ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದಿಂದ ಅನತಿ ದೂರದಲ್ಲಿರುವ ಲಾಡ್ಜ್ನಲ್ಲಿ ಕುಕ್ಕರ್ ಹಾಗೂ ಅಡುಗೆ ಅನಿಲದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಯಲ್ಲಮ್ಮನ ದರ್ಶನಕ್ಕೆ ಬಂದಿದ್ದ ಭಕ್ತರು ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರು ಮತ್ತು ಯಾದಗಿರಿ ಮೂಲದ ಭಕ್ತರು ಲಾಡ್ಜ್ನಲ್ಲಿ ಕೋಣೆ ಪಡೆದು ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕುಕ್ಕರಿನಲ್ಲಿ ನೀರು ಹಾಕದೆ ಇದ್ದುದರಿಂದ ಈ ಘಟನೆ ನಡೆದಿದೆ.
ಕುಕ್ಕರ್ ಸಿಡಿದು ಸಿಲಿಂಡರ್ ಹಾಗೂ ಒಲೆ ಮೇಲೆ ಬಿದ್ದು ನಂತರ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿತು. ಕೋಣೆಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ, ಆಹಾರ ಸಾಮಗ್ರಿಗಳಿಂದಾಗಿ ಬೆಂಕಿ ಜ್ವಾಲೆ ಹೆಚ್ಚಾದಾಗ ಅಗ್ನಿಶಾಮಕದಳ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
ಲಾಡ್ಜ್ನಲ್ಲಿದ್ದ 8 ಭಕ್ತರು ಹಾಗೂ ಲಾಡ್ಜ್ ಕೆಲಸಗಾರರು ಸೇರಿ 15 ಮಂದಿ ಗಾಯಗೊಂಡಿರವುದಾಗಿ ವರದಿಯಾಗಿದೆ.
ಬೆಂಗಳೂರಿನ ವೆಂಕಟೇಶ ಕೃಷ್ಣಪ್ಪ (53), ರಾಮಸ್ವಾಮಿ ಚಿಕ್ಕಪುಳ್ಳಪ್ಪ (42), ರತ್ನಮ್ಮ ಗೋವಿಂದಪ್ಪ (48), ಗಣೇಶ ರಮೇಶಪ್ಪ ಕರೂರ (30), ಗದಗ ಜಿಲ್ಲೆಯ ಪ್ರಸಾದ ಜಾಧವ (34) ಮತ್ತು ಯಾದಗಿರಿ ಜಿಲ್ಲೆಯ ಬಸಮ್ಮ ಬಿರಾದಾರ (56), ಸುಮಿತ್ರಾ ಯಕ್ಕಹಳ್ಳಿ (42) ಹಾಗೂ ಸಿದ್ದಮ್ಮ ಶೆಟಗೇರಿ ಅವರು ಗಾಯಗೊಂಡಿದ್ದು, ಎಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಡ್ಜ್ನ 7 ಕೆಲಸಗಾರರು ಸವದತ್ತಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

