ಅನ್ನ ನೀಡುವ ರೈತರನ್ನು ಹಾಗೂ ದೇಶ ಕಾಯುವ ಯೋಧರನ್ನು ಹುತಾತ್ಮರಾದ ಬಳಿಕವೂ ಸ್ಮರಣೆ ಮಾಡುವುದು ಸ್ವಾಗತಾರ್ಹವಾಗಿದೆ ಎಂದು ರಾಮನಗರ ಪುರ ಪೊಲೀಸ್ ಠಾಣೆ ಪಿಎಸ್ಐ ಹರೀಶ್ ಶ್ಲಾಘಿಸಿದರು.
ಚನ್ನಪಟ್ಟಣ ತಾಲೂಕಿನ ರೈತ ಮುಖಂಡ ಎಚ್ ಮೊಗೇನಹಳ್ಳಿ ಎಂ ರಾಮು ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ನಾವು ಪ್ರಸ್ತುತ ಸಮಾಜದಲ್ಲಿ ನೆಮ್ಮದಿಯಿಂದ ಜೀವನ ಮಾಡಲು ಯೋಧರು ಕಾರಣ. ನಮಗೆ ಅನ್ನ ನೀಡುವ ಅನ್ನದಾತನ ಶ್ರಮ ಹಾಗೂ ನಮ್ಮ ರಕ್ಷಣೆಗಾಗಿ ಗಡಿಯಲ್ಲಿ ಕಾಯುತ್ತ ನಮ್ಮತ್ತ ಅಪಾಯ ಸುಳಿಯದಂತೆ ಹಗಲಿರುಳು ಸೇವೆ ಮಾಡುತ್ತಿರುವ ಯೋಧರ ಶ್ರಮ ಸ್ಮರಣೀಯ” ಎಂದರು.
“ರೈತರು ಶ್ರಮ ಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಪಡೆಯಲು, ಕೃಷಿಗೆ ಬೇಕಾದ ಸೌಲಭ್ಯ ಕೇಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಎಲ್ಲವನ್ನು ಪ್ರಶ್ನೆ ಮಾಡುವ ಗಟ್ಟಿ ಧ್ವನಿ ಎಂದರೆ ಅದು ರೈತ ನಾಯಕರು ಮಾತ್ರ. ಸಾವಿರಾರು ರೈತರ ಧ್ವನಿಯಾಗಿ ಸರ್ಕಾರ ಮತ್ತು ಅಧಿಕಾರಿಗಳನ್ನು ಪ್ರಶ್ನೆ ಮಾಡುವ ರೈತ ನಾಯಕರ ಅವಶ್ಯಕತೆ ಇಂದಿಗೂ ಇದೆ. ಇಂತಹ ರೈತನಾಯಕರಾಗಿದ್ದ ಎಂ ರಾಮು ಅವರು ನವಲಗುಂದ ರೈತರ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ವಾಪಸ್ ಬರುವಾಗ ಅಪಘಾತದಲ್ಲಿ ನಿಧನರಾಗಿದ್ದಾರೆ. ಇವರ ಸ್ಮರಣೆ ಮೂಲಕ ಮುಂದಿನ ಪೀಳಿಗೆಗೆ ಇವರ ಬಗ್ಗೆ ಪರಿಚಯಿಸಿ ಹೋರಾಟದ ಗುಣಗಳನ್ನು ಕಲಿಸಲು ಇದು ಪ್ರೇರಣೆಯಾಗಲಿದೆ” ಎಂದರು.
ಕರ್ನಾಟಕ ರಾಜ್ಯ ನೇಗಿಲು ಹೊತ್ತ ರೈತರ ಸಂಘದ ರಾಜ್ಯಾಧ್ಯಕ್ಷ ಬೇವೂರು ಕೃಷ್ಣೇಗೌಡ ಮಾತನಾಡಿ, “ರೈತನಾಯಕ ಎಂ ರಾಮು ಅವರು ಸದಾ ರೈತರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದರು. ರೈತರಿಗೆ ಯಾವುದೇ ಸಮಸ್ಯೆ ಆದರೂ ಮೊದಲು ಧ್ವನಿ ಎತ್ತುವ ಮೂಲಕ ಹೋರಾಟಕ್ಕೆ ಕಿಚ್ಚು ನೀಡುತ್ತಿದ್ದರು. ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನೇರವಾಗಿ ಪ್ರಶ್ನೆ ಮಾಡುವ ಅವರ ಗುಣ ಕೆಲವರಲ್ಲಿ ವಿರೋಧಕ್ಕೆ ಕಾರಣವಾಗುತಿತ್ತು. ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಮು ಅವರು ಎಂದೂ ಹಿಂದೆ ಸರಿದವರಲ್ಲ. ಬೈಕ್ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿದ್ದರೂ ಕೂಡಾ ರೈತ ಸಂಘದ ಹೋರಾಟದ ಬಗ್ಗೆ ಚಿಂತನೆ ಮಾಡುತಿದ್ದರು. ಮನೆಯಿಂದಲೇ ಹೋರಾಟದ ರೂಪುರೇಷೆ ರಚಿಸಿ ಮಾರ್ಗದರ್ಶನ ನೀಡುತ್ತಿದ್ದರು. ಸದಾ ರೈತರ ಹಿತಕ್ಕೆ ಮಿಡಿಯುತ್ತಿದ್ದ ರಾಮು ಅವರು ನಮ್ಮಿಂದ ಅಗಲಿದ್ದರೂ ಅವರು ಹಾಕಿಕೊಟ್ಟ ಹೋರಾಟದ ದಾರಿ ಸದಾ ನಮ್ಮನ್ನು ಕಾಪಾಡುತ್ತದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ?ಮಂಡ್ಯ | ಜೀತಕ್ಕಿದ್ದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿದ ಜಿಲ್ಲಾಡಳಿತ
ಈ ಸಂದರ್ಭದಲ್ಲಿ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಸುಮಲತಾ, ರಾಮನಗರ ಜಿಲ್ಲಾ ಉಪಾಧ್ಯಕ್ಷ ಶಿವರಾಮು, ಚನ್ನಪಟ್ಟಣ ತಾಲೂಕು ಅಧ್ಯಕ್ಷ ರವಿ, ಚನ್ನಪಟ್ಟಣ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಲೋಕೇಶ್, ಮಾಗಡಿ ತಾಲೂಕು ಗೌರವಾಧ್ಯಕ್ಷ ಪರಮೇಶ್, ಚನ್ನಪಟ್ಟಣ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಚನ್ನಪಟ್ಟಣ ನಗರ ಉಪಾಧ್ಯಕ್ಷ ಆನಂದ್, ಮೈನಾಯಕನಹಳ್ಳಿ ಗ್ರಾಮ ಶಾಖೆಯ ವಸಂತ್ ಹಾಗೂ ರೈತ ಸಂಘಟನೆಯ ಎಲ್ಲ ಪದಾಧಿಕಾರಿಗಳು ಸೇರಿದಂತೆ ಬಹುತೇಕರು ಇದ್ದರು.