ ಯುವಜನರ ಶೈಕ್ಷಣಿಕ ಆಕಾಂಕ್ಷೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬುದು ನಿಜವಾದ ಹಗರಣವಾಗಿದೆ” ಎಂಬ ಸಂಗತಿಯನ್ನು ರಿಚಾ ಮುಂಡಿಸುತ್ತಾರೆ.

ಮುಂದುರಿದು ದೇಶವೊಂದರ ಯುವಜನರ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲಾಗದ ವ್ಯವಸ್ಥೆ ಅವರ ಮೇಲೆ “ಮೆರಿಟ್” ಎಂಬ ಹೊಸ ವರ್ಗೀಕರಣವನ್ನು ಪರಿಚಯಿಸುವ ಮೂಲಕ ತನ್ನ ವೈಪಲ್ಯವನ್ನು ಅವರ ಮೇಲೆ ಹೇರುತ್ತಿದೆ. ಈ ಮೆರಿಟ್ ಎನ್ನುವ ಪರಿಭಾಷೆ ಸಮಾಜದ ಸಣ್ಣ ಸಣ್ಣ ಸಮುದಾಯಗಳ ಯುವಜನರನ್ನು ಅವರ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿ ದೊಡ್ಡ ತೊಡಕಾಗಿ ನಿಂತಿದೆ. ಇದು ಕೇವಲ ವೈದ್ಯಕೀಯ ಶಿಕ್ಷಣದ ಸಮಸ್ಯೆಯಲ್ಲ – ಶಿಕ್ಷಣದಿಂದ ಉದ್ಯೋಗದವರೆಗೆ ಇದೇ ಸಮಸ್ಯೆಯನ್ನು ಯುವಜನರು ಎದುರಿಸುತ್ತಿದ್ದಾರೆ ಎಂಬ ಅಂಶದ ಕುರಿತು ರಿಚಾ ಗಮನ ಸೆಳೆದಿದ್ದಾರೆ.
ಈ ಎಲ್ಲಾ ಅವ್ಯವಸ್ಥೆಗಳಿಗೆ ಮುಖ್ಯವಾದ ಕಾರಣ ‘ಅವಕಾಶಗಳಲ್ಲಿನ ಅಸಮಾನತೆ’ ಆಗಿದೆ. ಇದನ್ನು ಎರಡು ರೀತಿಯಲ್ಲಿ ಮರೆಮಾಚಲು ವ್ಯವಸ್ಥೆ ಪ್ರಯತ್ನಿಸುತ್ತಿದೆ. ಒಂದು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಆಧರಿಸಿ ನಿಮಗೆ ಮೆರಿಟ್ ಇಲ್ಲ ಎನ್ನುವ ಮೂಲಕ, ಮತ್ತೊಂದು ಇಡೀ ಚರ್ಚೆಯನ್ನು ಪರೀಕ್ಷಾ ಅಕ್ರಮದ ಸುತ್ತಲೇ ಕಟ್ಟುವ ಮೂಲಕ ನಿರ್ವಹಿಸಲಾಗುತ್ತಿದೆ.
ದೇಶದ ಯುವಜನರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಪ್ರಜಾತಾಂತ್ರಿಕವಾಗಿ ಒಳಗೊಳ್ಳುವಿಕೆ ಈ ಕಾಲದ ಅಗತ್ಯವಾಗಿದೆ. ಆದರೆ, ಇದಕ್ಕೆ ಬದಲಾಗಿ ನಾವು ಅವರನ್ನು ಈ ಎಲ್ಲಾ ಅವಕಾಶಗಳಿಂದ ಹೊರಗಿಡುವ ನೀತಿಗಳನ್ನೆ ರೂಪಿಸಿಕೊಂಡಿದ್ದೇವೆ. ನಮ್ಮ ವ್ಯವಸ್ಥೆ ಯಶಸ್ಸು ಮತ್ತು ಸಾಮಾಜಿಕ ಸ್ಥಾನಮಾನವನ್ನು ಸಮಾನವಾಗಿ ಹಂಚಲು ವಿಫಲವಾಗಿರುವ ಕಾರಣಕ್ಕೆ ನಾವು ಸ್ಪರ್ಧಾತ್ಮಕ ಪರೀಕ್ಷೆಯನ್ನೇ ಆಯ್ಕೆಯ ಮಾನದಂಡವಾಗಿ ನೋಡಿ ಅದರಲ್ಲಿ ಪಾಸಾದದ್ದನ್ನೆ ಯಶಸ್ಸು ಮತ್ತು ರಾಷ್ಟ್ರೀಯ ಘನತೆಯಂತೆ ಬಿಂಬಿಸುತ್ತಿದ್ದೇವೆ. ಹಾಗೆ, ನೋಡುವುದಾದರೆ ಇದು ನಿಜವಾದ ಹಗರಣವಾಗಿದೆ ಎಂಬ ವಿಶ್ಲೇಷಣೆಯನ್ನು ರಿಚಾ ಮಂಡಿಸುತ್ತಾರೆ.
ಇದನ್ನೂ ಓದಿ ದೇಶಕ್ಕೆ ನೀಟ್ ಅಗತ್ಯವಿಲ್ಲ, ಅದನ್ನು ರದ್ದುಗೊಳಿಸುವುದೊಂದೇ ಪರಿಹಾರ: ತಮಿಳು ನಟ ವಿಜಯ್
ಈ ಸಮಸ್ಯೆಗೆ ಇರುವ ಪರಿಹಾರ ಕೇವಲ ತನಿಖೆಯಲ್ಲ. ಬದಲಾಗಿ ಸಮಸ್ಯೆಯ ಆಳ –ಅಗಲವನ್ನು ಅರ್ಥಮಾಡಿಕೊಂಡು ಅದನ್ನು ಬಗೆಹರಿಸಲು ಪೂರಕವಾದ ಸಾಂಸ್ಥಿಕ ಪ್ರಕ್ರಿಯೆಯನ್ನು ರೂಪಿಸಲು ಪಕ್ಷಾತೀತವಾಗಿ ರಾಜಕೀಯ ವರ್ಗ ಒಂದಾಗಬೇಕಿದೆ. ಜೊತೆಗೆ ದೇಶದ ಯುವಜನರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಬಲ್ಲ ಗುಣಮಟ್ಟದ ಶಿಕ್ಷಣದ ಮೂಲಸೌಕರ್ಯ ಮತ್ತು ಅವಕಾಶಗಳನ್ನು ನೀಡಲು ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸಬೇಕಿದೆ. ಎರಡನೆಯದಾಗಿ ರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣೆಯುಳ್ಳ, ಆದರೆ ಸ್ಥಳೀಯವಾಗಿ ವಿಕೇಂದ್ರೀಕೃತವಾಗಿ ನಡೆಸಬಹುದಾದ ಪರೀಕ್ಷಾ ಕ್ರಮಗಳನ್ನು ಅನುಸರಿಸಬೇಕಿದೆ.

ಡಾ. ಕಿರಣ್ ಎಂ ಗಾಜನೂರು
ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ