14 ವರ್ಷದ ದಲಿತ ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಧಾನಕ್ಕೆ ಒಪ್ಪದ ಕುಟುಂಬ ಮತ್ತು ದಲಿತ ಕುಟುಂಬಗಳಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿದೆ.
ತಮ್ಮ ಮಾತಿನಂತೆ ಸಂಧಾನಕ್ಕೆ ಒಪ್ಪದೆ ದೂರು ನೀಡಿದರು ಎಂಬ ಕಾರಣಕ್ಕೆ ದಲಿತ ಕುಟುಂಬವನ್ನು ಬಹಿಷ್ಕರಿಸಿರುವ ಸವರ್ಣೀಯರು, ಗ್ರಾಮದ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ ನೀಡದಂತೆ ಷರತ್ತು ವಿಧಿಸಿದ್ದಾರೆ.
ಈ ಸಾಮಾಜಿಕ ಬಹಿಷ್ಕಾರದಿಂದಾಗಿ ಗ್ರಾಮದ ದಲಿತ ಸಮುದಾಯದ ಮಕ್ಕಳಿಗೆ ಅಗತ್ಯವಿರುವ ಪೆನ್ನು, ನೋಟುಬುಕ್ ಮತ್ತು ದೈನಂದಿನ ದಿನಸಿ ಸಾಮಗ್ರಿ ಸಿಗದೆ ಹಲವು ಕುಟುಂಬಗಳು ಪರದಾಡುತ್ತಿವೆ. ಗ್ರಾಮದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ದಲಿತರು, ಇದೀಗ ಸಾಮಾಜಿಕ ಬಹಿಷ್ಕಾರದಿಂದಾಗಿ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಬಹಿಷ್ಕಾರಕ್ಕೆ ಕಾರಣವೇನು?
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿ ಆಗಲು ಕಾರಣನಾಗಿದ್ದ ಯುವಕನ ಮೇಲೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಕ್ಕೆ ಸಂಬಂಧಿಸಿ ಸಂತ್ರಸ್ತೆ ಕುಟುಂಬಸ್ಥರು ಸಂಧಾನಕ್ಕೆ ಒಪ್ಪದೆ, ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದರಿಂದ ಕೋಪಗೊಂಡ ಗ್ರಾಮದ ಸವರ್ಣೀಯರು, ಇಡೀ ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಗ್ರಾಮದಲ್ಲಿ ದಲಿತರಿಗ್ಯಾರಿಗೂ ದಿನಸಿ ಹಾಗೂ ಮತ್ತಿತರೆ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ ಎನ್ನಲಾಗಿದೆ. ಉಪ್ಪು ಖರೀದಿಸಲು ಅಂಗಡಿಯೊಂದಕ್ಕೆ ತೆರಳಿದ್ದ ದಲಿತ ಮಹಿಳೆ ಮತ್ತು ಪೆನ್ನು ಖರೀದಿಸಲು ತೆರಳಿದ್ದ ಶಾಲಾ ಮಕ್ಕಳಿಗೆ ಅಂಗಡಿ ಮಾಲೀಕರು ಬಹಿಷ್ಕಾರ ಹಾಕಿರುವ ವಿಚಾರವನ್ನು ಹೇಳಿದ್ದಾರೆ ಎನ್ನಲಾಗಿದೆ.
ಇಂಥ ಬಹಿಷ್ಕಾರ ಕುರಿತ ಧ್ವನಿಮುದ್ರಿಕೆ (ಆಡಿಯೋ ವಾಯ್ಸ್) ಇದೀಗ ವೈರಲ್ ಆಗಿದ್ದು, ಅದರಲ್ಲಿ ಯಾವುದೇ ತರಹದ ವಸ್ತುಗಳು ನೀಡಬಾರದು ಎಂದು ತಮಗೆ ಗ್ರಾಮದ ಪ್ರಮುಖರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಅಂಗಡಿಯವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಹೊರಟಿರುವ ಮಕ್ಕಳಿಗಾದರೂ ಪೆನ್ನು ಪೆನ್ಸಿಲ್ ಆದರೂ ನೀಡಿ ಎಂದು ಯುವಕರು ಕೇಳಿಕೊಂಡರೂ ಕೊಡಲೊಪ್ಪದ ಅಂಗಡಿ ಮಾಲೀಕರು, ಪೆನ್ನು, ಪುಸಕ್ತವಷ್ಟೇ ಅಲ್ಲ, ನಿಮ್ಮ ಮಂದಿಗೆ (ದಲಿತರು) ಯಾವುದನ್ನೂ ಕೊಡಬಾರದು ಎಂದು ಆಜ್ಞೆಯಾಗಿದೆ ಎಂದು ತಿಳಿಸಿದ್ದಾರೆ. ಈ ಸಾಮಾಜಿಕ ಕ್ರೌರ್ಯದಿಂದಾಗಿ ಬೆರಳಣಿಕೆಯಷ್ಟಿರುವ ಬಪ್ಪರಗಾ ಗ್ರಾಮದ ದಲಿತ ವರ್ಗದಲ್ಲಿ ಆತಂಕ ಮನೆ ಮಾಡಿದೆ.
ಘಟನೆಯ ಹಿನ್ನೆಲೆ:
ಬಪ್ಪರಗಾ ಗ್ರಾಮದ 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿದ್ದ ಪ್ರಬಲ ಜಾತಿ ಯುವಕನೊಬ್ಬ ಆಕೆಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದು, ಮದುವೆಗೆ ನಿರಾಕರಿಸಿದ್ದ.
ಈ ಸಂಬಂಧ ಒಂದು ತಿಂಗಳ ಹಿಂದೆ ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಾಲಕಿ ತಾಯಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತಮ್ಮೆದುರು ಸಂಧಾನಕ್ಕೆ ಬರುವ ಬದಲು ನೇರವಾಗಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಕ್ಕೆ ಆಕ್ರೋಶಗೊಂಡ ಸವರ್ಣೀಯರು, ಇಡೀ ದಲಿತ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ.
ಪರಿಶಿಷ್ಟ ಸಮುದಾಯದ ಜನರ ಜೊತೆಗೆ ಯಾವುದೇ ರೀತಿಯ ವ್ಯವಹಾರ ಮಾಡದಂತೆ ಎಲ್ಲ ಅಂಗಡಿಗಳಿಗೆ ತಾಕೀತು ಮಾಡಿ, ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ದಿನಸಿ ಪದಾರ್ಥವಷ್ಟೇ ಅಲ್ಲ, ಶಾಲಾ ಮಕ್ಕಳಿಗೆ ಪೆನ್ನು, ನೋಟ್ಬುಕ್ ಸೇರಿದಂತೆ ಯಾವುದೇ ಸಾಮಗ್ರಿಗಳನ್ನೂ ಮಾರಾಟ ಮಾಡುತ್ತಿಲ್ಲ ಎಂದು ಬಪ್ಪರಗಿ ಗ್ರಾಮದ ದಲಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
