ಈ ದಿನ ಸಂಪಾದಕೀಯ | ಅಂಬೇಡ್ಕರ್ ಪ್ರತಿಮೆಗೆ ಅವಮಾನ: ತನ್ನ ಮುಖಕ್ಕೆ ತಾನೇ ಸಗಣಿ ಎರಚಿಕೊಂಡ ‘ನಾಗರಿಕ ಸಮಾಜ’

Date:

Advertisements
ಬಹುಮುಖ ಪ್ರತಿಭೆಯ, ಬಹು ಆಯಾಮಗಳ ಮಹಾ ಮೇಧಾವಿ ಅಂಬೇಡ್ಕರ್ ಅವರನ್ನು ಒಂದು ವರ್ಗದ ಪರ ಎಂದು ಪರಿಭಾವಿಸಿ ಅವಮಾನಿಸುವುದು ನಾಗರಿಕ ಸಮಾಜಕ್ಕೆ ತಕ್ಕುದಲ್ಲದ ನಡೆ. ಈ ಕೃತ್ಯದ ಮೂಲಕ ಅವರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ ಮತ್ತು ತಮ್ಮ ಸುತ್ತಲಿನ ನಾಗರಿಕ ಸಮಾಜವನ್ನೂ ಅವಮಾನಿಸಿದ್ದಾರೆ.

ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ವಿರೂಪಗೊಳಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಾಮಫಲಕದ ಮೇಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆ ರಾತ್ರೋರಾತ್ರಿ ಕಿಡಿಗೇಡಿಗಳು ಸಗಣಿ ಬಳಿದಿದ್ದಾರೆ. ಇದು ಬಾಬಾ ಸಾಹೇಬರನ್ನು ಅವಮಾನಿಸುವುದು ಅವರ ಉದ್ದೇಶವಾಗಿತ್ತು ಎಂದು ತೋರುತ್ತದೆ.

ಇದೇನೂ ಹೊಸದಲ್ಲವಾದರೂ ಪದೆ ಪದೇ ಯಾಕೆ ಅಂಬೇಡ್ಕರ್ ಅವರ ಪ್ರತಿಮೆಗಳು ಹಾಗೂ ಭಾವಚಿತ್ರಗಳು ಹೀಗೆ ಕೆಲವರ ಅಸಹನೆಗೆ ಗುರಿಯಾಗುತ್ತಿವೆ ಎಂಬುದರ ಕುರಿತು ಚಿಂತಿಸಬೇಕಾಗಿದೆ. ಹೀಗೆ ಮಾಡುವವರು ದಲಿತರಂತೂ ಅಲ್ಲ ಎನ್ನುವುದನ್ನು ತಿಳಿಯಲು ಮಹಾ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ವಾಸ್ತವವಾಗಿ, ಅಂಬೇಡ್ಕರ್ ದಲಿತರ ಐಕಾನ್ ಎಂದು ಇತರರು ಭಾವಿಸಿರುವುದೇ ಕೆಲವರು ಇಂಥ ಕೃತ್ಯಗಳಿಗೆ ಇಳಿಯಲು ಒಂದು ಕಾರಣವಾಗಿದೆ.

ಹಾಗಿದ್ದರೆ, ಅಂಬೇಡ್ಕರ್ ಅವರು ದಲಿತರ ಐಕಾನ್ ಮಾತ್ರವೇ? ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿರುವುದು ಈ ಕಾಲಮಾನದ ವಿಪರ್ಯಾಸವೇ ಸರಿ. ಹಳೆಯ ವಿದ್ಯಮಾನವೊಂದರ ಮೂಲಕ ಈ ಪ್ರಶ್ನೆಗೆ ಇದಿರಾಗೋಣ. ‘ಔಟ್‌ಲುಕ್’ ಪತ್ರಿಕೆ 2012ರಲ್ಲಿ ನಡೆಸಿದ್ದ ‘ಅತ್ಯಂತ ಶ್ರೇಷ್ಠ ಭಾರತೀಯ’ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದದ್ದು ಡಾ.ಬಿ ಆರ್ ಅಂಬೇಡ್ಕರ್. ಹಲವು ಹಂತಗಳ ಸಮೀಕ್ಷೆಯಲ್ಲಿ ಹಲವು ಜಾತಿ ಧರ್ಮಗಳ, ಹಲವು ಕ್ಷೇತ್ರಗಳ ಸಾಧಕರ ನಡುವೆ ‘ಶ್ರೇಷ್ಠ ಭಾರತೀಯ’ ಮನ್ನಣೆ ಅಂಬೇಡ್ಕರ್ ಅವರಿಗೆ ಸಂದಿತ್ತು. ಅದು ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಮತ್ತು ಇಲ್ಲಿನ ನೊಂದ ಸಮುದಾಯಗಳಿಗೆ ಮಿಡಿದ ಪರಿಗೆ ಭಾಷ್ಯದಂತಿತ್ತು.

Advertisements

ಅಂಬೇಡ್ಕರ್ ಅವರನ್ನು ಕುರಿತಂತೆ ನಾವು ಪ್ರಸ್ತುತ ಎರಡು ಅತಿರೇಕದ ಪ್ರತಿಕ್ರಿಯೆಗಳನ್ನು ಕಾಣುತ್ತಿದ್ದೇವೆ. ಒಂದು, ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧವಾದ, ಹಿಂದುತ್ವದ ಪ್ರತಿಪಾದನೆಯೇ ಜೀವಾಳವಾದ ಸಂಘ ಪರಿವಾರದವರು ಅಂಬೇಡ್ಕರ್ ಅವರನ್ನು ‘ತಮ್ಮವ’ರನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿರುವುದು. ಅಂಬೇಡ್ಕರ್ ಅವರ ಚಿಂತನೆಯ ಮೂಲ ನೆಲೆಯೇ ಹಿಂದೂ ವಿರೋಧ ಎನ್ನುವುದನ್ನು ಅವರು ಜಾಣತನದಿಂದ ಮರೆಮಾಚುತ್ತಿದ್ದಾರೆ. ಅಂಬೇಡ್ಕರ್ ಅವರ ರಾಜಕೀಯ ಮತ್ತು ಬೌದ್ಧಿಕ ಚಿಂತನೆಗಳಿಗೆ ಮೂಲಕಾರಣವೇ ಬ್ರಾಹ್ಮಣ್ಯದ ಶೋಷಣೆ.

ಇನ್ನೊಂದು, ಅಂಬೇಡ್ಕರ್ ಅವರನ್ನು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಬೇಕಾದ, ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಫಲಾನುಭವಿಗಳಾದ ಶೂದ್ರ ಜಾತಿಗಳು ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿರುವುದು; ಅವರನ್ನು ತಮ್ಮ ಏಳಿಗೆಯ ವಿರೋಧಿ ಎಂದು ಭಾವಿಸಿರುವುದು. ವಾಸ್ತವವಾಗಿ, ಸಮಾಜದಲ್ಲಿ ಶೂದ್ರರ ಸ್ಥಾನವೇನು, ಅದರ ಹಿಂದಿನ ಚಾರಿತ್ರಿಕ ಬೆಳವಣಿಗೆಗಳೇನು ಎನ್ನುವುದನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ಜಗತ್ತಿನ ಮುಂದೆ ಇಟ್ಟು ಶೋಷಿತ ಸಮುದಾಯಗಳ ಕಣ್ಣು ತೆರೆಸಿದವರು ಅಂಬೇಡ್ಕರ್.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಎರಡು ನಾಲಗೆಯ ಸರ್ಕಾರ

ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ದಲಿತರ ಪಾಲಿನ ವಿಮೋಚಕರಷ್ಟೇ ಅಲ್ಲ; ತಮ್ಮ ಕೊನೆಯ ಉಸಿರಿನವರೆಗೆ ಭಾರತದ ದಲಿತರು, ಶೂದ್ರರು, ಮಹಿಳೆಯರು, ಬಡವರು ಹೀಗೆ ಎಲ್ಲ ನೊಂದವರ ವಿಮೋಚನೆಗಾಗಿ ಚಿಂತಿಸಿದವರು. ಅದಕ್ಕಾಗಿ ಅವಿರತವಾಗಿ ದುಡಿದವರು. ಭಾರತಕ್ಕೆ ಶ್ರೇಷ್ಠವಾದ, ಆಧುನಿಕ ಕಾಣ್ಕೆಗಳುಳ್ಳ ಸಂವಿಧಾನ ಕೊಟ್ಟವರು ಅಂಬೇಡ್ಕರ್. ಕಾರ್ಮಿಕರ ವಿಷಯದಲ್ಲಿ ಅಂಬೇಡ್ಕರ್ ಮಾಡಿದ ಕೆಲಸ ಚರಿತ್ರಾರ್ಹವಾದುದು. ದಿನಕ್ಕೆ ಎಂಟು ಗಂಟೆಗಳ ಕೆಲಸದ ಅವಧಿ, ಹೆರಿಗೆ ರಜೆ, ಸಮಾನ ವೇತನ ಇವೆಲ್ಲವೂ ಅಂಬೇಡ್ಕರ್ ಚಿಂತನೆಯ ಫಲ. ಭಾರತವನ್ನು ಆಧುನಿಕ ಪ್ರಜಾಪ್ರಭುತ್ವವಾದಿ ಗಣರಾಜ್ಯವನ್ನಾಗಿ ರೂಪಿಸುವುದರ ಹಿಂದೆ ಇರುವುದು ಕೂಡ ಅಂಬೇಡ್ಕರ್ ಅವರ ಚಿಂತನೆಯೇ. ದೇಶದಲ್ಲಿ ಪೌರತ್ವ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಪರಿಕಲ್ಪನೆಗಳಿಗೆ ಅವರೇ ಜೀವ ಕೊಟ್ಟವರು.

ಇಂಥ ಬಹುಮುಖ ಪ್ರತಿಭೆಯ, ಬಹು ಆಯಾಮಗಳ ಮಹಾ ಮೇಧಾವಿ ಅಂಬೇಡ್ಕರ್ ಅವರನ್ನು ಒಂದು ವರ್ಗದ ಪರ ಎಂದು ಪರಿಭಾವಿಸಿ ಅವಮಾನಿಸುವುದು ನಾಗರಿಕ ಸಮಾಜಕ್ಕೆ ತಕ್ಕುದಲ್ಲದ ನಡೆ. ಈ ಕೃತ್ಯದ ಮೂಲಕ ಅವರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಾರೆ ಮತ್ತು ತಮ್ಮ ಸುತ್ತಲಿನ ನಾಗರಿಕ ಸಮಾಜವನ್ನೂ ಅವಮಾನಿಸಿದ್ದಾರೆ.

ಶೋಷಿತರು ಎಚ್ಚೆತ್ತುಕೊಳ್ಳುವ ಪ್ರತಿ ಹಂತದಲ್ಲೂ ಇತರ ಜಾತಿಗಳು ತಮ್ಮ ಅಸಹನೆ, ಪ್ರತೀಕಾರಗಳನ್ನು ತೋರುತ್ತಲೇ ಇವೆ. ವಿಚಿತ್ರವೆಂದರೆ, ಅಂಬೇಡ್ಕರ್ ಸೇರಿದಂತೆ ಕೆಳಜಾತಿ, ಕೆಳ ವರ್ಗಗಳಿಗೆ ಸೇರಿದ ಸಾಧಕರು, ವಿಮೋಚಕರು ಮಾತ್ರವೇ ಹೀಗೆ ಅವಮಾನಗಳಿಗೆ ಗುರಿಯಾಗುವುದು ಭಾರತದ ಜಾತಿನಿಷ್ಠ ಸಮಾಜದ ಪ್ರತಿಫಲನದಂತಿದೆ. ಚರಿತ್ರೆ ಮತ್ತು ವರ್ತಮಾನದ ಸರಿಯಾದ ತಿಳಿವಳಿಕೆಯಿಂದ ಜಾತಿಗ್ರಸ್ತ ಮನಸ್ಸುಗಳಲ್ಲಿ ಕಾಠಿಣ್ಯ ಕಳೆದು ಕಾರುಣ್ಯ ತುಂಬಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X